ಮಂಗಳವಾರ, ನವೆಂಬರ್ 26, 2013

ಕೊಡಗಿನ ಮಡಿಲಲ್ಲಿ

ಟಿಕ್.... ಟಿಕ್ .... ಟಿಕ್.... ಟಿಕ್ .... ರಾತ್ರಿ ಸಮಯ 2:15. ಶುಕ್ರವಾರ ಮುಗಿದು ಶನಿವಾರ ಶುರು ಆಗಿದೆ. ಕೆಲಸ ಮುಗಿಸಿ ಹೊರಡೋದಕ್ಕೆ ಇನ್ನೂ 15 ನಿಮಿಷ ಇದೆ. 150 ನಿಮಿಷದಲ್ಲಿ ಮುಗಿಯದೇ ಇರೋ ಕೆಲಸಾನ ಹೇಗಾದ್ರೂ ಮಾಡಿ ಹದಿನೈದೇ ನಿಮಿಷದಲ್ಲಿ ಮುಗಿಸೋ ಆತುರ. ಅದಕ್ಕಿಂತ ಮಿಗಿಲಾಗಿ ಮಾಡಿರೋ ಯೋಜನೆ ಪ್ರಕಾರ ನಾನು ನನ್ನ ಗೆಳೆಯರ ಜೊತೆ ಕೊಡಗಿಗೆ ಟ್ರಿಪ್ ಹೋಗೋ ಕಾತುರ. ನಿಮಿಷದ ಮುಳ್ಳು 30ನೇ ನಿಮಿಷದ ಕಡೆ ಓಡ್ತಾ ಇತ್ತು, ಹಾಗೆಯೇ ನನ್ನ ಎದೆ ಬಡಿತಾನೂ ಹೆಚ್ತಾ ಇತ್ತು, ಯಾಕಂದ್ರೆ ನನ್ ಜೀವನದಲ್ಲಿ ಇದೇ ಮೊದಲನೇ ಬಾರಿಗೆ ನಾನು ಕೊಡಗಿಗೆ ಹೋಗ್ತಾ ಇದ್ದೆ. ಹಾಗೇ ನನ್ ಗೆಳೆಯ ನಾಗರಾಜ್ ಕಡೆಯಿಂದ ಟೈಮ್‍ ಗೆ ಸರಿಯಾಗಿ ಹೋಗ್ದಿದ್ದಕ್ಕೆ ಬೈಯಿಸ್ಕೋ ಬೇಕಲ್ಲ ಅಂತ ತಲೆ ನೋವು; ರಾತ್ರಿ 12 ಘಂಟೆಗೆ ಹೊರಡ್‍ ಬೇಕಾಗಿದ್ದ ಟ್ರಿಪ್ ಶೆಡ್ಯೂಲ್ನ 2:30 ತನಕ ನಾಗರಾಜ್ ನನ್ ಸಲುವಾಗಿ ಮುಂದೆ ಹಾಕಿದ್ದ. ಲಾಗ್‍ ಔಟ್ ಟೈಮ್‍ ಗೆ ಸರಿಯಾಗಿ ಕಂಪ್ಯೂಟರ್‍ ನ ರೀಸ್ಟಾರ್ಟ್ ಮಾಡಿ ಬ್ಯಾಗ್‍ ನ ಎತ್ಕೊಂಡು ಓಡಿದ್ದೇ ಸೀದಾ ಎಲ್ಲರ ಎದುರುಗಡೆ ಹೋಗಿ ಬೈಯಿಸ್ಕೋಳ್ಳೋಕೆ ಸಿದ್ಧನಾಗಿದ್ದೆ.

ಟ್ರಿಪ್ ಸಲುವಾಗಿ ಬುಕ್ ಮಾಡಿದ್ದ ಟೆಂಪೋ ಟ್ರಾವೆಲ್ಲರ್ ಗಾಡಿಯ ಒಳಗೆ ಲಾಸ್ಟ್ ಸೀಟಲ್ಲಿ ಮಲ್ಕೊಂಡೆ. ಚಹಾ ಕುಡಿಲಿಕ್ಕೆ ಒಳ್ಳೆ ಟೀ ಅಂಗಡಿ ನೋಡ್ತಾ ಇದ್ದ ನಮಗೆ ಶ್ರೀರಂಗಪಟ್ಟಣದ ಹತ್ರ ಗಾಡಿ ನಿಲ್ಲಿಸಲಿಕ್ಕೆ ಒಳ್ಳೆ ನಿಲ್ದಾಣನೇ ಸಿಕ್ಕಿತ್ತು. ಚಹಾ ಹೀರುತ್ತಾ ಒಬ್ಬರನ್ನೊಬ್ಬರು ಚುಡಾಯಿಸುತ್ತಾ ಅನೇಕ ವಿಚಾರಗಳನ್ನ ಮಾತಾಡಿದ್ದು ಮನಸ್ಸಿಗೆ ಸ್ವಲ್ಪ ಮಜಾ ನೀಡಿತ್ತು. ಅಲ್ಲಿಂದ ಹುಣಸೂರು ದಾಟೊ ತನಕ ನಿದ್ರಾದೇವಿ ಭೇಟಿನೇ ಆಗ್ಲಿಲ್ಲ. ಮನಸಲ್ಲಿ ಖುಷಿ ಕೊಡೊ ಹಳೆ ನೆನಪುಗಳಲ್ಲಿ ಈಜಾಡ್ತಾ, ಖುಷಿ ಕೊಟ್ಟಿರೋ ಆ ದಿನಗಳು ಮತ್ತೆ ಜೀವನದ ದಾರಿಯಲ್ಲಿ ಬರಲ್ಲಾ ಅನ್ನೋ ದುಃಖದ ಜೊತೆ ನಿದ್ದೆಗೆ ಜಾರಿದ್ದೆ.

ಚಳಿ ಚಳಿ ಆಗ್ತಾ ಇದೆ; ಕೊಡಗಿಗೆ ಎಂಟ್ರಿ ಆದ್ವಿ ಅನ್ನೋ ಸಂದೇಶ ಮನಸ್ಸು-ಮೆದುಳಿಗೆ ತಲುಪಿತ್ತು. ಎಚ್ಚರ ಆದಾಗ ಮಡಿಕೇರಿಯ ದೃಶ್ಯ ಮನಸ್ಸಿನಲ್ಲಿ ಮಾಸದೆ ಇರೋ ಛಾಪು ಮೂಡಿಸಿತ್ತು. ಮಡಿಕೇರಿಯ ಆ ಪ್ರಕೃತಿ ಸೌಂದರ್ಯಕ್ಕೆ ನನ್ನ ಮನಸ್ಸಿನ ಒತ್ತಡಗಳನ್ನ ಎರಡು ದಿವಸ ಅಡ ಇಟ್ಟು, ದೈವದತ್ತವಾದ ನೆಮ್ಮದಿಯನ್ನು ಪಡ್ಕೊಂಡಿದ್ದೆ. ಮೊದಲೇ ನಿರ್ಧರಿಸಿರೋ ಹೋಂ ಸ್ಟೇ ಗೆ ಹೋದ ನಾವು ಒಂದೇ ಘಂಟೆಯೊಳಗೆ ರೆಡಿ ಆಗಿ ಹೊರಗೆ ಯಾವುದಾದ್ರು ಹೋಟೆಲ್ ಗೆ ದಾಳಿ ಮಾಡೋಕ್ಕೆ ಹೊರಟೆವು. ತಿಂಡಿ ಮುಗಿಸಿ ಬಿಸಿ ಬಿಸಿ ಕಾಫಿ ಹೀರುತ್ತಾ ಮುಂದಿನ ಕಾರ್ಯಕ್ರಮಗಳನ್ನು ನಿರ್ಧಾರ ಮಾಡ್ಕೊಂಡು ತಲಕಾವೇರಿ ಕಡೆ ನಮ್ಮ ಪಯಣ ಸಾಗಿತು.

ತಲಕಾವೇರಿ ನೋಡೋ ಖುಷಿಲಿ ಒಂದು ಘಂಟೆ ಪ್ರಯಾಣ ಮಾಡಿದ್ದು ಗೊತ್ತೇ ಆಗಲಿಲ್ಲ. ಗಾಡಿ ಇಳ್ಕೊಂಡು ಮಂಜಿನ ನಡುವೆ ನಡಕೊಂಡು ಹೋಗ್ತಾ ಇದ್ರೆ ಏನೋ ರೋಮಾಂಚನ. ಮಧ್ಯೆ ಮಧ್ಯೆ ನಮ್ಮ ಫೋಟೋ ಕ್ಲಿಕ್ಕಿಸುವ ಕಾರ್ಯವೂ ಸಾಂಗವಾಗಿ ನಡೆಯುತ್ತಿತ್ತು. ಕಾವೇರಿ ಉಗಮ ಸ್ಥಾನಕ್ಕೆ ಬಂದ ನಾನು ಕಾವೇರಿ ನೀರನ್ನ ಸ್ಫಟಿಕಕ್ಕೆ ಹೊಲಿಸಿದ್ದೆ. ಅಷ್ಟು ನಿರ್ಮಲವಾದ ನೀರನ್ನ ಕುಡಿದಿದ್ದಕ್ಕೆ ಧನ್ಯತಾಭಾವ ನನ್ನಲ್ಲಿ ಮೂಡಿತ್ತು. ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆದು ಮತ್ತೆ ಆಹಾರದ ಬೇಟೆ ಆಡ್ತಾ ಮಡಿಕೇರಿಗೆ ಪಾದಾರ್ಪಣೆ ಮಾಡಿದೆವು. ಹೊಟ್ಟೆ ಪೂಜೆ ಮುಗಿಸಿಕೊಂಡು ರಾಜಾ ಸೀಟ್ ಗೆ ನಮ್ಮ ಪಯಣ. ರಾಜಾ ಸೀಟ್ ಪಾರ್ಕಿಗೆ ಪ್ರವೇಶ ಶುಲ್ಕ ಕಟ್ಟಿ ಅಲ್ಲಿ ಬಂದಿರೋ ಜೋಡಿ ಹಕ್ಕಿಗಳ ಬಗ್ಗೆ ತಮಾಷೆ ಮಾಡ್ತಾ ಒಳಗೆ ಬಂದ ನಮಗೆ ಅಲ್ಲಿಯ ವಾತಾವರಣ ದಿನ ಪೂರ್ತಿ ಅಡ್ಡಾಡಿ ಆಗಿದ್ದ ಆಯಾಸಕ್ಕೆ ತಂಪು ನೀಡಿತ್ತು. ಅಲ್ಲೆಲ್ಲ ಅಡ್ಡಾಡಿ ಮತ್ತೆ ಹೋಂ ಸ್ಟೇ ಗೆ ಬಂದಾಗ ರಾತ್ರಿ 8 ಘಂಟೆಯಾಗಿತ್ತು. ಎಲ್ಲರೂ ಹಸಿದ ಹೆಬ್ಬುಲಿಗಳಾಗಿದ್ದರು. ಮತ್ತೆ ಹೊಟ್ಟೆ ಪೂಜೆ, ನಿದ್ರಾ ದೇವಿ ಮಡಿಲಲ್ಲಿ ಪ್ರಕೃತಿ ಮಾತೆಯ ಜೋಗುಳ.


ರವಿವಾರ ಬೆಳಿಗ್ಗೆ ತಿಂಡಿ ತಿಂದ್ಕೊಂಡು ಓಂಕಾರೇಶ್ವರ ದೇವಸ್ಥಾನಕ್ಕೆ ಭೇಟಿ. ಅಲ್ಲಿಂದ ನಮ್ಮ ದೌಡು ಶುರು ಆಗಿದ್ದು ದುಬಾರೆ ಕಾಡಿಗೆ. ಅಲ್ಲಿ ಕ್ಯಾಮೆರ ಕಣ್ಣಿಗೆ ಪೋಸ್ ಕೊಡ್ತಾ ಸ್ವಲ್ಪ ಕಾಲಹರಣ ಮಾಡಿದೆವು. ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ರವಿವಾರ, ಮಧ್ಯಾಹ್ನ ಆದರೂ ಅಂಬರದಲ್ಲಿ ರವಿಯ ದರ್ಶನದ ಸುಳಿವು ಸ್ವಲ್ಪವೂ ಇರಲಿಲ್ಲ. ಹೀಗೇ ಮುಂದೆ ಕಾವೇರಿ ನಿಸರ್ಗಧಾಮ, ಗೋಲ್ಡನ್ ಟೆಂಪಲ್‍ ಗಳನ್ನೆಲ್ಲಾ ನೋಡಿದ ಮೇಲೆ ನನ್ನ ಬಹು ಕಾಲದ ಕೊಡಗಿನ ಪ್ರಯಾಣದ ಆಸೆ ಈಡೇರಿತು. ಪ್ರಕೃತಿ ಮಾತೆಯಲ್ಲಿ ಅಡ ಇಟ್ಟ ಟೆನ್ಶನ್‍ ಗಳನ್ನೆಲ್ಲ ವಾಪಾಸ್ ತೆಗೆದುಕೊಂಡು ನಮ್ಮ ಪಯಣ ಉದ್ಯಾನನಗರಿಯ ಕಡೆಗೆ ಸಾಗಿತ್ತು.

ಲೇಖಕರ ಕಿರುಪರಿಚಯ
ಶ್ರೀ ಕಾರ್ತಿಕ್ ದಿವೇಕರ್

ಮೂಲತಃ ಹಾವೇರಿ ಜಿಲ್ಲೆಯವರಾದ ಇವರು ಪ್ರಸ್ತುತ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಉದ್ಯೋಗಿ.

ಓದು ಇವರ ನೆಚ್ಚಿನ ಹವ್ಯಾಸಗಳಲ್ಲೊಂದು, ಸಂಗೀತ ಕೇಳುವುದರ ಜೊತೆಗೆ ಆಧ್ಯಾತ್ಮ ಸಂಬಂಧಿತ ವಿಚಾರಗಳಲ್ಲಿ ಅಪಾರ ಆಸಕ್ತಿ. ಬರವಣಿಗೆ ಕ್ಷೇತ್ರದಲ್ಲಿ ಇದು ಇವರ ಪ್ರಥಮ ಪ್ರಯತ್ನ.

Blog  |  Facebook  |  Twitter

1 ಕಾಮೆಂಟ್‌: