ಭಾನುವಾರ, ನವೆಂಬರ್ 1, 2015

ಪ್ರಕೃತಿ

ಕನ್ನಡ ರಾಜ್ಯೋತ್ಸವ ನಾಡಹಬ್ಬದ ಈ ಶುಭದಿನದಂದು ಸಮಸ್ತ ಕನ್ನಡಿಗರಿಗೆ ಹೃದಯಪೂರ್ವಕ ಶುಭಾಶಯಗಳು.

ಕೃಪೆ : YouTube

ಕಹಳೆ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಂದ ದೊರೆಯುತ್ತಿರುವ ಅಪೂರ್ವ ಪ್ರೋತ್ಸಾಹಕ್ಕೆ ನಾವು ಋಣಿಗಳು. ಕಹಳೆಯ ಯಶಸ್ಸು ಹಿಗೆಯೇ ಮುಂದುವರೆಯಲು ನಿಮ್ಮೆಲ್ಲರ ನಿರಂತರ ಆಶೀರ್ವಾದಪೂರ್ವಕ ಸಹಕಾರ ಅತೀ ಅವಶ್ಯಕ; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ. ನವಂಬರ್ 2015 ರ ಮಾಹೆಯುದ್ದಕ್ಕೂ ನಡೆಯಲಿರುವ ಕಹಳೆ-2015 ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರುವಂತಾಗಲಿ ಎಂದು ದೈವೀಸಂಭೂತರಾದ ಗುರುಗಳ ಪಾದಾರವಿಂದಗಳಿಗೆ ನಮಿಸಿ, ಶ್ರೀ ಎಸ್. ಕೆ. ನಾಗಕುಮಾರ್ ಇವರಿಂದ ರಚಿತಗೊಂಡಿರುವ 'ಪ್ರಕೃತಿ' ಎಂಬ ಶೀರ್ಷಿಕೆಯ ಕವನವನ್ನು ಪ್ರಕಟಿಸುತ್ತಾ, ಕಹಳೆಯ ಐದನೇ ಆವೃತ್ತಿಯನ್ನು ಸಮಸ್ತ ಕನ್ನಡಿಗರ ಪರವಾಗಿ ಮಾತೃಸ್ವರೂಪಿಯಾದ ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.

ಪ್ರಕೃತಿ

ಬರೆದುಕೊ ನನ್ನ ಮೇಲೆ ಸಾವಿರಾರು ಕವನ ಕಾವ್ಯಗಳನ್ನ
ಕಡಿದು ನಾಶ ಮಾಡುತ್ತಿರುವ ಕಟುಕರನ್ನು ತಡೆಯಲಾರದು
ಈ ನಿನ್ನ ಬರಹ!

ಬರಿದು ಬರಡಾಯಿತು ಈ ನನ್ನ ಸಿರಿವಂತಿಕೆ - ಮರ ಗಿಡ ಪರ್ವತಗಳು
ಬರೆದ ಈ ನಿನ್ನ ಕಥೆ, ಕವನ, ಕಾವ್ಯಗಳಾದರೂ ಬಣ್ಣಿಸಲ್ಲಿ ನನ್ನ ವೈಭವವನ್ನು
ಮುಂದಿನ ಪೀಳಿಗೆಗೆ.

ನನ್ನ ಮುದ್ದಿನ ಪಶು ಪಕ್ಷಿಗಳ ಧ್ವನಿಯು ಈ ನಿನ್ನ ಕಥೆ, ಕವನ, ಕಾವ್ಯಗಳ ಸಾಲಿನಲ್ಲಿ
ಚಿಲಿಪಿಲಿ ಎಂದು, ಅವುಗಳ ಪ್ರಾಣ ಮನುಜರ ಪಿಸ್ತೂಲು, ಬಾಣಗಳ
ಗುರಿಗೆ ಬಲಿ.

ನನ್ನ ಸೌಂದರ್ಯದ ಸೊಬಗು ಛಾಯಾ ಗ್ರಹಣದಲ್ಲಿ ಸೆರೆಯಾಗಿ, ಮರೆಯಾಗದೆ ನಿಂತಿದೆ
ಸತ್ತ ಮನುಜರ ನೆನಪಿನ ಗೋರಿಯಂತೆ.

ಕೇಳು ಮನುಜ!
ನನನ್ನು ನಾಶ ಮಾಡಿ ಕಟ್ಟುತ್ತಿರುವುದು ಈ ನಿಮ್ಮ ಸುಖದ ಮಹಲುಗಳನಲ್ಲ,
ನನ್ನ ಮೇಲೆ
ನಿಮ್ಮ ಸಮಾಧಿಯನ್ನ..

ಲೇಖಕರ ಕಿರುಪರಿಚಯ
ಶ್ರೀ ಎಸ್. ಕೆ. ನಾಗಕುಮಾರ್

ಹವ್ಯಾಸಿ ಎಲೆಕ್ಟ್ರಾನಿಕ್ ತಂತ್ರಜ್ಞರಾಗಿರುವ ಇವರು ಮೂಲತಃ ಬೆಂಗಳೂರು ಸಮೀಪವಿರುವ ಹೆಸರಘಟ್ಟದವರು. ಬಿಡುವಿನ ಸಮಯವನ್ನು ಕವನಗಳ ರಚನೆಗಾಗಿ ಮೀಸಲಿಡುವ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಸಂಗೋಪನೆ ಇಲಾಖೆಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ