ಸೋಮವಾರ, ನವೆಂಬರ್ 10, 2014

ಮುಖವಾಡ

ಬದುಕ ಬವಣೆಯ ಬೀದಿಗಳಲ್ಲಿ
ಹೆಜ್ಜೆಗೊಂದು ಮುಖವಾಡ ಸಿಕ್ಕು
ನಂಬಿಸುತ್ತದೆ, ಕಥೆ ಹೇಳುತ್ತದೆ
ತಾನಿಲ್ಲದ ಬದುಕು ಬಯಲಾಟ
ಮುಚ್ಚಿಟ್ಟರಷ್ಟೆ ಚೆಲುವು ನೋಟ
ಎಂದೆಲ್ಲ ಪಿಸುನುಡಿದು ಗಹಗಹಿಸುತ್ತದೆ

ಮುಖವಾಡಕ್ಕೆ ತಲೆಯಿಲ್ಲ, ಕಣ್ಣಿಲ್ಲ
ಹಿಂದೆ ಅಡಗಿದ ಮುಖಕ್ಕೆ ನೆಲೆಯಿಲ್ಲ
ಕಣ್ಣ ಓದಲು ಮರೆತವರ ಸಾಲಲ್ಲಿ
ತೋರಿಕೆಯ ಪ್ರೀತಿ ಗೀತಿ ಇತ್ಯಾದಿ
ಮುಖದೊಂದಿಗೆ ಮನಸಿಗೂ ಮುಚ್ಚಳ
ಸುತ್ತಮುತ್ತೆಲ್ಲ ಕೃತಕತೆಯ ಸಪ್ಪಳ

ಅರೆರೆ, ನನ್ನ ಮುಖದ ಮೇಲೂ
ಇರಬಹುದಲ್ಲ ಚೆಂದದ ಮುಖವಾಡ
ನನ್ನದೆನ್ನುವುದೆಲ್ಲ ಚಂದವೇ ಆಗಬೇಕಿಲ್ಲ
ಕನ್ನಡಿ ನೋಡುವಾಗೆಲ್ಲ ಗೊಂದಲ
ಪ್ರತಿಬಿಂಬ ನನ್ನದಾ, ಅದರದಾ
ಕನಸಲ್ಲೂ ವಿವಿಧ ರೂಪ - ಸ್ವರೂಪ

ನಿಜ ಮುಖಗಳಿಲ್ಲದ ಜಗದಲಿ
ಬಣ್ಣದ ಮುಖವಾಡಗಳ ಸಂತೆ
ಒಂದಕ್ಕಿಂತ ಇನ್ನೊಂದು ಚೆಂದ
ನೋಟವ ನಂಬಿಸುವ ಮಾಟಕ್ಕೆ
ಬದಲಾಗೋ ಬಣ್ಣಗಳ ಪವಾಡ
ಕಣ್ಣಿಲ್ಲದ ತೂತು ಮುಖವಾಡ


ಲೇಖಕರ ಕಿರುಪರಿಚಯ
ಶ್ರೀ ರಘುನಂದನ ಕೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಉಮ್ಮಚ್ಗಿ ಗ್ರಾಮದವರಾದ ಇವರು ಪ್ರಸ್ತುತ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇಲ್ಲಿ ಸಹಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ