ಭಾನುವಾರ, ನವೆಂಬರ್ 16, 2014

ಭೂಮಿಯಾಚೆಗಿನ ಕನಸು

ನಿಜಕ್ಕೂ ಆ ಕನಸು ನನದಲ್ಲ
ನನದಲ್ಲದ ಆ ಕನಸು ಮೂಡಿದ್ದು
ಇನ್ನೂ ಸೋಜಿಗವೆನಿಸುತ್ತಿದೆ, ಏಕೆಂದರೆ
ಅಲ್ಲಿ ಶಾಂತಿ, ಸೌಹಾರ್ದತೆಯದ್ದೇ ಕಾರುಬಾರು!!

ಬಿಳುಪಾದ ಪರದೆಯ ಮೇಲೆ
ನೆರಳಿನಂಥ ಸಂತೆ,
ಮೂಡಿ ಹೋಗುತ್ತಿದ್ದ ನೆರಳಿಂದ
ಪರದೆಗಾವ ನಷ್ಟವಂತೂ ಆಗುತ್ತಿರಲಿಲ್ಲ!!

ಅಲ್ಲಿ ಕಥೆ ಹೇಳುತ್ತಿದ್ದ ತಂಬೂರಿ ದಾಸಯ್ಯ
ಬರೆ ಸತ್ಯವನ್ನಷ್ಟೇ ನುಡಿಯುತ್ತಾನಂತೆ;
ಅಷ್ಟಾಗಿಯೂ ಅವನ ಗತ ಕಥೆಗಳಲ್ಲಿ
ರಕ್ತದ ಜಿಗುಟಾಗಲಿ, ತೊಗಲಿನ ಕಮಟಾಗಲಿ
ಗೋಚರಿಸಲಿಲ್ಲವಾಗಿ ನಾ ನಂಬಲಿಲ್ಲ;

ನಂತರ ನಂಬುಗೆ ಹುಟ್ಟಿತು,
ಆತ ಹೇಳುತ್ತಿದ್ದ ಕಥೆಗಳೆಲ್ಲ
ಭೂಮಿಯಾಚೆಗಿನ
ಅನ್ಯ ಗ್ರಹವಾಸಿಗಳದ್ದು!!

ಮಗು ಅಳುವುದಕ್ಕೂ ಮುನ್ನ
ಹಾಲುಣಿಸಿ ಸಲಹುತ್ತಿದ್ದ ತಾಯಿ
ಅಳುವಿನ ಸದ್ದು ಕೇಳುವ
ಕೊನೆ ಅವಕಾಶವನ್ನೂ ಕಸಿದುಕೊಂಡಳು;
ಅಲ್ಲಿ ಮುಳ್ಳ ಮೆಟ್ಟಿದರೂ ಹೂವಾಗುವುದು
ಕಲ್ಲ ಮೀಟಿದರೂ ಹಾಡಾಗುವುದು
ಅದು ಖಂಡಿತ ಭೂಮಿಯಲ್ಲ;
ನಾ ಲಕ್ಷ-ಲಕ್ಷ ಮೈಲಿ ದೂರದ
ಅನಾಮಧೇಯ ಗ್ರಹದಲ್ಲಿ ಬಾಳುತ್ತಿದ್ದೆ!!

ಬೆಂಕಿ ಬೆಳಕಾಗುತ್ತಿತ್ತು
ಪ್ರೀತಿ ಬದುಕಾಗುತ್ತಿತ್ತು
ಎಲ್ಲರೂ ನಗುವವರೇ;
ಅಲ್ಲಿ ಕಣ್ಣೀರೆಂಬುದು ಕಾಲ್ಪನಿಕ,
ನಿಘಂಟಿಗೂ ನಂಟಿಲ್ಲದ ವಸ್ತು!!
ಎಲ್ಲರೂ ನನ್ನವರೇ, ನಾನೂ ಎಲ್ಲರವ,
ಮನೆ ಬೇಡದ ಸಂಸಾರ
ನಾ ನಿಜಕ್ಕೂ ಅಲ್ಲಿ ಸಾಹುಕಾರ!!

ಅಚಾನಕ್ಕಾಗಿ ಒಬ್ಬ ಬಾಂಡ್ ಥರ
ಕೋಟು, ಹ್ಯಾಟು, ಕಪ್ಪು ಕನ್ನಡಕ ಧರಿಸಿ
"ಯೂ ಆರ್ ಅಂಡರ್ ಅರ್ರೆಸ್ಟ್
ಫಾರ್ ಲಿವಿಂಗ್ ಸೋ ಹ್ಯಾಪಿಲಿ" ಅಂದು
ಕೈಗೆ ಬೇಡಿ ತೊಡಿಸಿ ದರ-ದರನೆ ಎಳೆದು
ರಾಕೆಟ್ ಏರಿಸಿ ಭೂಮಿಗೆ ಕರೆತಂದು
ಮುಖಕ್ಕೆ ನೀರೆರಚಿ ಎಚ್ಚರಗೊಳಿಸುತ್ತಾನೆ;
ಬದುಕ ಬೆನ್ನಿಗೆ ಸಾವ ಸವರುವ ಕಸುಬು ಮುಂದುವರಿಸುತ್ತೇನೆ!!

- ರತ್ನಸುತ

ಲೇಖಕರ ಕಿರುಪರಿಚಯ
ಶ್ರೀ ಭರತ್‍ ಎಂ. ವೆಂಕಟಸ್ವಾಮಿ

ವೃತ್ತಿಯಲ್ಲಿ ಸಾಫ್ಟ್ ವೇರ್‍ ಇಂಜಿನಿಯರ್‍ ಆಗಿರುವ ಇವರು ಮೂಲತಹಃ ಬೆಂಗಳೂರು ಸಮೀಪದ ಮಂಚಪ್ಪನಹಳ್ಳಿಯವರಯ; ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ