ನವಂಬರ್ 2014 ರ ಮಾಹೆಯುದ್ದಕ್ಕೂ ನಡೆದ ಕಹಳೆ ನಾಲ್ಕನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಸಹಕರಿಸಿದ ಲೇಖಕರು ಹಾಗೂ ಓದುಗರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.
=> ಕಹಳೆ ತಂಡ.
ಅಮ್ಮಾ... ನಿನ್ನದೇ 'ಅನಂತ ಪರಿಪೂರ್ಣತೆಯ ಸೊಬಗು'
ಅಗಣಿತ ಸದ್ಗುಣಗಳಲಿ ಆಯ್ದ ವಾತ್ಸಲ್ಯದ
ಸಿಹಿಸಾರದ 'ವಿಶ್ವರೂಪ' ತಳೆದಿಹೆ ಏನು?!
ಪ್ರತಿಕ್ಷಣವೂ ನಿಬ್ಬೆರಗುಗಳೇ ಉದಯಿಸುವ
'ಜ್ಞಾನ - ಬ್ರಂಹ್ಮಾಂಡ'.. ನೀ!.. ಹರಿತ ಸತ್ಯದಲೂ
ಎಂಥ ಸಹನೆಯ ನಿಯಮ; ಸಾಧನೆಯ
ಪ್ರಜ್ವಲಿಸಲು ನಡೆಸುತಿಹೆ ನಿರಂತರ
'ನಿರಾಕಾರ ತನ್ಮಯ ಧ್ಯಾನ'!!
ತಾಯೇ... ಅಣುರೇಣುವೂ ನಿನ್ನದೇ ತದ್ರೂಪದ ದೈವಾಂಶ..
ನಿನ್ನ ಕುಡಿಗಳೆಲ್ಲ 'ಅರಿ'ಯದ ಹಾಲ-'ಹಸು'ಳೆಗಳು!!
ಅಪವಾದವೀ ನರಜೀವಿಯು!.. 'ಅಸು'ರನು; ಕಾರಣವೀ
'ಅರಿ'ಯೇ!.. ಅಮ್ಮಾ... ಈ ಅಗೋಚರ ಅಂಗವಿದು
ಇವಗೆ ಹೇಗೆ ಬಂತು!!
ಮೀರಿಹೋದರೂ ಈ ಸುಪ್ರಸನ್ನತೆ ಏಕೆ ತಾಯೇ?
ಇನ್ನೂ ಕರುಳು ಮಿಡಿದಿದೆಯೇನು?!.. ರಾಕ್ಷಸತ್ವವನೂ
ಹೊಟ್ಟೆಗೆ ಹಾಕಿಕೊಳ್ಳಲು 'ಅಣಿ'ಯಾಗಿಹೆಯೇನು?
ಸಾಕು ಸಾಕು... ಸಹನೆಯ 'ಅರ್ಥ'...
ಸಾಯುವ ಮುನ್ನ..
ತೋರಿಸು ಸಾತ್ವಿಕತೆಯಲ್ಲಿಹ ಆ 'ದಂಗಾಗಿಸುವ' ಝಳಪು!!
ಎಲ್ಲದರೊಳಗೊಂದಾಗಿಸು... ನರನನೂ ಪ್ರಕೃತಿ ಮಾಡು..,
ಸರ್ವಸಾಕ್ಷಾತ್ಕಾರದ 'ಒಲವ' ಅನುಗ್ರಹಿಸಿ
ತಪವರಿಯದವನಿಗೂ 'ವರವ' ನೀಡು!!
ಲೇಖಕರ ಕಿರುಪರಿಚಯ | |
ಶ್ರೀಮತಿ ಶೈಲಜ ಜೆ. ಸಿ. ತಮ್ಮ ಕನ್ನಡ ಬರೆಹ ಹಾಗೂ ಚಿಂತನೆಗಳಲ್ಲಿ ಪ್ರೌಢಿಮೆ ಸಾಧಿಸಿರುವ ಇವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಚೆನ್ನೈ ನಲ್ಲಿರುವ ಭಾರತ ಹವಾಮಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. Blog | Facebook | Twitter |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ