ಸೋಮವಾರ, ನವೆಂಬರ್ 24, 2014

ಚಂಪಕಧಾಮ

'ಯಾಕೋ ಕೆಲಸಕ್ಕೆ ಹೋಗಲಿಕ್ಕೆ ಬೇಜಾರು... ಬಾ, ಬನ್ನೇರುಘಟ್ಟಕ್ಕೆ ಹೋಗಿ ಬರೋಣ...'

'ಹಾ... ಬನ್ನೇರುಘಟ್ಟಕ್ಕಾ..? ಮಾಡಲಿಕ್ಕೆ ಬೇರೆ ಕೆಲಸ ಇಲ್ವಾ?..'

ಹೀಗೆ ಮಿತ್ರನ ಜೊತೆ ಮೋಟಾರು ಬೈಕನಲ್ಲಿ ಚಿಕ್ಕ ಪಯಣ. ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿಗೆಂಪಲ್ಲಿ, 'ಓ ಒಲವೆ ನೀನೆಲ್ಲಿ, ಹುಡುಕಾಟ ನಿನಗಿನ್ನೆಲ್ಲಿ' ಪದ್ಯದ ಸಾಲುಗಳನ್ನು ಹಾಡುತ್ತಿದ್ದ ನಮಗೆ ಅಲ್ಲಲ್ಲಿ ತುಂತುರು ಮಳೆಯ ಸಾಥ್.. ಮನಸ್ಸಿಗೆ ತುಂಬಾ ಉಲ್ಲಾಸ ನಿಡುತಿತ್ತು. ಸುಮಾರು ಹದಿನಾಲ್ಕು ವರುಷದ ನಂತರ ಹೋದ ನನಗೆ ನಿರಾಸೆ ಕಾದಿತ್ತು. ಮಂಗಳವಾರ ರಜೆ. 'ಸರಿ ನಡಿಯಪ್ಪಾ ಇನ್ನೇನು ಮಾಡೋದು, ಬಂದ ದಾರಿಗೆ ಸುಂಕವಿಲ್ಲಾ' ಅಂತಾ ಬೈಕ್ ತಿರುಗಿಸಿ ಹೊರಟ ನಮ್ಮ ಕಣ್ಣಿಗೆ ಬಿದ್ದಿದ್ದೇ 'ಚಂಪಕಧಾಮ' ಮಂದಿರ.
ಚಂಪಕಧಾಮ ಮಂದಿರ
ಬೈಕ್ ಪಾರ್ಕ್ ಮಾಡಿ ದೇವಸ್ಥಾನದ ಒಳ ಹೊಗುತ್ತಿದ್ದಿರೆ ಆ ಭವ್ಯ ಕಟ್ಟಡದ ಸುಂದರ ಶಿಲ್ಪಕಲೆ, ವಿಶಾಲವಾದ ಪ್ರಾಂಗಣ ಎಂಥವರಿಗೂ ಮನಸೋಲುವ ಹಾಗೆ ಮಾಡುತ್ತಿತ್ತು. ದೇವರಿಗೆ ಅರ್ಚನೆ ಮುಗಿಸಿ ಹೊರಬಿದ್ದ ನಂಗೆ  ದೇವಸ್ಥಾನದ ಇತಿಹಾಸ ತಿಳಿಯುವ ಕುತೂಹಲ ಉಂಟಾಗಿ ಅಲ್ಲೆ ಇದ್ದ ಅರ್ಚಕರನ್ನ ಸಂದರ್ಶಿಸಿದೆ. ದೇವಸ್ಥಾನ ಸರಿಸುಮಾರು 1000 ವರುಷ ಹಳೇಯದ್ದು, ಹಾಗೂ ಈ ದೇವಸ್ಥಾನದ ಕೆಳಗೆ ದ್ವಾಪರ ಯುಗದ ಇನ್ನೊಂದು ದೇವಸ್ಥಾನ ಇರುವದಾಗಿಯೂ ತಿಳಿದುಕೊಂಡೆ. ಚಂಪಕಧಾಮದ ದರುಶನ ಮುಗಿಸಿಕೊಂಡು ಅಲ್ಲಲ್ಲಿ ನೋಟಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಸ್ವಲ್ಪ ಕಾಲಹರಣ ಮಾಡಿದೆವು.

'ಲೋ.. ಬೆಟ್ಟದ ಮೇಲೆ ಹೊಗೊಣ್ವಾ? ಯಾವುದೋ ದೇವಸ್ಥಾನ ಕಾಣ್ತಾ ಇದೆ.'

ಚಂಪಕಧಾಮ ದೇವಸ್ಥಾನದ ಹಿಂದೆ ಇರುವ ಬೆಟ್ಟ ಹತ್ತಲು ಶುರು ಮಾಡಿದೆವು. ಮೇಲೆ ಮೇಲೆ ಏರುತ್ತಾ ಇದ್ದ ನಮಗೆ, ಬೆಂಗಳೂರು ದೂರದಿಂದಲೇ ಅನಾವರಣಗೊಳ್ಳಲು ಶುರುವಾಯಿತು. ಪೂರ್ತಿ ಬೆಟ್ಟ ಹತ್ತಿದ ಮೇಲೆ, ಹುಣ್ಣಿಮೆ ಚಂದ್ರ ದೂರದಿಂದಲೆ ಹೇಗೆ ಪ್ರಕಾಶಮಾನವಾಗಿ ಕಾಣುವುದೋ ಹಾಗೆ ಬೆಟ್ಟದ ತುದಿಯಿಂದ ನಮ್ಮ ಬೆಂಗಳೂರಿನ ನೋಟ ಕಣ್ಣಿಗೆ ಬಡಿಯುತ್ತಿತ್ತು. ಬೆಟ್ಟದ ತುದಿಯೇರಿದ ನಮಗೆ ಕಣ್ಣಿಗೆ ಬಿದ್ದಿದ್ದು ನರಸಿಂಹ ಸ್ವಾಮಿಯ ದೇವಸ್ಥಾನ. ಅದರ ದರುಶನವೂ ಆಯ್ತು.
ಭವಾನಿಶಂಕರ ಮಂದಿರ
'ಸಾಮಿ, ಇಲ್ಲೆ ಕಾಲುದಾರಿಯಿಂದ 2-3 ಕಿಲೋಮೀಟರ್ ಹೋದ್ರೆ ಹನುಮಾನ್ ಮಂದಿರ, ಭವಾನಿಶಂಕರ ಮಂದಿರ ಇದೆ. ವಿಶೇಷ ಅಂದ್ರೆ ಮಾರುತಿ ವಿಗ್ರಹ ಕಲ್ಯಾಣಿಯೊಳಗಿದೆ. ಅದನ್ನ ವರುಷಕ್ಕೊಮ್ಮೆನೆ ನೋಡಿಲಿಕ್ಕಾಗೊದು..'. 'ಹೌದಾ!' ಅಂತಾ ಗೆಳೆಯನ ಬಾಯಿಂದ ಉದ್ಗಾರವಾಚಕ ಪದ. ದಣಿವಾರಿಸಿಕೊಳ್ಳಲು ನೀರು ಖರೀದಿ ಮಾಡುತ್ತಿದ್ದಾಗ ಆ ಮಹಿಳೆ ನಮಗೆ ಆ ಸ್ಥಳಕ್ಕೆ ಹೋಗಿ ಬರಲು ಸೂಚಿಸುತ್ತಿದ್ದರು. ಸರಿ ಅಂತ ಹೊರಟ ನಮಗೆ ದಾರಿಯುದ್ದಕ್ಕೂ ಸಿಕ್ಕಿದ್ದು ಕುರುಚಲು ಗಿಡಗಳ ಹಾಸು, ಕಲ್ಲು ಬಂಡೆಗಳು, ತಣ್ಣನೆ ಗಾಳಿ, ಮನಸ್ಸಿಗೆ ಹಿತ. ಅಲ್ಲಲ್ಲಿ ಸಿಗುತಿದ್ದ ಅರಣ್ಯ ಇಲಾಖೆಯ ಸೂಚನಾ ಫಲಕಗಳು 'ಇದು ಕಾಡುಪ್ರಾಣಿಗಳು ಸಂಚರಿಸುವ ಸ್ಥಳ' ಎಂಬ ಎಚ್ಚರದ ಸೂಚನೆಗಳು. ಹಾಗೂ ಹೀಗೂ, ದೇವಸ್ಥಾನಕ್ಕೆ ಬಂದು ತಲುಪಿದ ನಾವು ನಮ್ಮ ದಣಿವನ್ನು ಅಲ್ಲಿಯ ಪ್ರಶಾಂತತೆಯೊಳಗೆ ಲೀನಗೊಳಿಸಿ ದರುಶನಕ್ಕೆ ಅಣಿಯಾದೆವು.
    
ಸಂಸಾರ ಸಾಗರದಲಿ ದಿಕ್ಕು ತಪ್ಪಿಹೆ ಪಶುಪತಿಯೆ,
ಪ್ರಶಾಂತತೆಯ ಈ ಜಾಗದಲಿ ನನ್ನನು ನಿನಗರ್ಪಿಹೆ.
ನನ್ನ ಮಾತು ಮೌನವಾಗಿದೆ ಸಂಸಾರದ ಸದ್ದುಗದ್ದಲದಲಿ,
ಶಂಭುವೆ ಬಂದು ಕಾಪಾಡು ನೀ ಭರದಲಿ.
ಮನಕೆ ಬುದ್ಧಿಯ ಕೊಟ್ಟು ಕೆಡಿಸಿರುವೆ ಪರಿಸ್ಥಿಯ ಆಕಾರ,
ಹೆ ಶಂಕರ ಪರಿಹರಿಸು ಎನ್ನಯ ಮನೋವಿಕಾರ.

ಎನ್ನುತ್ತಾ  ಭವಾನಿ ಶಂಕರನ ದರುಶನದ ಧನ್ಯತಾ ಭಾವವನ್ನು ನನ್ನ ಜೋಳಿಗೆಯಲಿ ತುಂಬಿಸಿ, ನನ್ನ ವ್ಯವಸ್ಥೆ ಅವ್ಯವಸ್ಥೆಗಳ ನಡುವೆ ನನ್ನ ವಿಚಾರಗಳನ್ನು ತೂಗಿ ಹಾಕಿ ಮೈಮರೆತಿದ್ದ ನನಗೆ, 'ಲೇ.. ಹೊಟ್ಟೆ ಪೂಜೆಗೆ ಬಾರಲೇ. ಅಲ್ಲಿ ಕಡ್ಲೆಪುರಿ ಮಾರ್ತಾ ಇದ್ದಾರೆ, ಹೋಗಿ ಏನಾದರು ತಿನ್ನೋಣ' ಅಂತ ಗೆಳೆಯನ ಮಾತು ಕಿವಿಗೆ ಬಿದ್ದ ಕ್ಷಣ ನಾನು ಮೈಮರೆತ ಸ್ಥಿತಿಯಲ್ಲೆ ಮುನ್ನಡೆದಿದ್ದೆ. ಕಡ್ಲೆಪುರಿ ಕೊಳ್ಳುವ ಹೊತ್ತಿನಲ್ಲಿ ಅಕಸ್ಮಾತಾಗಿ ಒಂದು ಚಿತ್ರದ ಕಡೆಗೆ ದೃಷ್ಟಿ ಬಿತ್ತು. 'ಏನಮ್ಮಾ ಇದು?' ಅಂತಾ ಮಾರುವವಳ ಹತ್ತಿರ ಕೇಳಿದಾಗ ಕಲ್ಯಾಣಿಯಲ್ಲಿರುವ ಮಾರುತಿಯ ಚಿತ್ರ ಎಂದು ತಿಳಿಯಿತು.
ಕಲ್ಯಾಣಿಯ ಮಾರುತಿ
ಅದನ್ನ ಕ್ಯಾಮೇರಾದಲ್ಲಿ ಸೆರೆ ಹಿಡಿದದ್ದಾಯಿತು. ಇಬ್ಬರು ಸ್ವಲ್ಪ ಕಾಲಹರಣ ಮಾಡಿ, ಹಿಂತಿರುಗುತ್ತಿದ್ದ ವೇಳೆ ಸಿಕ್ಕ ಸಿಕ್ಕಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಾ ನಮ್ಮ ಪಯಣ ಮತ್ತೆ ಬೆಂದಕಾಳೂರಿನ ಕಡೆ ತಿರುಗಿತು.

ಲೇಖಕರ ಕಿರುಪರಿಚಯ
ಶ್ರೀ ಕಾರ್ತಿಕ್ ದಿವೇಕರ್

ಆಧ್ಯಾತ್ಮ ಸಂಬಂಧಿತ ವಿಚಾರಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಮೂಲತಃ ಹಾವೇರಿ ಜಿಲ್ಲೆಯವರು. ಓದು ಇವರ ನೆಚ್ಚಿನ ಹವ್ಯಾಸ; ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ