ಶನಿವಾರ, ನವೆಂಬರ್ 21, 2015

ನಿನ್ನಾಗಿಸು

ತೊದಲ ಅರಿವಿನ ಕೊದಲ ಪದಗಳಲಿ
ತಿಳಿಸೆ ಚಡಪಡಿಸಿಹೆ ನನ್ನಾವರಿಸಿದ ವಾತ್ಸಲ್ಯದ
ಸವಿಯ ಮಾಧುರ್ಯವಾ!... ಕರವೆಳೆಯುತ
ಮಗುವಿನಂತೆ ನಿನ್ನೇ ಬೆರಳೆತ್ತಿ ತೋರಿಸಿಹೆ-
ಪಡೆದುಕೊಳಲಿ ಎಲ್ಲರೂ ನಿನ್ನ
'ಅನಂತತೆ'-ಗಳೊಳಗಿನ 'ಪರಿಪೂರ್ಣತೆ'ಯನೆಂದು!

ಎಂದಿಲ್ಲ!?... ಮುಗಿಯೋಲ್ಲ!... ನಿನ್ನರಿಯಲು
ತರ-ತರಹದ ದೊಂಬರು!... ಹೇಗೆಲ್ಲಾ ಬಣ್ಣಿಸಿದರೂ
ಬಿಂಬಿಸಲಾಗದ ವಿಸ್ಮಯ ರೂಪ!... ಇದಿರಿದ್ದರೂ ಕಾಣದ...
ಉಸಿರಾಗಿದ್ದರೂ ಅರಿಯದ... ನಿನ್ನ ಅನುಭವ-ವಾಗುವುದು
ನಿನ್ನ ಕಟಾಕ್ಷವಿದ್ದರೆ ಮಾತ್ರ!!

'ಅಲ್ಪ'ಯತ್ನಕೆ ನೀಡಿ ಬೇಗ ಬೇಡುವ
'ವರ'ವ... ಅಂದುಕೊಳುವಂತಾಯ್ತು 'ನಾನು'
ಎಲ್ಲವೂ 'ನನ್ನಿಂದ'!... 'ಅರಿ'ಯಿದಕೆ
'ಒರೆ'ಹಚ್ಚಿ 'ಚಿತ್ತ'ದ ಬಿಗಿಹಿಡಿದು
ಜನ್ಮಗಳ 'ಪಾಪ'ಕಳೆಯೆ 'ಮಹದೇವ'
ನಿನಕಂಡೆ ನಾ... ನನ್ನದೇ ಮೊಗದ
'ಸುಪ್ರಸನ್ನತೆಯಲಿ'!!

'ಸರಳವು'!... 'ಜಟಿಲವೋ'!?...
ನೀನೊಂದು 'ನಾನು'...! ಇನ್ನೂ
ಏಕಿತ್ತೆ ಈ ಕೃತಕ ವ್ಯಾಮೋಹದ ಪಾಶ!?
... ನೀರರಗದ ಜೀವಗಳು; ತಾಳಲಾರದ
ಬರೆಯೇಕೆ... ಬೇರ್ಪಡಿಸುವೆ ಇನ್ನೆಷ್ಟು...
... ಆಗಿರಲು ನಾನು ನಿನ್ನದೇ ಕರುಳ ಒಂದು ಭಾಗ!

ಜುಗುಳು ಗುಮ್ಮಗಳಿಂದ ಬಿಡಿಸಿ...
ಸದ್ಗುಣಗಳ ಸುಧೆಯ ಒಲವಾಗಿಸಿ...
ಬ್ರಹ್ಮಜ್ಞಾನದ ಸತ್ಯಜ್ಯೋತಿಯ ದಿವ್ಯಬೆಳಗಿನಂತೆ... ನಿನ್ನೊಳಗೆ
ನನ್ನ ಲೀನವಾಗಿಸಿಕೋ!!

ಲೇಖಕರ ಕಿರುಪರಿಚಯ
ಶ್ರೀಮತಿ ಶೈಲಜ, ಜೆ. ಸಿ.

ಮೂಲತಃ ಬೆಂಗಳೂರಿನವರಾದ ಇವರು ಪ್ರಸ್ತುತ ಚೆನ್ನೈ ನಲ್ಲಿರುವ ಭಾರತ ಹವಾಮಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಕಥೆ ಹಾಗೂ ಕವಿತೆ ಬರೆಯುವುದು ಇವರ ನೆಚ್ಚಿನ ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ