ಸೋಮವಾರ, ನವೆಂಬರ್ 9, 2015

ಒಂದಾನೊಂದು ಕಾಲದಲ್ಲಿ - ಶಂಕರ್ ನಾಗ್

ಅದ್ಭುತ ಕಲಾವಿದರಾದ ಸುಂದರ್‌ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರಂತೆ ಕಲಾದಾರಿಯಲ್ಲಿಯೇ ಸಾಗುತ್ತಿರುವ ಅವರ ಮಗಳು ಮೇಘನಾರಾಜ್ ಕನ್ನಡದಲ್ಲಿ ವಿಭಿನ್ನವಾದ, ಅಭಿನಯಕ್ಕೆ ಪ್ರಾಮುಖ್ಯತೆ ಇರುವಂಥ ಪಾತ್ರಗಳಿಗೆ ಹೆಸರಾಗುತ್ತಿರುವ ಬಹುಭಾಷಾ ನಾಯಕ ನಟಿ. ಅವರನ್ನು "ಕನ್ನಡದಲ್ಲಿ ನಿಮಗೆ ಯಶಸ್ಸೆಂದರೆ ಏನು?" ಈ ಪ್ರಶ್ನೆಗೆ ಸಾವಿರಾರು ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಉತ್ತರಿಸಿದ್ದು "ಶಂಕ್ರಣ್ಣನಂತೆ (ಶಂಕರ್ ನಾಗ್) ಜನರ ನೆನಪಿನಲ್ಲುಳಿಯಬೇಕು".

ಇದು ಆ ಹುಡುಗಿಯೊಬ್ಬಳ ಕನಸು-ಆಶಯ ಮಾತ್ರವಲ್ಲ; ಅಸಂಖ್ಯಾತ ಮನಸುಗಳ ಕನವರಿಕೆಯಾಗಿದೆ. ಕರ್ನಾಟಕದಲ್ಲಿ, ಭಾರತದಲ್ಲಿ ಅಷ್ಟೇಕೆ ಈಡೀ ವಿಶ್ವದಲ್ಲಿ ಇವತ್ತಿಗೂ ಶಂಕರ್‌ನಾಗ್ ಹೆಸರು ಅಜರಾಮರ. ಮೇಘನಾರಾಜ್ ಮಾತ್ರವಲ್ಲ ಅದೆಷ್ಟೋ ಲಕ್ಷಾಂತರ ಮನಸ್ಸುಗಳಲ್ಲಿ ಇಂದಿಗೂ ಶಂಕರ್‌ನಾಗ್ ಸ್ಥಾಪಿತಗೊಂಡಿದ್ದಾರೆ. ಶಂಕರ್‌ನಾಗ್ ದೈಹಿಕವಾಗಿ ಅಳಿದು ಎರಡೂವರೆ ದಶಕಗಳೇ ದಾಟುತ್ತಿದೆ. ಆದರೆ ಅವರ ಅಸ್ತಿತ್ವದ ಜೀವಂತಿಕೆ ಶತಮಾನಗಳು ಕಳೆದರೂ ನಿತ್ಯನೂತನವಾಗಿ ಉಳಿಯುವಂಥದ್ದಾಗಿದೆ. ಸರಳ ವ್ಯಕ್ತಿತ್ವದ ಮೇರು ಪ್ರತಿಭೆ, ಎಲ್ಲರಿಗೂ ಒಳಿತನ್ನೇ ಬಯಸುವ, ಬಗೆದಷ್ಟು ಪ್ರೀತಿಯನ್ನೇ ನೀಡುವ ಹೃದಯವಂತ ಶಂಕರ್ ನಾಗ್ ಮಹಾನ್ ಸಹೃದಯಿಯಾಗಿ ಜನರ ನೆನಪಿನಲ್ಲಿ ಚಿರಾಯು.

ನಟ-ನಿರ್ದೇಶಕ-ನಿರ್ಮಾಪಕ-ಮಹಾನ್ ಕನಸುಗಾರ. ರಂಗಭೂಮಿ-ಸಿನೆಮಾ-ಕಿರುತೆರೆ ಕ್ಷೇತ್ರಗಳಲ್ಲಿ ಮಾತ್ರವಲ್ಲ ಜನ ಸಾಮಾನ್ಯರ ಹಿತವನ್ನು ಬಯಸಿ ಕಾರ್ಯ ಪ್ರವೃತ್ತವಾಗುತ್ತಿದ್ದ ಜೀವನ್ಮುಖಿ. ಸಾಮಾನ್ಯರ ಜೀವನ ಕ್ರಮ ಸುಧಾರಣೆಗೆ ನೂರು ವರ್ಷಗಳ ಮುಂದಿನ ಭವಿತವ್ಯವನಿಟ್ಟು ಯೋಚಿಸಿ ಹೊಸ ಬದಲಾವಣೆಗೆ ಯೋಜಿಸುತ್ತಿದ್ದಿದ್ದಷ್ಟೇ ಅಲ್ಲ ಆ ನಿಟ್ಟಿನಲ್ಲಿ ತೊಡಗಿಕೊಳ್ಳುತ್ತಿದ್ದ ಕ್ಷಿಪ್ರ ವೇಗದ ವ್ಯಕ್ತಿ. ಇದಕ್ಕಾಗಿ ದಿನದ ಇಪ್ಪತ್ನಾಲ್ಕು ಗಂಟೆ ಸಾಕಾಗುತ್ತಿರಲ್ಲ. ನೂರಾರು ಜನರ ತಂಡ ಕಟ್ಟಿ ತೊಡಗಿಸಿಕೊಂಡಿದ್ದಕ್ಕೆ ಪರಿಮಿತಿಯೇ ಇರಲಿಲ್ಲ. ಒಮ್ಮೆ ಶಂಕರ್ ನಾಗ್ ಪರಿಚಯವಾದರೆ ಮತ್ತೆಂದೂ ಅವರ ಪ್ರಭಾವಳಿಯಿಂದ ದೂರಾಗಲು ಸಾದ್ಯವೇ ಇರಲಿಲ್ಲ. ಬದುಕಿದ್ದಿದ್ದರೆ ಇಂದು, ಅಂದರೆ 9-11-2015ರಂದು ಅರವತ್ತೊಂದು ವರ್ಷ ದಾಟುತ್ತಿದ್ದ ಅಮರ ಜೀವಿ ಶಂಕರ್‌ ನಾಗ್‌ ಗೆ ಹುಟ್ಟುಹಬ್ಬದ ಶುಭಾಶಯಗಳು.
ಚಿತ್ರ : ಅಶ್ವತ್ಥನಾರಾಯಣ
ಶಂಕರ್‌ನಾಗ್ ಕನ್ನಡದಲ್ಲಿ ಆಭಿನಯಿಸಿದ್ದ ಮೊದಲ ಚಿತ್ರ ‘ಒಂದಾನೊಂದು ಕಾಲದಲ್ಲಿ’. ಇದರಲ್ಲಿ ಪ್ರಧಾನವೆನಿಸುವ ಮತ್ತು ಪ್ರಭಾವಯುತ ಪಾತ್ರದಲ್ಲಿ ನಟಿಸಿದ್ದ ಸುಂದರಾಜ್ ಮನೆಯಲ್ಲಿ ಇವತ್ತಿಗೂ ದಿನಕ್ಕೆ ಒಮ್ಮೆಯಾದರೂ ಅವರುಗಳ ಮಾತಿನಲ್ಲಿ ಶಂಕರ್‌ನಾಗ್ ಬಂದಿರುತ್ತಾರೆ. ಇದನ್ನು ಕೇಳುತ್ತಲೇ ಬೆಳೆದಿರುವ ಮೇಘನಾರಾಜ್‌ಗೆ ಸಹಜವಾಗಿಯೇ ಶಂಕರ್‌ನಾಗ್ ಪ್ರಭಾವ ಬೀರಿರಬಹುದು. ಆದರೆ ಅಪ್ಪ-ಅಮ್ಮ ಎಂದೂ ಶಂಕ್ರಣ್ಣನ ತರಹ ಆಗು ಎಂದು ಹೇಳಿದ್ದಿಲ್ಲ. ಮೇಘನರಾಜ್‌ನ ಮಾತ್ರವಲ್ಲ, ಅಸಂಖ್ಯಾತ ಯುವ ಮನಸ್ಸುಗಳನ್ನು ಸೆಳೆಯುವ ತಾಖತ್ತು ಇವತ್ತಿಗೂ ಶಂಕರ್‌ನಾಗ್‌ಗಿದೆ. ಇದು ಎಲ್ಲಾ ಎಲ್ಲೆಯನ್ನೂ ಮೀರಿದ್ದು. ಆಟೋರಿಕ್ಷಾ ಚಾಲಕರು ಇವತ್ತಿಗೂ ಶಂಕರ್‌ನಾಗ್‌ರನ್ನು ದೇವರೆನ್ನುವಂತೆ ನೋಡುತ್ತಾರೆ. ‘ಆಟೋರಾಜ’ ಚಿತ್ರ ಸಮಾಜದಲ್ಲಿ ಅವರಿಗೆ ತಂದು ಕೊಟ್ಟ ಗೌರವ ಕಾಲಕಾಲಕ್ಕೂ ಉಳಿಯುವಂಥದ್ದಾಗಿದೆ. ಮನೆಯಿಂದ ಹೊರಗೆ ಹೊರಟರೆ ಶಂಕರ್‌ನಾಗ್ ಚಿತ್ರವಿರುವ ಒಂದಾದರೂ ಆಟೋರಿಕ್ಷಾ ಎದುರಾಗುತ್ತದೆ. ಈ ಅಸ್ತಿತ್ವ ಮತ್ತೊಬ್ಬ ಕಲಾವಿದನಿಗೆ ಸಿಕ್ಕಿಲ್ಲ. ಆಟೋ ಚಾಲಕರು ಮಾತ್ರವಲ್ಲ, ಎಲ್ಲಾ ವರ್ಗದ ಜನರ ಮನಸ್ಸಲ್ಲಿ ಹಲವು ಹತ್ತಾರು ಆಯಾಮಗಳಿಂದ ನಟರಾಗಿ ಮಾತ್ರವಲ್ಲ; ಶಂಕರ್‌ನಾಗ್ ಮೇರುವ್ಯಕ್ತಿತ್ವ ಚಿರಸ್ಥಾಯಿಯಾಗಿದೆ.

ಶಂಕರ್ ನಾಗ್ ಒಂದು ಚೌಕಟ್ಟಿಗೆ, ಒಂದು ವಿಸ್ತಾರಕ್ಕೆ ದಕ್ಕುವ ವ್ಯಕ್ತಿ ಅಲ್ಲವೇ ಅಲ್ಲ. ಸಾವಿರಾರು ಪುಟಗಳು ಬರೆದರೂ ಮುಗಿಯುವುದೂ ಇಲ್ಲ. ಕಾಲಕಾಲಕ್ಕೆ ಬೇರೆಯೇ ಹೊಳವಾಗಿ ಕಾಣಬಲ್ಲ ಮಹಾನ್ ತಾರೆ. ಮೇಘನಾರಾಜ್‌ರನ್ನು ಪ್ರಸ್ತಾವಿಕವಾಗಿ ತಂದಿರುವುದಷ್ಟೆ. ಸುಂದರ್‌ ರಾಜ್ ಹೃದಯಕ್ಕೆ ಹತ್ತಿರವಾಗಿದ್ದ ಶಂಕರ್‌ ನಾಗ್‌ನ ಇಲ್ಲಿ ಪುಟ್ಟದಾಗಿ ಅವರ ಮಾತುಗಳ ಮೂಲಕವೇ ನೋಡಬಹುದು. ವಿಶೇಷವಾಗಿ 'ಒಂದಾನೊಂದು ಕಾಲದಲ್ಲಿ'ನ ಅಮೃತ ಕ್ಷಣಗಳಿವು:
ಚಿತ್ರ : ಅಶ್ವತ್ಥನಾರಾಯಣ
" 'ಒಂದಾನೊಂದು ಕಾಲದಲ್ಲಿ' ಚಿತ್ರ ತೆರೆಕಂಡಿದ್ದು 1978ರಲ್ಲಿ. ನಂತರ ದಶಕಗಳೇ ಕಳೆದಿದೆ. ಆದರೆ ಈಗಲೂ ಜನ ನನ್ನ ಆ ಪಾತ್ರದಿಂದ ಗುರುತಿಸುತ್ತಾರೆ. 'ಒಂದಾನೊಂದು ಕಾಲದಲ್ಲಿ' ಚಿತ್ರ ಯಾವುದೇ ಒಂದು ವರ್ಗವಕ್ಕೆ ಸೀಮೀತವಾಗದೆ 'ಬ್ರಿಜ್' ಸಿನೆಮಾವಾಗಿ ಸಮಾಜಕ್ಕೆ ಕೊಡುವ ಸಂದೇಶ ಸರ್ವಕಾಲಿಕವಾಗಿದೆ. ಬದಲಾದ ಕಾಲಘಟ್ಟದಲ್ಲೂ ಅರ್ಥೈಸಿಕೊಂಡು ನೋಡಬಹುದಾಗಿದೆ. ಯಾವುದೇ ಸಂಬಂಧವಿಲ್ಲದೆ, ಜನರ ಹಿತಕ್ಕಾಗಿ ಎರಡು ಪಾಳೇಗಾರರ ಮಧ್ಯೆ ಬಂದು ಪ್ರಾಣ ತೆರುವ ಶಂಕರ್‌ನಾಗ್ ಪಾತ್ರ ಎಲ್ಲಾ ಯುವಕರಿಗೂ ಎಂದೆಂದಿಗೂ ಆದರ್ಶವಾಗಿ ನಿಲ್ಲಬಲ್ಲದು. ಕಮರ್ಷಿಯಲ್ ಆಗಿ ಹೇಳಬೇಕೆಂದರೆ 'ಒಂದಾನೊಂದು ಕಾಲದಲ್ಲಿ' ಚಿತ್ರವನ್ನು ಎಲ್ಲೂ ರೀಮೇಕ್ ಮಾಡೋಕಾಗೋದಿಲ್ಲ. ಅದಕ್ಕೊಂದು ಪ್ರಾಂತೀಯ ನೆಲೆ ಬೇಕಾಗುತ್ತದೆ. ಇದನ್ನು ಕನ್ನಡದಲ್ಲಿ ಚೆನ್ನಾಗಿ ಕಟ್ಟಿಕೊಡಲು ಸಾಧ್ಯವಾಗಿದೆ.

ಖ್ಯಾತ ನಿರ್ದೇಶಕ ಗಿರೀಶ್ ಕರ್ನಾಡರ ಎಲ್ಲಾ ಸಿನೆಮಾಗಳಲ್ಲೂ ನಾನು ನಟಿಸುತ್ತಿದ್ದೆನಾದರಿಂದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿಯೂ ನನಗಾಗಿ ಪಾತ್ರವಿತ್ತು. ಚಿತ್ರದ 'ಗಂಡುಗಲಿ' ಪಾತ್ರವನ್ನು ಯಾರು ಮಾಡುತ್ತಾರೆ? ಈ ಪ್ರಶ್ನೆ ಬಂದಾಗ ಅದು ಅನಂತ್‌ನಾಗ್ ತಮ್ಮ ಶಂಕರ್‌ನಾಗ್ ಎಂಬ ಹೆಸರು ಪ್ರಸ್ತಾಪವಾಯಿತು. ಅದುವರೆಗೆ ನಾನು ಅವನನ್ನು ನೋಡಿರಲಿಲ್ಲ. ಅದರಂತರ ಶಂಕರ್‌ನಾಗ್‌ನ ಕರೆಸಲಾಯಿತು. ನಾನು ಮತ್ತು ಕರ್ನಾಡ್ ಇಬ್ಬರೇ ಇದ್ದಾಗ ಏರ್‌ಪೋರ್ಟ್‌ನಿಂದ ನೇರವಾಗಿ ಶಂಕರ್ ರೂಮಿಗೆ ಬಂದಿದ್ದ. ಕರ್ನಾಡ್ ನನ್ನ ಪರಿಚಯ ಮಾಡಿಕೊಟ್ಟರು. ಮೊದಲಬಾರಿಗೆ ಶಂಕರ್‌ನ ನೋಡುತ್ತಿದ್ದೇನೆ 'ಅಜಾಯಿಲ್' ಆಗಿದ್ದಾನೆ ಪಾತ್ರಕ್ಕೆ ಸೂಕ್ತವಾಗಿ ಆಯ್ಕೆ ಮಾಡಿದ್ದಾರೆನಿಸಿತ್ತು. ಈಗಲೂ ನಾನು ಆ ಕ್ಷಣವನ್ನು ಮರತೇ ಇಲ್ಲ.
ಚಿತ್ರ ಕೃಪೆ : YouTube
ಚಿತ್ರೀಕರಣ ಆರಂಭಿಸುವ ಒಂದು ತಿಂಗಳು ಮೊದಲೇ ಧಾರಾವಾಡದಲ್ಲಿ ವಿಶೇಷವಾದ ಮಾರ್ಷಲ್ ಆರ್ಟ್ ಕಲರಿಪಟ್ಟು ತರಬೇತಿ ಶುರುವಾಯಿತು. ತರಬೇತಿಗೆ ಮೊದಲು ನೆತ್ತಿ ಕಾದು ಮೈಯಲ್ಲಿನ ಕೆಟ್ಟ ನೀರು ಬೆವರಾಗಿ ಜಳಜಳ ಹರಿಯಬೇಕು. ಅಲ್ಲಿವರೆಗೆ, ಬಿಸಿಲಲ್ಲಿ ಕನಿಷ್ಠ ಒಂದು ಗಂಟೆಯಾದರೂ ನಿಂತಿರಬೇಕಾಗುತ್ತಿತ್ತು. ಅದಕ್ಕಿಂತಲೂ ಮೊದಲು 10ಕೀ. ಮೀ. ಓಡಿ ನಂತರ ನಡೆದು ಹಿಂದಿರುಗಬೇಕಿತ್ತು. ಶಂಕರ್‌ನಾಗ್ 9ಕಿ. ಮೀ. ಓಡಿ ನಿಂತುಬಿಡೋನು. ನಾನು ಕಾಲೇಜಿನಲ್ಲಿ ಓಟದಲ್ಲಿ ದಾಖಲೆ ಮಾಡಿದ್ದೆನಾದ್ದರಿಂದ ಪೂರ್ತಿ ಓಡುತ್ತಿದೆ. ಅದಾದ ಮೇಲೆ ಬಿಸಿಲಿಗೆ ನಿಂತು ಬೆವರು ಹರಿದು ದೇಹ ಹಗುರಾಗುತ್ತಿತ್ತು. ಅಗಲೇ ಕಲರಿಪಟ್ಟು ತರಬೇತಿ ಶುರುಮಾಡುತ್ತಿದ್ದರು. ನಿಂತಲ್ಲೇ ಮೇಲಕ್ಕೆ ಮೂರಡಿಯನ್ನೂ ಮೀರಿ ಎಗರಬೇಕಾಗುತ್ತಿತ್ತು. ಈ ಫೈಟ್‌ಗಾಗಿ ಅಸ್ತ್ರವಾಗಿ ಬಳಸುವ ‘ಉರ‍್ಮಿ’ ನಾಲ್ಕು ಅಡಿ ಉದ್ದವಿದ್ದರೂ ಬೆಲ್ಟಿನಹಾಗೆ ಸುತ್ತಿರುವಂತಹದ್ದು. ಎಡಗೈನಲ್ಲಿ ಗುರಾಣಿ ಹಿಡಿದು ಎದುರಿನವನು ಉರ‍್ಮಿಯನ್ನು ಬೀಸಿದರೆ ಗುರಾಣಿಯನ್ನು ಅಡ್ಡ ಹಿಡಿದು ರಕ್ಷಿಸಿಕೊಳ್ಳುತ್ತ ನಾವು ಉರ‍್ಮಿಯನ್ನು ಬೀಸುವ ಹೊಡೆದಾಟ ನಡೆಸಲೇಬೇಕಿತ್ತು. ಒಂದು ಕ್ಷಣ ಎಚ್ಚರ ತಪ್ಪಿದರೂ ನಾವೇ ಬೀಸಿದ ಉರ‍್ಮಿಯಿಂದ ನಮ್ಮ ಕತ್ತು, ಕೈಗೇ ಗಾಯವಾಗುತ್ತಿತ್ತು. ನಾವಿಬ್ಬರೂ ಅಭ್ಯಾಸ ಮಾಡುತ್ತಿದ್ದಾಗ ಶಂಕರ್ ಬೀಸಿದ ಉರ‍್ಮಿ ಆಕಸ್ಮಿಕವಾಗಿ ನನ್ನ ಎದೆಗೆ ತಗುಲಿ ರಕ್ತಚಿಮ್ಮಿತ್ತು. ಈಗಲೂ ಆ ಗಾಯದ ಗುರುತಿದೆ. ಚಿತ್ರದಲ್ಲಿ ನನ್ನ ಮತ್ತು ಶಂಕರ್‌ನಾಗ್ ನಡುವೆ ನಡೆಯುವ ಕಲರಿಪಟ್ಟು ಹೊಡೆದಾಟದಲ್ಲಿ ಯಾವುದೊಂದು ‘ಡ್ಯುಪ್’ ಬಳಕೆಯಾಗಿಲ್ಲ.  ನಿಜವಾದ ಉರ‍್ಮಿ ಮತ್ತು ಗುರಾಣಿ ಹಿಡಿದು ನಡೆಯಿತು. ಸ್ವಲ್ಪ ಯಾಮಾರಿದರೂ ಅಪಾಯವಿತ್ತು. ಅತ್ಯಂತ ರೋಮಾಂಚಕಾರಿಯಾದ ಈ ಫೈಟ್‌ನಿಂದ ಈಗಲೂ ಜನ ನನ್ನ ಗುರುತಿಸುತ್ತಾರೆ!

ದಾಂಡೇಲಿಯ ದಟ್ಟವಾದ ಕಾಡಿನ ಮಧ್ಯೆ ಚಿತ್ರೀಕರಣ ನಡೆಸುವುದು ನಿಶ್ಚಿತವಾಗಿದ್ದರಿಂದ ಬೆಳಗಾವಿಯ ಸಮೀಪ ತುರುಮುರಿ ಗ್ರಾಮದಲ್ಲಿ ಉಳಿಯಲು ಎಲ್ಲರಿಗೂ ಟೆಂಟ್ ಹಾಕಲಾಯಿತು. ಫೈವ್‌ಸ್ಟಾರ್ ಹೊಟೇಲ್‌ನ ಮಾತಿರಲಿ, ಗೆಸ್ಟ್ ಹೌಸ್ ವ್ಯವಸ್ಥೆಯೂ ಇರಲಿಲ್ಲ. ತಿಂಡಿಗೆ ಇಡ್ಲಿ-ಸಾಂಬರ್ ಅಂತಲೂ ಇರಲಿಲ್ಲ. ನಾವಿರುತ್ತಿದ್ದ ಸ್ಥಳಕ್ಕೆ ತಿಂಡಿ ಊಟ ಸರಬರಾಜು ಮಾಡುವುದೇ ಕಷ್ಟವಾಗಿದ್ದರಿಂದ ಯಾವುದನ್ನು ಕಳಿಸಿದರೂ ಬೇಡವೆನ್ನುವಂತಿರಲಿಲ್ಲ. ಕಾಡಿನಲ್ಲಿಯೇ ಇದ್ದಂತಾಗಿತ್ತು, ಬರಿಗಾಲ ನಡಿಗೆಯಲ್ಲೇ ಬೆಟ್ಟವೇರುತ್ತಿದ್ದರಿಂದಾಗಿ ತರಚುಗಾಯಗಳು ಸಾಮಾನ್ಯವಾಗಿರುತ್ತದ್ದವು. ಜೊತೆಗೆ ಜಿಗಣಿ ಕಚ್ಚಿರುತ್ತಿದ್ದವು. ರೇಡಿಯೂ ಕೂಡ ಇರಲಿಲ್ಲ. ಮೊಬೈಲ್ ಫೋನ್‌ಗಳ ಕಾಲ ಅದಾಗಿರಲಿಲ್ಲವಾದ್ದರಿಂದ ಬೆಂಗಳೂರಿನಲ್ಲಿ ಅಪ್ಪ-ಅಮ್ಮ ಹೇಗಿದ್ದಾರೆಂದು ತಿಳಿದುಕೊಳ್ಳಲೂ ಆಗುತ್ತಿರಲಿಲ್ಲ. ಪೂರ್ಣವಾಗಿ ಹೊರಜಗತ್ತಿ ಸಂಪರ್ಕ ಕಡಿದುಕೊಂಡು ಪಾತ್ರ ಮತ್ತು ಚಿತ್ರೀಕರಣದಲ್ಲಿಯೇ ಕೇಂದ್ರೀಕರಿಸಿಕೊಂಡಿದ್ದೆವು. ಹೀಗಿದ್ದಿದ್ದರಿಂದಾಗಿಯೇ ಆ ಪಾತ್ರಗಳು ಸಾಧಿಸಿಕೊಂಡಂತಹ ಏಕಾಗ್ರತೆ ಮತ್ತು ತನ್ಮಯತೆ ತೆರೆಮೇಲೆ ದಾಖಲೆಯಾಯಿತು ಮತ್ತು ಎಂದಿಗೂ ಅಳಿಯದ ದಾಖಲೆಯಾಗಿ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಇದುವರೆಗೆ ಕನ್ನಡದಲ್ಲಿ ಮತ್ತೊಂದು 'ಒಂದಾನೊಂದು ಕಾಲದಲ್ಲಿ' ಸೃಷ್ಟಿಯಾಗಿಲ್ಲ. ಅದರಲ್ಲಿರುವ ಪಾತ್ರಗಳ ಮರು ಸೃಷ್ಟಿಯೂ ಆಗಿಲ್ಲ. ಈಗ ನನ್ನಿಂಲೇ ಆ ಪಾತ್ರ 'ವಿಜ್ಜಡ' ನಾಗಲು ಸಾಧ್ಯವಿಲ್ಲ.

ಈ ವೇಳೆಗೆಲ್ಲಾ ಶಂಕರ್ ನನಗೆ ನಿಜವಾದ ಗೆಳೆಯನಾಗಿದ್ದ. ನಂತರವೇ ಇಬ್ಬರು ಪೂನ ಫಿಲ್ಮಂ ಇನ್ಸ್‌ಟಿಟ್ಯೂಟ್‌ನಲ್ಲಿ ಫಿಲ್ಮ್ ಅಪ್ರಿಸಿಯೇಷನ್ ಕೋರ್ಸ್ ಮಾಡಿದ್ವಿ. ನನಗೆ ಪೂನಾ ಮತ್ತು ಮುಂಬೈ ಗೊತ್ತಿರಲಿಲ್ಲ ಅಲ್ಲೆಲ್ಲಾ ನನ್ನ ಕರೆದುಕೊಂಡು ಹೋಗಿ ಪರಿಚಯಿಸಿದ್ದೇ ಶಂಕರ್. ಸ್ಪರ್ಧಾತ್ಮಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಂಕರ್‌ನಾಗ್ 'ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನರಾದರು. ಶಂಕರ್ ಸಿನೆಮಾದಲ್ಲಿ ಬಿಜಿ ಇದ್ದಿದ್ದರಿಂದ ದೆಹಲಿಯ ಪ್ರತಿಷ್ಠಿತ ವಿಜ್ಞಾನ್ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲಿಲ್ಲ. ಅವನ ಪರವಾಗಿ ನಾನು ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆಗೆ ಹೋದಾಗ ನನ್ನನ್ನು ಶಂಕರ್ ಎಂದೇ ಭಾವಿಸಿ ಸಭಿಕರೆಲ್ಲರೂ ನಿಂತು ಗೌರವಿಸಿದ್ದನ್ನು ನಾನೆಂದೂ ಮರೆಯಲಾರೆ. "

ಲೇಖಕರ ಕಿರುಪರಿಚಯ
ಶ್ರೀಮತಿ ಕೆ. ಬಿ. ಪಂಕಜ

'ಸಂಜೆವಾಣಿ' ಸಂಜೆ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ವೃತ್ತಿ ಬದುಕನ್ನು ಆರಂಭಿಸಿದ ಇವರು ನಂತರದಲ್ಲಿ ಈಟೀವಿ ಕನ್ನಡ ಮತ್ತು ಕಸ್ತೂರಿ ವಾಹಿನಿಗಳಲ್ಲಿ ಸ್ಕ್ರಿಪ್ಟ್‌ ರೈಟರ್ ಮತ್ತು ಪ್ರೊಗ್ರಾಮ್ ಎಕ್ಸಿಕ್ಯೂಟೀವ್ ಆಗಿ ಸೃಜನಾತ್ಮಕವಾಗಿ ತೊಡಗಿಸಿಕೊಂಡವರು. ಪ್ರಸ್ತುತ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ಸಿನೆಮಾ ವರದಿಗಾರ್ತಿಯಾಗಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ