ಮಂಗಳವಾರ, ನವೆಂಬರ್ 28, 2017

ನಸ್ರುದ್ದೀನ್‌ನ ಮನೆಯ ಔತಣ

ಚಿತ್ರ ಕೃಪೆ : Google
ಮುಲ್ಲಾ ನಸ್ರುದ್ದೀನ್ ಚುರುಕು ಬುದ್ಧಿಗೆ ಹೆಸರುವಾಸಿ. ಕೆಲವರಿಗೆ ಅವನ ಖ್ಯಾತಿಯನ್ನು ಕಂಡು ಹೊಟ್ಟೆಕಿಚ್ಚು. ಅವನಿಗಿಂತ ತಾವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವ ಚಪಲ. ಇದಕ್ಕಾಗಿ ಒಮ್ಮೆ ಅವರು ಒಂದು ಉಪಾಯ ಹೂಡಿದರು. ಅವನ ಬಳಿಗೆ ಹೋಗಿ, "ನಸ್ರುದ್ದೀನ್, ಊರ ಹೊರಗಿನ ಹಿಮಬೆಟ್ಟದಲ್ಲಿ ನೀನು ಒಬ್ಬನೇ ಒಂದು ರಾತ್ರಿ ಕಳೆದು ಬಂದರೆ ಬಹುಮಾನ ಕೊಡುತ್ತೇವೆ; ಆದರೆ, ಒಪ್ಪಿಗೆಯೇ?" ಎಂದು ಪಂಥ ಹೂಡಿದರು. ನಸ್ರುದ್ದೀನ್ ಒಪ್ಪಿಕೊಂಡು ಒಂದು ಮೊಂಬತ್ತಿಯನ್ನು ಹಚ್ಚಿಕೊಂಡು, ಒಂದು ಪುಸ್ತಕವನ್ನು ಹಿಡಿದುಕೊಂಡು, ರಾತ್ರಿಯನ್ನು ಕಳೆಯಲು ಹಿಮಬೆಟ್ಟಕ್ಕೆ ಹೋದ. ಕಗ್ಗತ್ತಲ ರಾತ್ರಿ, ಮೈಕೊರೆಯುವ ಚಳಿ, ನಡುಗುತ್ತಾ ರಾತ್ರಿಯನ್ನು ಕಳೆದ. ಬೆಳಗಾಯಿತು, ಊರಿಗೆ ಹಿಂದಿರುಗಿದ. ಬಹುಮಾನ ಕೊಡುವಂತೆ ಅವರನ್ನು ಕೇಳಿದ. "ನೀನು ರಾತ್ರಿಯನ್ನು ಹೇಗೆ ಕಳೆದೆ?" ಎಂದು ಅವರು ಪ್ರಶ್ನಿಸಿದರು. "ಮೊಂಬತ್ತಿಯ ಪುಟ್ಟ ಬೆಳಕಿನಲ್ಲಿ ಪುಸ್ತಕವನ್ನು ಓದುತ್ತಾ ಕಳೆದೆ" ಎಂದ ನಸ್ರುದ್ದೀನ್. "ಮೊಂಬತ್ತಿ ಹಚ್ಚಿಕೊಂಡಿದ್ದೆಯಾ? ಹಾಗಾದರೆ ಅದರ ಬಿಸಿಯಿಂದ ನೀನು ಚಳಿ ದೂರವಾಗಿಸಿರುವೆ. ಆದ್ದರಿಂದ ನಿನಗೆ ಬಹುಮಾನ ಇಲ್ಲ" ಎಂದುಬಿಟ್ಟರು. ನಸ್ರುದ್ದೀನ್ ಮಾತಾಡದೆ ಮನೆಗೆ ಹೊರಟುಹೋದ.

ಒಂದೆರಡು ದಿನಗಳ ನಂತರ ಅವನು ಅವರನ್ನು ಭೇಟಿಯಾಗಿ, "ನಾಳೆ ನೀವೆಲ್ಲರೂ ನಮ್ಮ ಮನೆಗೆ ಊಟಕ್ಕೆ ಬರಬೇಕು" ಎಂದು ಕೇಳಿಕೊಂಡ. ಅವರು ಖುಷಿಯಿಂದ ಒಪ್ಪಿಕೊಂಡರು. ಮಾರನೆಯ ದಿನ ಎಲ್ಲರೂ ನಸ್ರುದ್ದೀನ್ ಮನೆಗೆ ಹೋದರು. ನಸ್ರುದ್ದೀನ್ ಒಳಗಿರಬಹುದು, ಬಂದು ಕರೆದುಕೊಂಡು ಹೋಗಲಿ ಎಂದು ತೀರ್ಮಾನಿಸಿ, ಜಗುಲಿಯ ಮೇಲೆ ಕಾಯುತ್ತಾ ಕುಳಿತರು. ಎಷ್ಟು ಹೊತ್ತಾದರೂ ನಸ್ರುದ್ದೀನ್ ಹೊರಗೆ ಬರಲೇ ಇಲ್ಲ. ಹಸಿವು ಹೆಚ್ಚಾಗುತ್ತಿತ್ತು. ಮನೆಯ ಒಳಗೆ ಹೋಗಿ ನೋಡಿದರು. ಒಂದು ಮೂಲೆಯಲ್ಲಿ ಒಲೆಯಿತ್ತು. ಅದರ ಮೇಲೆ ಒಂದು ದೊಡ್ಡ ಪಾತ್ರೆಯಿತ್ತು. ಕೆಳಗೆ ಒಂದು ಮೊಂಬತ್ತಿ ಉರಿಯುತ್ತಿತ್ತು. ನಸ್ರುದ್ದೀನ್ ಪಾತ್ರೆಯ ಬಳಿ ನಿಂತಿದ್ದ. "ಇನ್ನೂ ಎಷ್ಟು ಹೊತ್ತು ಕಾಯಬೇಕು ಮುಲ್ಲಾ? ನಮಗೆ ಹಸಿವು ತಡೆಯಲಾಗುತ್ತಿಲ್ಲ, ಪ್ರಾಣ ಹೋಗುತ್ತಿದೆ" ಎಂದರು. "ಸಾರು ಮಾಡಲು ಪಾತ್ರೆಯಲ್ಲಿ ನೀರಿಟ್ಟಿದ್ದೇನೆ, ನೀರು ಕುದಿಸಲು ಒಲೆಯಲ್ಲಿ ಮೊಂಬತ್ತಿ ಹಚ್ಚಿಟ್ಟಿದ್ದೇನೆ" ನಸ್ರುದ್ದೀನ್ ಉತ್ತರಿಸಿದ. ಆಗ ಅವರು ಎಲ್ಲಾದರೂ ಹೀಗೆ ಮೊಂಬತ್ತಿ ಉರಿಸಿ ಪಾತ್ರೆಯಲ್ಲಿ ಸಾರು ಮಾಡಲು ಸಾಧ್ಯವೇ? ಏನು ನಮ್ಮನ್ನು ಹೀಗೆ ಮೋಸದ ಆಟವಾಡಿ ಮಾಡಿ ಅವಮಾನಿಸುತ್ತಿರುವೆಯಾ? ಎಂದೆಲ್ಲಾ ಗಲಾಟೆ ಮಾಡಿ ಪ್ರಶ್ನಿಸಿದರು. ಅದಕ್ಕೆ ಮುಲ್ಲಾ ಮೊಂಬತ್ತಿಯ ಬಿಸಿಯಿಂದ ಹಿಮಬೆಟ್ಟದ ಚಳಿ ದೂರವಾಗುವುದಾದರೆ, ಹಂಡೆಯಲ್ಲಿ ನೀರು ಕಾಯಿಸಲು ಏಕೆ ಸಾಧ್ಯವಿಲ್ಲ? ಸಾರು ತಯಾರಾಗುವವರೆಗೆ ಕಾಯಿರಿ. ಊಟ ಮಾಡಿ ಹೋಗುವಿರಂತೆ ಎಂದನು. ಆಗ ಅವನನ್ನು ಅವಮಾನಿಸಿ ಮೋಸ ಮಾಡಿದ್ದ ಅವರೆಲ್ಲಾ ಪೆಚ್ಚು ಮೋರೆ ಹಾಕಿಕೊಂಡು ಹಿಂದಿರುಗಿದರು.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸ್ನೇಹ, ಎಲ್.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

2 ಕಾಮೆಂಟ್‌ಗಳು: