ಗುರುವಾರ, ನವೆಂಬರ್ 6, 2014

ಕನಕದಾಸರು

ದಾಸಶ್ರೇಷ್ಠರಲ್ಲೊಬ್ಬರಾದ ಕನಕದಾಸರು ಧಾರವಾಡ ಜಿಲ್ಲೆಯ 'ಬಾಡ' ಎಂಬ ಸ್ಥಳದಲ್ಲಿ 16ನೇ ಶತಮಾನದಲ್ಲಿ ಜನಿಸಿದರು. ಸೇನೆಯಲ್ಲಿ ದಂಡನಾಯಕರಾಗಿದ್ದ ಇವರು, ಯುದ್ಧವೊಂದರಲ್ಲಿ ಮಾರಣಾಂತಿಕ ಹೊಡೆತವನ್ನನುಭವಿಸಿಯೂ ಪವಾಡಸದೃಶ ರೀತಿಯಲ್ಲಿ ಬದುಕುಳಿದರು. ಈ ಘಟನೆಯು ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು, ದೈವಾನುಗ್ರಹದಿಂದಲೇ ತಾವು ಬದುಕುಳಿದದ್ದೆಂದು ಅರಿತು ಪ್ರಾಪಂಚಿಕ ಜೀವನವನ್ನು ತ್ಯಜಿಸಿ, ಆಧ್ಯಾತ್ಮಿಕ ಲೋಕ ಪ್ರವೇಶಿಸಿ ಸಂತ ಕವಿಯಾದರು.

ಅಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯು, ಕೆಳಸ್ಥರದಲ್ಲಿ ಜನಿಸಿದ ಕನಕದಾಸರನ್ನು ಅಪಾರ ನಿಂದನೆ, ಶೋಷಣೆಗೊಳಪಡಿಸಿತು. ಒಂದು ಹಂತದಲ್ಲಿ ಕನಕದಾಸರನ್ನು ಶಿಷ್ಯರನ್ನಾಗಿ ಸ್ವೀಕರಿಸಲೂ ಜಾತಿ ವ್ಯವಸ್ಥೆ ಎದುರಾಯಿತು. ತಾವು ಅನುಭವಿಸಿದ ಈ ಶೋಷಣೆಯನ್ನು ಕನಕದಾಸರು ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಹೇಗೆ ವಚನಕಾರರ ರಚನೆಗಳನ್ನು 'ವಚನ'ಗಳೆಂದೂ, ಕಬೀರ ರಚನೆಗಳನ್ನು 'ದೋಹೆ'ಗಳೆಂದೂ, ಸರ್ವಜ್ಞನ ರಚನೆಗಳನ್ನು 'ತ್ರಿಪದಿ'ಗಳೆಂದೂ ಕರೆಯುವರೋ ಹಾಗೆಯೇ ಹರಿದಾಸರ ರಚನೆಗಳನ್ನು 'ಕೀರ್ತನೆ'ಗಳೆಂದು ಕರೆಯುವರು.

ಕನಕದಾಸರ ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯನ್ನು ಸಾರುವ ಒಂದು ಕೀರ್ತನೆ ಹೀಗಿದೆ:

ಕುಲ ಕುಲ ಕುಲವೆನ್ನುತಿಹರು (2)
ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ (2)
ಕುಲ ಕುಲ ಕುಲವೆನ್ನುತಿಹರು.

ಆತ್ಮಯಾವ ಕುಲ ಜೀವಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯಾ
ಆತ್ಮಾಂತರಾತ್ಮ ನೆಲೆ ಆದಿ ಕೇಶವ
ಆತನೊಲಿದ ಮೇಲೆ ಯಾತರ ಕುಲವಯ್ಯಾ?

ಕನಕದಾಸರ ಈ ಬಂಡಾಯದ ದನಿಯನ್ನು 12ನೇ ಶತಮಾನದ ಕ್ರಾಂತಿಕಾರಿಗಳಾದ ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ, ಮಾದಾರ ಚೆನ್ನಯ್ಯ ಮೊದಲಾದ ವಚನಕಾರರ ವಚನಗಳಲ್ಲಿ ಕಾಣಬಹುದಾಗಿದೆ. ಏಕೆಂದರೆ, 'ವರ್ಣ ಸಂಕರ'ದ ಮೂಲಕ ಜಾತಿ ಪದ್ಧತಿಯನ್ನು ವಚನಕಾರರೂ ವಿರೋಧಿಸಿದರು.

ಹಿಂದೂ ಸಂಪ್ರದಾಯದಲ್ಲಿ ದೈವ ಸಾಕ್ಷಾತ್ಕಾರವನ್ನು ಭಕ್ತಿಮಾರ್ಗ, ಕರ್ಮಮಾರ್ಗ ಹಾಗೂ ಜ್ಞಾನಮಾರ್ಗಗಳಿಂದ ಮಾಡಿಕೊಳ್ಳಬಹುದೆಂಬ ನಂಬಿಕೆಯಿದೆ. ಅದರಂತೆಯೇ, ಕನಕದಾಸರು ತಮ್ಮ ಆರಾಧ್ಯ ದೈವ 'ಕಾಗಿನೆಲೆ ಆದಿಕೇಶವ'ನ ಸಾಕ್ಷಾತ್ಕಾರಕ್ಕಾಗಿ 'ಭಕ್ತಿಮಾರ್ಗ'ವನ್ನು ಅನುಸರಿಸಿದರು. 'ಕಾಗಿನೆಲೆ ಆದಿಕೇಶವ' ಎಂಬುದು ಇವರ ಅಂಕಿತನಾಮವೂ ಹೌದು. ಇದೇ ಸಂದರ್ಭದಲ್ಲಿ ಬಸವಣ್ಣನ 'ಕೂಡಲ ಸಂಗಮ ದೇವ', ಅಕ್ಕ ಮಹಾದೇವಿಯ 'ಚೆನ್ನ ಮಲ್ಲಿಕಾರ್ಜುನ', ಪುರಂದರದಾಸರ 'ಪುರಂದರ ವಿಠಲ' ಮುಂತಾದ ಅಂಕಿತನಾಮಗಳು ಸ್ಮರಣೆಗೆ ಸೂಕ್ತವಾಗಿವೆ.

ಕನಕದಾಸರದು ಭಕ್ತಿಯಿಂದಲೇ ಮೈವೆತ್ತಂತಹ ವ್ಯಕ್ತಿತ್ವ. ಭಕ್ತಿಪರವಶರಾಗಿ ಕೀರ್ತನೆಗಳನ್ನು ಹಾಡುತ್ತಾ ಸಾಗುತ್ತಿದ್ದ ಕನಕದಾಸರ ನಿಜ ಜೀವನದಲ್ಲಿ ಕೆಲವು ಪವಾಡಗಳು ಜರುಗಿದವೆಂಬ ಐತಿಹ್ಯಗಳಿವೆ. ಉದಾಹರಣೆಗೆ, ಕನಕದಾಸರಿದ್ದಲ್ಲಿಯೇ ಕಿಟಕಿಯ ಮೂಲಕ ದೇವರು ದರ್ಶನ ನೀಡಿದ ಉಡುಪಿಯ ಶ್ರೀಕೃಷ್ಣ ದೇಗುಲದ 'ಕನಕನ ಕಂಡಿ'.

ಕನಕದಾಸರ ಕೀರ್ತನೆಗಳು ಸಂಖ್ಯೆಯಲ್ಲಿ ಪುರಂದರದಾಸರಿಗಿಂತ ಕಡಿಮೆಯಾಗಿದ್ದರೂ, ಪ್ರೌಢಿಮೆಯಲ್ಲಿ ಸರಿಸಾಟಿಯಾಗಿ ನಿಲ್ಲಬಲ್ಲವೆಂಬುದು ಕನ್ನಡ ಸಾಹಿತ್ಯ ವಿಮರ್ಶಕರ ಅಭಿಮತವಾಗಿದೆ. ಇವರ ಕೀರ್ತನೆಗಳಲ್ಲಿ ಅಸೀಮ ದೈವಭಕ್ತಿಯ ಜೊತೆಜೊತೆಗೆ ಸಮಾಜದ ವಿಡಂಬನೆ, ತನ್ಮೂಲಕ ಸಾಮಾಜಿಕ ಸುಧಾರಣೆಯ ಆಯಾಮವೂ ವ್ಯಕ್ತವಾಗುತ್ತದೆ.

ಉದಾಹರಣೆಗೆ, ಢಾಂಬಿಕ ಭಕ್ತಿಯ ತೋರು ಜನರನ್ನು ಕುರಿತು:

ಜಪವ ಮಾಡಿದರೇನು ತಪವ ಮಾಡಿದರೇನು
ಕಪಟಗುಣ ವಿಪರೀತ ಕಲುಷ ಇದ್ದವರು

ಆದಿಗುರುವರಿಯದೆ ಅತ್ತಲಿತ್ತಲೂ ತೊಳಲಿ
ವೇದಶಾಸ್ತ್ರಗಳೋದಿ ಬಾಯಾರಲು
ಆದಿಯನು ಕಾಣದಿಂದಿರುತಿದ್ದು ಹಲವೆಂಟು
ವಾದ ತರ್ಕದೊಳಿದ್ದ ಭೇದವಾದಿಗಳು

ಎಂದಿದ್ದಾರೆ. ಆ ಮೂಲಕ ದೈವ ಸಾಕ್ಷಾತ್ಕಾರಕ್ಕಾಗಿ ಬೇಕಾದ ಸೂಕ್ತ ಮನಸ್ಥಿತಿಯನ್ನೂ ಸೂಚಿಸಿದ್ದಾರೆ.

ಒಬ್ಬ ಕವಿಯ ರಚನೆಯು ಅವನ ಮನಸ್ಸಿನ ಪ್ರೌಢಿಮೆಯನ್ನೂ ಸೂಚಿಸಬಹುದು. ಕವಿಯ ಬದುಕಿನ ಯಾವ ಘಟ್ಟದಲ್ಲಿ ರಚಿತಗೊಂಡಿದೆಯೆಂಬ ಕುರುಹನ್ನೂ ನೀಡಬಲ್ಲದು. ಅಂತೆಯೇ, ಕನಕದಾಸರ ಕೀರ್ತನೆಗಳು ಬದುಕಿನ ವಿವಿಧ ಹಂತಗಳಲ್ಲಿ ರಚಿತವಾಗಿವೆ. ಉದಾಹರಣೆಗೆ:

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶಮಾಡು ಶ್ರೀಶ ಕೇಶವ

ಹುಟ್ಟಿಸಲೇಬೇಡ ಇನ್ನು ಹುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೆ..

ಈ ಕೀರ್ತನೆಯು ಕನಕದಾಸರ ಬದುಕಿನ ಕೊನೆಯ ಹಂತದಲ್ಲಿ ರಚಿತವಾಗಿರಬಹುದು. ಏಕೆಂದರೆ, ಇಲ್ಲಿ ಅವರ ಗಾಢವಾದ ಜೀವನಾನುಭವ, ಪ್ರೌಢಿಮೆ ಅನಾವರಣಗೊಂಡಿದೆ.

ಇಂತಹ ನೂರಾರು ಕೀರ್ತನೆಗಳಿಂದ ಕನ್ನಡ ಸಾಹಿತ್ಯ ಪರಂಪರೆಯನ್ನು, ಸಂಗೀತವನ್ನು ಶ್ರೀಮಂತಗೊಳಿಸಿರುವ ಕನಕದಾಸರು ನೈಜತೆಯಲ್ಲಿ ದಾಸಶ್ರೇಷ್ಠರೇ ಆಗಿರುವರು.

ಲೇಖಕರ ಕಿರುಪರಿಚಯ
ಡಾ. ಉಮೇಶ್‍ ಕವಲಿ

ಬೆಂಗಳೂರಿನ ಪಶುವೈದ್ಯಕೀಯ ಮಾಹಾವಿದ್ಯಾಲಯದಿಂದ ಪ್ರಾಣಿ ಅನುವಂಶೀಯತೆ ಹಾಗೂ ಸಂವರ್ಧನಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಹಿರಿಯ ಪಶುವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ