ಭಾನುವಾರ, ನವೆಂಬರ್ 30, 2014

ಒಲವೇ ಸಾಕ್ಷಾತ್ಕಾರ

ನವಂಬರ್ 2014 ರ ಮಾಹೆಯುದ್ದಕ್ಕೂ ನಡೆದ ಕಹಳೆ ನಾಲ್ಕನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಸಹಕರಿಸಿದ ಲೇಖಕರು ಹಾಗೂ ಓದುಗರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.



ಅಮ್ಮಾ... ನಿನ್ನದೇ 'ಅನಂತ ಪರಿಪೂರ್ಣತೆಯ ಸೊಬಗು'
ಅಗಣಿತ ಸದ್ಗುಣಗಳಲಿ ಆಯ್ದ ವಾತ್ಸಲ್ಯದ
ಸಿಹಿಸಾರದ 'ವಿಶ್ವರೂಪ' ತಳೆದಿಹೆ ಏನು?!
ಪ್ರತಿಕ್ಷಣವೂ ನಿಬ್ಬೆರಗುಗಳೇ ಉದಯಿಸುವ
'ಜ್ಞಾನ - ಬ್ರಂಹ್ಮಾಂಡ'.. ನೀ!.. ಹರಿತ ಸತ್ಯದಲೂ
ಎಂಥ ಸಹನೆಯ ನಿಯಮ; ಸಾಧನೆಯ
ಪ್ರಜ್ವಲಿಸಲು ನಡೆಸುತಿಹೆ ನಿರಂತರ
'ನಿರಾಕಾರ ತನ್ಮಯ ಧ್ಯಾನ'!!

ತಾಯೇ... ಅಣುರೇಣುವೂ ನಿನ್ನದೇ ತದ್ರೂಪದ ದೈವಾಂಶ..
ನಿನ್ನ ಕುಡಿಗಳೆಲ್ಲ 'ಅರಿ'ಯದ ಹಾಲ-'ಹಸು'ಳೆಗಳು!!
ಅಪವಾದವೀ ನರಜೀವಿಯು!..  'ಅಸು'ರನು; ಕಾರಣವೀ
'ಅರಿ'ಯೇ!.. ಅಮ್ಮಾ... ಈ ಅಗೋಚರ ಅಂಗವಿದು
ಇವಗೆ ಹೇಗೆ ಬಂತು!!

ಮೀರಿಹೋದರೂ ಈ ಸುಪ್ರಸನ್ನತೆ ಏಕೆ ತಾಯೇ?
ಇನ್ನೂ ಕರುಳು ಮಿಡಿದಿದೆಯೇನು?!.. ರಾಕ್ಷಸತ್ವವನೂ
ಹೊಟ್ಟೆಗೆ ಹಾಕಿಕೊಳ್ಳಲು 'ಅಣಿ'ಯಾಗಿಹೆಯೇನು?
ಸಾಕು ಸಾಕು... ಸಹನೆಯ 'ಅರ್ಥ'...
ಸಾಯುವ ಮುನ್ನ..
ತೋರಿಸು ಸಾತ್ವಿಕತೆಯಲ್ಲಿಹ ಆ 'ದಂಗಾಗಿಸುವ' ಝಳಪು!!

ಎಲ್ಲದರೊಳಗೊಂದಾಗಿಸು... ನರನನೂ ಪ್ರಕೃತಿ ಮಾಡು..,
ಸರ್ವಸಾಕ್ಷಾತ್ಕಾರದ 'ಒಲವ' ಅನುಗ್ರಹಿಸಿ
ತಪವರಿಯದವನಿಗೂ 'ವರವ' ನೀಡು!!

ಲೇಖಕರ ಕಿರುಪರಿಚಯ
ಶ್ರೀಮತಿ ಶೈಲಜ ಜೆ. ಸಿ.

ತಮ್ಮ ಕನ್ನಡ ಬರೆಹ ಹಾಗೂ ಚಿಂತನೆಗಳಲ್ಲಿ ಪ್ರೌಢಿಮೆ ಸಾಧಿಸಿರುವ ಇವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಚೆನ್ನೈ ನಲ್ಲಿರುವ ಭಾರತ ಹವಾಮಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ