ಗುರುವಾರ, ನವೆಂಬರ್ 19, 2015

ಹಾಳೆಯ ಹೂವು

ಬರೆಯಲೇ ಬೇಕೆಂದು ಹಠಕ್ಕೆ ಬಿದ್ದಾಗ
ಬರೆವುದೆಲ್ಲವೂ ಸಪ್ಪೆ
ತಾನಾಗೇ ಬರೆಯಿಸಿಕೊಳ್ಳುವ ಒಂದು ಪದವಾದರೂ
ಕಾವ್ಯ ಕುಪ್ಪೆ

ಬರೆವ ನಾನೊಬ್ಬನೇ ಬಲ್ಲವನೆಂದನಿಸಿದೊಡೆ
ಬರೆಯದಿರುವುದೇ ಒಳಿತು
ಬರೆವುದೇ ಆದರೆ ಬರಿದಾಗಬೇಕು ನಾ
ಬರಹದಲಿ ಮಿಂದು ಬೆರೆತು

ಅರೆ-ಬರೆ ಬರೆವುದು, ಭಾರಿ ಏನಲ್ಲ ಇದು
ಬರಿ ಮೌನದೊಂದು ಛಾಯೆ
ಬರೆದಷ್ಟೂ ಬರಿದಾಗದ ಭಾಷೆ ನನ್ನದು
ಏನಿದರ ಮರ್ಮ ಮಾಯೆ?!!

ಬರವಿಲ್ಲ, ನೆರೆಯಿಲ್ಲ ಬಂದಷ್ಟೂ ಸಿರಿಯೇ
ಇರದಲ್ಲಿಯೂ ಸುಸ್ಥಿತಿ
ಎಲ್ಲ ಮುಗಿದಿರಲೊಂದು ಮತ್ತೆ ಮೊದಲಾಗಲು
ಹಿಡಿದಂತೆ ತಿಳಿ ಆರತಿ

ಬನ್ನಣೆಗೆ ಬಣ್ಣ, ಬವಣೆಗೂ ಬಾಣ
ಬಿನ್ನವಿದು ಭಾವಗಳಿಗೆ
ಹೆಸರಿಡಲು ಮತ್ತಷ್ಟು ಮೆರುಗು ಮೂಡುವುದು
ಹಾಳೆಯ ಹೂವುಗಳಿಗೆ!!
                                                                              -- ರತ್ನಸುತ

ಲೇಖಕರ ಕಿರುಪರಿಚಯ
ಶ್ರೀ ಭರತ್‍ ಎಂ. ವೆಂಕಟಸ್ವಾಮಿ

ವೃತ್ತಿಯಲ್ಲಿ ಸಾಫ್ಟ್ ವೇರ್‍ ಇಂಜಿನಿಯರ್‍ ಆಗಿರುವ ಇವರು ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಸಮೀಪದ ಮಂಚಪ್ಪನಹಳ್ಳಿ ಇವರ ಹುಟ್ಟೂರು.

Blog  |  Facebook  |  Twitter

2 ಕಾಮೆಂಟ್‌ಗಳು: