ಸೋಮವಾರ, ನವೆಂಬರ್ 16, 2015

ದೇಶೀಯ ಗೋತಳಿಗಳ ಸಂರಕ್ಷಣೆ

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ. ಮುಕ್ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋ ಮಾತೆಗೆ ತನ್ನ ಸಂಪರ್ಕಕ್ಕೆ ಬಂದದ್ದೆಲ್ಲವನ್ನೂ ಪಾವನಗೊಳಿಸುವ ಶಕ್ತಿ ಎನ್ನುತ್ತಾರೆ. ಪುಣ್ಯಕೋಟಿ, ಕಪಿಲೆ, ಸುರಭೀ, ನಂದಿನಿ, ಕಾಮಧೇನು, ಗೋಮಾತೆ ಎಂತಲೂ ಕರೆಯುವುದುಂಟು. ನಮ್ಮ ಧರ್ಮ, ಆಚಾರ, ವಿಚಾರ, ಆಚರಣೆ, ಪುರಾಣ, ಪುಣ್ಯಕಥೆಗಳಲ್ಲಿ ಗೋವು ಹಾಸುಹೊಕ್ಕಾಗಿದೆ. ಗೋಪೂಜೆ, ಗೋವ್ರತ, ಗೋದಾನ ಇತ್ಯಾದಿಗಳು ಸಹ ಕಂಡುಬರುತ್ತವೆ. ಋಗ್ವೇದದಲ್ಲಿ ಗೋವಿನ ಬಗ್ಗೆ ಹೀಗೆ ಹೇಳಿದೆ. 'ಮಾತಾ ರುದ್ರಾಣಾಂ ದು ಹಿತಾ ವಸುನಾಂ ಸ್ವಸಾದಿತ್ಯಾನಾಮಮೃತ್ಸಸ್ಯನಾಭಿ, ಪ್ರನುಮೋಚಂ ಚಕಿತುಷೇ ಜನಾಯ ಯಾಗಾಮನಾಗಾಮದಿತಿಂ ವವಿಷ್ಟ' ಅಂದರೆ ಗೋವು ರುದ್ರನ ತಾಯಿ, ವಸುಗಳ ಪುತ್ರಿ, ಅದಿತೇಯರ ಸೋದರಿ, ಕ್ಷೀರವೆಂಬ ಅಮೃತದ ನಿಧಿ, ಅವಳು ಅದಿತಿ, ಅವಳನ್ನು ಕತ್ತರಿಸಬಾರದು ಎಂಬರ್ಥ. ಇಲ್ಲಿ ಗೋವನ್ನು ತಾಯಿಯಾಗಿ, ಪುತ್ರಿಯಾಗಿ, ಸೊದರಿಯಾಗಿ, ಅಮೃತದ ತವನಿಧಿಯಾಗಿ ಗುರುತಿಸಲ್ಪಟ್ಟಿದೆ.

ದೇಶವನ್ನು ಆಳಿದ ರಾಜರು, ಸುಲ್ತಾನರು, ಪಾದ್ರಿಗಳು ಹಾಗೂ ವಿದೇಶಿಯರೂ ಕೂಡ ಗೋವಿಗೆ ಉನ್ನತ ಸ್ಥಾನ ನೀಡಿದ್ದರು. ಪುರಾತನ ಕಾಲದಲ್ಲಿ ಮನೆಯಲ್ಲಿ ಗೋವುಗಳಿರುವುದು ಪ್ರತಿಷ್ಠೆ ಹಾಗೂ ಶ್ರೀಮಂತಿಕೆಯ ಸಂಕೇತವಾಗಿತ್ತು. ಅಂತೆಯೇ ಗೋವುಗಳಿರುವ ಸಂಖ್ಯೆಯಿಂದ ಆತನನ್ನು ಬಿರುದು ನೀಡಿ ಗೌರವಿಸಲಾಗುತ್ತಿತ್ತು. ಹತ್ತು ಸಾವಿರ ಗೋವುಗಳನ್ನು ಹೊಂದಿದವನಿಗೆ 'ವೃಜ', ಐದು ಲಕ್ಷ ಇದ್ದರೆ ಉಪನಂದಿ, ಒಂಬತ್ತು ಲಕ್ಷ ಇದ್ದರೆ ನಂದಿ, 10 ಲಕ್ಷ ಇದ್ದರೆ ವೃಷಭಾನು, 50 ಲಕ್ಷ ಇದ್ದರೆ ವೃಷಭಾನುಜ ಹಾಗೂ ಒಂದು ಕೋಟಿ ಇದ್ದರೆ ಆತನನ್ನು 'ನಂದಿರಾಜ' ಎನ್ನುತ್ತಿದ್ದರು.

ವೈಜ್ಞಾನಿಕ ಹಿನ್ನೆಲೆಯಿಂದ ಗೋವುಗಳ ಇತಿಹಾಸವನ್ನು ಅವಲೋಕಿಸಿದಾಗ 20 ಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲಿದ್ದ ಯುರಾಕ್ಷ್ ಇಂದಿನ ದನಗಳ ಪೂರ್ವಜ ಎನ್ನುವುದು ಕೋಲಂಬಿಯಾ ದೇಶದ ಓಹ್ಲೋ ವಿಶ್ವವದ್ಯಾಲಯದಲ್ಲಿರುವ ದಾಖಲೆಗಳಿಂದ ದೃಡಪಟ್ಟಿದೆ. ಯರಾಕ್ಷ್ ಜಗತ್ತಿನ ಮೂರು ಭಾಗಗಳಲ್ಲಿ ಅಂದರೆ ಇಂಡಸ್ ಕಣಿವೆ, ಉರೇಶೀಯಾ ಹಾಗೂ ಉತ್ತರ ಆಪ್ರಿಕಾದಲ್ಲಿ ಕಾಣಿಸಿಕೊಂಡ ಬಗ್ಗೆ ದಾಖಲೆಗಳಿವೆ. ದೈತ್ಯ ಗಾತ್ರ, ಮುಂದೆ ಭಾಗಿದ ಚೂಪಾದ ಕೊಂಬು, 1700 ಕಿಲೋ ಗ್ರಾಂಗೂ ಅಧಿಕ ತೂಕವಿದ್ದ ಯರಾಕ್ಸ ಕಾಲಾಂತರದಲ್ಲಿ ವಿಕಸಿತಗೊಂಡು ಇಂದಿನ ಎರಡು ಬಗೆಯ ಪ್ರಾಣಿ ಬಾಸ್ ಇಂಡಿಕಸ್ ಹಾಗೂ ಬಾಸ್ ಟಾರಸ್ ಸಂಕುಲಕ್ಕೆ ಕಾರಣವಾಯಿತು.

ನಾವಿಂದು ಜಗತ್ತಿನ ದನಗಳನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತೇವೆ. ಬಾಸ್ ಇಂಡಿಕಸ್ ಅಥವಾ ಜೆಬು ಅಥವಾ ಭುಜ ಹೊಂದಿದ ದನಗಳು ಹಾಗೂ ಯುರೋಪಿನ ಬಾಸ್ ಟಾರಸ್ ಅಥವಾ ಭುಜ ಇರದ ಪ್ರಾಣಿಗಳು. ಉಷ್ಣವಲಯದ ದೇಶಗಳಲ್ಲಿ ಅಲ್ಲಿನ ವಾತಾವರಣದ ಉಷ್ಣವನ್ನು ಸಹಿಸಿಕೊಳ್ಳುವ ಹಾಗೂ ನೀರಿಲ್ಲದ ಸಂದರ್ಭಗಳಲ್ಲಿ ಭುಜದಲ್ಲಿ ಶೇಖರಿಸಿಟ್ಟುಕೊಂಡ ಕೊಬ್ಬು ಕರಗಿಸಿ ಹಸಿವು ನೀರಡಿಕೆಯನ್ನು ನೀಗಿಸಿಕೊಳ್ಳಲು ಹಾಗೂ ಸಡಿಲ ಚರ್ಮದ ಮೂಲಕ ಉಷ್ಣತೆಯನ್ನು ಸರಿದೂಗಿಸಿಕೊಳ್ಳಲು ಅನುಕೂಲವಾಗುವಂತ ದೇಹದಾಕೃತಿ ಹೊಂದಿದ ದನಗಳು ಜೆಬು ವರ್ಗಕ್ಕೆ ಸೇರುತ್ತವೆ. ಭುಜ ಹೊಂದಿರದ ಮೈಗೆ ಚರ್ಮ ಅಂಟಿಕೊಂಡಿರುವ ದನಗಳು ಶೀತವಲಯದ ದೇಶಗಳಲ್ಲಿ ಕಂಡುಬರುತ್ತವೆ. ಅವುಗಳೆಂದರೆ ಜರ್ಶಿ, ಹೆಚ್. ಎಫ್, ಬ್ರೌನ್‌ಸ್ವಿಸ್, ರೆಡ್‌ಡೇನ್ ಮುಂತಾದವು.

ಜಗತ್ತಿನ ಗೊಸಂಪತ್ತಿನಲ್ಲಿ ಶೇ.15 ರಷ್ಟು ಅಂದರೆ 20 ಕೋಟಿ ಗೋವುಗಳು ಭಾರತದಲ್ಲಿಯೇ ಇವೆ. ವಿಶಿಷ್ಟವಾದ 37 ತಳಿಯ ದನಗಳು, 13 ತಳಿಯ ಎಮ್ಮೆಗಳು, 23 ತಳಿಯ ಮೇಕೆ, 39 ಜಾತಿಯ ಕುರಿಗಳಿಂದ ನಮ್ಮ ದೇಶ ಸಮೃದ್ಧವಾಗಿದೆ. ಭಾರತೀಯ ಗೋವುಗಳನ್ನು ಹಾಲು, ಕೆಲಸ ಹಾಗೂ ದ್ವಿ-ಉದ್ದೇಶಿತ ಎಂದು ಗುರುತಿಸಲಾಗಿದೆ.

ಹಾಲಿನ ತಳಗಳು - ಕೆಂಪುಸಿಂದಿ, ಸಾಹಿವಾಲ್, ಗೀರ್, ಥಾರ್ಪಾರ್ಕರ್ ಹಾಗೂ ರಾಥಿ.

ಕೆಲಸದ ತಳಿಗಳು - ಕರ್ನಾಟಕದ ಅಮೃತಮಹಲ್, ಹಳ್ಳಿಕಾರ್, ಕಿಲ್ಲಾರಿ, ಕೃಷ್ಣವ್ಯಾಲಿ ಹಾಗೂ ಮಲ್ನಾಡ್‌ಗಿಡ್ಡ,  ತಮಿಳುನಾಡಿನ ಅಂಬ್ಲಾಚರಿ, ಕಂಗಾಯಮ್, ಬರ್ಗೂರ್ ಹಾಗೂ ಪುಲ್ಲಕುಲಂ, ಕೇರಳದ ವೆಚೂರ್, ಮಹರಾಷ್ಟ್ರದ ಡಾಂಗಿ, ರೆಡ್ ಕಾಂದಾರಿ, ಆಂದ್ರಪ್ರದೇಶದ ಪುಂಗನೂರ್, ಓರಿಸ್ಸಾದ ಮೋಟು, ಘುಮುಸಾರಿ, ಬಿಂಝರಪುರಿ, ಕಾರಿಯಾರ್, ರಾಜಸ್ಥಾನದ ಮೇವತಿ ಹಾಗೂ ನಗೋರಿ, ಮಧ್ಯಪ್ರದೇಶದ ನಿಮಾರಿ, ಉತ್ತರಪ್ರದೇಶದ ಪೊನ್ವಾರ್, ಕಂಕಥಾ, ಖೇರಿಘರ್, ಬಿಹಾರದ ಬಾಚೂರ್, ಸಿಕಿಂನ ಸಿರಿ ಇವು ಕೆಲಸದ ತಳಿಗಳಾಗಿವೆ.

ದ್ವಿ-ಉದ್ದೇಶಿತ ತಳಿಗಳು - ಕರ್ನಾಟಕದ ದೇವಣಿ, ಆಂದ್ರಪ್ರದೇಶದ ಒಂಗೋಲ್, ಹರಯಾಣಾದ ಹರ‍್ಯಾನಾ, ಗುಜರಾತಿನ ಕಾಂಕ್ರೇಜ್, ಮಧ್ಯಪ್ರದೇಶದ  ಮಾಲ್ವಿ ಹಾಗೂ ಗೆಲಾವೋ ಪ್ರಮುಖವಾಗಿವೆ.

ಭಾರತೀಯ ಗೋವುಗಳ ವಿಶೇಷತೆ:
  • ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ವೈಪರಿತ್ಯಗಳನ್ನು ಸಹಿಸುವ ಶಕ್ತಿ.
  • ಕನಿಷ್ಟ ದರ್ಜೆಯ ಆಹಾರ ಸೇವಿಸಿ ಉತ್ಕೃಷ್ಟ ದರ್ಜೆಯ ಹಾಲು ನೀಡುವ ಗುಣ.
  • ಅನೇಕ ಸಾಂಕ್ರಾಮಿಕ ಹಾಗೂ ಪರೋಪಜೀವಿ ರೊಗಗಳಿಗೆ ಸ್ವಾಭವಿಕವಾದ ರೋಗನಿರೋಧಕಶಕ್ತಿ.
  • ಕೃಷಿ ಹಾಗೂ ವ್ಯವಸಾಯಕ್ಕೆ ಸೂಕ್ತವಾದ ದೇಹ ರಚನೆ.
  • ಹಾಲು ಹಾಗೂ ಮೂತ್ರದಲ್ಲಿ ಔಷಧಿಯ ಗುಣ -ಹಾಲಿನಲ್ಲಿ ಲ್ಯಾಕ್ಟೋಪೆರಿನ್, ಮೂತ್ರದಲ್ಲಿ ಆಂಟಿಬಯಾಟಿಕ್.
ದೇಶೀ ತಳಿ ಸಂರಕ್ಷಣೆ ಏಕೆ?
  • ದೇಶೀಯ ತಳಿಗಳೆಂದರೆ ಮತ್ತೆ ಸೃಷ್ಟಿಸಲಾಗದ ಜೀವರಾಶಿ. ಮುಂದಿನ ಪೀಳಿಗೆಗೆ ಇದರ ಸಂರಕ್ಷಣೆ ಅವಶ್ಯಕ.
  • ನೈಸರ್ಗಿಕ ವಿಪತ್ತುಗಳು ಬಂದರೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಇವುಗಳಿಗೆ ಮಾತ್ರ ಸಾಧ್ಯ.
  • ರೋಗನಿರೋಧಕ ಶಕ್ತಿ.
  • ನಮ್ಮ ಚರಿತ್ರೆ ಹಾಗೂ ಸಂಸ್ಕೃತಿ ಪ್ರತೀಕ ಈ ದೇಶೀಯ ಗೋವುಗಳು.

ದೇಶೀಯ ತಳಿಗಳ ಸಂರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿರುವುದನ್ನು ನಾವು ಇನ್ನಾದರೂ ಮನಗಾಣಬೇಕಾಗಿದೆ. ಅನಾದಿ ಕಾಲದಿಂದ ನಮ್ಮ ಜೀವನದ ಹಾಗೂ ಸಂಸ್ಕೃತಿಯ ಅವಿಭಾಜ್ಯ ಅಂಗಗಳಂತಿರುವ ಈ ಅಮೂಲ್ಯ ಜೀವರಾಶಿಗಳನ್ನು ಉಳಿಸಿ-ಬೆಳೆಸುವ ಮಹತ್ಕಾರ್ಯವು ವಿವಿಧ ಹಂತಗಳಲ್ಲಿ, ಅಂದರೆ ರೈತರಿಂದ, ಸಂಘ-ಸಂಸ್ಥೆಗಳಿಂದ, ಸರ್ಕಾರದಿಂದ ಹಾಗೂ ವಿಶ್ವವಿದ್ಯಾಲಯಗಳಿಂದ ಪ್ರಾರಂಭಗೊಂಡು ಕ್ಷಿಪ್ರ ಗತಿಯಲ್ಲಿ ಅನುಷ್ಠಾನಗೊಳ್ಳಬೇಕಾದ ಅನಿವಾರ್ಯತೆಯಿದೆ. ಈಗಲಾದರೂ ದೇಶೀಯ ತಳಿಗಳ ಸಂರಕ್ಷಣೆ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ನಮ್ಮ ದೇಶದ ಉತ್ಕೃಷ್ಟ ತಳಿಗಳನ್ನು ಡೈನೋಸಾರ್‌ಳನ್ನು ನೋಡಿದಂತೆ ಫೋಟೋಗಳಲ್ಲಿ ನೋಡೇ ತೃಪ್ತಿಪಡಬೇಕಾದೀತು.

ಲೇಖಕರ ಕಿರುಪರಿಚಯ
ಡಾ. ನಾಗರಾಜ್, ಕೆ. ಎಂ.

ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಯ ಗೋತಳಿಗಳ ಸಂರಕ್ಷಣೆ ಇವರ ಆಸಕ್ತಿಯ ಕ್ಷೇತ್ರ. ಪಶುವೈದ್ಯ ಸಾಹಿತ್ಯ ಪರಿಷತ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಮುನ್ನಡೆಸುತ್ತಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌:

  1. ಸರ್ ನಮಸ್ತೆ ನನ್ನ ಹೆಸರು ಭರತ್ ನಾನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಸಿಂಗನಮನೆ ಗ್ರಾಮ ಪಂಚಾಯಿತಿ ನನಗೆ ನಾಟಿ ಹಸು ಸಾಯುವುದಕ್ಕೆ ಆಸೆ ದಯವಿಟ್ಟು ಮಾಹಿತಿ ತಿಳಿಸಿ ಕೊಡಿ ಇದು ನನ್ನ ನಂಬರ್ 9845578136

    ಪ್ರತ್ಯುತ್ತರಅಳಿಸಿ