ಶನಿವಾರ, ನವೆಂಬರ್ 3, 2012

ಜನ ತಿನ್ನುವುದನ್ನು ಜಾನುವಾರು ತಿಂದಾಗ..

ಸಾಗರದ ಸುಂಕದೇವರಕೊಪ್ಪದ ಆನಂದಗೌಡರ ಮನೆಯಿಂದ ರಾತ್ರಿ ತುರ್ತು ಕರೆ; ಅವರ ನಾಲ್ಕು ಎಮ್ಮೆಗಳು ಮತ್ತು ಮೂರು ಕರುಗಳು ಅಂದು ಅವರ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಡಿಗೆ ಭಟ್ಟರು ಜಿಲೇಬಿ ಮಾಡಿದ ಸಕ್ಕರೆಪಾಕವನ್ನು ನೀರಿನ ಬಾನಿಗೆ ಹಾಕಿರುವುದನ್ನು ಕುಡಿದು ಅಸ್ವಸ್ಥಹೊಂದಿವೆ, ಕೂಡಲೇ ಬನ್ನಿ ಎಂದು. ಹೋದಾಗ ಒಂದು ಎಮ್ಮೆ ಸಾಯುವ ಸ್ಥಿತಿಯಲ್ಲಿತ್ತು. ಉಳಿದವು ಮಂಪರಿನಲ್ಲಿದ್ದವು. ಸಂದರ್ಭಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಿದ ಮೇಲೆ ಎರಡು ಎಮ್ಮೆಗಳು ಮಾತ್ರ ಮರಣ ಹೊಂದಿ ಮತ್ತೆರಡು ಎಮ್ಮೆಗಳು ಸರಿಹೊಂದಿದವು. ಇದು ಸರ್ವೇ ಸಾಮಾನ್ಯವಾಗಿ ಹಲವು ಜಾನುವಾರುಪಾಲಕರ ಮನೆಯಲ್ಲಿ ನಡೆಯುವ ಘಟನೆ. ಶರ್ಕರಪಿಷ್ಟ ಪದಾರ್ಥಗಳನ್ನು ಯಥೇಚ್ಚವಾಗಿ ಹೊಂದಿರುವ ಹಲಸಿನ ಹಣ್ಣು, ಮಾವಿನ ಹಣ್ಣು, ಅಕ್ಕಿ ಮಡ್ಡಿ, ಅನಾನಸ್, ಬೆಲ್ಲ, ಕಾಕಂಬಿ, ಸಕ್ಕರೆ ಪಾನಕ ಇತ್ಯಾದಿಗಳನ್ನು ಹೊಟ್ಟೆ ತುಂಬಾ ಭಕ್ಷಿಸಿದಾಗ ಜಾನುವಾರುಗಳಿಗೆ "ಅಸಿಡಿಟಿ" ಉಂಟಾಗುತ್ತದೆ.

ಜಾನುವಾರುಗಳಿಗೆ ಸಿಗುವ ಅಹಾರ, ಪರಿಸರ, ನಿರ್ವಹಣೆಗಳ ಆಧಾರದ ಮೇಲೆ ಅವುಗಳ ಆರೋಗ್ಯದ ಸ್ಥಿತಿ ನಿರ್ಧರಿಸಲ್ಪಡುತ್ತದೆ. ಮುಖ್ಯವಾಗಿ ಅಹಾರದ ವಿಚಾರವಾಗಿ ದನ, ಎಮ್ಮೆ, ಎತ್ತು, ಕೋಣ, ಆಡು, ಕುರಿ, ಜಿಂಕೆ, ಕಡವೆ ಮುಂತಾದ ಪ್ರಾಣಿವರ್ಗಗಳಿಗೆ ಅವುಗಳದ್ದೇ ವಿಶೇಷವಾದ ಜೀರ್ಣಾಂಗ ವ್ಯೂಹದ ರಚನೆ ಇದೆ. ಈ ಪ್ರಾಣಿಗಳಿಗೆ ನಾಲ್ಕು ಹೊಟ್ಟೆಗಳಿರುತ್ತದೆ. ಇದೇ ಇವುಗಳ ವೈಶಿಷ್ಟ್ಯ. ಬಹುಶಃ ಅನಾದಿ ಕಾಲದಿಂದಲೂ ಈ ವರ್ಗಕ್ಕೆ ಸೇರಿದ ಪ್ರಾಣಿಗಳು ಇತರ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ ಇತ್ಯಾದಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಬೇಗ ಹೊಟ್ಟೆ ತುಂಬಿಸಿಕೊಳ್ಳಲು ಹುಲ್ಲು, ಸೊಪ್ಪು ಇತ್ಯಾದಿಗಳನ್ನು ಅವಸರದಲ್ಲಿ ತಿಂದು ಅವುಗಳನ್ನು ದೊಡ್ಡ ಹೊಟ್ಟೆಯಾದ 'ರೂಮೆನ್'ಗೆ ಸೇರಿಸಿಕೊಳ್ಳುತ್ತವೆ. ನಂತರ ವಿಶ್ರಾಂತಿ ದೊರೆತಾಗ ಮೆಲುಕಾಡಿಸಿ ಅವುಗಳನ್ನು ಪುನಃ ಅರೆದು ತಿಂದು ಜೀರ್ಣಕ್ರಿಯೆಗೆ ಎರಡನೆ ಹೊಟ್ಟೆಯಾದ ಜೇನುಗೂಡಿನಂತಿರುವ 'ರೆಟಿಕ್ಯುಲಂ'ಗೆ ಕಳಿಸುತ್ತವೆ. ಇಲ್ಲಿ ಅವಸರದಲ್ಲಿ ಜಾನುವಾರುಗಳ ಹೊಟ್ಟೆ ಸೇರಿದ ಕಲ್ಲು, ಮಣ್ಣು, ಕಬ್ಬಿಣದ ವಸ್ತುಗಳು ಶೋಧಿಸಲ್ಪಡುತ್ತವೆ. ನಂತರ ಅಹಾರವು ಮೂರನೆ ಹೊಟ್ಟೆಯಾದ 'ಒಮೇಸಮ್'ನ್ನು ಸೇರಿಕೊಳ್ಳುತ್ತದೆ. ಇಲ್ಲಿ ಅಹಾರದಲ್ಲಿ ಕರುಳಿಗೆ ಹೋಗುವ ಅಗತ್ಯಕ್ಕಿಂತ ಹೆಚ್ಚಿಗೆ ಇರುವ ನೀರಿನ ಅಂಶಗಳು ಹೀರಲ್ಪಟ್ಟು ಅಹಾರವು ನಾಲ್ಕನೇ ಹೊಟ್ಟೆಯಾದ 'ಅಬೋಮೇಸಂ'ನ್ನು ಸೇರಿಕೊಳ್ಳುತ್ತವೆ. ಈ ಭಾಗವು ಮನುಷ್ಯ ಮತ್ತು ಇತರ ಪ್ರಾಣಿಗಳಾದ ನಾಯಿ, ಬೆಕ್ಕು ಹಾಗೂ ಇತರ ಪ್ರಾಣಿಗಳ ಜಠರವನ್ನು ಹೋಲುತ್ತದೆ.

ಹುಲ್ಲು, ಎಲೆ, ಕಾಳುಕಡ್ಡಿಗಳು, ಹೊಟ್ಟು, ಧಾನ್ಯದ ಸಿಪ್ಪೆ, ಉಪ ಉತ್ಪನ್ನಗಳಾದ ಹಿಂಡಿ, ತೌಡು ಅಥವಾ ಅವುಗಳಿಂದ ಮಾಡಿದ ಪಶುಆಹಾರ ಇತ್ಯಾದಿ ನಾರಿನಂಶವಿರುವ, ಮನುಷ್ಯನಿಗೆ ಬೇಡವಾದ ವಸ್ತುಗಳೇ ಜಾನುವಾರುಗಳಿಗೆ ಅಗತ್ಯವಾದ ಆಹಾರ. ಒಂದು ಬೆಳೆದ ದನದ ಬರೇ ಹೊಟ್ಟೆಯ (ರೂಮೆನ್) ಅಳತೆ ಸುಮಾರು 80 ರಿಂದ 120 ಲೀಟರಿನಷ್ಟಿರುತ್ತದೆ. ಈ ಕಡಾಯಿ ಗಾತ್ರದ ಹೊಟ್ಟೆಯಲ್ಲಿ ಹಲವು ಸಾವಿರ ಕೋಟಿ ಉಪಯುಕ್ತ ಸೂಕ್ಷ್ಮಜೀವಿಗಳಿದ್ದು, ಅವುಗಳು ಮೇಲೆ ಹೇಳಿದ ಕ್ಲಿಷ್ಟ ಆಹಾರ ಪದಾರ್ಥಗಳನ್ನು ಸಣ್ಣ ಕಣಗಳನ್ನಾಗಿ ಮಾರ್ಪಡಿಸುತ್ತವೆ. ಇದರಿಂದ ಪೌಷ್ಟಿಕಾಂಶಗಳನ್ನು ಹೊಟ್ಟೆ ಮತ್ತು ಕರುಳಿನಲ್ಲಿ ಹೀರಲು ಸುಲಭವಾಗುತ್ತದೆ. ಆ ಸೂಕ್ಷ್ಮಜೀವಿಗಳು ಆಯುಸ್ಸು ತೀರಿದ ನಂತರ  ಹೊಟ್ಟೆಯಲ್ಲಿಯೇ ಸತ್ತು ಅವುಗಳಲ್ಲಿರುವ ಪೌಷ್ಟಿಕಾಂಶಗಳೂ ಕೂಡ ಪ್ರಾಣಿಯ ದೇಹಕ್ಕೆ ಸಿಗುತ್ತವೆ. ಆಹಾರ ಜೀರ್ಣವಾಗುವಾಗ ಲ್ಯಾಕ್ಟಿಕ್ ಆಮ್ಲ, ಅಮೋನಿಯ ಸೇರಿದಂತೆ ಅನೇಕಾನೇಕ ವಸ್ತುಗಳು, ಉಪ ಉತ್ಪನ್ನಗಳು ಸಹಜವಾಗಿಯೇ ಬಿಡುಗಡೆಯಾಗುವವು. ತಿನ್ನುವ ಆಹಾರದ ವಿಧ ಹಾಗೂ ಪ್ರಮಾಣವನ್ನು ಅವಲಂಬಿಸಿ ಹೊಟ್ಟೆಯಲ್ಲಿ ಆ ಉಪಯುಕ್ತ ಸೂಕ್ಷ್ಮಜೀವಿಗಳಿಗೆ ಬೆಳೆಯಲಿಕ್ಕೆ ಹಾಗೂ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗುತ್ತದೆ. ಆಹಾರ ಒಮ್ಮೆಲೇ ಬದಲಾದರೆ ಆ ಸೂಕ್ಷ್ಮ ಜೀವಿಗಳ ಸಂಖ್ಯೆ ಏರುಪೇರಾಗಿ ಜಾನುವಾರಿಗೆ ಅನಾರೋಗ್ಯ ಉಂಟಾದೀತು; ಜೀವಕ್ಕೆ ಅಪಾಯವಾದೀತು. ಸೂಕ್ಷ್ಮಾಣುಗಳು ಸರಿ ಇರಬೇಕಾದರೆ, ಅಂದರೆ ಹೊಟ್ಟೆ ಸರಿ ಇರಬೇಕಾದರೆ ಆಹಾರವೂ ಸರಿಯಾಗಿಯೇ ಇರಬೇಕು.

ಮದುವೆ-ಮುಂಜಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಉಳಿಯುವ ಅನ್ನ, ಪಾಯಸ, ಪಾನಕ ಇತ್ಯಾದಿ ಆಹಾರ ಪದಾರ್ಥಗಳನ್ನು ಹಾಗೂ ಮಾವಿನಹಣ್ಣು, ಅನಾನಸ್, ಹಲಸಿನ ಹಣ್ಣಿನ ಕಾಲಗಳಲ್ಲಿ ಹಣ್ಣು ಅಥವಾ ಹಣ್ಣಿನ ಸಿಪ್ಪೆಗಳನ್ನು ದನಕರುಗಳಿಗೆ ನೀಡುವ ಪರಿಪಾಠ ಉಂಟು. ಇವು ಜಾನುವಾರುಗಳಿಗೆ ಮಾರಕ. ಸುಲಭದಲ್ಲಿ ಜೀರ್ಣವಾಗುವ ಶರ್ಕರಪಿಷ್ಟವನ್ನೇ ಜಾಸ್ತಿ ಹೊಂದಿರುವ ಈ ಮೇಲಿನ ಪದಾರ್ಥಗಳು ಒಮ್ಮೆಲೇ ಜಾಸ್ತಿ ಸಿಕ್ಕಾಗ ಹೊಟ್ಟೆಯಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆ ಅಸಂಖ್ಯಾತವಾಗಿ ಸ್ಪೋಟಗೊಂಡು ವಿಪರೀತವಾಗಿ ಲ್ಯಾಕ್ಟಿಕ್ ಆಮ್ಲ ಉತ್ಪಾದನೆ ಆಗುತ್ತದೆ. ಆಮ್ಲವು ಹೊಟ್ಟೆಯ ಒಳಪದರವನ್ನು ಕೊರೆದು ರಕ್ತವನ್ನು ಸೇರಿ ಅಲ್ಲಿಯೂ ಆಮ್ಲೀಯತೆ ಜಾಸ್ತಿ ಆಗಿ ಹೊಟ್ಟೆಯ ಚಲನೆ ನಿಲ್ಲುತ್ತದೆ. ಇದನ್ನೇ ಜಾನುವಾರಿನ "ಅಸಿಡಿಟಿ" ಎಂದು ಕರೆಯಬಹುದು. ಇದರಿಂದ ಹೊಟ್ಟೆಯ ಒಳಪದರದ ಉರಿಯೂತ ಪ್ರಾರಂಭವಾಗುತ್ತದೆ. ಅಷ್ಟರಲ್ಲಿ ಥಯಮಿನೇಸ್ ಎಂಬ ಕಿಣ್ವ ಉತ್ಪಾದನೆಯಾಗಿ ಮೆದುಳಿಗೆ ವಿಟಮಿನ್-ಬಿ ಕೊರತೆಯಾಗುತ್ತದೆ. ದೊಡ್ದಹೊಟ್ಟೆಯಲ್ಲಿರುವ, ಗಾಳಿಯ ಸೋಂಕು ಇಲ್ಲದಿದ್ದರೆ ಮಾತ್ರ  ಬದುಕುವ ಬ್ಯಾಕ್ಟೀರಿಯಾಗಳಿಂದ ಬಿಡುಗಡೆಯಾದ ವಿಷ ಉತ್ಪನ್ನಗಳು ರಕ್ತಕ್ಕೆ ಸೇರಿ ಯಕೃತ್ತು ಕೊಳೆಯಲು ಪ್ರಾರಂಭಿಸುತ್ತದೆ.

ಇಷ್ಟೆಲ್ಲ ಆಗುವಾಗ ದನಕ್ಕೆ ಸುಮ್ಮನಿರಲಾಗುತ್ತದೆಯೇ? ಪಾಪ! ಅದಕ್ಕೆ ಕಣ್ಣು ಕಾಣದಾಗಿ, ಮೂರ್ಛೆ ಹೋಗಿ, ತಲೆ ಅಡ್ಡಹಾಕಿ ಮಲಗಿ, ಮೈ ತಣ್ಣಗೆ ಆಗಿ ಕೊನೆಗೆ ಉಸಿರು ನಿಲ್ಲುತ್ತದೆ. ಈ ಆಹಾರಗಳನ್ನು ತಿಂದ ಸಮಯಕ್ಕೂ ಚಿಕಿತ್ಸಾ ಸಮಯಕ್ಕೂ ಅಂತರ  ಹೆಚ್ಚಿದಂತೆ ಕೆಲವು ದಿನಗಳ ಚಿಕಿತ್ಸೆಯೇ ಬೇಕಾದೀತು. ಅಂತೆಯೇ ಗುಣಮುಖವಾಗುವ ಸಾದ್ಯತೆಗಳೂ ಕಡಿಮೆಯಾದಾವು.

ಮುಂಜಾಗರೂಕತಾ ಕ್ರಮವಾಗಿ ವರ್ಷದ ಯಾವುದೇ ಸಮಯದಲ್ಲಾದರೂ ಸಹ ಅನ್ನ, ಪಾಯಸ, ಪಾನಕ, ಸಿಹಿತಿಂಡಿಗಳು, ಹಣ್ಣು, ಹಣ್ಣಿನ ಸಿಪ್ಪೆಗಳನ್ನು ಯಾವ ಪ್ರಾಣಿಯ ಬಾಯಿಗೂ ದೊರೆಯದಂತೆ ನೋಡಿಕೊಳ್ಳುವುದು ಒಳ್ಳೆಯದು. ಅಲ್ಪಸ್ವಲ್ಪದ ಅಳತೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದರೆ ಜಾನುವಾರುಗಳಿಗೆ ಏನೂ ಆಗದು. ಸಾರ್ವಜನಿಕ ಪ್ರದೇಶದಲ್ಲಿ ಎಸೆದರೆ ಮೇಯಲು ಬಂದ ದನಕರುಗಳು ತಿನ್ನುವ ಸಾಧ್ಯತೆ ಇರುತ್ತದೆ. ಹಾಗಾಗಿ ಗೊಬ್ಬರದ ಗುಂಡಿಯೇ ಸೂಕ್ತ ಜಾಗವೆಂದೆನಿಸುತ್ತದೆ. ಜಾನುವಾರು ಅಕಸ್ಮಿಕವಾಗಿ ಈ ರೀತಿ ಅನ್ನ ಇತ್ಯಾದಿಗಳನ್ನು ತಿಂದಾಗ ಪಶುವೈದ್ಯರ ಚಿಕಿತ್ಸೆ ದೊರೆಯುವವರೆಗೆ ಅದಕ್ಕೆ ಸಾಕಷ್ಟು ತಣ್ಣೀರನ್ನು ಕುಡಿಯಲು ಕೊಡಬೇಕು. ಸುಮಾರು 100-150 ಗ್ರಾಂನಷ್ಟು ಅಡಿಗೆ ಸೋಡಾವನ್ನು ಸಹ ನೀಡಬಹುದು.

ಜಾನುವಾರುಗಳಿಗೆ ರುಚಿಯಾದ ಅಹಾರಕ್ಕಿಂತ ಸಮತೋಲನ ಆಹಾರ ಬಹಳ ಮುಖ್ಯ. ದಯವಿಟ್ಟು ದನಕ್ಕೆ ದನದ ಆಹಾರವೇ ಇರಲಿ; ಜನರ ಆಹಾರ ಬೇಡ.

ಲೇಖಕರ ಕಿರುಪರಿಚಯ
ಡಾ. ಏನ್. ಬಿ. ಶ್ರೀಧರ್, ಎಂ. ವಿ. ಎಸ್ಸಿ., ಪಿಹೆಚ್. ಡಿ.,
ಸಹ ಪ್ರಾಧ್ಯಾಪಕರು,
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,
ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರು-24.

ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಲ್ಲೂಕಿನವರಾಗಿದ್ದು, ರೈತ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ಸಂಶೋಧನೆಯ ಬಗ್ಗೆ ಹೆಚ್ಚಿನ ಒಲವು ತೋರಿ, ಹಲವಾರು ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ.

ಸುಮಾರು 100ಕ್ಕೂ ಹೆಚ್ಚು ಕನ್ನಡ ವೈಜ್ಞಾನಿಕ ಲೇಖನಗಳನ್ನು, 4 ಕನ್ನಡ ಪುಸ್ತಕಗಳನ್ನು ಬರೆದಿರುವ ಇವರಿಗೆ ಒಲಿದು ಬಂದ ಪ್ರಶಸ್ತಿಗಳು ಹಲವು. ಮಲೆನಾಡಿನ ಜಾನುವಾರುಗಳ ನಿಗೂಢ ಕಾಯಿಲೆಗಳು ಇತ್ಯಾದಿ ಹತ್ತು ಹಲವು ಯೋಜನೆಗಳ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಾ ಜಾನುವಾರುಗಳ ಸೇವೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ