ಶುಕ್ರವಾರ, ನವೆಂಬರ್ 23, 2012

ನಾನು ಓದಿರುವ ಅತ್ಯುತ್ತಮ ಪುಸ್ತಕ - ಮನಸ್ಸು ಇಲ್ಲದ ಮಾರ್ಗ

(ಟಿ. ಎ. - 'ಟ್ರಾನ್ಸಾಕ್ಷನಲ್ ಅನಾಲಿಸಿಸ್' ಬಗ್ಗೆಯ ಪುಸ್ತಕ)

ಮನೋವಿಜ್ಞಾನ ಹಾಗೂ ವರ್ತನಾ ವಿಜ್ಞಾನದ ಬಗ್ಗೆ ಕನ್ನಡದಲ್ಲಿಯೂ ಅನೇಕ ಪುಸ್ತಕಗಳಿವೆ. ನಾನು ಓದಿರುವ, ಅವುಗಳಲ್ಲಿ ನನಗೆ ತುಂಬಾ ಉಪಯುಕ್ತವೆನಿಸಿದ ಪುಸ್ತಕ - ನವಕರ್ನಾಟಕ ಪಬ್ಲಿಕೇಷನ್ ರವರ ಡಾ. ಮೀನಗುಂಡಿ ಸುಬ್ರಮಣ್ಯರವರು ಬರೆದಿರುವ "ಮನಸ್ಸು ಇಲ್ಲದ ಮಾರ್ಗ".

ಮನೋವಿಜ್ಞಾನದ ಬಗ್ಗೆ ಅಲ್ಪಸ್ವಲ್ಪವಾದರೂ ತಿಳಿದಿರುವ ಎಲ್ಲರಿಗೂ ಗೊತ್ತಿರುವ ಒಂದು ಸಂಗತಿ – ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಆಗಾಗ ಒಂದಲ್ಲಾ ಒಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುತ್ತಾನೆ – ಎಂಬುದು. ನಾವೆಲ್ಲ ವಿವಿಧ ಸಂದರ್ಭಗಳಲ್ಲಿ ಅನುಭವಿಸುವ ಉದ್ವೇಗ, ಗಾಬರಿ, ಸಿಟ್ಟು, ಬೇಸರ, ದ್ವೇಷ, ಸೇಡಿನ ಭಾವ ಇತ್ಯಾದಿ ನಮಗೆ ಸಹಜವೆನಿಸುವ ನಮ್ಮ ಭಾವನೆ/ವರ್ತನೆಗಳೆಲ್ಲವೂ ತಾತ್ಕಾಲಿಕ ಮಾನಸಿಕ ಸಮಸ್ಯೆಗಳೇ. ನಮ್ಮ ಈ ಸಮಸ್ಯೆಗಳಿಗೆ ನಾವು ಬೇರೆಯವರನ್ನು ಹೊಣೆಗಾರರನ್ನಾಗಿಸಿ, ಅವರು ಸರಿಯಾಗಿ ನಡೆದುಕೊಂಡರೆ ನಾವು ಚೆನ್ನಾಗಿರುತ್ತೇವೆಂದು ಭಾವಿಸುತ್ತೇವೆ ಹಾಗೂ ವಾದಿಸುತ್ತೇವೆ.

ಒಂದು ಸರಳ ಉದಾಹರಣೆ: ನಾವೇಕೆ ಮನೆಯಿಂದ ಹೊರಹೋಗುವಾಗ ಚಪ್ಪಲಿ ಅಥವಾ ಶೂಗಳನ್ನು ಧರಿಸುತ್ತೇವೆ? ಸಾಮಾನ್ಯವಾಗಿ ಮನೆಯಲ್ಲೇಕೆ ಬಳಸುವುದಿಲ್ಲ? . . . . . ಹೊರಗೂ ಚಪ್ಪಲಿ ಹಾಕದೇ ಓಡಾಡಬೇಕೆಂಬ ಛಲದಿಂದ ನಾವು ಓಡಾಡಬಹುದಾದ ಎಲ್ಲಾ ರಸ್ತೆಗಳನ್ನೂ ಬರಿಗಾಲಲ್ಲಿ ಓಡಾಡುವಷ್ಟು/ಮನೆಯಷ್ಟು ಸ್ವಚ್ಛಗೊಳಿಸಲು ಯಾರೂ ಪ್ರಯತ್ನಿಸುವುದಿಲ್ಲ. ಅಸಾಧ್ಯವಾದ ಈ ಕೆಲಸದ ಬದಲಿಗೆ ಸರಳ ಮಾರ್ಗವಾದ ಚಪ್ಪಲಿ ಬಳಕೆ ಮಾಡುತ್ತೇವೆ. ಹೀಗೆ ಹೊರಗೆ ಕಾಲಿಡುವಾಗ ಚಪ್ಪಲಿ ಧರಿಸಿ ನಮ್ಮ ಕಾಲಿಗೆ ನೋವಾಗದಂತೆ ಹೇಗೆ ಎಚ್ಚರ ವಹಿಸಿತ್ತೇವೆಯೋ, ಹಾಗೆಯೇ ಹೊರ ಜಗತ್ತಿನೊಂದಿಗೆ ಸಂವಹನ ನಡೆಸುವಾಗ ಅದೇ ಬಗೆಯ ಸರಳ ರಕ್ಷಣಾವಿಧಾನಗಳನ್ನು ನಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡರೆ ನಮ್ಮ 'ಮನಸ್ಸಿಗೆ' ಉಂಟಾಗಬಹುದಾದ ನೋವುಗಳನ್ನು ತಡೆಯಬಹುದು ಅಥವಾ ಕಡಿಮೆ ಮಾಡಿಕೊಳ್ಳಬಹುದು ಎಂಬ ತತ್ವವೇ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಮತ್ತು ಈ 'ಮನಸ್ಸು ಇಲ್ಲದ ಮಾರ್ಗ' ಪುಸ್ತಕದ ಸಾರ. ಆ ರಕ್ಷಣಾ ವಿಧಾನಗಳನ್ನು ಸರಳವಾಗಿ ಅಳವಡಿಸಿಕೊಳ್ಳುವ ಬಗ್ಗೆ ಇದರಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗಿದೆ.

ಇನ್ನೊಂದು ಉದಾಹರಣೆ: ಕೆಲವರು 'ನನಗೆ ನಿದ್ರೆ ಬರಲಿಲ್ಲ' ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ. ಅವರಿಗೆ ಕೇಳಬಹುದಾದ ಪ್ರಶ್ನೆ 'ನಿದ್ರೆ ಎಲ್ಲಿಂದ ಬರಬೇಕು?' . . . . . ಇಲ್ಲಿ ನಿದ್ರೆ ಮಾಡಬೇಕಾದವರು ನಾವು ಹೇಗೋ ಹಾಗೆಯೇ, ನಮ್ಮೆಲ್ಲ ಭಾವನೆಗಳಿಗೆ/ವರ್ತನೆಗಳಿಗೆ ನಾವೇ ಹೊಣೆಗಾರರು ಎಂಬುದನ್ನು ಅರಿತುಕೊಳ್ಳಬೇಕು. ಅದನ್ನು ಅರಿತುಕೊಳ್ಳುವ ಮತ್ತು ನಮ್ಮ ನೆಮ್ಮದಿಯ ಜೀವನಕ್ಕೆ ಬೇಕಾದ ಆಲೋಚನಾ ಕ್ರಮಗಳನ್ನು ಹಾಗೂ ವರ್ತನೆಗಳನ್ನು ರೂಢಿಸಿಕೊಳ್ಳುವ ಕಲೆಯನ್ನು ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ.

ವಿಜ್ಞಾನದ ಪುಸ್ತಕ ಎಂದ ಕೂಡಲೇ ಅದು ತುಂಬಾ ವೈಜ್ಞಾನಿಕವಾಗಿ, ಅರ್ಥಮಾಡಿಕೊಳ್ಳಲು ಕಷ್ಟಕರವಾಗಿರಬಹುದೆಂಬ ಅನಿಸಿಕೆ ಬರುವುದು ಸಹಜ. ಆದರೆ ಸತ್ಯವೆಂದರೆ ಇದು ಅತ್ಯಂತ ಸರಳ ಭಾಷೆಯಲ್ಲಿದ್ದು, ಒಂದು ಕಾದಂಬರಿಯಂತೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಕೆಲವೆಡೆ ಬರುವ ತಾಂತ್ರಿಕ ಪ್ಯಾರಾಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೆನಿಸಿದಲ್ಲಿ ಎರಡನೆಯ ಬಾರಿ ಓದಿದರೆ ಖಂಡಿತ ಅರ್ಥವಾಗುತ್ತವೆ. ಈ ಪುಸ್ತಕ ಓದುವಾಗ ನೆನಪಿನಲ್ಲಿಡಬೇಕಾದ ಮುಖ್ಯವಾದ ಅಂಶವೆಂದರೆ, ಇದನ್ನು ಅಲ್ಲಲ್ಲಿ ಓದಲು ಪ್ರತ್ನಿಸಬಾರದು. ಮುನ್ನುಡಿಯಿಂದ ಪ್ರಾರಂಭಿಸಿ, ಮೊದಲ ಪುಟದಿಂದ ಓದುತ್ತಾ ಹೋಗಬೇಕು. ಇಲ್ಲವಾದರೆ ಗೋಜಲಾಗುವ ಅಥವಾ ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆಯಿದೆ. ಲೇಖಕರೂ ಸಹ ಅದನ್ನೇ ಒತ್ತಿ ಹೇಳುತ್ತಾರೆ.

ನನ್ನ ಅಭಿಪ್ರಾಯದಲ್ಲಿ ಈ ಪುಸ್ತಕವನ್ನು ಪ್ರತಿಯೊಬ್ಬರೂ ತಮ್ಮ ವಿವಾಹಕ್ಕೆ ಮೊದಲು ಓದಬೇಕು. ಅಥವಾ ಕನಿಷ್ಠ ಮಗುವಾಗುವ ಮೊದಲಾದರೂ ಓದಬೇಕು. ಅಥವಾ ಕಡೇ ಪಕ್ಷ ಜೀವನದಲ್ಲಿ ಯಾವಾಗಲಾದರೂ ಒಮ್ಮೆ ಓದಲೇಬೇಕು. ಆದರೆ ಒಂದು ವಿನಂತಿ: ಪುಸ್ತಕವನ್ನು ಕೊಂಡು ಓದಿ. ಓದಿದ ನಂತರ ನಿಮಗೆ ಇಷ್ಟವಾಗಿ, ಅದನ್ನು ನಿಮ್ಮ ಆಪ್ತರೂ ಓದಬೇಕೆನಿಸಿದರೆ ದಯವಿಟ್ಟು ಕಾಣಿಕೆಯಾಗಿ ನೀಡಬೇಡಿ. ಬದಲಿಗೆ ಇಂಥದ್ದೊಂದು ಪುಸ್ತಕವಿದೆ, ಕೊಂಡು ಓದಿ ಎಂದು ಸಲಹೆ ನೀಡಿ (ನಾನೀಗ ನೀಡುತ್ತಿರುವಂತೆ....). ಹಣ ಕೊಟ್ಟು ಕೊಂಡುಕೊಂಡರೆ ಅದಕ್ಕೊಂದು ಬೆಲೆಯಿರುತ್ತದೆ. ಅಲ್ಲದೇ, ಈಗ ನಡೆಸುತ್ತಿರುವುದಕ್ಕಿಂತ ಇನ್ನೂ ಹೆಚ್ಚಿನ ನೆಮ್ಮದಿಯ ಜೀವನ ನಡೆಸಬೇಕೆನಿಸುವವರು ಅಥವಾ ಆ ಅದೃಷ್ಟವಿರುವವರು ಕೊಂಡು ಓದುತ್ತಾರೆ.....

(ಗಮನಿಸಿ: ವರ್ತನಾ ವಿಜ್ಞಾನದ ಬಗ್ಗೆ ಆಸಕ್ತಿಯಿದ್ದು ಇನ್ನೂ ಹೆಚ್ಚಿನ ಮಾಹಿತಿ/ಜ್ಞಾನ ಪಡೆಯಲಿಚ್ಛಿಸುವವರು ಟಿ. ಎ. ಕೌನ್ಸಿಲರ್ ಗಳನ್ನು/ಸೈಕೋಥಿರಪಿಸ್ಟ್ ಗಳನ್ನು ಭೇಟಿ ಮಾಡಬಹುದು ಅಥವಾ ಟಿ. ಎ. ವರ್ಕ್-ಶಾಪ್ ಗಳಲ್ಲಿ ಭಾಗವಹಿಸಬಹುದು. ಆಳವಾದ ಜ್ಞಾನಕ್ಕೆ ಟಿ. ಎ. ಕೋರ್ಸ್ ಗಳೂ ಇವೆ)

ಲೇಖಕರ ಕಿರುಪರಿಚಯ
ಡಾ. ಎ. ಎಂ. ಶಿವಕುಮಾರ್

ಪ್ರಸ್ತುತ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರು.

ಕನ್ನಡ ಕಾದಂಬರಿಗಳನ್ನು ಓದುವ, ಹಳೆಯ ಕನ್ನಡ ಹಾಡು ಮತ್ತು ಚಲನಚಿತ್ರಗಳ ಸಿ.ಡಿ. ಸಂಗ್ರಹಿಸುವ, ಸಂಗೀತ ಕೇಳುವ ಹವ್ಯಾಸ ಹೊಂದಿರುವ ಇವರ ಕನ್ನಡ ಭಾಷಾಜ್ಞಾನ ಶ್ರೀಮಂತವಾದುದು.

Blog  |  Facebook  |  Twitter

1 ಕಾಮೆಂಟ್‌:

  1. ನಾನೂ `ಮನಸ್ಸು ಇಲ್ಲದ ಮಾರ್ಗ'ದ fan. ಈ ಲೇಖನ ಓದಿ ತುಂಬಾ ಸಂತೋಷವಾಯಿತು. ನಾನೂ ನಿಮ್ಮಂತೆ ಹಲವರಿಗೆ ಈ ಪುಸ್ತಕ ಕೊಂಡು ಓದಲು ಹೇಳಿದ್ದೇನೆ. ಕೆಲವು ಬಾರಿ ನಾನೇ ತರಿಸಿ (ಹಣ ಪಡೆದು) ಕೊಟ್ಟಿದ್ದೇನೆ.
    -ವಿಶಾಲಮತಿ

    ಪ್ರತ್ಯುತ್ತರಅಳಿಸಿ