ಬುಧವಾರ, ನವೆಂಬರ್ 18, 2015

ರೈತರ ಸ್ವಾವಲಂಬನೆಗೆ ಶೂನ್ಯ ಬಂಡವಾಳ ಕೃಷಿ

ನೈದಿಲೆಯು ಸೂರ್ಯನ ಬಿಸಿಲಿನೆಡೆಗೆ ಬಾಗುವಂತೆ, ಒಕ್ಕಲುತನದ ಕಸುಬು ಇಂದು ನೈಸರ್ಗಿಕತೆಯ ಮಹತ್ವವನ್ನರಿತು ಶೂನ್ಯ ಬಂಡವಾಳದ ಕೃಷಿಕ ಜೀವನವನ್ನು ಆಯ್ಕೆಮಾಡಿಕೊಂಡರೆ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗೆ ಪರಿಹಾರ ಸಿಗುತ್ತದೆಯೇ ವಿನಃ, ಸ್ವಾವಲಂಬನೆಯ ಜೀವನ ಮರೆತು ಪರಾವಲಂಬನೆಯ ಜೀವನವನ್ನು ಆಯ್ಕೆಮಾಡಿಕೊಂಡಲ್ಲಿ ಈ ದಿನಗಳ ರೈತನ ಸಾವು ಹೀಗೆಯೇ ಮುಂದುವರೆಯುತ್ತದೆ. ಕಾರಣ, ಒಂದು ಗಾದೆ ಮಾತಿನಂತೆ "ಎತ್ತಾಕಿದ ನಾಯಿ ಮೊಲವನ್ನು ಹಿಡಿಯುತ್ತದೆಯೇ" ಎನ್ನುವಂತೆ ಕುಲಕಸುಬಿನ ಸಾಧಕ-ಬಾಧಕಗಳ ಬಗ್ಗೆ ಬೇರೆಯವರ ಮೇಲೆ ಅವಲಂಬಿತವಾದೊಡೆ ಈ ಸಾವು ನ್ಯಾಯವೇ ಆಗಿರುತ್ತದೇನೋ..?

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾದ ಸ್ವಾವಲಂಬಿ ಗ್ರಾಮ ಸ್ವರಾಜ್ಯದ ಕನಸಿನ ಅರಿವು ಮಾಡಿಕೊಂಡು ಜೀವನವನ್ನು ಅಳವಡಿಸಿಕೊಂಡರೆ ಬದುಕು ಭವ್ಯತೆಯೆಡೆಗೆ ಸಾಗುತ್ತದೆ. ಇಂದು ಪ್ರಚಲಿತವಾಗುತ್ತಿರುವ ಶೂನ್ಯ ಬಂಡವಾಳದ ಕೃಷಿಯ ಅಳವಡಿಕೆ, ಜೀವನ ಸಾರ್ಥಕತೆಯತ್ತ ನಮ್ಮನ್ನು ಕೊಂಡೊಯ್ಯುವಲ್ಲಿ ಯಾವುದೇ ಹುಸಿಯಿಲ್ಲ.

ಚಿತ್ರ ಕೃಪೆ: ಗೂಗಲ್
ಶೂನ್ಯ ಬಂಡವಾಳದ ಕೃಷಿಯೆಂದರೆ ಏನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಇಂದು ನಡೆಯುತ್ತಿರುವ ರಾಸಾಯನಿಕ ಕೃಷಿಯ ಅನಾಚಾರಗಳ ಅನಾವರಣ ಒಂದೊಂದೇ ತೆರೆದುಕೊಳ್ಳುತ್ತಾ ಸಾಗುತ್ತದೆ. ಶೂನ್ಯ ಬಂಡವಾಳದ ಕೃಷಿಗೆ ಮುಖ್ಯವಾಗಿ ನಮಗೆ ಬೇಕಾಗಿರುವುದು ಗೋಮಾತೆ. ಅಂದರೆ ನಾಟಿ ಹಸು. ಈ ವಿಷಯದಲ್ಲಿ ಜನಜನಿತವಾಗಿರುವ ಹಾಗೆ 36 ಕೋಟಿ ದೇವರುಗಳು ನೆಲೆಸಿದ್ದಾರೆ ಎನ್ನುತ್ತದೆ ಹಿಂದು ಧಾರ್ಮಿಕತೆ. ಇದರ ಅರ್ಥ ನನಗನ್ನಿಸುವ ಹಾಗೆ ಅದರ ಮಹತ್ವವನ್ನು ಅರಿಯುವ ಕಡೆ ಗಮನ ಹರಿಸಬೇಕಿದೆ. ಒಂದು ಗ್ರಾಂ ದೇಶೀ ಗೋಮಾತೆಯ ಸಗಣಿಯಲ್ಲಿ 300 ಕೋಟಿ ಉಪಯುಕ್ತ ವಿಘಟನಾಕಾರ್ಯ ಕೈಗೊಳ್ಳುವ ಸೂಕ್ಷ್ಮಜೀವಿಗಳಿವೆ. ಈ ಸೂಕ್ಷ್ಮಜೀವಿಗಳು ಭೂಮಿಯ ಮೇಲೆ ಬೀಳುವ ಕೌಷ್ಠ ಪದಾರ್ಥಗಳ ವಿಘಟನೆ ಮಾಡುವ ಮೂಲಕ ಮುಕ್ತವಾಗಿ ಬಿಡುಗಡೆ ಹೊಂದುವ ಅನ್ನ ಘಟಕಗಳನ್ನು ಆಳದವರೆಗೆ ತಲುಪಿಸುತ್ತವೆ. ಇದರ ಅರ್ಥ ಭೂಮಿಯ ಮೇಲೆ ಬೀಳುವ ಕಸ-ಕಡ್ಡಿಗಳನ್ನು ಗೊಬ್ಬರವಾಗಿ ಪರಿವರ್ತಿಸಲು ಗೋಮಾತೆಯ ಸಗಣಿ ಅವಶ್ಯಕ.

ನಾವು ಮಾಡುವ ಬೇಸಾಯ ಬೆಳೆಗಳಿಗೆ ಮೊದಲು ಭೂಮಿ ಉಳಿಮೆ ಮಾಡಿ ಹದ ಮಾಡಿಕೊಂಡ ಭೂಮಿಗೆ ಕೊಟ್ಟಿಗೆ ಗೊಬ್ಬರವನ್ನು ಸಾಧಾರಣವಾಗಿ ನೀಡಿ ನಂತರ ಬೆಳೆಗಳ ಬಿತ್ತನೆ ಮಾಡಿದ ನಂತರ ನಾವು ನಾಟಿ ಹಸುವಿನ ಸಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಮತ್ತು ದಿಬ್ಬದ ಮಣ್ಣನ್ನು ನೀರಿನೊಂದಿಗೆ ಮಿಶ್ರಣ ಮಾಡಿ, ಈ ದ್ರವವನ್ನು ಮೂರು ದಿನದ ನಂತರ ಐದು ದಿನಗಳ ಒಳಗೆ 15 ದಿನಗಳಿಗೊಮ್ಮೆ ಭೂಮಿ ತೇವಾಂಶ ಹೊಂದಿರುವಾಗ ಹಾಗೂ ಸೂರ್ಯನ ಕಿರಣಗಳ ಪ್ರಖರತೆ ಕಡಿಮೆ ಇರುವಾಗ ಬಳಕೆ ಮಾಡುತ್ತಾ ಬಂದರೆ ನಮ್ಮ ಬೇಸಾಯಗಳಿಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳ ಬಳಕೆ ಅವಶ್ಯವಿರುವುದಿಲ್ಲ. ಈ ರೀತಿ ಮಾಡಿದಾಗ ನಮ್ಮ ಬೇಸಾಯ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚುತ್ತಾ ಬಂದು ಭೂಮಿ ಫಲವತ್ತತೆಯತ್ತ ಸಾಗುತ್ತದೆ. ಈ ರೀತಿ ಸಾಗಿದಾಗ ನೀರಿನ ಅವಶ್ಯಕತೆಯೂ ಸಹ ಕಡಿಮೆಯಾಗುತ್ತದೆ.

ನಿಜವಾದ ರೈತನಾದೊಡೆ ಒಂದು ಸತ್ಯದ ಅರಿವಾಗಿರಲೇ ಬೇಕು - ಅದೆಂದರೆ, ಆಕಳು ಸಾಯಂಕಾಲ ಹೊಲಗಳಿಂದ ಮನೆಗೆ ಬರುವಾಗ ಭೂತಾಯಿಯ ಮೇಲೆ ಸಗಣಿ ಹಾಕಿದ ಸಂದರ್ಭದಲ್ಲಿ ಬೆಳಿಗ್ಗೆ ಎದ್ದು ಆ ಸಗಣಿಯನ್ನು ಗಮನಿಸಿದಾಗ ಸಗಣಿಯ ಒಳಗೆಲ್ಲಾ ಅನೇಕ ರೀತಿಯ ಹುಳು-ಉಪ್ಪಟೆಗಳು ಇರುತ್ತವೆ. ಈ ಹುಳು-ಉಪ್ಪಟೆಗಳೆಲ್ಲಾ ತಿಂದು ಉಳಿದ ಸಗಣಿ ಗೊತ್ತಿಲ್ಲದ ಹಾಗೆ ಭೂತಾಯಿಯ ಒಡಲನ್ನು ಸೇರಿ ಭೂತಾಯಿಯ ಫಲವತ್ತತೆಗೆ ಕಾರಣವಾಗುತ್ತದೆ. ರಾಸಾಯನಿಕ ಕೃಷಿಗೆ ಬಳಸುವ ಅಮೋನಿಯಾ, ನೈಟ್ರೇಟ್, ಫಾಸ್ಫರಸ್‌ಗಳ ಒಂದಿಷ್ಟು ಪುಡಿಯನ್ನು ಭೂತಾಯಿಯ ಮೇಲ್ಭಾಗದಲ್ಲಿ ಸಗಣಿಯಂತೆ ಹಾಕಿ ಪರೀಕ್ಷಿಸಿದಾಗ ಅಲ್ಲಿ ಯಾವುದೇ ಹುಳು-ಉಪ್ಪಟೆಗಳು ಅದರ ಕಡೆ ಮುಖ ಮಾಡಿರುವುದನ್ನು ನೋಡಲಾಗದು. ಹಾಗೆಯೇ, ಅದರ ಪ್ರಭಾವಕ್ಕೆ ಅಪ್ಪಿ ತಪ್ಪಿ ಸಿಕ್ಕ ಹುಳುಗಳು ತಮ್ಮ ಪ್ರಾಣ ತ್ಯಾಗ ಮಾಡಿರುತ್ತವೆ. ಈ ಘಟನೆಯ ಅರಿವು ನಮಗಾದಾಗ ನಾವು ನ್ಯಾಯವಾಗಿ ಆಯ್ಕೆಮಾಡಿಕೊಳ್ಳಬೇಕಾದ್ದು ನೈಸರ್ಗಿಕ ಕೃಷಿಯೇ? ಅಥವಾ ರಾಸಾಯನಿಕ ಕೃಷಿಯೇ? ಎಂಬ ನಿಜವಾದ ಸತ್ಯದ ಅರಿವಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ನಾವು ನಿಧಾನವಾಗಿಯಾದರೂ ಸರಿಯೇ ನೈಸರ್ಗಿಕವಾಗಿ ನಮ್ಮ ಭೂಮಾತೆಯನ್ನು ಬೇಸಾಯಕ್ಕೆ ಅಳವಡಿಸುತ್ತಾ ಸಾಗಬೇಕಾಗುತ್ತದೆ. ಹೀಗೆ ಸಾಗಬೇಕಾದಾಗ ನಮಗೆ ಮೊದಲು ದೇಶೀ ತಳಿಯ ಹಸುಗಳು ತುಂಬಾ ಅವಶ್ಯಕ. ಕಾರಣ, ಇವು ನಮ್ಮ ಪರಿಸರಕ್ಕೆ ಹೊಂದಿಕೊಂಡು ದಷ್ಟಪುಷ್ಟವಾಗಿ, ಆರೋಗ್ಯದಾಯಕವಾಗಿರುತ್ತವೆ. ನಮ್ಮ ಬೇಸಾಯಕ್ಕೆ ಪೂರಕ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಟ್ರಾಕ್ಟರಿನಿಂದ ಉಳಿಮೆ ಹಾಗೂ ಇನ್ನಿತರೆ ಕಾರ್ಯಗಳಿಗೆ ಕೊಡಬೇಕಾದ ಹಣದ ಉಳಿತಾಯವೂ ಆಗುತ್ತದೆ. ನಂತರ ಇವು ಕೊಡುವ ಸಗಣಿ-ಗಂಜಲಗಳನ್ನು ಬೇಸಾಯಕ್ಕೆ ಗೊಬ್ಬರವಾಗಿ ಬಳಸಿದಾಗ ರಾಸಾಯನಿಕ ಗೊಬ್ಬರಕ್ಕೆ ಕೊಡುವ ಹಣ ಉಳಿತಾಯವಾಗುತ್ತದೆ. ಇದೇ ರೀತಿ ದೇಶೀ ತಳಿಯ ಬೆಳೆಗಳ ಬಿತ್ತನೆ ಬೀಜಗಳನ್ನು ಬಳಸಿದಾಗ ದೇಶೀ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ರೋಗ ನಿವಾರಕ, ಕೀಟ ನಿವಾರಕ, ರಾಸಾಯನಿಕ ಔಷಧಿಗಳ ಬಳಕೆ ಕಡಿಮೆ ಮಾಡಿದಂತಾಗುತ್ತದೆ. ಇದರಿಂದಲೂ ಹಣ ಉಳಿತಾಯವಾಗುವುದಲ್ಲದೇ ನಮ್ಮ ಭೂಮಾತೆಯನ್ನು ವಿಷ ಸಿಂಪಡಣೆಯಿಂದ ದೂರವಿಟ್ಟು ಭೂಮಾತೆಯನ್ನು ಬೇಸಾಯಕ್ಕೆ ಯೋಗ್ಯಳನ್ನಾಗಿ ಮುಂದುವರೆಸಿದಂತಾಗುತ್ತದೆ. ಈಗ ನಡೆಯುತ್ತಿರುವ ಹಾಗೆ ರಾಸಾಯನಿಕ ಕೃಷಿಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲು ಅಸಾಧ್ಯ ವಾತಾವರಣ ಸೃಷ್ಟಿಯಾಗಿ, ಆಹಾರ ಕೊರತೆ ಹೆಚ್ಚಾಗಿ ರೋಗ-ರುಜಿನಗಳು ಹೆಚ್ಚಾಗಿ ಮಾನವ ತನ್ನ ಸಾವಿನ ಗುಂಡಿಯನ್ನು ತಾನೇ ತೋಡಿಕೊಂಡಂತಾಗುತ್ತದೆ.

ಯಾವುದೇ ವೃತ್ತಿಯಾದರೂ ಇಂದು ಮುಖ್ಯವಾಗಿ ಬೇಕಾಗಿರುವುದು ವೃತ್ತಿ ನೈಪುಣ್ಯತೆ, ಶಿಸ್ತು ಹಾಗೂ ಸಮಗ್ರತೆಯ ಅಳವಡಿಕೆ. ಇವಿಲ್ಲವಾದರೆ ಸಾಧನೆ ಅಸಾಧ್ಯ. ಇಂದು ಕೃಷಿಯಲ್ಲಿ ಮಿಶ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಕೃಷಿಗೆ ಉಪ ಕಸುಬುಗಳು ಬಹಳ ಅವಶ್ಯಕ. ಕೃಷಿ ಹಾಗೂ ಕೃಷಿ ಸಂಬಂಧಿಸಿದ ಉಪ ಕಸುಬುಗಳು ಒಂದಕ್ಕೊಂದು ಪೂರಕವೆಂಬುದನ್ನು ನಾವು ಅರಿತಾಗ ಗುರಿ ತಲುಪುವುದು ಸುಲಭ. ಕೃಷಿಯ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಮತ್ತು ಮೇಕೆಗಳ ಸಾಕಾಣಿಕೆ - ಎಲ್ಲವೂ ಕೃಷಿ ಪೂರಕವಾಗಿವೆ. ಇವುಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ನಮ್ಮ ರೈತರ ಆರ್ಥಿಕ ಸ್ವಾವಲಂಬನೆ ಸಾಧ್ಯ.

ಲೇಖಕರ ಕಿರುಪರಿಚಯ
ಶ್ರೀ ಸಿ. ಎಂ. ಶಿವಣ್ಣ

ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನವರಾದ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಹಿರಿಯ ಪಶುವೈದ್ಯ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೂನ್ಯ ಬಂಡವಾಳ ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು, ರೈತರಿಗೆ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ