ಸೋಮವಾರ, ನವೆಂಬರ್ 12, 2012

ನಮ್ ಕನ್ನಡ ಆಲ್ದ ಮರ ಇದ್ದಂಗೆ..

"ತಮ್ಮಾ ಬಾ ಇಲ್ಲಿ, ಹೆಂಗಿದ್ದೀ..? ಆರಾಮಾ..?"

"ಲೋ.. ನಿನ್ ಮುಖಾ ಕುಟ್ಟಾ!! ಹೆಂಗಿದ್ದೀಯಲೆ..?"

ಹಿಂಗೆ ಕ್ಷೇಮವೇ ಕುಶಲವೇ ಅನ್ನೋ ಜಾಗದಲ್ಲಿ ಈ ತರದ ಮಾತುಗಳು ಕನ್ನಡದೊಳಗೆ ಜಾಗ ಪಡೆದಿವೆ ಮತ್ತು ಯುವ ಜನಾಂಗದ ಮಾತುಕತೆಯೊಗೆ/ಬರಹದೊಳಗೆ ಇಂತದ್ದೂ ಈಗೀಗ ಸಾರ್ವತ್ರಿಕವಾಗಿದೆ. ಸೂಕ್ಷ್ಮವಾಗಿ ಒಂದು ಸಲ ಈಗೀಗ ಬಳಕೆಯಾಗುತ್ತಿರುವ ಕನ್ನಡವನ್ನ ಸುಮ್ಮನೆ ಕೇಳಿಸಿಕೊಂಡು ನೋಡಿ; ಅಲ್ಲಿ ಗ್ರಾಮ್ಯ ಶಬ್ದಗಳಿವೆ, ಇತರೆ ಭಾಷೆಯ ಶಬ್ದಗಳ ಬಳಕೆಯಿದೆ, ಗತ್ತು ಗೌಲತ್ತುಗಳನ್ನೂ ತೊಡೆದುಹಾಕಿ ಆತ್ಮೀಯತೆ ನೆಲೆಸಿದೆ, ವ್ಯವಹಾರಿಕತೆಯಿದೆ, ಹೊಸ ಪೀಳಿಗೆಯ ಒಲವಿನ ದೋತ್ಯಕಗಳಿವೆ, ಹೀಗೆ ಏನೇನೋ ಇರುವುಗಳ ನಡುವೆ ಒಂದಿಲ್ಲ - ಅದುವೇ 'ನಾಟಕೀಯತೆ'. ನಾ ಹೀಗಂತೀನಿ ಅಂತ ಸಂಪ್ರದಾಯಿಕವಾದಿಗಳು ಮೂಗು ಮುರಿಯಬೇಡಿ, ಭಾಷೆ ಕುಲಗೆಟ್ಟು ಹೋಯಿತು ಎಂದೆನ್ನಬೇಡಿ, ಭಾಷೆಯನ್ನು ನೆಚ್ಚಿನಿಂದ ತಮ್ಮದಾಗಿಸುತ್ತಾ ಆತ್ಮೀಯವಾಗಿಸುತ್ತಾ ಯುವಜನತೆ ಸಾಗಿದೆ, ಅದು ಹಿರಿಯರಿಗೆ ಕುಲಗೆಡಿಸಿದಂತೆ ಕಂಡರೆ ತಪ್ಪು ಯುವಜನತೆಯದ್ದಲ್ಲ. ಅಸಲಿಗೆ ಅಂಥಾ ಯಾವ ಉದ್ದೇಶವಾಗಲೀ ಆ ಬಗ್ಗೆಯ ಅರಿವುಗಳಾಗಲೀ ಯುವ ಜನತೆಗಿಲ್ಲ, ಅದು ತನ್ನ ಪಾಡಿಗೆ ತಾನು ಮುನ್ನಡೆಯುತ್ತಿದೆ, ಈ ಕನ್ನಡ ಸರಳೀಕರಣದ ಬಗ್ಗೆ ಅಪಸ್ವರ ಇರುವವರು ಒಂದಂತೂ ಒಪ್ಪಲೇಬೇಕು - ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಚಲನಶೀಲತೆ ಇರಬೇಕು, ಹೊಸ ಪ್ರಯೋಗಗಳಿಗೆ ಭಾಷೆಗಳು ಎದುರಾಗಬೇಕು, ಮೂಲ ಸೊಗಡನ್ನು ಕಳೆದುಕೊಂಡಿದೆ ಎಂದರೂ ಸರಿ ಕುಲಗೆಟ್ಟಿತೆಂದರೂ ಸರಿ ಯುವಜನತೆಯ ಬಾಯಲ್ಲಿ ಕುಣಿದಾಡುವ ಕನ್ನಡದ ನವೀನತೆ ಕನ್ನಡವನ್ನೂ ಆತ್ಮೀಯವಾಗಿಸುವಲ್ಲಿ ಗೆದ್ದಿದೆ.

ಯುವ ಜನತೆಯಲ್ಲಿ ಕನ್ನಡ - ಕರ್ನಾಟಕದ ಬಗ್ಗೆ ಅಸಡ್ಡೆ ಇರುವ ದಿನಗಳಿತ್ತು, ಇದು ಇನ್ನೂ ಕೂಡ ಪೂರ್ತಿಯಾಗಿ ಪರಿಹಾರವಾಗಿರದ ಸಮಸ್ಯೆ. ಕಾರ್ಪೊರೇಟ್ ವಲಯದ ಲಗ್ಗೆಯಿಂದ ಹೆಚ್ಚೆಚ್ಚು ಯುವ ಜನತೆ ಉದ್ಯೋಗಕ್ಕಾಗಿ ಅತ್ತ ವಾಲಿತು, ಪರಿಣಾಮ ಇಂಗ್ಲೀಷ್ ಒಂದೇ ಎಲ್ಲದಕ್ಕೂ ಪರಿಹಾರವೆಂಬ ಭ್ರಮೆಯೊಳಗೆ ಸಿಲುಕಿ ಮೂಲ ಭಾಷೆಯತ್ತ ಅಸಡ್ಡೆ, ಮಾತಾಡಲೂ ಕೂಡ ಮುಜುಗರ ಪಡುವಂತ ಸನ್ನಿವೇಶದೊಳಗೆ ಸಿಲುಕಿತು. ಇದರಿಂದ ಹೊರಬರುವಲ್ಲಿ ದಾರಿಯಾಗಿದ್ದು ಯುವಜನತೆಯೊಳಗೆ ಹಾಸುಹೊಕ್ಕಾಗಿರುವ ಈಗಿನ ನವೀನ ಕನ್ನಡ. ಮಾತೃಭಾಷೆ ಇನ್ನಷ್ಟು ಇಷ್ಟವಾಗುವಂತೆ, ಕನ್ನಡದಲ್ಲಿ ಮಾತಾಡಿದಲ್ಲಿ ಇನ್ನಷ್ಟೂ ಆತ್ಮೀಯವಾಗಬಹುದೆಂಬ ಅರಿವು ಈ ಮೂಲಕ ಯುವಜನತೆಗೆ ಬಂದಿದೆ ಅಂದರೆ ತಪ್ಪಿಲ್ಲ. ಹಾಗಂತ ಇದು ಯಾರೋ ಕಂಡುಕೊಂಡ ಸೂತ್ರವಲ್ಲ, ಇದು ಕಂಡುಕೊಳ್ಳುವಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲಸ ಮಾಡಿದ್ದು ಯುವಜನತೆಯೊಳಗಿನ ಕನ್ನಡ ಮನಸ್ಸು. ಯುವ ಜನತೆಯ ಆಸೆ ಅಭಿಲಾಷೆಗಳು ಯಾವತ್ತೂ ಚೌಕಟ್ಟು ಮೀರಿ ಬೆಳೆಯಲು ಹವಣಿಸುತ್ತಿರುತ್ತವೆ. ಅದೇ ಅಭಿಲಾಷೆಯ ಫಲ ಭಾಷೆಯ ಮೇಲೂ ಅಗಿದೆ; ಪರಿಣಾಮ - ವ್ಯಾಕರಣ, ಛಂದಸ್ಸು, ಮಾತ್ರೆ-ಗಣ ಮುಂತಾದವುಗಳ ಹಂಗನ್ನೂ ಮೀರಿ  ಆತ್ಮೀಯತೆಯೊಂದೇ ಸೂತ್ರವಾಗಿ ನವೀನ ಕನ್ನಡವನ್ನು ಯುವಜನತೆ ತನ್ನದಾಗಿಸಿಕೊಂಡಿದೆ. ಭಾಷೆಯೊಂದು ಹೆಚ್ಚು ಆತ್ಮೀಯವಾಗೋದು ಮುಖ್ಯವೆಂಬುದಾದಾಗ ಕುಲಗೆಟ್ಟು ಹೋಯಿತು, ಭಾಷೆಗೊಂದು ಹೊಸ ಸೊಗಡು ದೊರೆಯಿತೆಂದಾದಾಗ ಮೂಲ ಸೊಗಡನ್ನು ಕಳಕೊಂಡಿತು ಎಂಬುದಕ್ಕೆ ಅರ್ಥವಿಲ್ಲ. ನೆಲವಿಲ್ಲವೆಂದಾದಲ್ಲಿ ಮೆಟ್ಟಿಲುಗಳು ಇರಲ್ಲ, ಏರುವ ಅವಕಾಶನೂ ಇರಲ್ಲಾ ಅಲ್ವೆ? ಸಂಪ್ರದಾಯಿ ಕನ್ನಡ ಸೊಗಡು ನವೀನತೆಗೊಂದು ದಾರಿ ಮಾಡಿಕೊಟ್ಟಿದೆ ಎಂದು ಅಂದುಕೊಳ್ಳುವುದೇ ಸರಿ.

ಡಿ. ಎನ್. ಶಂಕರ ಭಟ್ ಅವರ ಹೆಸರು ಕೆಲವರಾದರೂ ಕೇಳಿರಬಹುದು, ಇವರ ಹೆಸರು ಕೇಳಿದಲ್ಲಿ ಕೆಲವರು ಉರಿದು ಬೀಳುವವರೂ ಇರಬಹುದು, ಕಾರಣ ಇವರು ಕನ್ನಡ ಲಿಪಿಯ ಬಗ್ಗೆ ಮುಂದಿಟ್ಟ ಕೆಲವು ಸೂತ್ರಗಳ ಬಗ್ಗೆ ಒಮ್ಮತವಿಲ್ಲದಿರುವುದು. ಅಷ್ಟಕ್ಕೂ ಇವರು ಪ್ರತಿಪಾದಿಸುತ್ತಿರುವುದು ತುಂಬಾ ಸರಳ - ಅದಾವುದೇ ಭಾಷೆಯಾಗಿರಲಿ ಭಾಷೆಯು ಮೂಲತಃ ಶಬ್ದ ಸಂಕೇತಗಳು, ಇಲ್ಲಿ ಉಚ್ಛಾರದಂತೆ ಲಿಪಿ ಇದ್ದರೆ ಬರವಣಿಗೆಯಲ್ಲಿ ಸಂಶಯ ಜಾಗ ಪಡೆಯುವದಿಲ್ಲ; ಹಾಗೂ ಭಾಷೆಯೊಂದು ಕಠಿಣವಾಗಲಾರದು ಎಂದು. ಕನ್ನಡದಲ್ಲಿ ಈ ರೀತಿ ಗೊಂದಲಗಳಿವೆಯೇ ಎಂಬುದು ನಿಮ್ಮ ಪ್ರಶ್ನೆಯಾದರೆ, ಹೌದು ಎಂಬುದೇ ಉತ್ತರವಾಗಿರುತ್ತದೆ. ಉದಾಹರಣೆಗೆ 'ಷ' ಮತ್ತು 'ಶ' ಅಕ್ಷರಗಳ ಉಚ್ಚಾರದಲ್ಲಿ ಏನೊಂದು ವ್ಯತ್ಯಾಸವಿಲ್ಲ, ಆದರೂ 2 ಅಕ್ಷರಗಳಿವೆ. ರುಣ ಎಂದು ಬರೆದರೂ, ಋಣ ಎಂದರೂ ಉಚ್ಚಾರ ರೀತಿ ಒಂದೇ. ಹಾಗಾದಾಗ 'ಋ' ಅಕ್ಷರದ ಜರೂರಿ ಇದೆಯೆ? ಒತ್ತಕ್ಷರವಾಗಿ 'ಞ' ದ ಬದಲು 'ನ' ವನ್ನೆ ಬಳಸಬಹುದಾದಾಗ 'ಞ' ದ ಅವಶ್ಯಕತೆ ಇದೆಯೆ? ಇಂತವೇ ಹಲವು ಪ್ರಶ್ನೆಗಳನ್ನು ಮುಂದಿಟ್ಟಿವೆ ಇವರ ವಿಚಾರಧಾರೆಗಳು. ಭಾಷೆ ಮತ್ತು ಅದರ ಲಿಪಿ ಸರಳವಾದಷ್ಟೂ ಜನಜನಿತವಾಗಬಲ್ಲುದು,  ಉಚ್ಚಾರದಂತೆ ಲಿಪಿಯಿದ್ದರೆ ಕನ್ನಡ ಕಲಿಯುವವರಿಗೂ ಇನ್ನಷ್ಟು ಸುಲಭವಾಗಿ ಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಒಲವೂ ಮೂಡಬಹುದು ಎಂಬುದು ಮೂಲ ಕಾಳಜಿ. ಭಾಷೆ ಬೆಳವಣಿಗೆ ಪಡೆಯಬೇಕೆಂದರೆ ಹೊಸ ಪ್ರಯೋಗಕ್ಕೆ ಒಳಪಡಲೇಬೇಕು; ಇದು ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ. ಹಾಗಂತ ಇಂತಹ ಪ್ರಯೋಗಗಳನ್ನು ವಿರೋಧಿಸುವವರದ್ದು ತಪ್ಪೇನೂ ಇಲ್ಲ , ಎಲ್ಲಿ ಭಾಷೆಗೆ ಧಕ್ಕೆಯಾಗಿಬಿಡುತ್ತದೋ ಎಂಬ ಮೂಲ ಕಾಳಾಜಿಯೇ ವಿರೋಧಕ್ಕೆ ಕಾರಣ. ಆದುದರಿಂದ ನವೀನತೆಯನ್ನು ಬಯಸುವವರೂ ಹಾಗೂ ಸಂಪ್ರದಾಯಿ ಕನ್ನಡಪರರ ಕನ್ನಡೀಯತೆಯ ಬಗ್ಗೆ ಯಾವುದೇ ಪ್ರಶ್ನೆ, ಸಂಶಯಗಳು ಸಲ್ಲದು. ಆದರೆ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹೊಸತೊಂದರತ್ತ ಮುನ್ನಡೆಯುವಾಗ ಚರ್ಚೆಗೆ ತೆರೆದುಕೊಳ್ಳುವ ಮನಸ್ಸು ನಮಗಿರಬೇಕು, ಒಪ್ಪುವದು ಬಿಡುವದು ಆಮೇಲಿನ ಪ್ರಶ್ನೆ. ಕನ್ನಡಿಗರು ಹೃದಯವೈಶಾಲ್ಯರು, ಭಾಷೆಯ ಉಳಿವು ಬೆಳವಿನ ಹಾದಿಯಲ್ಲೂ ನಮ್ಮ ಮನಸ್ಸು ತೆರೆದಿರಲಿ ಎಂಬುದಷ್ಟೆ ನನ್ನ ಆಶಯ.

ಭಾಷೆಯ ಉಳಿವಿಗೆ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕೆ? ಬೆಳವಣಿಗೆಯ ಜರೂರಿಗಳಿವೆಯೆ? ಇಂತಹ ಪ್ರಶ್ನೆ ಕಾಡುತಿದ್ದರೆ ಇತಿಹಾಸವನ್ನೊಮ್ಮೆ ನೋಡಿದಲ್ಲಿ ಉತ್ತರ ಸಿಗುತ್ತದೆ. ಕನ್ನಡದ ಎಲ್ಲೆ ದೂರದ ಮಹರಾಷ್ಟ್ರದವರೆಗೂ, ಇತ್ತ ಕಡೆ ಕಾಸರಗೋಡಿನವರೆಗೂ ಬೆಳೆದು ನಿಂತಿತ್ತು. ಆದರೀಗ ಅದೇ ಕನ್ನಡ ಭಾಷೆಯ ಗಡಿ (ರಾಜ್ಯದ ಗಡಿಯ ಹೊರತಾಗಿ) ಎಲ್ಲಿದೆ ಅನ್ನುವದನ್ನೂ ಅವಲೋಕಿಸುವುದು ಒಳಿತು. ಕರ್ನಾಟಕದ ರಾಜಧಾನಿ ಬೆಂಗಳೂರೇ ಕನ್ನಡ ಪರವಾಗಿಲ್ಲ ಅನ್ನುವದನ್ನು ಒಪ್ಪುವುದು ಕಷ್ಟವಾದರೂ ವಾಸ್ತವವನ್ನು ತಿರಸ್ಕರಿಸುವದೆಂತು? ಹೀಗಿರಬೇಕಾದರೆ ಕನ್ನಡವನ್ನು ಸರಳೀಕರಿಸಿ ಇನ್ನಷ್ಟು ಅತ್ಮೀಯವಾಗಿಸುವ ವಾದಕ್ಕೆ ತೂಕ ಬರುವುದಲ್ಲವೆ? ಸಂಪ್ರದಾಯತ್ವ ಕನ್ನಡವೇ ಬರಲಿ, ನವೀನ ಆಡು ಭಾಷೆಯಾಗಿ ಚಾಲ್ತಿಗೆ ವಿಭಿನ್ನ ರೀತಿಯಲ್ಲಿ ತೆರೆದುಕೊಂಡಿರುವ ಕನ್ನಡವೇ ಆಗಲಿ ಕನ್ನಡ ಪರವಾದ ವಾತಾವರಣ ಬೆಳೆಯೋದು ಮುಖ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಹೊಸ ಪ್ರಯೋಗಗಳು ಎದುರಾದಾಗ ನಾವು ಚರ್ಚೆಗೆ, ಆ ಮೂಲಕ ಬೆಳವಣಿಗೆಗೆ ನಾವು ತೆರೆದುಕೊಳ್ಳಬೇಕಿರುವದು. ಮೂಲ ತಳಹದಿಯ ಮೇಲೆ ಹೊಸದೊಂದನ್ನು ಕಂಡುಕೊಳ್ಳಬೇಕಷ್ಟೆ. ಆದುದರಿಂದ ಕನ್ನಡದ ವಿರೂಪ ಇತ್ಯಾದಿಗಳು ವಾಸ್ತವ ನಿಟ್ಟಿನ ವಾದಗಳಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಅಯ್ಯೋ ಲೇ.. ಏನ್ ಕೊರಿತೀಯಾ ಕನ, ಆವಾಗಿಂದ ನೋಡ್ತಾ ಇವ್ನಿ.. ಬರೀಯ ಕಥೆನೇ ಹೇಳ್ಕೊಂಡು ಕೂತಿಯಲ್ಲೊ ಮಾರಾಯ. ನಿಂದೇನು ಗೋಳು? ಎಂದುಕೊಂಡು ಮನಸಲ್ಲೆ ಬೈದಾಡ್ತೀರಾ ನನ್ ಬಗ್ಗೆ.. ಬೈಕೋ ಬೇಡಿ ಪಿಲೀಸು, ಏನೋ ಸಣ್ ತಮ್ಮ ಹೋಯ್ದಾಡ್ತಾವ್ನೆ ಹೊಟ್ಟೆಗಾಕ್ಕೋಳ್ಳಿ ಇಲ್ಲಾಂದ್ರೆ ಸ್ಯಾನೆ ಬೇಜಾರಾಗುತ್ತೆ ನಂಗೆ. ಏನೋ ನಮುಗೆ ತಿಳಿದಂಗೆ ನಾವ್ ನೋಡ್ತಿರೊ ಹಂಗೆ ಬರಿಯಕ್ಕೆ ಬರುತ್ತೆ ಅನ್ಕೊಂಡು (ಹಂಗೆ ಅನ್ಕೊಂಡಿದೀನಿ, ಆ ಬಗ್ಗೆ ನಂಗೆ ಕೊಂಬೇನೂ ಇಲ್ಲ) ಬರ್ದೀನಿ ಅಷ್ಟೆ; ಒಪ್ಪೋದು ಬಿಡೋದು ನಿಮ್ಗೆ ಬಿಟ್ಟೀರೋದು, ಅಲ್ವೂರಾ? ಕನ್ನಡ ಆಲ್ದ ಮರ ಇದ್ದಂಗೆ, ಹೊಸತನ್ನು ಹುಡುಕುತ್ತಾ ಪೋಷಿಸೋದು ಆ ಮರಕ್ಕೆ ನೀರುಣಿಸಿದಂತೆ. ಕನ್ನಡದ ಜೊತೆ ಜೊತೆಗೆ ಇರುವ ಇತರ ಭಾಷೆನೂ ಕನ್ನಡಕ್ಕೆ ಬೇರುಗಳಿದ್ದಂಗೆ, ಈ ಮರದ ನೆರಳಲ್ಲಿ ಅದು ಬೆಳಿಬೇಕು, ಜೊತೆಗೆ ಕನ್ನಡ ಬೆಳಿಬೇಕು ಎಂಬುದು ನನ್ನಾಸೆ. ಇಷ್ಟೇ.. ಇದುಕ್ಕೆ ಇಷ್ಟೂದ್ದ ಹೇಳ್ಕೋತಾ ಬಂದೆ. ಏನಂದುಕೊಂಡ್ರೋ ಏನೋ? ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳೋಣ, ಕನ್ನಡವನ್ನು ಬೆಳೆಸೋಣ. 57ನೇ ರಾಜ್ಯೋತ್ಸವದ ಈ ತಿಂಗಳಿನಲ್ಲಿ ಈಟಾದ್ರೂ ಚಿಂತನೆ ನಮ್ಮಲ್ಲಿ ಮೂಡ್ಲಿ. "ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಎಂದು ಹಾಡುತ್ತಾ ಹೆಂಗಾದ್ರೂ ಸರಿ ಕನ್ನಡವನ್ನೇ ದಿನನಿತ್ಯ ಬಳಸೋಣ, ಆ ಮೂಲಕ ಭಾಷೆಯನ್ನು ಬೆಳೆಸೋಣ.

ಲೇಖಕರ ಕಿರುಪರಿಚಯ
ಶ್ರೀ ರಾಘವೇಂದ್ರ ತೆಕ್ಕಾರ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರ್ ಎಂಬ ಪುಟ್ಟ ಹಳ್ಳಿಯವರಾದ ಇವರು ಕಳೆದ ಒಂಭತ್ತು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನಲೆಸಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ವೃತ್ತಿನಿರತರಾಗಿರುವ ಇವರಿಗೆ ಬರವಣಿಗೆಯು ಹವ್ಯಾಸ ಮತ್ತು ಮನದ ಭಾವನೆಯನ್ನು ಹೊರಗೆಡುವುತ್ತಾ, ಆಲೋಚನೆಗೊಂದು ದಿಕ್ಕು ತೋರುವ ಪ್ರವೃತ್ತಿಯಾಗಿ ತಾನಾಗಿಯೇ ಇವರ ಜೊತೆಗೆ ಬೆಳೆದು ಬಂದಿದೆ.

Blog  |  Facebook  |  Twitter

3 ಕಾಮೆಂಟ್‌ಗಳು:

  1. ರಾಘಣ್ಣ, ನಿಮ್ ಮೊಕ ಕುಟ್ಟಾ.. ಲೇಖನ ಚಂದಾಗಿದೆ.. :)

    ಪ್ರತ್ಯುತ್ತರಅಳಿಸಿ
  2. ಬಹಳ ಸರಳ ಹಾಗು ಅರ್ಥಪೂರ್ಣ ವಾದ ಲೇಖನ.. ನೀವು ಹೇಳಿರುವ points ಗಳು ಸರಿಯಾಗಿವೆ..

    ಪ್ರತ್ಯುತ್ತರಅಳಿಸಿ
  3. ಶ್ರೀ ರಾಘವೇಂದ್ರ ತೆಕ್ಕಾರ್ ರವರು ಹೇಳಿರುವಂತೆ, ಈ ಕನ್ನಡದ ಆಲದಮರದ ಕೆಳಗೆ ಹಳ್ಳೀ ಭಾಷೆಯ ಸೊಗಡು ಪಟ್ಟಣದ ಹೈಕಳ ನಾಲಿಗೆಯಲ್ಲಿ ಹೇಗೆ ಸುಲಲಿತವಾಗಿ ಹರಿದಾಡುವುದನ್ನು ನಾವು ಅಲ್ಲಲ್ಲಿ ಕಾಣಬಹುದು .ಅದು ಒಂದು ಈಗಿನ ಪೀಳಿಗೆಯವರ ಹವ್ಯಾಸವಾಗಿ ಬೆಳೆಯುತ್ತಿದೆ ಎಂದರೂ ತಪ್ಪಾಗಲಾರದು .

    ಪ್ರತ್ಯುತ್ತರಅಳಿಸಿ