ಭಾನುವಾರ, ನವೆಂಬರ್ 18, 2012

ಕವನಗಳ ಸಂಗ್ರಹ

ಅಮ್ಮ

ನಾ ಕಂಡ ಮೊದಲ ನೋಟ ನೀನಮ್ಮ
ನಾ ಕೇಳಿದ ಮೊದಲ ದನಿ ನಿನ್ನ ನಗುವಮ್ಮ
ನಾನಾಡಿದ ಮೊದಲ ನುಡಿ ನಿನ್ನ ಕರೆದುದಮ್ಮ
ನಾ ಪಡೆದ ಮೊದಲ ಸಿಹಿಮುತ್ತು ನಿನ್ನಿಂದಮ್ಮ
    ನಿನ್ನ ಕರುಳ ಬಳ್ಳಿ ನಾನಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

ನಿನ್ನ ಕಷ್ಟದಲ್ಲೂ, ನನ್ನ ಸುಖವ ಬಯಸಿ
ನಿನ್ನ ಆಸೆಗಳ ತ್ಯಜಿಸಿ, ನನ್ನ ಏಳಿಗೆಯ ಬಯಸಿ
ವಾತ್ಸಲ್ಯದ ಬೆಚ್ಚನೆಯ ಅಪ್ಪುಗೆಯ ಹೊದಿಸಿ
ಪ್ರೀತಿಯ ಸಾಗರದಲ್ಲಿ ನನ್ನ ಬೆಳೆಸಿ
    ನಿನ್ನ ತ್ಯಾಗಕ್ಕೆ, ಮಮಕಾರಕ್ಕೆ ಸರಿಸಾಟಿ ಯಾರಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

ನಾ ಹಾದಿತಪ್ಪದೆ ಕಾಪಾಡಿದವಳು ನೀನಮ್ಮ
ನನ್ನ ಏಳಿಗೆಯ ಸರ್ವಪಾಲು ನಿನದಮ್ಮ
ನನ್ನ ಸಾಧನೆಯ ಫಲವು ನಿನ್ನ ಕೃಪೆ ಅಮ್ಮ
ನಾ ಪ್ರತಿ ನಿಮಿಷವು ಜಪಿಸುವ ನಾಮ ನಿನದಮ್ಮ
    ನನ್ನ ಬಾಳ ಭಾಗ್ಯ ನೀನಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

ಜನನ ಮರಣಗಳ ನಡುವೆ ನಾ ಕಂಡ ಬೆಳಕು ನೀನಮ್ಮ
ನಿನ್ನಂತೆ ನನ್ನ ಪ್ರೀತಿಸಲು ಇನ್ಯಾರಿಗೆ ಸಾಧ್ಯವಮ್ಮ
ನನ್ನ ಮುಪ್ಪಿನಲೂ ಪೂಜಿಸುವ ದೇವರು ನೀನಮ್ಮ
ನನ್ನ ಬದುಕಿನ ಕೊನೆಯ ನುಡಿ ನಿನ್ನ ನಾಮವಮ್ಮ
        ಪ್ರತಿ ಜನುಮದಲ್ಲು ನನ್ನ ಜನನಿಯಾಗಿ ನೀ ಬಾರಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

- ಮುಕೃಸು
ಲೇಖಕರ ಕಿರುಪರಿಚಯ
ಶ್ರೀ ಸುಧೀಂದ್ರ ಮುತ್ಯ

ಮೂಲತಃ ಬೆಂಗಳೂರಿನವರಾದ ಇವರು ಕಳೆದ ಹತ್ತು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕದ ಸುವರ್ಣ ಯುಗ ಮತ್ತೆ ಬರಲಿ, ಕನ್ನಡ ಭಾಷೆ ಉತ್ತುಂಗಕ್ಕೆ ಏರಲಿ, ಕನ್ನಡಿಗರು ಸ್ವಾಭಿಮಾನಿಗಳಾಗಿ ಬಾಳಲಿ ಎಂಬುದು ಇವರ ಮನದಾಳದ ಮಾತು.

Blog  |  Facebook  |  Twitter



ಕನ್ನಡವೆ೦ದರೇನು?

ಕಸ್ತೂರಿ ಕನ್ನಡವೆ೦ದರೇನೆ೦ದು ಯಾರಿಗೆ ಗೊತ್ತು?
ಅದನು ಪದಗಳಲಿ ಹಿಡಿದಿಡಲಾಗದು ಯಾವತ್ತೂ
ಕೆಲವರು ಪ್ರಯತ್ನಿಸಿದರು ವಿವರಿಸಲು
ವರ್ಣಿಸುವ ಪದಗಳಿಗಾಗಿ ತಡಕಾಡಿ ಸುಸ್ತಾದರು

ಯಾಕೆ ಗೊತ್ತೆ?
ಇಷ್ಟು ಹೇಳಿದರೂ ತಿಳಿಯದಿರೆ ಮತ್ತೇನು
ಕನ್ನಡ ಕನ್ನಡವೇ!
ಅದನ್ನು ಪದಗಳಲ್ಲಿ ಬಂಧಿಸಿಡುವ ಪದಗಳೇ ಇಲ್ಲ..

ಅಂದರೆ, ಅರ್ಥವಾಯಿತಲ್ಲ
ಕನ್ನಡವೆಂದರೇನೆಂದು?
ಸುಮ್ಮನೆ ಅದರ ಬಗ್ಗೆ ಬರೆದು ಪ್ರಯೋಜನವಿಲ್ಲ
ಏಕೆಂದರೆ, ಅದನು ಬರೆಯಲು ಬೇಕಾದ ಹಾಳೆಗಳೇ ಇಲ್ಲ
ಇದ್ದರೂ ಸಾಕಾಗುವುದಿಲ್ಲ

ಹಾಗಾದರೆ ಗೊತ್ತಾಯಿತಲ್ಲ
ಕನ್ನಡವೆಂದರೇನೆಂದು?
ಗೊತ್ತಿರಬಹುದೇನೊ ಕನ್ನಡದ ಮಹತ್ವ ಬೇರೆಯವರಿಗೆ
ವಿಷಾದವಾಗದೆ ಇರಲಾರದೇ
ಕನ್ನಡದ ಕಸುವು ಕನ್ನಡಿಗರಿಗೆ ಗೊತ್ತಾಗದಿದ್ದರೆ?

- ಸಂತೋಷ್ ಮೂಲಿಮನಿ
ಲೇಖಕರ ಕಿರುಪರಿಚಯ
ಶ್ರೀ ಸಂತೋಷ್ ಮೂಲಿಮನಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹೊಳೆಆನ್ವೇರಿ ಎಂಬ ಗ್ರಾಮದವರಾದ ಇವರು ಪ್ರಸ್ತುತ ಬೆಂಗಳೂರಿನ ಸಾಫ್ಟ್-ವೇರ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಡುವಿನ ವೇಳೆಯಲ್ಲಿ ಕವಿಯಾಗುವ ಇವರು ಹವ್ಯಾಸಕ್ಕಾಗಿ ಬರೆದಿರುವ ಕೆಲವು ಕವನಗಳಿಂದ ಮುಂದೊಂದು ದಿನ ಕವನ ಸಂಕಲನವನ್ನು ಹೊರತರಬೇಕೆಂಬ ಬಯಕೆಯನ್ನು ಹೊಂದಿದ್ದಾರೆ.

Blog  |  Facebook  |  Twitter



ಕಣ್ಣಿದ್ದೂ ಕುರಡನಾ ನಾ???

ನಾ ಕಂಡೆ ಬೇಸಿಗೆಯ ಬಂದ ಮಳೆಯ
ತಂಪುಣಿಸಲೆಂದು ಸುಡುಧರೆಯ
ಬಂದಳು ಆ ಗೆಳತಿ ಪ್ರೀತಿಗಾಲಿ ಹೊತ್ತು
ತುಸು ವಿರಮಿಸಲೆಂದು ಈ ಗೆಳೆಯ

ಸಾಂತ್ವನದ ಸಿಂಚನವೋ, ಸುಖವರ್ಣ ಕುಂಚನವೋ
ನೆಮ್ಮದಿ ತಂದಿದೆ, ಅದು ಹೇಗೆಂದು ನಾಕಾಣೆ
ಖಾಲಿಯಿದ್ದ ಹೃದಯದ ಗಲ್ಲಾ ಪೆಟ್ಟಿಗೆಗೆ
ಬೋಣಿಗೆಯು ಇವಳ ನಾಕಾಣೆ

ಪ್ರೀತಿ ಅದೇ ಎಂದೇ ನಾ ತಿಳಿಯೇ
ಆದರೆ ಸ್ನೇಹವದು ನಾ ಅರಿವೆ
ಪ್ರೇಮದ ಕಾವಿಗೆಂದು, ಒಂಟಿಯಾಗಿ ತಿಳಿದು
ಉರಿಸಲಾರೆ ನಾ ಸ್ನೇಹದಾ ಅರಿವೆ

ಸ್ನೇಹ ಪ್ರೇಮಕೆ ಶಿಶು ನಾನು, ನೀ ಹೃದಯದಿ
ಕಾಳಜಿಯ ಹಾಲಿಟ್ಟು ಸಾಕು
ಮರೆಯುವೆ ನಾ ನನ್ನೆಲ್ಲ ನೋವ
ನನ್ನೊಡನೆ ನೀ ಇದ್ದರೆ ಸಾಕು

ಮೊದಲದಿನ ನಾ ನಿನ್ನ ಕಂಡು
ತೆರೆದ ಕಣ್ಣ ಬೇಗ ಮುಚ್ಚಲಿಲ್ಲ
ಅದ ಕಂಡ ನೀ, ಹುಸಿ ನಕ್ಕು
ಪಿಸುಗುಟ್ಟಿದ, ನಾ ಇಂದಿಗೂ ಮರೆತಿಲ್ಲ

ನಿಜ ಗೆಳತಿ, ನಾ ನಿನ್ನ ಮರೆಯಲಾರೆ
ಕೊಚ್ಚಿಕೊಂಡು ಹೋದರೂ ನನ್ನ ಪ್ರೇಮ ಪ್ರವಾಹ
ನೀ ತೋರುವ ಸಿಂಪತಿ, ನಿನ್ನಂದದ ಕೀರುತಿ
ಸುಡುವುದೇ ಎನ್ನ ಹೋಗುವವರೆಗೂ ಜೀವ?

ದಾರಿಯಲಿ ಕಾಳಜಿಯ ಕೊಡೆ ಹಿಡಿದು, ಗೆಳತಿಯಾದೆ ನೀ
ಮಳೆ ಬಂದೀತೆಂದು ನಾ ಮನೆ ಸೇರುವಾಗ
ಬಸ್ಸಿನಲ್ಲಿ ಮುನ್ನುಗ್ಗಿ, ಮೇಲೇರಿ ಜಾಗ ಹಿಡಿದು
ಕೊನೆಗೆ, ಬಿಟ್ಟು ಕೊಟ್ಟೆ ನಿನಗೇ, ಸ್ನೇಹ "ಸೇರು" ಆಗ

ನೀ ಮೆಚ್ಚಿದೆ ನನ್ನ ಅರೆಬೆಂದ ಬರಹಗಳ
ಆದೆನೆಂದೆ "ನಾ ನಿನ್ನ ಅಭಿಮಾನಿ"
ಎತ್ತಲೋ ಜಾರುತ್ತಿದ್ದ, ಆ ತಲೆಯ ತಿರುವಿಟ್ಟ
ಸ್ನೇಹ ದೇವತೆ ನೀ, ನಾ ನಿನಗೆ ಚಿರಋಣಿ

ಗಾಳಿಯ ಗಾನ ತೂಗುವ ನಾರಿಕೇಳದಂತೆ
ತಲೆದೂಗುವೆ ನಾ ನಿನ್ನ ಸ್ನೇಹಕೆ
ಹೃದಯದೊಳಗೆ ಲೇಖನಿಯಿಟ್ಟು ಬರೆದಿರುವೆ
ಆಗದಿರಲಿ ಎಂದಿಗೂ ಭಾಧೆ ಈ ನಮ್ಮ ಸ್ನೇಹಕೆ

- ಚಿನ್ಮಯ ಭಟ್
ಲೇಖಕರ ಕಿರುಪರಿಚಯ
ಶ್ರೀ ಚಿನ್ಮಯ ಭಟ್

ಶಿರಸಿಯ ಸಮೀಪದ ತದ್ದಲಸೆಯ ಹತ್ತಿರದ ಅಗಲಬಾವಿ ಊರಿನವರಾದ ಇವರು ಸಧ್ಯ ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸಾಹಿತ್ಯದ ಕಡೆಗೆ ಕೊಂಚ ಆಸಕ್ತಿ ಇದೆ ಎನ್ನುವ ಇವರು, ಇದೇ ಆಸಕ್ತಿಯನ್ನು ಹವ್ಯಾಸವಾಗಿಸಿ ಹಲವು ಬರಹಗಳನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಎಲ್ಲ ಕವನಗಳೂ ಚೆನ್ನಾಗಿ ಮೂಡಿಬಂದಿವೆ.

    ತಾಯಿಯನ್ನು, ಅವಳ ದೊಡ್ಡತನವನ್ನು ಹೊಗಳಿದ ಶ್ರೀ ಸುಧೀಂದ್ರ, ಕನ್ನಡದ ಘನತೆಯ ಬಗ್ಗೆ ಹೇಳಿದ ಶ್ರೀ ಸಂತೋಷ್ ಹಾಗೂ ಪ್ರೇಮಕಾವ್ಯ ಬರೆದ ಚಿನ್ಮಯ ಭಟ್ ನಿಮಗೆಲ್ಲರಿಗೂ ಧನ್ಯವಾದಗಳು.

    ಅರವಿಂದ ಕುಲಕರ್ಣಿ

    ಪ್ರತ್ಯುತ್ತರಅಳಿಸಿ
  2. ಗೆಳೆಯರೆ ಇಲ್ಲೊಂದಿಷ್ಟು ಬೆರಳಚ್ಚು ದೋಷಗಳಿವೆ...ಬೇಸರಿಸದೇ ಕ್ಷಮಿಸಿ,... ದಯವಿಟ್ಟು ಸಹಕರಿಸಿ,....ಬೇಹ-ಬೇಗ,ದಾರಯಲಿ-ದಾರಿಯಲಿ..

    ಧನ್ಯವಾದಗಳು ಕಹಳೆ ಬಳಗಕ್ಕೆ :)
    ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ...

    ಮುಂದುವರೆಯಲಿ ಕನ್ನಡ ಕಹಳೆ

    ಪ್ರತ್ಯುತ್ತರಅಳಿಸಿ