ಗುರುವಾರ, ನವೆಂಬರ್ 29, 2012

ಚಿಗುರೊಡೆದ ಪ್ರೀತಿ

ಪ್ರೀತಿ ಯಾರಿಗೆ ಆಗಲ್ಲ ಹೇಳಿ? ಆಟ ಆಡೋ ಚಿಕ್ಕ ಮಗು ಇಂದ ಹಿಡಿದು ಹಣ್ಣು ಹಣ್ಣು ಮುದುಕರಿಗೂ ಬರುತ್ತೆ. ಪ್ರೀತಿ ಬಂದಮೇಲೆ ಎಷ್ಟು ಮಂದಿ ಅದನ್ನ ಉಳಿಸಿ ಮುಂದುವರೆಸುತ್ತಾರೆ ಅನ್ನೋದು ಮುಖ್ಯ. ಇವತ್ತಿನ ದಿನಗಳಲ್ಲಿ ಪ್ರೀತಿ ಅನ್ನೋದು ಸ್ಟೇಟಸ್ ತೋರಿಸುವ ಬಗೆ ಆಗಿದೆ ನೋಡಿ. ಪ್ರೀತಿ ಅಂತ ಹೆಸರು ಕೇಳಿದರೆ ಏನೋ ಒಂದು ಮನದಲ್ಲಿ ಖುಷಿ ಆಗುತ್ತೆ ಅಲ್ವಾ? ಹೌದು, ಪ್ರೀತಿ ಅಂದ್ರೇನೆ ಹಾಗೆ. ಅದನ್ನ ಮನಸಾರೆ ಪ್ರೀತಿ ಮಾಡೋರನ್ನ ಕೇಳಿ.. ಹೇಳ್ತಾರೆ ಅದರ ಅನುಭವ ಏನು ಅಂತ.

ನಾನು ನನ್ನ ಸ್ನೇಹಿತರ ಒಂದು ಪ್ರೀತಿ ಕಥೆ ಹೇಳ್ತೀನಿ, ಏಕೆ ಪ್ರೀತಿ ಕಥೆ ಅಂತ ನೀವು ಕೇಳಬಹುದು? ಕಥೆ  ಕೇಳಿ ಆಮೇಲೆ ನಿಮಗೆ ಅರ್ಥ ಆಗುತ್ತೆ ಯಾಕೆ ಹೇಳ್ದೆ ಈ ಕಥೆ ಅಂತ. ಈಗಿನ ಕಾಲದಲ್ಲಿ ಹುಡುಗಿ ಸ್ವಲ್ಪ ತೆಳ್ಳಗೆ, ಬೆಳ್ಳಗೆ ಇದ್ರೆ ಆ ಹುಡುಗಿನ ನೋಡಿ ಈ ಹುಡುಗಿ ನನ್ನವಳು ಅಂತ ಹೇಳ್ಕೊಳೋವಂತ ಜನರೇ ಹೆಚ್ಚು, ಅಂತದ್ರಲ್ಲಿ ಈ ನನ್ನ ಸ್ನೇಹಿತನ ಒಂದು ಪ್ರೀತಿ ಕಥೆ ಸ್ವಲ್ಪ ಡಿಫ್ಫ್ರೆಂಟ್ ಅನ್ನಿಸ್ತು. ನನ್ನ ಸ್ನೇಹಿತ ಸ್ವರೂಪ್ ಅಂತ ತುಂಬಾ ಒಳ್ಳೆ ಮನೆತನ, ಒಳ್ಳೆ ಗುಣ, ನೋಡೋಕು ಚೆನ್ನಾಗಿದ್ದ ಹುಡುಗ. ಅವನು ಒಂದು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಶ್ರುತಿ ಅನ್ನೊ ಹುಡುಗಿ ಮೇಲೆ ತುಂಬಾ ಪ್ರೀತಿ ಇಟ್ಟಿಕೊಂಡಿದ್ದ. ಶ್ರುತಿ ತುಂಬಾ ಸೌಮ್ಯ ಗುಣದವಳು, ತುಂಬಾ ಸೌಂದರ್ಯವಂತೆ. ಹಾಲಲ್ಲಿ ಕೈತೊಳೆದು ಮುಟ್ಬೆಕು ಅಂತ ಅಂತಾರಲ್ಲ... ಹಾಗೆ.

ಹುಡುಗ ತನ್ನ ಪ್ರೀತಿ ಹೇಳ್ಕೊಳ್ಳೋಕೆ ಎಷ್ಟು ಒದ್ದಾಡ್ತಾನೆ ಅಲ್ವಾ.. ಹಾಗೆ ಇವನ ಕೇಸ್ ಅಲ್ಲೂ ಆಯ್ತು. ಪ್ರತೀ ದಿನ ತನ್ನ ಪ್ರೀತಿ ಹೇಳ್ಬೇಕು ಅಂತ ಆಫೀಸಿಗೆ ಬರ್ತಿದ್ದ, ಆದ್ರೆ ಅವಳನ್ನು ನೋಡಿ ಮಂಕಾಗ್ತಿದ್ದ. ಏನ್ ಮಾಡೋದು ಅಂತನೂ ಗೊತ್ತಾಗ್ತಿರ್ಲಿಲ್ಲ. ಹೀಗೆ ದಿನಗಳು ಸಾಗಿದವು; ಇಂಗ್ಲಿಷಲ್ಲಿ THE D DAY ಅಂತಾರಲ್ಲ ಹಾಗೆ ಇವನಿಗೂ ಆ ದಿನ ಬಂತು, ಅವತ್ತು ಅವ್ನು ಧೈರ್ಯ ಮಾಡಿ ಆಕೆಗೆ ಹೇಳ್ಬೇಕು ಅಂತ ಅಂದುಕೊಂಡಿದ್ದ. ಅವತ್ತು 24 ಡಿಸೆಂಬರ್, ಆಫೀಸ್ನಲ್ಲಿ ಕ್ರಿಸಮಸ್ ಪಾರ್ಟಿ ಟೈಮ್...  ಎಲ್ಲರೂ ತುಂಬಾ ಒಳ್ಳೆ ಒಳ್ಳೆ ಡ್ರೆಸ್ ಹಾಕಿಕೊಂಡು ಬಂದಿದ್ರು, ಶ್ರುತಿ ಕೂಡಾ. ಸ್ವರೂಪ್ ಅದನ್ನ ನೋಡಿ ತನ್ನ ಮನಸೇ ಕಳೆದುಕೊಂಡುಬಿಟ್ಟ.

ಮಧ್ಯರಾತ್ರಿ ಸರಿ ಸುಮಾರು 2:30 ಆಗಿರಬೇಕು, ತಮ್ಮ 15 ನಿಮಷ ಬ್ರೇಕ್ ತಗೊಂಡು ಇಬ್ರು ಕೆಫೆಟೆರಿಯಾಗೆ ಬಂದಿದ್ರು. ಸ್ವರೂಪ್ ಶ್ರುತಿ ಹತ್ರ ಬಂದು ಪ್ರಪೋಸ್ ಮಾಡಿದ, ಶ್ರುತಿಗೆ ತಾನು ಏನ್ ಹೇಳ್ಬೇಕು ಅಂತ ಗೊತ್ತಾಗದೆ ಸುಮ್ನೆ ಕೂತಿದ್ದಳು. ಈಗಿನ ಕಾಲದಲ್ಲಿ ಎಲ್ಲಾ ಹುಡುಗ್ರು ಪ್ರೊಪೋಸ್ ಮಾಡುವಾಗ ಸಹಜವಾಗಿ ಹೇಳ್ತಾರೆ "ನಿನ್ನ ಜೊತೆ ಇದ್ರೆ ನಾನು ಸಂತೋಷವಾಗಿ ಇರ್ತಿನಿ" ಅಂತ.. ಆದ್ರೆ ಸ್ವರೂಪ್ ಹೇಳಿದ್ದು ಡಿಫ್ಫ್ರೆಂಟ್ ಆಗಿತ್ತು - "ನಿನ್ನ ಸಂತೋಷಕ್ಕೆ ನಾನು ಕಾರಣ ಆಗ್ತೀನಿ. ನಂಗೆ ಒಂದು ಅವಕಾಶ ಕೊಡ್ತೀಯಾ?" ಅಂತ ಕೇಳಿದ್ದ. ಶ್ರುತಿಗೆ ಒಂದು ಕಡೆ ಭಯ, ಇನ್ನೊಂದು ಕಡೆ ಸಹಜವಾದ ನಾಚಿಕೆ; ಏನ್ ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ.

ಶ್ರುತಿ ಎರಡು ದಿನ ಆಫೀಸಿಗೆ ಬರಲಿಲ್ಲ! ಸ್ವರೂಪ್ ಗೆ ತುಂಬಾ ಗಾಬರಿ, ಶ್ರುತಿ ಫೋನ್ ನಂಬರ್ ಕೂಡಾ ಇರ್ಲಿಲ್ಲ ಫೋನ್ ಮಾಡಿ ಏನಾಯಿತು ಅಂತ ಕೇಳೋಕೆ. ಮೂರನೆ ದಿನ ಒಂದು ಅಪರಿಚಿತ ನಂಬರ್ನಿಂದ ಮೆಸೇಜ್ ಬರುತ್ತೆ ಸ್ವರೂಪ್ ಮೊಬೈಲಿಗೆ "I Love You too" (ಐ ಲವ್ ಯು ಟೂ) ಅಂತ. ಎಷ್ಟು ಶಕ್ತಿ ಇದೆ ಅಲ್ವಾ ಈ 3 ಪದಗಳಲ್ಲಿ, ಪ್ರೀತಿಯಲ್ಲಿ ಬಿದ್ದವರಿಗೆ ಗೊತ್ತು ಅಂತೀರಾ??!!!! ಸ್ವರೂಪ್ ಗೆ ಒಂದು ಮರೆಯಲಾಗದ ದಿನ, ಅಲ್ಲಿಂದ ಚಿಗುರೊಡೆಯಿತು ನೋಡಿ ಪ್ರೀತಿ. ವಸಂತ ಕಾಲಕ್ಕೆ ಮಾವು ಹೇಗೆ ಚಿಗುರೊಡೆಯುತ್ತೋ ಹಾಗೆ. ತುಂಬಾ ಖುಷಿ ಆಗಿತ್ತು ಇಬ್ಬರಿಗೂ, ಇಬ್ಬರ ಬಾಂಧವ್ಯ ಹಾಗೂ ಪ್ರೀತಿ ಗಾಢವಾಗಿ ಬೆಳೆಯುತ್ತಾ ಹೋಯಿತು.

ಪ್ರೀತಿಯ ಮೊದಮೊದಲ ದಿನಗಳು ಎಷ್ಟು ಚೆನ್ನ ಅಲ್ವಾ? ಲಕ್ಷಗಟ್ಟಲೆ ಎಸ್.ಎಮ್.ಎಸ್., ಫೋನ್ಕಾಲುಗಳು, ಕಾಫಿಡೇ ಮೀಟಿಂಗ್ ಗಳು, ಕದ್ದು ಮುಚ್ಚಿ ಮೀಟ್ ಮಾಡೋವಾಗ ಅದರಲ್ಲಿ ಇರೋ ಭಯ ಜೊತೆಗೆ ಮನಸಲ್ಲಿ ಎಲ್ಲೊ ಒಂದು ಕಡೆ ಕಾಣುವ ಆ ತುಡಿತ, ಸಿನಿಮಾಗಳಿಗೆ ಹೋಗೋದು, ಪ್ರತಿಯೊಂದು ಬರ್ತ್ ಡೇಗಳಿಗೆ ಮದ್ಯ ರಾತ್ರಿ 12 ಗಂಟೆಗೆ ಹೋಗಿ ಸರ್ಪ್ರೈಸ್ ಕೊಡೋದು, ದೇವಸ್ಥಾನಕ್ಕೆ ಹೋಗೋದು, ಅಲ್ಲಿ ಕೊಟ್ಟ ಪ್ರಸಾದನ ಹಂಚಿಕೊಂಡು ತಿನ್ನೋದು. ಪ್ರೀತಿಯ ದಿನಗಳಲ್ಲಿ ತಮ್ಮ ಭವಿಷ್ಯದ ಕನಸುಗಳಿಂದ ಅವರ ಮುಖದಲ್ಲಿ ಬರುವ ಮುಗುಳ್ನಗೆ ಎಷ್ಟು ಚೆನ್ನ ಅಲ್ವಾ? ಕೈ ಕೈ ಹಿಡಿದು ಮೊದಲ ಸಾರಿ ರೋಡ್ ಕ್ರಾಸ್ ಮಾಡಿದ್ದು, ಒಂದೇ ಗ್ಲಾಸ್ ಜ್ಯೂಸ್ ಅನ್ನು ಎರಡು ಸ್ಟ್ರಾ ನಲ್ಲಿ ಕುಡಿದಿದ್ದು, ಹಾಗೆ ಇನ್ನು ಸಣ್ಣ ಸಣ್ಣ ಸಂತೋಷಕ್ಕೆ ಇವರಿಬ್ಬರು ಸಾಕ್ಷಿ ಆದರು. "Happiness comes in small packages" ಅಂದ ಹಾಗೆ.

ತುಂಬಾ ದಿನಗಳ ಕಾಲ ಇವರಿಬ್ಬರ ಪ್ರೀತಿ ನಡೀತು. ಇಬ್ಬರ ಮನೆಯಲ್ಲೂ ಏನೂ ಅಭ್ಯಂತರ ಇರಲಿಲ್ಲ ಇವರ ಪ್ರೀತಿಗೆ. ತುಂಬಾ ಪ್ರೋತ್ಸಾಹ ಕೊಟ್ಟಿದ್ದರು. ಇದಕ್ಕಿಂತಾ ಏನು ಬೇಕು ಅಲ್ವಾ ಒಂದು ಪ್ರೀತಿಸುವ ಜೋಡಿಗಳಿಗೆ. ಒಬ್ಬರನ್ನ ಒಬ್ಬರು ತುಂಬಾ ಪ್ರೀತಿಸ್ತಾ ಇದ್ರು. ಇವರಿಬ್ಬರನ್ನ ಕಂಡು ಜನ ಹೀಗೆ ಪ್ರೀತಿಸಬೇಕು ನಾನು ಅಂತ ಹೇಳ್ಕೊಂಡಿದ್ದ ಉದಾಹರಣೆ ಹಲವಾರು ಇದೆ. ಒಮ್ಮೊಮ್ಮೆ ದೇವರಿಗೆ ತುಂಬಾ ಅಸೂಯೆ ಆಗುತ್ತೋ ಏನೋ ಅನಿಸುತ್ತೆ... ಪ್ರೀತಿ ಅನ್ನೋದು ಒಬ್ಬೋಬರ ಬಾಳಲ್ಲೂ ಒನ್ನೊಂದು ಅನುಭವ ಕೊಡುತ್ತೆ. ಹೀಗೆ ಇವರಿಬ್ಬರ ಬಾಳಲ್ಲೂ ಒಂದು ಕೆಟ್ಟ ಅನುಭವ ಆಯಿತು.

ಅಕ್ಟೋಬರ್ 2002, ಒಂದು ಕರಾಳ ದಿನ ಅವರ ಪ್ರೀತಿಗೆ. ಸ್ವರೂಪ್ ರೋಡ್ ಆಕ್ಸಿಡೆಂಟ್ ನಲ್ಲಿ ತೀರಿಕೊಂಡಿದ್ದ. ಆ ವಿಷ್ಯನ ಕೇಳಿ ಶ್ರುತಿ ತುಂಬಾ ಜರ್ಜರಿತಳಾದಳು. ಅವನನ್ನ ನೋಡೋಕೆ ಆಸ್ಪತ್ರೆಗೆ ಬಂದಿದ್ದಳು, ಆದ್ರೆ ಸ್ವರೂಪನ ತಂದೆ ತಾಯಿ ಹಾಗೂ ಶ್ರುತಿ ತಂದೆ ತಾಯಿ ಶ್ರುತಿಗೆ ಸ್ವರೂಪನ ನೋಡೋಕೆ ಬಿಡಲಿಲ್ಲ. ಅಷ್ಟೊಂದು ಭೀಕರವಾಗಿ ಇತ್ತು ಸ್ವರೂಪ್ ನ ಪರಿಸ್ಥಿತಿ. ಇವತ್ತಿನವರೆಗೂ ಶ್ರುತಿ ಆ ಶಾಕ್ ನಿಂದ ಹೊರಬಂದಿಲ್ಲ. ಪ್ರೀತಿ ಕೆಲವರಿಗೆ ವರವಾದರೆ, ಕೆಲವರಿಗೆ ಶಾಪ. ಅವರಿಬ್ಬರ ಚಿಗುರೊಡೆದ ಪ್ರೀತಿಗೆ ಯಾರ ಕಣ್ಣು ಬಿತ್ತೋ?? ಹೊಸಕಿ ಹೋಯಿತು ಆ ಪ್ರೀತಿ! ಇವತ್ತು ಆಕೆಯ ಪರಿಸ್ಥಿತಿ ತುಂಬಾ ಶೋಚನೀಯ. ತಂದೆ-ತಾಯಿ, ಬಂಧು-ಮಿತ್ರರು ಹಾಗೂ ಬೇರೆ ಯಾರೂ ಅವಳಿಗೆ ಬೇಡ. ಮತ್ತೆ ಬರ್ತಾನಾ ಸ್ವರೂಪ್ ಅವಳ ಬಾಳಲ್ಲಿ ಇನ್ನೊಬರ ಮುಖಾಂತರ..??

ಈ ಕಥೆ ಯಾಕೆ ಹೇಳ್ದೆ ಅಂದ್ರೆ, ನಿಜವಾದ ಪ್ರೀತಿ ಜೀವನದಲ್ಲಿ ಒಂದೇ ಸಾರಿ ಆಗೋದು. ಅದನ್ನ ಉಳಿಸಿ ಜಯಿಸೋ ಎದೆಗಾರಿಕೆ ಇರ್ಬೇಕು. ಸುಮ್ನೆ ಒಬ್ರನ್ನ ಪ್ರೀತಿ ಮಾಡಿ ನಾಳೆ ಇನ್ನೊಬ್ರನ್ನ ಮದ್ವೆ ಆಗೋದು ಸರಿ ಅಲ್ಲ. ಹುಡುಗ ಅಥವಾ ಹುಡುಗಿ ಮನಸಿಗೆ ಎಷ್ಟು ಘಾಸಿ ಆಗುತ್ತೆ. ಸ್ನೇಹಿತರೇ, ಪ್ರೀತಿ ಮಾಡುವ ಮೊದಲು ಸ್ವಲ್ಪ ಯೋಚಿಸಿ. ಪ್ರೀತಿ ಮುಖ್ಯ ಜೀವನದಲ್ಲಿ, ಆದ್ರೆ ಅದು ನಮಗೆ ಮುಳ್ಳಾಗಬಾರದು ಅಲ್ವಾ? ಈ ಕಥೆಯನ್ನು ಓದಿದ ಎಲ್ಲ ಸ್ನೇಹಿತರಿಗೂ ಅವರ ಜೀವನದಲ್ಲಿ ಹೊಸ ಪ್ರೀತಿ ಚಿಗುರೊಡೆಯಲಿ ಅಂತ ಹಾರೈಸ್ತೀನಿ.. ಈಗಾಗಲೇ ಚಿಗುರೊಡೆದಿದ್ದರೆ, ದಯವಿಟ್ಟು ಆ ಪ್ರೀತಿನ ಪೋಷಿಸಿ ಮತ್ತು ಬೆಳೆಸಿ.

ಲೇಖಕರ ಕಿರುಪರಿಚಯ
ಶ್ರೀ ಪ್ರದೀಪ್ ಆಚಾರ್

ಬೆಂಗಳೂರಿನಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಇವರು ಸಿಸ್ಟಂ ಎಂಜಿನಿಯರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಓದುವುದು, ಸಂಗೀತ ಆಲಿಸುವುದು, ಛಾಯಾಚಿತ್ರ ತೆಗೆಯುವುದು ಮತ್ತು ಚಾರಣಕ್ಕೆ ಹೋಗುವುದು ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

5 ಕಾಮೆಂಟ್‌ಗಳು:

  1. ನಿಜವಾಗಿಯು ಇದನ್ನು ಒಳ್ಳೆ ಪ್ರೇಮ ಕಥೆ ಎನ್ನಬೇಕೋ ಅಥವಾ ದುರಂತ ಪ್ರೇಮ ಕಥೆ ಎನ್ನಬೇಕೋ ತಿಳಿಯುತ್ತಿಲ್ಲ,ಆದರೆ ಶ್ರುತಿ ಅವರಿಗೆ ನಾನು ಹಾರೈಸುತ್ತೇನೆ.ಮತ್ತೊಬ್ಬ ಒಳ್ಳೆ ವ್ಯಕ್ತಿ ಸ್ವರೂಪ್ ರವರ ರೂಪದಲ್ಲಿ ಬಂದು ಆಕೆಯ ಬಾಳನ್ನು ಬೆಳಗಲಿ

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕಥೆ ತುಂಬಾ ಇಷ್ಟವಾಯಿತು... ನಿಮ್ಮ ಅನುಮತಿ ಇದ್ದರೆ Short movie ಮಾಡೋಣ ಅಂತ...

    ಪ್ರತ್ಯುತ್ತರಅಳಿಸಿ