ಶನಿವಾರ, ನವೆಂಬರ್ 14, 2015

ಶಾಕ್ ಕಿರಣ!!!

ಇವನು ನನಗೆ ತಗ್ಲಾಕ್ಕೊಂಡಿದ್ದು ಎರಡನೇ ಪದವಿಪೂರ್ವ ಕಾಲೇಜ್ ಟೈಮ್ನಲ್ಲಿ. ಗೋಧಿ ಮೈಬಣ್ಣ, ಬೆಂಕಿಕಡ್ಡಿ ಅಷ್ಟು ದಪ್ಪ, ಆರು ಅಡಿ ಕುಳ್ಳ ಮತ್ತು ಸೋಡಾಬುಡ್ಡಿ? ನಾಮಧೇಯ ಕಿರಿಕ್ ಕಿರಣ್. ಹತ್ತು ವರ್ಷ ಆಯಿತು ಇವನ ನನ್ನ ದೋಸ್ತಿಗೆ. ಇವನ ಹವ್ಯಾಸ - ಎಲ್ಲರಿಗೂ ಶಾಕ್ ಕೊಡೋದು!

ಅಂದು ಜೀವಶಾಸ್ತ್ರ (ಬಯಾಲಜಿ) ಲ್ಯಾಬ್ ಪರೀಕ್ಷೆ.. ನಮ್ ಅಣ್ಣಾಬಾಂಡ್ ಸರಿಯಾಗಿ ತಯಾರಿ ಆಗಿಲ್ಲ ಅಂತ ಪರೀಕ್ಷೆಗೆ ಚಕ್ಕರ್ ಹಾಕ್ಬಿಟ್ಟ. ಅಷ್ಟೇ ಆ ವರ್ಷ ಎಗರ್ಕೊಂಡುಹೋಯ್ತು. ಎದ್ದುಬಿದ್ದು ಎಂಜಿನಿಯರಿಂಗ್ಗೆ ಬಂದು ಸೇರ್ಕೊಂಡ. ಒಂದು ದಿನ ಬಸ್ಸಿಗ್ಲಿಲ್ಲ ಅಂತ ಮುಖ್ಯಪರೀಕ್ಷೆಗೆ ನಾಮ ಇಟ್ಟ. ಡುಮ್ಕಿ ಮೇಲೆ ಡುಮ್ಕಿ ತಪ್ಪಿಸಿಕೊಳ್ಳೋಕೆ ಆಗ್ಲಿಲ್ಲ. ಯಾವ್ದಾದ್ರು ಹುಡುಗಿ ಹಿಂದೆ ಪ್ರೀತಿ ಪ್ರೇಮ ಅಂತ ಬಿದ್ನಾ ಅಂತ ನಮಗೆಲ್ಲ ಚಿಂತೆ. ಎಂಜಿನಿಯರಿಂಗಿನ ಕೊನೆಯ ಸೆಮಿಸ್ಟರ್ ನಲ್ಲಿ ಅವನಿಗೆ ಕೆಲ್ಸಾ ಸಿಕ್ತು. ಎಲ್ಲರಿಗೂ ಖುಷಿ ಮನೆ ತುಂಬಾ ಸಂತೋಷ. ಅಷ್ಟರಲ್ಲಿ ಕೊಟ್ಟಾ ಷಾಕ್ ಇನ್ನೊಂದು. ಕೆಲ್ಸಾ ಮಾಡಲು ಇಷ್ಟ ಇಲ್ಲ. ವಿಜ್ಞಾನಿ ಆಗಬೇಕು ಅಂತ ಎಲ್ಲಾ ಬಿಟ್ಟು ಮಾಸ್ಟರ್ಸ್ ಊದಲು ನಿರ್ಧರಿಸಿದ. ಮಾಸ್ಟರ್ಸ್ ಎಲ್ಲಿ?? ಅಮೇರಿಕದಲ್ಲೇ ಮಾಡ್ಬೇಕಂತೆ. ಸರಿ ಎಲ್ಲಾ ತಯಾರಿ ಮಾಡ್ಕೊಂಡ. ವಿಮಾನ ಹತ್ತುವ ದಿನ ಬಂತು. ಆದಷ್ಟು ಸಾಮಾನು ಇಟ್ಕೊಂಡು ಅವನು ವಿಮಾನ ನಿಲ್ದಾಣಕ್ಕೆ ಹೋಗಿದ್ದು ಹೇಗೆ ಗೊತ್ತಾ? ನನ್ನ ದ್ವಿಚಕ್ರವಾಹನದಲ್ಲಿ.

ಒಂದ್ವಿಷಯ ಮೆಚ್ಚಬೇಕು ಅವನ ಯೋಚನೆ ಗಣಕಯಂತ್ರದಷ್ಟು ವೇಗ. ನಿಯತ್ತು ಅವನ ಪ್ರತಿ ಉಸಿರಿನಲ್ಲಿ. ಪುಸ್ತಕವೇ ಅವನ ಪ್ರಪಂಚ. ಅವನಿಗೆ ಏನು ಇಷ್ಟಾನೋ ಅದೇ ಮಾಡೋವ್ನು. ವಾರಕ್ಕೊಮ್ಮೆ ಫೋನ್ಮಾಡಿ ಮಾತಾಡುತಿದ್ದ ಇವನು, ಸುಮಾರು ಒಂದು ವರ್ಷ ಆಯ್ತು, ಪತ್ತೆನೇ ಇಲ್ಲ. ಒಂದು ಮಿಂಚಂಚೆ (email) ಕೂಡ ಇಲ್ಲ. ಹಠಾತ್ತಾಗಿ ಒಮ್ಮೆ ನಮ್ ಹೀರೊ ನನ್ಮೊಬೈಲ್ಗೆ ಫೋನಾಯಿಸಿದ. ನಾನು ವಾಪಸ್ ಸ್ವದೇಶಕ್ಕೆ ಬಂದ್ಬಿಟ್ಟೆ ಮಗ ಅಂದ. ಎಲಾ ಇವನ.. ಹೋಗಿ ಒಂದು ವರ್ಷ ಆಗಿದೆ ಅಷ್ಟೇ, ಆವಾಗ್ಲೇ ವಾಪಸ್ಯಾಕೋ ಬಂದೆ?? ನನ್ನ, ನಮ್ಮ ಸೈನ್ಸ್ ಪ್ರೊಫೆಸರ್ ಓಡಿಸಿಬಿಟ್ರು ಕಣ್ಲಾ ಅಂದ. ಅಯ್ಯೋ ಯಾಕೋ ಏನಾಯ್ತೋ ಅಂತ ಕೇಳಿದ್ದಕ್ಕೆ ಕಾಲೇಜ್ನಲ್ಲಿ ಒಂದು ಪುಟ್ಟ ಜಗಳ ಆಯಿತು, ಅದಿಕ್ಕೆ ಪ್ರೊಫೆಸರ್ ಹೊರಗೆ ಹಾಕ್ಬಿಟ್ರು ಅಂದ.

ಈ ನಮ್ಮ ಕಿರಣ ಹೇಳಿರೋದು ಯಾಕೋ ನಂಬೊಕೆ ಆಗ್ತಿಲ್ಲ ನನಗೆ. ಪುಟ್ಟ ಜಗಳಕ್ಕೆ ಹೊರಹಾಕೋದಾ? ಒಮ್ಮೆ ಒಟ್ಟಿಗೆ ಊಟಕ್ಕೆ ಹೋಗಿದ್ವಿ. ಕಳೆದ ಒಂದು ವರ್ಷದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ವಿ. ಆವಾಗ ಹೇಳಿದ ನಿಜವಾದ ಕಥೆ.

ಗೀತಾಂಜಲಿ (ಅಂಜಲಿ) ಅನ್ನೋ ಒಬ್ಳು ಹುಡುಗಿ ಜೊತೆ ಪರಿಚಯ ಆಯ್ತು. ಇಬ್ಬರೂ ಒಂದೇ ಊರು. ಒಂದೇ ಭಾಷೆ. ಕಾಲೇಜ್ನಲ್ಲಿ ಒಂದೇ ವರ್ಗ. ಇಬ್ಬರೂ ಒಳ್ಳೆ ಸ್ನೇಹಿತರಾದರು. ಅಂಜಲಿಗೆ ಕಿರಣ್ಮೇಲೆ ಪ್ರೀತಿ ಶುರುವಾಯಿತು.  ಒಳ್ಳೆ ದಿನ ನೋಡಿ ಅಂಜಲಿ ತನ್ನ ಪ್ರೀತಿ ಬಗ್ಗೆ ಕಿರಣ್ಗೆ ಹೇಳಿದಳು. ಕಿರಣ ಅಂಜಲಿಯ ಪ್ರೀತಿಯನ್ನು ತಿರಸ್ಕರಿಸಿದ. ಯಾಕೆಂದರೆ ನಮ್ ಕಿರಣ, ಶಶಿರೇಖಾ (ರೇಖಾ) ಜೊತೆ ಪ್ರೀತಿಪ್ರೇಮ ಅನ್ನೋ ಮಾಯಾಲೋಕದಲ್ಲಿ ಬಿದ್ದಾಗಿತ್ತು. ಮುಂಚೆನೇ ಹೇಳಿದ್ದೆ ತಾನೇ ಇವನ ಹವ್ಯಾಸ ಶಾಕ್ಕೊಡೋದು ಅಂತ. ತನ್ನ ಪ್ರೀತಿಯನ್ನು ತಿರಸ್ಕರಿಸಿದ ಕೂಡಲೇ ಇವನಿಂದ ದೂರ ಹೋದಳು ಅಂಜಲಿ. ಒಂದು ವಾರ ನಂತರ, ಕಿರಣ ಯಾಕೊ ಬೇಜಾರಾಗಿದ್ದ. ರೇಖಾ ಪಕ್ಕದಲ್ಲೇ ಇದ್ದರೂ ಸಹ, ಯಾಕೋ ಏನೋ ಯೋಚನೆ. ತನ್ನ ಕೊಠಡಿಯಲ್ಲಿ ಇದ್ದಾಗ್ಲೂ ಅದೇ ಯೋಚನೆ. ಅದು ಬೇರೆ ಏನೋ ಅಲ್ಲ. ಅವೆಲ್ಲಾ ಅಂಜಲಿಯ ನೆನಪುಗಳು. ಅಂಜಲಿ ಜೊತೆ ಸ್ನೇಹ ಇವನ ಜೀವನದಲ್ಲಿ ಸುಮಾರು ಬಲವಾದ ಬದಲಾವಣೆಗಳನ್ನ ತಂದಿತ್ತು. ಇವನ ರುಚಿ, ಅಭಿರುಚಿ, ಮಾತು, ಆಲೋಚನೆ ಎಲ್ಲಾ ಅವಳಂತೆಯೇ. ಅಂಜಲಿ ಇವನ ಜೀವನದಲ್ಲಿ ಇಲ್ಲದ ಕೊರಗು ಇವನಿಗೆ ಅರ್ಥವಾಗುತಿತ್ತು. ಅಂಜಲಿಯನ್ನು ಹೇಗಾದರೂ ಭೇಟಿ ಆಗಲೇಬೇಕು ಅಂತ ಅವಳ ಮನೆಗೆ ಹೋಗುತ್ತಾನೆ. ಇಲ್ಲಿ ತನಕ ನಮ್ಗೆಲ್ಲಾ ಶಾಕ್ಕೊಟ್ಟ ಇವನಿಗೆ ಒಂದು ಬಂಪರ್ ಶಾಕ್. ಅಂಜಲಿ ಮತ್ತು ರೇಖಾ ಬೇರೆ ಯಾರೂ ಅಲ್ಲ. ಇಬ್ಬರೂ ಅಕ್ಕ ತಂಗಿಯರು! ಇನ್ನೊಂದು ಶಾಕ್ ಅಂದರೆ ಆ ಸೈನ್ಸ್ ಪ್ರೊಫೆಸರ್ ಅವರಿಬ್ಬರ ತಂದೆ!!

ನಾನಂದುಕೊಂಡಂತೆ ಪ್ರೊಫೆಸರ್ ಇವನನ್ನು ಹೊರಹಾಕಿದ ಕಥೆ ಕಿರಣ ಹೇಳಿದ ಸುಳ್ಳಾಗಿತ್ತು. ಅಂಜಲಿಗೆ ಅವನ ಮೇಲಿದ್ದ ಪ್ರೀತಿನ ತಿಳ್ಕೊಂಡು, ಅವಳನ್ನು ಕರ್ಕೊಂಡು ಕಿರಣ ಸ್ವದೇಶಕ್ಕೆ ಬಂದ್ಬಿಟ್ಟಿದ್ದ!! ಮುಂದೆ..??? ನಮ್ ಕಿರಣ್ ಇನ್ನೇನ್ ಶಾಕ್ ಕೊಡ್ತಾನೋ ಗೊತ್ತಿಲ್ಲ...

ಲೇಖಕರ ಕಿರುಪರಿಚಯ
ಶ್ರೀ ಸುರೇಶ್ ಕುಮಾರ್ ದೇಸು

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಪ್ರಸ್ತುತ ಸಾಫ್ಟ್- ವೇರ್ ಇಂಜಿನಿಯರ್ ಆಗಿ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ವಿಶೇಷ ಪ್ರೀತಿ-ಗೌರವ. ಮಾತನಾದಿದಷ್ಟೇ ಸರಳ-ಸರಾಗವಾಗಿ ಬರೆಯುವುದು ಇವರ ವಿಭಿನ್ನ ಶೈಲಿ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ