ಗುರುವಾರ, ನವೆಂಬರ್ 27, 2014

ಮನೆಮದ್ದು

ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ಪ್ರಥಮ ಹಂತದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಮಾಡಿಕೊಳ್ಳಲು ವಿಧಾನಗಳನ್ನು ಹೇಳಲಾಗಿದೆ. ಮನೆಯಲ್ಲೇ ಔಷಧಿ ಸಸ್ಯಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿ ರೋಗನಿವಾರಣೆ ಮಾಡಿಕೊಳ್ಳಬಹುದಾಗಿದೆ. ಈ ಚಿಕಿತ್ಸಾ ವಿಧಾನಗಳನ್ನು ಮನೆಮದ್ದು ಎಂದು ಕರೆಯಬಹುದು. ನಮಗೆ ಸುಲಭವಾಗಿ ಲಭ್ಯವಿರುವ ಔಷಧೀಯ ಗುಣಗಳುಳ್ಳ ಸಸ್ಯಗಳೆಂದರೆ – ಅಮೃತಬಳ್ಳಿ, ತುಳಸಿ, ಒಂದೆಲಗ, ಲೋಳೆಸರ, ಕರಿಬೇವು, ದೊಡ್ಡಪತ್ರೆ, ಬಸಳೆ ಸೊಪ್ಪು, ಹೊನಗೊನೆ ಸೊಪ್ಪು ಮುಂತಾದವುಗಳು. ಕೆಲವು ಔಷಧಿ ಸಸ್ಯಗಳನ್ನು ಮನೆಮದ್ದಾಗಿ ಬಳಸಬಹುದಾದ ಸುಲಭ ವಿಧಾನಗಳು ಕೆಳಕಂಡಂತಿವೆ:

1. ಅಮೃತಬಳ್ಳಿ
ಹೆಸರೇ ಹೇಳುವ ಹಾಗೆ ಈ ಔಷಧಿ ಸಸ್ಯ ಅಮೃತಕ್ಕೆ ಸಮನಾದ ಗುಣಗಳನ್ನು ಹೊಂದಿದೆ. ಇದನ್ನು ರೋಗಿಗಳಲ್ಲದೆ ಆರೋಗ್ಯವಂತರೂ ಕೂಡ ಬಳಸಬಹುದು.

ಚಹರೆ: ಇದೊಂದು ಬಳ್ಳಿ, ಕಾಂಡ ಕತ್ತರಿಸಿದರೆ ಚಕ್ರಾಕಾರವಿರುತ್ತದೆ, ಹೃದಯಾಕಾರದ ಎಲೆಗಳು, ಬಳ್ಳಿಯಿಂದ ಅಲ್ಲಲ್ಲಿ ದಾರ ಜೋತಾಡುತ್ತಿರುತ್ತದೆ.
ಅಮೃತಬಳ್ಳಿ
ಉಪಯೋಗ
  • ಜ್ವರ: ಎಲ್ಲಾ ರೀತಿಯ ಜ್ವರಗಳಲ್ಲಿ ಈ ಔಷಧ ಪರಿಣಾಮಕಾರಿಯಾಗಿದೆ. 4 ಚಮಚ ಕಾಂಡದ ರಸವನ್ನು 1 ಚಮಚ ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು. ಮಕ್ಕಳಿಗೆ ಅರ್ಧ ಪ್ರಮಾಣ ಬಳಸಬೇಕು. ಅಲ್ಲದೇ, ಒಣಗಿದ ಕಾಂಡದ ಕಷಾಯ ತಯಾರಿಸಿ ಕೂಡ ಸೇವಿಸಬಹುದು. 1 ಭಾಗ ಕಾಂಡವನ್ನು 4 ಭಾಗ ನೀರಿನಲ್ಲಿ ಸಣ್ಣ ಉರಿಯ ಮೇಲೆ 1/4 ಭಾಗಕ್ಕೆ ಇಳಿಸಿ, ಶೋಧಿಸಿ, 30 ಮಿ. ಲೀ. ಜೇನಿನ ಜೊತೆ 3 ಬಾರಿ ಸೇವಿಸಬೇಕು.
  • ಚರ್ಮರೋಗ: ಎಲೆಗಳನ್ನು ಸ್ವಚ್ಛಮಾಡಿ, ಅರಿಶಿನದ ಜೊತೆ ಅರೆದು ಲೇಪಮಾಡಬೇಕು. ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
  • ಸಕ್ಕರೆ ಕಾಯಿಲೆ: 1 ಇಂಚು ಬಲಿತ ಕಾಂಡವನ್ನು ಜಗಿದು ರಸವನ್ನು ದಿನಕ್ಕೆ ಒಂದು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

2. ತುಳಸಿ
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ತುಳಸಿ
ಉಪಯೋಗ
  • ಕೆಮ್ಮು, ನೆಗಡಿ: 10 ಎಲೆಗಳನ್ನು ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು
  • ಚರ್ಮರೋಗ: ಎಲೆಗಳನ್ನು ಅರಿಶಿನದ ಜೊತೆಗೆ ಅರೆದು ಲೇಪಿಸಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
  • ಜಂತುಹುಳು: ತುಳಸಿ ಬೀಜ (1/2 ಚಮಚ) ವನ್ನು ಬೆಲ್ಲದೊಂದಿಗೆ ಊಟದ ನಂತರ ದಿನದಲ್ಲಿ 2 ಬಾರಿ ಸೇವಿಸಬೇಕು.
  • ನೀರು ಶುದ್ಧೀಕರಣ: 8 ರಿಂದ 10 ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ, ನೀರಿನಿಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.
  • ಸೊಳ್ಳೆಗಳ ನಿಯಂತ್ರಣ: ಮನೆಯ ಸುತ್ತ ಹೆಚ್ಚಾಗಿ ತುಳಸಿ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು ಮತ್ತು ಶುದ್ಧ ಗಾಳಿ ಪಡೆಯಬಹುದು. ಒಣಗಿದ ಎಲೆಗಳನ್ನು (ಒಂದು ಹಿಡಿ) ಕೆಂಡದಲ್ಲಿ ಧೂಪ ಹಾಕಿದರೆ ಸೊಳ್ಳೆಗಳು ಇಲ್ಲವಾಗುತ್ತವೆ.

3. ಒಂದೆಲಗ
ಚಹರೆ: ಇದೊಂದು ನೆಲದ ಮೆಲೆ ಹರಡುವ ಬಳ್ಳಿಯಾಗಿದೆ, ಎಲೆಗಳು ಮೆದುಳಿನ ಆಕಾರದಲ್ಲಿರುತ್ತವೆ; ಹೆಚ್ಚು ನೀರಿರುವ ಜಾಗದಲ್ಲಿ ಬೆಳೆಯುತ್ತದೆ.
ಒಂದೆಲಗ
ಉಪಯೋಗ
  • ಜ್ಞಾಪಕಶಕ್ತಿ ವರ್ಧನೆ: ಪ್ರತಿನಿತ್ಯ ಬೆಳಿಗ್ಗೆ 4 ರಿಂದ 6 ಎಲೆಗಳನ್ನು ಜಗಿದು ನುಂಗಬೇಕು.
  • ರಕ್ತದೊತ್ತಡ: ಒಂದೆಲಗದ ಎಣ್ಣೆ ತಯಾರಿಸಿ ನೆತ್ತಿಗೆ ಹಚ್ಚಿಕೊಳ್ಳಬೇಕು.
  • ನಿದ್ರಾಹೀನತೆ: ಎಣ್ಣೆಯನ್ನು ಬೆಚ್ಚಗೆ ಮಾಡಿ ಮಲಗುವ ಮುನ್ನ ನೆತ್ತಿಗೆ ಹಾಗೂ ಪಾದಗಳಿಗೆ ಹಚ್ಚಿ ಮೃದುವಾಗಿ ಅಭ್ಯಂಗ ಮಾಡಿಕೊಳ್ಳಬೇಕು.
  • ತೊದಲು: ಒಂದೆಲಗ ಎಲೆಯ ರಸವನ್ನು (3 ಟೀ ಚಮಚ) 3 ಬಾರಿ ಊಟದ ನಂತರ ಜೇನಿನ ಜೊತೆ ಸೇವಿಸಬೇಕು.

4. ಲೋಳೆಸರ
ಚಹರೆ: ಇದೊಂದು ಸಣ್ಣ ಗಿಡ, ದಪ್ಪನೆಯ ಎಲೆಗಳು, ಎಲೆಗಳ ಅಂಚಿನುದ್ದಕ್ಕೂ ಮುಳ್ಳುಗಳಿರುತ್ತವೆ ಹಾಗೂ ಎಲೆ ಒಳಗಿನ ತಿರುಳು ಲೋಳೆಯಾಗಿರುತ್ತದೆ.
ಲೋಳೆಸರ
ಉಪಯೋಗ
  • ಕೂದಲ ಆರೈಕೆ: ಲೋಳೆಸರದ ರಸವನ್ನು ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿಕೊಂಡು 10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಇದರಿಂದ ಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದು ನಿಂತು, ಬೆಳವಣಿಗೆ ಹೆಚ್ಚಿ ಕೂದಲಿಗೆ ಹೊಳಪು ನೀಡುತ್ತದೆ.
  • ಮುಖದ ಕಾಂತಿ: ಲೋಳೆಸರದ ರಸವನ್ನು ಮುಖಕ್ಕೆ ವಾರಕ್ಕೊಂದು ಬಾರಿ ಹಚ್ಚಿ 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
  • ಚರ್ಮರೋಗ: ಒಣ ಚರ್ಮ ಇದ್ದವರು ಲೋಳೆಸರದ ರಸವನ್ನು ಅರಿಶಿನದ ಜೊತೆ ಸೇರಿಸಿ ದಿನಕ್ಕೆರಡು ಬಾರಿ ಹಚ್ಚಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
  • ಸುಟ್ಟ ಗಾಯ: ಸುಟ್ಟಗಾಯಕ್ಕೆ ತಕ್ಷಣ ಲೋಳೆಸರವನ್ನು ಹಚ್ಚುವುದರಿಂದ ಉರಿ ಬೇಗ ಕಡಿಮೆಯಾಗುತ್ತದೆ.
  • ಕೈಕಾಲು ಉರಿ: ಮಧುಮೇಹ ರೋಗಿಗಳಲ್ಲಿ ಲೋಳೆಸರದ ರಸವನ್ನು ಪಾದಗಳಿಗೆ ಹಾಗೂ ಅಂಗೈಗೆ ಹಚ್ಚಿಕೊಂಡಲ್ಲಿ ಉರಿ ನಿವಾರಣೆಯಾಗುತ್ತದೆ. ಶೀತ ಉಂಟಾಗುವ ಸಂಭವವಿರುವುದರಿಂದ, ಇದನ್ನು ರಾತ್ರಿಯ ಬದಲು ಮಧ್ಯಾಹ್ನದ ವೇಳೆ ಹಚ್ಚುವುದು ಸೂಕ್ತ.

5. ಕರಿಬೇವು
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ಕರಿಬೇವು
ಉಪಯೋಗ
  • ದೇಹದ ತೂಕ ಕುಗ್ಗಿಸಲು: 10 ರಿಂದ 15 ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನಬೇಕು; ಮೂರು ತಿಂಗಳು ಸೇವಿಸುವುದರಿಂದ ದೇಹದ ಕೊಬ್ಬು ಕರಗಿ, ತೂಕ ಕಡಿಮೆಯಾಗುತ್ತದೆ.
  • ರಕ್ತಹೀನತೆ: ಅರ್ಧ ಚಮಚ ಕರಿಬೇವಿನ ಸೊಪ್ಪಿನ ಪುಡಿಯನ್ನು ಸಮಪ್ರಮಾಣ ಜೇನಿನ ಜೊತೆ ಸೇವಿಸಬೇಕು. ಕರಿಬೇವಿನಲ್ಲಿರುವ ಕಬ್ಬಿಣಾಂಶ ರಕ್ತಹೀನತೆ ನಿವಾರಿಸುತ್ತದೆ.
  • ಹುಳಿತೇಗು: ಅರ್ಧ ಚಮಚ ಕರಿಬೇವಿನ ಸೊಪ್ಪನ್ನು ಒಂದು ಲೋಟ ಮಜ್ಜಿಗೆಯ ಜೊತೆ ಊಟಕ್ಕೆ ಅರ್ಧ ಗಂಟೆ ಮುಂಚೆ ದಿನದಲ್ಲಿ 3 ಬಾರಿ, 7 ದಿನ ಸೇವಿಸಬೇಕು.
  • ಕೇಶಚ್ಯುತಿ: ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಸ್ವಲ್ಪ ನೀರಿನ ಜೊತೆ ಅರೆದುಕೊಳ್ಳಬೇಕು. 250 ಗ್ರಾಂ. ಕೊಬ್ಬರಿ / ಎಳ್ಳೆಣ್ಣೆ ಕಾಯಿಸಿ, ಅರೆದ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ನೀರಿನ ಅಂಶ ಹೋಗುವವರೆಗೆ ಕಾಯಿಸಿ, ತಣ್ಣಗಾದ ನಂತರ ಶೋಧಿಸಿ ಶೇಖರಿಸಬೇಕು. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತು, ಹೊಟ್ಟು ನಿವಾರಣೆಯಾಗಿ, ಕೇಶ ಕಪ್ಪಾಗಿ, ಉದ್ದವಾಗಿ ಬೆಳೆಯುತ್ತದೆ.

ಈ ಔಷಧಿ ಸಸ್ಯಗಳನ್ನು ನಾವು ನಮ್ಮ ಮನೆಯಲ್ಲಿಯೇ ಹೂವಿನ ಕುಂಡಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಿಕೊಳ್ಳಬಹುದು. ಇದರಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಪರಿಸರವೂ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.

ಲೇಖಕರ ಕಿರುಪರಿಚಯ
ಡಾ. ಚಂದ್ರಕಲ ಸಿ.

ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಕರ್ನಾಟಕ ಸರ್ಕಾರದ ಆಯುಷ್‍ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

2 ಕಾಮೆಂಟ್‌ಗಳು: