ಮಂಗಳವಾರ, ನವೆಂಬರ್ 20, 2012

ಬದುಕ ಖುಷಿಯ ಒಳಸೆಲೆಯ ಚಿಲುಮೆಗಳು...

ಅಕ್ಷರ ಪ್ರೀತಿ...
            ಭಾವ ಧಾರೆಯ ಹಾಡು...
                        ಸ್ನೇಹ ಗಂಗೆಯ ಹರಿವು.....

ಅಲೌಕಿಕ ಆನಂದ ಅಂತ ಒಂದಿದ್ದರೆ
ಅದು
ನಮ್ಮಿಷ್ಟದ ವಿಷಯದ ಹೊತ್ತಿಗೆಯೊಂದನ್ನ ಒಂದೇ ಗುಕ್ಕಿನಲ್ಲಿ ಓದುವುದರಲ್ಲಿ...
ತಾದಾತ್ಮ್ಯದಿಂದ ಚಂದನೆಯದೊಂದು ಹಾಡು ಕೇಳುವುದರಲ್ಲಿ...
ಆತ್ಮೀಯ ಗೆಳೆಯರೊಂದಿಗಿನ ಮೌನದಲ್ಲಿ ಮಾತ್ರ ಇದೆಯೇನೋ.
ನನ್ನ ಮಟ್ಟಿಗಂತೂ ಇದು ಸತ್ಯ.
ನನ್ನಲ್ಲೂ ಒಬ್ಬ ಭಾವುಕನನ್ನು ನಾನು ಕಾಣೋದು ಈ ಸಂದರ್ಭಗಳಲ್ಲಿ ಮಾತ್ರ.
ಹಗಲ ಏಕಾಂತದಲ್ಲಿ ಒಂದು ಪುಸ್ತಕ...
ರಾತ್ರಿಯ ಕತ್ತಲ ನೀರವತೆಯಲ್ಲಿ ಒಂದಿಷ್ಟು ಭಾವಗೀತೆ...
ಆಗಾಗ ಹೃನ್ಮಿತ್ರರೊಂದಿಗೆ ಧುಮ್ಮಿಕ್ಕುವ ಮಾತು...
ದಿನಗಳೆಲ್ಲ ಕ್ಷಣಗಳಲ್ಲಿ ಕಳೆದು ಹೋದಾವು.

ಅಕ್ಷರ
ಪುಸ್ತಕ - ಅದು ನಮ್ಮಿಂದ ಯಾವುದೇ ರೀತಿಯ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಖುಷಿಯನ್ನು ಪಡೆದಷ್ಟೂ ಮೊಗೆಮೊಗೆದು ಕೊಡುವ, ನಮ್ಮಲ್ಲಿ ಜ್ಞಾನದಸೆಲೆ ಉಕ್ಕುವಂತೆ ಮಾಡುವ ಏಕೈಕ ಮಿತ್ರ.

ಓದಿನ ಬಳುವಳಿಯಾದ ಅರಿವಿನಿಂದ ನಮ್ಮ ಜೀವನಾನುಭವವನ್ನು ವಿಮರ್ಶಿಸಿಕೊಳ್ಳುವಂತಾದಾಗ ಸಹಜವಾಗಿ ನಮ್ಮೊಳಗೊಂದು ಪ್ರಭುದ್ಧತೆ ಮೇಳೈಸಿ ಬದುಕು ಇನ್ನಷ್ಟು ಆನಂದದಿಂದ ಕೂಡಿ ಚೆಂದವೆನಿಸುತ್ತದೆ.

ಓದು ತೀರ ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ,
ಆದರೂ
ಮನಸಿನಾಳದಲ್ಲಿ ಎಲ್ಲೋ ಏನೋ ಕದಲಿದಂತಾಗಿ ಸ್ವಲ್ಪೇ ಸ್ವಲ್ಪಾದರೂ ನಮ್ಮನ್ನೇ ನಾವು ವಿಮರ್ಶಿಸಿಕೊಳ್ಳುವಂತೆ ಮಾಡುವುದಂತೂ ಸತ್ಯ.
ನಿಧಾನವಾಗಿಯಾದರೂ ಸರಿ ಆತ್ಮವಿಮರ್ಶೆ ನಮ್ಮನ್ನು ಬೌದ್ಧಿಕವಾಗಿ, ಮಾನಸಿಕವಾಗಿ ಚಿಂತನಶೀಲವಾಗಿ ಬೆಳೆಯುವಂತೆ ಮಾಡುತ್ತದೆ.
ನಿಧಾನವೇ ಆದರೂ ಬೆಳವಣಿಗೆ ಬೆಳವಣಿಗೆಯೇ ತಾನೆ...
ಕಲ್ಲು ಬೆಳೆಯುವುದು ನಿಧಾನ ಅಂತ ಅದು ವಿಕಾಸವಾಗುತ್ತಲೇ ಇಲ್ಲ ಎನ್ನಲಾಗದಲ್ಲ.
ನಿಧಾನಗತಿಯ ಪರಿವರ್ತನೆಯನ್ನು ಗುರುತಿಸುವುದು ಕಷ್ಟವಾಗಬಹುದು...
ಹಾಗಂತ ಆಗುತ್ತಿರುವ ವಿಕಾಸವನ್ನು ಅಲ್ಲಗಳೆಯಲಾಗದಲ್ಲ.
ಯಾರೋ ಬರೆದ ಯಾವುದೋ ಒಂದು ಸಾಲು
ಓದಿನಿಂದ ನಮ್ಮದೇ ಆಗಿ ನಮ್ಮಲ್ಲಿ ವಿಕಸಿತವಾಗುವುದು ಅಕ್ಷರದ ಸಾಮರ್ಥ್ಯ...

ಪುಸ್ತಕದ ಮಾತು ಬಂದಾಗ ವಾಲ್ಮೀಕಿಯ - ಪ್ರಥಮ ಪ್ರಿಯ ಸಮಾಗಮದಲ್ಲಿ ಹೆಣ್ಣು ನಾಚಿಕೆ, ಸಂಕೋಚಗಳಿಂದ, ಪ್ರಿಯಕರನ ಪ್ರೋತ್ಸಾಹದಿಂದ ಇಷ್ಟಿಷ್ಟೇ ಬೆತ್ತಲಾಗುತ್ತ ಹೋಗುತ್ತಾಳೆಂಬರ್ಥದ ಮಾತು ನೆನಪಾಗುತ್ತೆ.
ಕಾರಣ -
ಇಷ್ಟಪಟ್ಟು ತಂದಿಟ್ಟುಕೊಂಡ ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ಆಗುವ ಅನುಭೂತಿ.
ಈ ಪುಸ್ತಕಗಳೂ ವಾಲ್ಮೀಕಿಯ ಹೆಣ್ಣಿನಂತೆಯೇ ಅಂತನ್ನಿಸುತ್ತೆ.
ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ರೀತಿಯಲ್ಲಿ ಇಷ್ಟಿಷ್ಟಾಗಿ ಅರ್ಥವಾಗ್ತಾ ಹೋಗುತ್ತವೆ.
ಓದಿದ ಒಂದೇ ಸಾಲು ಅದು ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಹೊಸ ಹೊಸ ಅರ್ಥ ಮತ್ತು ಭಾವಗಳನ್ನು ಮೂಡಿಸಿ ಬೆರಗುಗೊಳಿಸುತ್ತೆ.
ನಮ್ಮ ಅನುಭವಗಳ ನೆಲೆಯಲ್ಲಿ ಓದಿನ ಹೊಳಹು ಬದಲಾಗುತ್ತ ಸಾಗುತ್ತದೆ.
ಹೊಸದಾದ ಮನೋ ಮಂಥನಕ್ಕೆ ಎಡೆಮಾಡಿ ಬದುಕನ್ನು ಇನ್ನಷ್ಟು ಪಕ್ವವಾಗಿಸುತ್ತದೆ.
ಒಮ್ಮೆ ಗೆಳತಿಯಾಗಿ, ಇನ್ನೊಮ್ಮೆ ಪ್ರಿಯತಮೆಯಾಗಿ, ಮತ್ತೊಮ್ಮೆ ಬರೀ ಹೆಣ್ಣಾಗಿ, ಹಲವೊಮ್ಮೆ ತಾಯಂತೆ ಸಲಹುವ ಅದೇ ಹೆಂಡತಿಯಂತೆ...

ಹಾಡು
ಖುಷಿಯ ಘಳಿಗೆಯಲಿ ಖುಷಿಯ ಇಮ್ಮಡಿಸಿ, ಯಾವುದೋ ನೋವಿಗೆ ಏನೋ ಸಾಂತ್ವನವಾಗಿ ಮನವ ಮೃದುವಾಗಿಸುವ ಮನದ ಗೆಳೆಯ ಹಾಡು.
ಯಾರದೋ ಗೀತೆ ಇನ್ನಾರದೋ ಕಂಠದಲಿ ಹಾಡಾಗಿ ನಲಿದು - ಕೇಳುಗನ ಕಿವಿಯ ಸೇರಿ - ಮನವನಾಲಂಗಿಸಿ ಲಾಲೈಸುವ ಆ ಪರಿ ಎಂಥ ಸೊಗಸು!

ತಲೆಯದೂಗಿಸುವ ಹಾಡು, ಸದಾ ಗುಣುಗುಣಿಸುವ ಹಾಡು, ತಕಥೈ ಕುಣಿಸುವ ಹಾಡು, ಕಣ್ಣ ಹನಿಸುವ ಹಾಡು, ನಗೆಯ ಚಿಮ್ಮಿಸುವ ಹಾಡು - ಎಷ್ಟೆಲ್ಲ ವೈವಿಧ್ಯದ ಹಾಡುಗಳು...

ಯಾವ ಹಾಡಾದರೇನು -
ಹಾಡೆಂದರೆ ಖುಷಿ, ಹಾಡೆಂದರೆ ಮಮತೆ, ಹಾಡೆಂದರೆ ಪ್ರೀತಿ, ಹಾಡೆಂದರೆ ವಿರಹ, ಹಾಡೆಂದರೆ ಏನೇನೋ ಭಾವ ಸಮ್ಮಿಲನ...

ಪುಸ್ತಕ ಮತ್ತು ಹಾಡು ಇವೆರಡಕ್ಕೆ ಕೊರತೆ ಆಗದಿದ್ರೆ ಒಂದಿಡೀ ಬದುಕನ್ನು ಒಂಟಿಯಾಗಿ ಕಳೆದುಬಿಡಬಹುದೇನೋ...
ಜೊತೆಗೆ ಸಮಾನ ಅಭಿರುಚಿಯ ಸ್ನೇಹಿತರೂ ಸೇರಿಕೊಂಡರೆ ಬದುಕೊಂದು ನಳನಳಿಸುವ ಹೂವಿನ ತೋಟವೇ ಸರಿ...

ಸ್ನೇಹ
ಎರಡು ಜೀವಗಳ ನಡುವೆ ಹಬ್ಬಿ ನಗುವ ಆತ್ಮೀಯ ಭಾವ ಸಂಬಂಧ, ಸ್ನೇಹವೆಂದರೆ.

ಗೆಳೆತನವೊಂದು ಹಬ್ಬಿ ನಿಲ್ಲುತ್ತದೆ -
ಅಂಗಳದ ಕಂಬಕ್ಕೆ ಮಲ್ಲಿಗೆಯ ಬಳ್ಳಿಯೊಂದು ತಬ್ಬಿ ಹಬ್ಬಿ ನಿಂತಂತೆ ಸೊಗಸಾಗಿ...
ಸಮಾನ ಅಭಿರುಚಿಗಳ ನೀರು ಗೊಬ್ಬರ ಸಿಕ್ಕರೆ.

ಒಂದು ಚಂದನೆಯ ಸ್ನೇಹವನ್ನು ಬದುಕಿನ ಯಾವುದೇ ಕ್ಷಣದಲ್ಲಾದರೂ ಮರೆಯೋಕೆ ಸಾಧ್ಯವಾ..??
ಇಂದು ಜೀವದ ಸ್ನೇಹಿತರಾದ ಇಬ್ಬರು ಮುಂದೆಂದೋ ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಕವಲೊಡೆದ ದಾರಿಯಲ್ಲಿ ನಡೆಯಬೇಕಾದೀತು.
ಅರಿವೇ ಇಲ್ಲದೆ ಮತ್ತೆಂದೂ ಮುಖಾಮುಖಿಯಾಗದೇ ಹೋಗುವಷ್ಟು ದೂರಾಗಬಹುದು.
ಕೊನೆಗೆ ಪರಿಸ್ಥಿತಿಯ ಒತ್ತಡದಲ್ಲಿ ಶತ್ರುಗಳೂ ಆಗಿಬಿಡಬಹುದೇನೋ.
ಆದರೂ ಆ ಶತ್ರುತ್ವದ ಆಳದಲ್ಲೂ ಮನದ ಮೂಲೆಯಲ್ಲಿ ಗೆಳೆತನದ ನರುಗಂಪು ಸುಳಿದಿರುಗದಿದ್ದೀತಾ...
ಮಿತ್ರರಾಗಿದ್ದಾಗ ಜೊತೆಯಾಗಿ ಕಳೆದ ಘಳಿಗೆಗಳ ಮರೆಯಲಾದೀತಾ..??
ಅದು ಸ್ನೇಹದ ತಾಕತ್ತು ಮತ್ತು ಶ್ರೇಷ್ಠತೆ.

ಮುಂಜಾನೆ ಮಂಜಲ್ಲದ್ದಿದ ಸೂರ್ಯಕಿರಣವನ್ನು ನೋಡುವಾಗ ಫಕ್ಕನೆ ನೆನಪಾಗಿಬಿಡುವ ಪ್ರೀತಿಯ ಗೆಳೆಯನ ಯಾವುದೋ ಖುಷಿಯ ಮಾತು ಆ ದಿನವೆಲ್ಲ ನಮ್ಮನ್ನ ಶಾಂತಿಯಿಂದ, ಸಂತೃಪ್ತಿಯಿಂದ ಕಳೆಯುವಂತೆ ಮಾಡಲಾರದೇ...
ನಮ್ಮನ್ನು ಇನ್ನಷ್ಟು ಉತ್ಸಾಹಿತರನ್ನಾಗಿಸದೇ...
ಸೋತ ಜೀವಕ್ಕೆ ಚೈತನ್ಯಧಾರೆಯೆರೆಯಲಾರದೇ...
ನಮ್ಮನ್ನು ಹೊಸ ಗೆಲುವಿನೆಡೆಗೆ ತುಡಿವಂತೆ, ಹೊಸ ಎತ್ತರಕ್ಕೆ ಏರುವಂತೆ ಪ್ರೇರೇಪಿಸಲಾರದೇ...
ಅಂಥದೊಂದು ಸ್ನೇಹಭಾವವನ್ನು, ಆ ಭಾವವನ್ನು ಕೊಡಮಾಡಿದ ಆತ್ಮಬಂಧುವಿನಂಥ ಸ್ನೇಹಿತನನ್ನು ಎಂದಿಗಾದರೂ ಮರೆಯುವುದು ಸಾಧ್ಯವಾ..??
ಮರೆತವನು ಮನುಜನೆನಿಸಿಕೊಂಡಾನಾ..??

"ಶುಭ ಹಾರೈಕೆಗಳೊಂದಿಗೆ ವಿದಾಯವನ್ನು ಕೋರುತಿರುವ ಸ್ನೇಹಿತನ ಕಣ್ಣುಗಳೊಳಕ್ಕೆ ಇಣುಕು. ಅಲ್ಲಿ ಮನದಾಳದಲ್ಲಿ ಮೂಡಿದ ವಿದಾಯದ ವೇದನೆ ಹೆಪ್ಪುಗಟ್ಟಿರುತ್ತದೆ. ಭಾವಾವೇಶೆ ಕಣ್ಣ ಹನಿಯಾಗಿ ಹೊರಜಾರಲು ಸಿದ್ಧವಾಗಿ ಕಂಗಳನ್ನು ಮಂಜಾಗಿಸಿರುತ್ತದೆ."

"ತುಂಬು ಜೀವನ್ಮುಖೀ ವ್ಯಕ್ತಿಯಲ್ಲಿ ಕೂಡ ಸ್ನೇಹಿತನ ಅಗಲುವಿಕೆ ಮನದ ತುಂಬ ಒಂದು ಶೂನ್ಯಭಾವವನ್ನು ಸೃಷ್ಟಸಿರುತ್ತದೆ. ಆ ಅಗಲುವಿಕೆ ತಾತ್ಕಾಲಿಕದ್ದಾದರೂ ಕೂಡ. ಅದು ಪಕ್ವಗೊಂಡ ಸ್ನೇಹದ, ಮನಸು ಮಾತ್ರ ಅರ್ಥೈಸಿಕೊಳ್ಳಬಲ್ಲ, ವಿವರಿಸಲಾಗದ ಅನುಭಾವದ ಭಾವ ಶೂನ್ಯತೆ."
ಅಂಥ ಒಲವಧಾರೆಯ ಗೆಳೆತನದ ಕಲ್ಪನೆಯೇ ಎಷ್ಟು ಚಂದ.

ಅಹಂ ಅನ್ನು ಮರೆತು ಬೆರೆಯಬಲ್ಲೆವಾದರೆ, ಪ್ರಜ್ಞಾವಂತಿಕೆಯನ್ನು ಹೀರಿ ಬೆಳೆಯಬಲ್ಲೆವಾದರೆ, ಚಂದವಾಗಿ ಗೆಳೆತನವೊಂದನ್ನು ನಿಭಾಯಿಸಬಲ್ಲ ತಿಳುವಳಿಕೆ ನಮಗಿದ್ದರೆ ಖಂಡಿತಾ ಗೆಳೆತನವೊಂದು ನಮ್ಮ ಬದುಕ ಬೆಳಗಿಸಬಲ್ಲದು.

ಓದು ನಮ್ಮನ್ನು ಇನ್ನಷ್ಟು ಬೆಳೆಸಲಿ...
ಅಕ್ಷರ ಪ್ರೀತಿ ಹೊಸ ಬಾಂಧವ್ಯಗಳ ಬೆಸೆಯಲಿ...
ಮನದ ಮಡಿಲಲ್ಲಿ ಹೊಸ ಹಾಡು ಹುಟ್ಟಲಿ...
ಬದುಕ ತೋಟ ಹೂವಂತ ಗೆಳೆಯರಿಂದ ನಳನಳಿಸಲಿ...

ಲೇಖಕರ ಕಿರುಪರಿಚಯ
ಶ್ರೀ ಶ್ರೀವತ್ಸ ಕಂಚೀಮನೆ

ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಂಚೀಮನೆ ಎಂಬ ಪುಟ್ಟ ಹಳ್ಳಿಯವರು. ಸದ್ಯ ಬೆಂಗಳೂರಿನಲ್ಲಿ ವಾಸ, ಸ್ವಂತ ಕೆಲಸ ಮಾಡಿಕೊಂಡಿದ್ದಾರೆ.

ನಾನೊಬ್ಬ ಸಾಮಾನ್ಯ ಅಕ್ಷರ ಪ್ರೀತಿಯ ಹುಡುಗನಷ್ಟೇ ಎಂದು ಹೇಳಿಕೊಳ್ಳುವ ಇವರು ಕನ್ನಡದ ಯಾವುದೇ ಬರಹಗಳನ್ನಾದರೂ ಓದುತ್ತಾರೆ. ಓದು ಇವರ ಪ್ರೀತಿಯಾದರೆ, ಬರಹ ಕಾಡುವ ಭಾವಗಳನ್ನು ಹೊರಚೆಲ್ಲುವ ಮಾಧ್ಯಮ.

Blog  |  Facebook  |  Twitter

1 ಕಾಮೆಂಟ್‌:

  1. ಅಕ್ಷರ,ಹಾಡು,ಸ್ನೇಹ...ಇವುಗಳ ಮಹತ್ವ ಅದೆಷ್ಟು ಚೆನ್ನಾಗಿ ತಿಳಿಸಿದ್ದಿರಿ ...ತುಂಬಾ ಇಷ್ಟವಾಯ್ತು...ಶ್ರೀವತ್ಸ... :))

    ಪ್ರತ್ಯುತ್ತರಅಳಿಸಿ