ಗುರುವಾರ, ನವೆಂಬರ್ 20, 2014

ದೇವರ ದಾಸಿಮಯ್ಯ

ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ರಾಷ್ಟ್ರ! ಪ್ರಪಂಚದಲ್ಲಿ ಮಿಕ್ಕ ದೇಶಗಳು ಭೌತಿಕವಾಗಿ ಸಮೃದ್ಧವಾಗಿರಬಹುದು, ಆದರೆ ಭೌತಿಕವಾಗಿ ಮಾತ್ರವಲ್ಲದೆ ಆಧ್ಯಾತ್ಮಕವಾಗಿಯೂ ಅತ್ಯಂತ ಸಮುದ್ಧವಾದ ದೇಶ 'ಭಾರತ'. ಆದಿ ಕಾಲದಿಂದಲೂ ಅನೇಕ ಋಷಿ-ಮುನಿಗಳು ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿಯಿದು.

ಅಂತಹ ಸಾಧುಗಳಲ್ಲೊಬ್ಬರು 'ಶ್ರೀ ದೇವರ ದಾಸಿಮಯ್ಯ'. ಈ ಪುಣ್ಯ ಪುರುಷನ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ, 10ನೇ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರರೂ ಹೌದು. ಹಾಗಾಗಿ ಈ ಮಹರ್ಷಿಯ ಒಂದು ಕಿರುಪರಿಚಯ ಹಾಗೂ ಇವರ ಕೃತಿಗಳ ಬಗ್ಗೆ ಚುಟುಕಾದ ಪಕ್ಷಿನೋಟವನ್ನು ನೀಡಲು ಪ್ರಯತ್ನಿಸುತ್ತೇನೆ!

ದೇವರ ದಾಸಿಮಯ್ಯ (ದೇವಲ ಮಹರ್ಷಿ) ಸರಿ ಸುಮಾರು 10ನೇ ಶತಮಾನದವರು. ಶೊರಾಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನನ. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದೇವಲ ಮಹರ್ಷಿಯರ ಅಚ್ಚುಮೆಚ್ಚು. ರಾಮನಾಥ ಸ್ವಾಮಿಯ ಆರಾಧಕರು. ರಾಮನಾಥ ಎಂದರೆ ಶಿವ (ರಾಮನು ಪೂಜಿಸುತ್ತಿದ್ದಂತಹ ದೇವರು). ದೇವಲ ಮಹರ್ಷಿಯು ಶಿವನ ಅಪಾರ ಭಕ್ತರಾಗಿದ್ದು 'ರಾಮನಾಥ' ಇವರ ಅಂಕಿತನಾಮವಾಗಿತ್ತು.

ದೇವರ ದಾಸಿಮಯ್ಯ ತಮ್ಮ ಯೌವನಾವಸ್ಥೆಯಲ್ಲಿ ಹೆತ್ತವರ ಇಚ್ಛೆಯಂತೆ, ಶಿವಪುರದ ದುಗ್ಗಳೆಯನ್ನು ವರಿಸತ್ತಾರೆ, ಆಕೆ ಮಹಾನ್ ಸಾಧ್ವಿಮಣಿ. ದಂಪತಿಗಳಿಬ್ಬರೂ ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದು, ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಸುವರ್ಚಲೆ ಇವರ ಸುಪುತ್ರಿ, ಮಹಾನ್ ಜ್ಞಾನಿ. ಹೀಗಿದ್ದರೂ ದಾಸಿಮಯ್ಯರಿಗೆ ಬದುಕಿನಲ್ಲಿ ಎನೋ ಶೂನ್ಯತೆ ಕಾಡುತ್ತಿತ್ತು. ಹೀಗೊಂದು ದಿನ ಆಲೋಚಿಸುತ್ತಿರುವಾಗ ದೇವರನ್ನು ಒಲಿಸಿಕೊಳ್ಳಲು ಸಂನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು, ಅದನ್ನು ಸಿದ್ಧಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನೆಡೆಗೆ ಹೊರಟುಹೋಗುತ್ತಾರೆ.

ಹಲವಾರು ವರ್ಷ ಸುಧೀರ್ಘ ತಪಸ್ಸನ್ನಾಚರಿಸಿ ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಸದಾಶಿವನು ದಾಸಿಮಯ್ಯರನ್ನು ಕುರಿತು ಹೀಗೆ ಸಂಬೋಧಿಸುತ್ತಾನೆ 'ದಾಸಿಮಯ್ಯ! ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ... ನಿನ್ನ ಕೋರಿಕೆಯನ್ನು ತಿಳಿಸು..'

ಮಹದಾನಂದದಿಂದ ಋಷಿ ವರ್ಯರು ಹೀಗೆ ತಮ್ಮ ಕೋರಿಕೆ ಸಲ್ಲಿಸುತ್ತಾರೆ: 'ಭಗವನ್! ನಿನ್ನ ದರ್ಶನದಿಂದ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು.. ಕೃಪೆತೋರಿ ನನಗೆ ಮೋಕ್ಷವನ್ನು ದಯಪಾಲಿಸು ಮಹದೇವ...'

ಶಿವನು: 'ದಾಸಿಮಯ್ಯ .. ಋಷಿಯಾಗಿ ಮೋಕ್ಷವನ್ನು ಪಡೆಯುವುದಷ್ಟೇ ಅಲ್ಲಾ... ನೀನು ಮಾಡಬೇಕಾದ ಮಹತ್ಕಾರ್ಯ ಬಹಳಷ್ಟಿದೆ! ದೇವ-ದೇವತೆಯರು ಹಾಗೂ ಮಾನವರಿಗೆ, ತಮ್ಮ ಮಾನ-ಶರೀರ ಸಂರಕ್ಷಣೆಯನ್ನು ಕಾಪಾಡಲು ವಸ್ತ್ರವನ್ನು ತಯಾರಿಸುವ ಕಾರ್ಯ ನಿನ್ನಿಂದ ಆಗಬೇಕಿದೆ. ಪರಮಾತ್ಮನನ್ನು ಕಾಣಲು ಸಂನ್ಯಾಸಿಯಾಗಿ ತಪಸನ್ನಾಚರಿಸುವ ಅಗತ್ಯವಿಲ್ಲ... ಸಂಸಾರಿಯಾಗಿದ್ದೂ ಆಧ್ಯಾತ್ಮಿಕತೆಯನ್ನು ಆಚರಿಸುವವನು ಅದಕ್ಕಿಂತ ಶ್ರೇಷ್ಠನು. ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು. ಶ್ರದ್ಧಾಭಕ್ತಿಯಿಂದ ತಮ್ಮ ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಬೇಕು. ಆದೇ ನಿಜವಾದ ಮನುಕುಲದ ಉದ್ದೇಶ. ಈ ಸಂದೇಶವನ್ನು ಮಾನವರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡು. ಇದೇ ನಿನ್ನ ಜನ್ಮದುದ್ದೇಶ..'

ಶಿವನ ಕೃಪೆಗೆ ಪಾತ್ರನಾದ ಅಸಿತ ದೇವಲನು (ದಾಸಿಮಯ್ಯ), ರಾಮನಾಥನ ಇಚ್ಚೆಯಂತೆ ತನ್ನ ಹುಟ್ಟೂರಿಗೆ ಹಿಂದಿರುಗುತ್ತಾನೆ. ವಸ್ತ್ರವು ಜನರ ಮಾನವನ್ನು ಕಾಪಾಡುವ ಮತ್ತು ದೇಹಕ್ಕೆ ರಕ್ಷಣೆಕೊಡುವ ಭಗವಂತನ ಒಂದು ವರಪ್ರದಾನವೆಂದು ತಿಳಿದ ದಾಸಿಮಯ್ಯ ವಸ್ತ್ರ ನಿರ್ಮಸುವ ಕಲೆಯನ್ನು ಪಾರಂಗತಗೊಳಿಸಿಕೊಂಡು ಲೋಕಕ್ಕೆ ಬಟ್ಟೆಯನ್ನು ಅರ್ಪಿಸಿದರು. ದಂಪತಿಗಳಿಬ್ಬರೂ, ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು, ನೇಯ್ಗೆಯನ್ನು ದೇವರ ಕಾರ‍್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾಗಿ ಇನ್ನೂ ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿತೋರಿಸುತ್ತಾರೆ. ಹೀಗಾಗಿ ಇವರು 'ಜೇಡರ ದಾಸಿಮಯ್ಯ'ರೆಂದೂ ಪ್ರಸಿದ್ಧರಾದರು.

ದಾಸಿಮಯ್ಯರ ಚಿತ್ರಗಳನ್ನು ಗಮನಿಸಿ , ಜನಿವಾರ ತೊಟ್ಟ ಮುನಿ-ವರ್ಯರ ಎಡಗೈಯಲ್ಲಿ ಕಮಂಡಲ ಹಾಗೂ ಬಲಗೈಯಲ್ಲಿ ಬಟ್ಟೆ ಕಾಣಬಹುದು. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯ ಪ್ರಪಂಚಕ್ಕೆ ತಿಳಿಸಿ ಹೇಳಿದರು.

ಇನ್ನು ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ದೇವಲರು, ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ (ಬಸವಣ್ಣ ಮತ್ತು ಅಕ್ಕಮಹಾದೇವಿಯವರಿಗೂ) ಮುಂಚಿತವಾಗಿದ್ದಂತಹ ಮೊಟ್ಟ ಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗೀಗ ಕೆಲವು ಬುದ್ಧಿಜೀವಿಗಳು ದೇವಲರ ವಚನಗಳನ್ನು ಹೊರತರುತ್ತಿದ್ದಾರೆ. ಅಂತಹವರಲ್ಲಿ ಒಬ್ಬರಾದ ಶ್ರೀ ಚಿನ್ಮೂಲಾದ್ರಿಯವರು, ದೇವಾಂಗರ ವಚನಗಳನ್ನು, ಅರ್ಥ- ಸಾರಾಂಶಗಳೊಂದಿಗೆ ಬಿತ್ತರಿಸುತ್ತಿದ್ದಾರೆ. ಇವುಗಳಲ್ಲಿ ಕೆಲವೊಂದು ವಚನಗಳನ್ನು ಈ ಲೇಖನದಲ್ಲಿ ನಮೂದಿಸಿದ್ದೇನೆ!

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗದ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ

--

ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದಡೆ
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥನು

--

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
ಸುಳಿದು ಬೀಸುವ ವಾಯು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ

--
 
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ

--

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ

ಸಮಾಜದ ಒಳಿತಿಗಾಗಿ ವಸ್ತ್ರವನ್ನು ಅರ್ಪಿಸಿ, ತಮ್ಮ ಜೀವನ ಶೈಲಿಯಿಂದ ಇತರರಿಗೆ ಮಾರ್ಗದರ್ಶಿಯಾಗಿ, ವಚನಗಳ ಮೂಲಕ ಸನ್ಮಾರ್ಗ, ಬದುಕಿನ ರೀತಿ-ನೀತಿ ತಿಳಿಹೇಳಿದ ದೇವರ ದಾಸಿಮಯ್ಯರಿಗೆ, ಶರಣು ಶರಣೆಂದೆ!!!

ಲೇಖಕರ ಕಿರುಪರಿಚಯ
ಶ್ರೀಮತಿ ಎಂ. ಕೆ. ರೇಖಾ ವಿಜೇಂದ್ರ

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಇವರು ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ನಾಡು-ನುಡಿಯ ಬಗ್ಗೆ ಒಲವು ಹಾಗೂ ಗೌರವ ಹೊಂದಿರುವ ಇವರಿಗೆ ಸಂಗೀತದಲ್ಲೂ ವಿಶೇಷ ಆಸಕ್ತಿ.

Blog  |  Facebook  |  Twitter

4 ಕಾಮೆಂಟ್‌ಗಳು:

  1. ನನ್ನ್ನ ಬರಹವನ್ನು ಕಹಳೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು :)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ರೇಖಾ ವಿಜೇಂದ್ರ ಅವರೇ, ನಿಮ್ಮ ನಿರಂತರ ಸಹಕಾರ ಹಾಗೂ ಪ್ರೋತ್ಸಾಹವೇ ಕಹಳೆ ಯಶಸ್ಸಿಗೆ ಕಾರಣ. ಕಹಳೆ-2014 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದ.
      ಪ್ರಶಾಂತ್‍ ಜಚಿ,
      ಕಹಳೆ ತಂಡದ ಪರವಾಗಿ.

      ಅಳಿಸಿ
  2. ಶ್ರೀಮತಿ ರೇಖಾ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಈ ಚಿತ್ರದಲ್ಲಿರುವವರು ದೇವರ ದಾಸಿಮಯ್ಯ ಅಲ್ಲ. ಅವರು ದೇವಲ ಮಹರ್ಷಿ ಅಥವಾ ದೇವಾಂಗ ಮಹರ್ಷಿ. ದೇವಾಂಗ ಕುಲದ ಮೂಲ ಪುರುಷ. ದಾಸಿಮಯ್ಯ ಇದ್ದದ್ದು ಹತ್ತನೇ ಶತಮಾನದಲ್ಲಿ. ಆತ ಆದ್ಯವಚನಕಾರ. ನೀವು ಪುರಾಣ ಮತ್ತು ಇತಿಹಾಸ ಪುರುಷರಿಬ್ಬರನ್ನೂ ಒಬ್ಬರೇ ಎಂದು ಭಾವಿಸಿದ್ದೀರಿ.

    ಪ್ರತ್ಯುತ್ತರಅಳಿಸಿ