ಗುರುವಾರ, ನವೆಂಬರ್ 26, 2015

ಜೀವನ ಪ್ರೀತಿ

ಈ ನಮ್ಮ ಕಾಲೇಜಿನಲ್ಲಿ ಅನುಭವಗಳಿಗೆ ಬರವೇ ಇಲ್ಲಾ... ಎಷ್ಟು ಕಲೀಲಿಕ್ಕೆ ನಮ್ಕೈಲಿ ಆಗುತ್ತೋ ಅಷ್ಟನ್ನು ಕಲೀಬಹುದು. ಅಂದರೆ, ಬರೀ ವಿಷಯಾಧಾರಿತ ಮೌಲ್ಯಗಳೇ ಅಲ್ಲ; ಅದಕ್ಕೂ ಮಿಗಿಲಾಗಿ (ಪಿಲ್ಮಿ ರೀತೀಲಿ ಹೇಳೋದಾದ್ರೆ 'ಅದಕ್ಕೂ ಮ್ಯಾಲೆ') ವಿವಿಧ ರೀತಿಯ ಅನುಭವ, ಜೀವನ ಪ್ರೀತಿ, ಜೀವನ ಕ್ರಮ, ಸ್ತರಗಳನ್ನ ಕಾಣಬಹುದು.

ಕಾಲೇಜಿನ ಪಠ್ಯವನ್ನ ಬೋಧಿಸೋ ಕಟ್ಟಡಗಳನ್ನು ಬಿಟ್ಟರೆ ಆವರಣದಲ್ಲಿ ಎಡಕ್ಕೆ ನಮ್ಗಳ ಹಾಸ್ಟೆಲ್. ಭೂತ ಬಂಗಲೆಗಳ್ಹಾಗೆ ಸಾವಿರಾರು ವಿದ್ಯಾರ್ಥಿಗಳನ್ನ ಹೊಂದಿರೋ ಗುಹೆಗಳು. ಪ್ರತಿಯೊಂದು ಬ್ಲಾಕ್ನಲ್ಲೂ ಕೊನೆಯ ತುದಿಗೆ ಸ್ನಾನದ ಕೋಣೆಗಳು, ವಾಷ್ರೂಂಗಳು. ಅಲ್ಲಲ್ಲಿ ಕಟ್ಟಡಗಳ ಸ್ತಂಭಗಳಿಗೆ ಇಟ್ಟಿರೋ ನೀಳ್ಗನ್ನಡಿಗಳು ಹುಡುಗರ ಅಂಗೋಪಾಂಗಗಳ ಕಾಳಜಿಗೋ, ಕೇಶವಿನ್ಯಾಸಕ್ಕೋ ಮತ್ತೊಂದಕ್ಕೋ ತುಂಬಾ ಉಪಕಾರಿ.

ಹಾಂ... ಈ ನಡುವೆ ಆ ಆವರಣದಲ್ಲಿ ವಾತಾವರಣದ ಮುನ್ನುಡಿಗೆ ಬಾರದೇ ಹಿನ್ನುಡಿಯಾಗಿಯೇ ಇದ್ದು, ಆ ಮಗ್ಗಲುಗಳಲ್ಲೇ ಹಿಂದೆ ಸರಿದು ಕೊನೆಗೊಂದು ದಿನ ಹೇಳಹೆಸರಿಲ್ಲದವರಾಗಿ ನಶಿಸಿಹೋಗುವ ಈ ಮಂದಿ ನಮ್ಮ ಕಾಲ ಚಪ್ಪಲಿ, ಬೂಟುಗಳ ಧೂಳನ್ನು ನಾಜೂಕಾಗಿ ಗುಡಿಸುತ್ತಾ, ಶೌಚಾಲಯವನ್ನ ಶುಭ್ರವಾಗಿ ತೊಳೆಯುವವರು. ಅವರು ತಮ್ಮ ಶೋಚನೀಯ ಸ್ಥಿತಿಯನ್ನು ಎಂದಿಗೂ ತೆರೆಗೆ ತರದ ಜನ. ತಂದರಾದರೂ ಏನಾದರೂ ಬದಲಾದೀತೆ? ಬದಲು ಮಾಡುವವರು ಯಾರಾದರೂ ಬರುವರೇ? ಇಲ್ಲ.

ಶೌಚಾಲಯವನ್ನ ಶುಭ್ರ ಮಾಡಲು ಸದಾ ಒಬ್ಬ ಮುದುಕ ಬರುತ್ತಿದ್ದ. ಸುಮಾರು 65ರ ಮೇಲಿನ ವಯಸ್ಸು. ಬಂದು ತನ್ನ ಪಾಡಿಗೆ ತಾನು ಕೆಲಸ ಮುಗಿಸಿ ಹಿಂದಿರುಗುತ್ತಿದ್ದ. ನಾವೇನಾದರೂ ಮುಗಳ್ನಕ್ಕರೆ ಒಂದು ನಗೆ ಬಿಸಾಕಿ ಹೋಗುತ್ತಿದ್ದ. ಹೀಗೆ ನಕ್ಕಾಗ ಕೆಲವು ಸಲ ನಮ್ಮ ರೂಮಿಗೂ ಬಂದು 'ಈ ದಿನ ನಾ ಬಂದಿದ್ದೆ ಅಂತ ಬರೆದು ರುಜು ಮಾಡಿ' ಎನ್ನುತ್ತಿದ್ದ.

ಹೀಗೆಯೇ ಒಂದು ದಿನ "ಅಜ್ಜಾ, ನಿಮ್ಮದು ಯಾವೂರು?" ಎಂದೆ.
"ನಮ್ಮದು ತುಂಬಾ ದೂರದ ಊರು.. ಅಲ್ಲಿಂದ ಬಂದಿದೀನಿ. ಮೂಲತಃ ಆಂಧ್ರ. ಈ ಕಡೆ ಬಂದು ಸುಮಾರು 25-30 ವರ್ಷ ಆಯ್ತು".. ನಿರುತ್ಸಾಹದಿಂದ ಉತ್ತರಿಸಿದ.
"ಅಜ್ಜಾ, ಮನೇಲಿದ್ಬಿಡ್ರೀ. ಯಾಕೆ ಈ ವಯಸ್ಸಿನಲ್ಲೂ ಸುಮ್ನೆ ಇಷ್ಟೊಂದು ತ್ರಾಸ ತಗೋತಿರಲ್ಲಾ? ಈ ನಿತ್ರಾಣ ವಯಸ್ಸಲ್ಲೂ...".. ಅನುಕಂಪದಿಂದ ನುಡಿದೆ.
"ಮಗಾ, ನಿಮ್ಮಪ್ಪ ಅಮ್ಮನನ್ನ ಚೆನ್ನಾಗಿ ನೋಡಿಕೋ" ಅಂತಂದು ಕ್ರೂರ ಮನಸ್ಸಿನ ತನ್ನ ಮಗನಂತೆ ಆಗಬೇಡ ಅಂತ ಹೇಳಿ ಹೊರನಡೆದ. ಮ್ಲಾನತೆಯ ಮೌನ ಆವರಿಸಿತು.

ಅದೇ ದಿನದ ರಾತ್ರಿ ಎಂದಿನಂತೆ ಬಂದ ಅಡುಗೆಮನೆ ಕೆಲಸದಾಳು ತನ್ನ ಹಾಸಿಗೆ ಕಾಣಿಸದಿದ್ದದ್ದನ್ನ ಹುಡುಕುತ್ತಾ ಇರುವುದನ್ನು ಕಂಡು ನಾನು, ನನ್ ದೋಸ್ತಿ ಭರತ್ "ಯಾಕೆ? ಏನಾಯ್ತು?" ಅಂದಿದಕ್ಕೆ, "ಆ ನಾಯಿ ನನ್ನ ರಗ್ಗನ್ನ ಹೊಯ್ದಿದೆ.. ಎಲ್ಲಿ ಅಂತ ಹುಡುಕುತ್ತಾ ಇದೀನಿ" ಅಂದ. ಈತನದೂ ದಿನಾಲೂ ಹೀಗೆಯೇ ಮನೆಗೆ ಹೋಗದ ಕಾರಣ ಮಾತ್ರ ಗೊತ್ತಿಲ್ಲದ್ದು.

ಇನ್ನೊಬ್ಬ ಅಜ್ಜಿ.. ಅವಳಿಗೂ ಸುಮಾರು 70ರ ಆಸುಪಾಸು. ಇಲ್ಲಿನ ಕೆಲ ಹುಡುಗರ ಬಟ್ಟೆ ಒಗೆದುಕೊಡುವುದು, ಮೆಸ್ಸಿನ ಕೆಲಸ. ಅವಳಿಗೂ ಒಬ್ಬ ಮಗನಿದ್ದಾನೆ. ಆದರೇ??

ಹೀಗೆ ಸುಮಾರು ಸಂಖ್ಯೆಯ ಕೆಲಸಿಗರು.. ಹುಡುಗಿಯರ ಹಾಸ್ಟೆಲ್ಲು, ಪಿ. ಜಿ. ಗಳು, ಡಿಪ್ಲೊಮಾ, ಡಿಪಾರ್ಟ್ಮೆಂಟ್ಗಳಲ್ಲಿ ಹೀಗೆ ಎಲ್ಲರನ್ನೂ ಎಣಿಸಿದರೆ ತುಂಬಾ ಲೆಕ್ಕಾಚಾರ. ಇನ್ನು ರಾಜ್ಯ, ದೇಶದ ಕಾಲೇಜುಗಳಲ್ಲಿ ಎಷ್ಟಿರಬಹುದು? ತುಂಬಾ ಜನ..
ಚಿತ್ರ ಕೃಪೆ: ಗೂಗಲ್
ಯಾರದೋ ಎಂಜಲು ತಟ್ಟೆಗಳನ್ನ, ಕಸ, ಶೌಚ ತೊಳೆಯುವುದು ಇತ್ಯಾದಿ ಕೆಲಸ ಮಾಡುವ ಎಲ್ಲ ವರ್ಗಗಳ ಜನರೂ ನಮಗಾಗಿ ದುಡಿಯುತ್ತಿರುವವರು. ಇವರೇನು ಸುಮ್ನೆ ಮಾಡ್ತಾರೇನು? ದುಡ್ಡು ಕಟ್ಟಲ್ವೇನು? ಎಂಬ ಉಡಾಫೆ ಮಾತುಗಳು ಬೇಡ. ಅಂತಹವರ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕ್ಕೊಳೋಣ. ನಾವು ಹೇಳುವ ಒಂದು ಧನ್ಯವಾದಿಂದ ಅವರ ಆ ಕ್ಷಣದ ನಗು, ಸಂತೋಷ ಅನಾವರಣಗೊಳ್ಳುವುದು ಎಂದರೆ ಅತಿಶಯೋಕ್ತಿಯೇನಲ್ಲ. ನನ್ನ ಗೆಳತಿ ಪೂಜ, "ಹೌದು ರಾಮ್. ಇವರೆಲ್ಲರೂ ನಮ್ಮ ಸಮಾಜದ ಮುಖ್ಯ ಭಾಗಗಳು. ಇವರೆಲ್ಲಾ ತಮ್ಮ ಹೊಟ್ಟೇಪಾಡಿಗಾಗಿ ಬೇರೆಯವರ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ. ಇವರೆಲ್ಲಾ ತಮ್ಮ ನೋವು-ನಲಿವು, ಹತಾಷೆಗಳನ್ನ ತಾವೇ ನುಂಗಿ ಕೆಲಸ ಮಾಡುವರು" ಎಂದಳು ಪೂಜ್ಯಭಾವದಿಂದ.

ಹೌದು, ಮಾನವೀಯ ಗುಣ, ಜೀವನ ಪ್ರೀತಿ ಇಲ್ಲದೆ ಹೋದರೆ ಮಾನವ ಕುಲಕ್ಕೆ ಲಾಯಕ್ಕಾಗದವರಾದೇವೂ..!!

ಲೇಖಕರ ಕಿರುಪರಿಚಯ
ಶ್ರೀ ರಾಮಾಂಜಿನಯ್ಯ, ವಿ.

ಕೋಲಾರ ಮೂಲದವರಾದ ಇವರು, ಪ್ರಸ್ತುತ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಪದವಿ ವಿದ್ಯಾರ್ಥಿ. ಪುಸ್ತಕ ಓದುವುದು, ಕಥೆ- ಕವನ ಬರೆಯುವುದು, ಪಕ್ಷಿಗಳ ವೀಕ್ಷಣೆ, ಸಂಚಾರ, ಚಿತ್ರ ಬಿಡಿಸುವುದು ಹಾಗೂ ಎಲ್ಲ ತರದ ಜನರನ್ನ ಪ್ರೀತಿಸುವುದು ಇವರ ಹವ್ಯಾಸ.

Blog  |  Facebook  |  Twitter

1 ಕಾಮೆಂಟ್‌: