ಸೋಮವಾರ, ನವೆಂಬರ್ 25, 2013

ಬೆಂಗಳೂರಿನ ಸುತ್ತಲಿರುವ ನವ-ದುರ್ಗಗಳು

ಹಿಂದೊಮ್ಮೆ ಉದ್ಯಾನವನಗಳ ನಗರಿಯೆಂದೇ ಪ್ರಸಿದ್ಧವಾಗಿದ್ದ ನಮ್ಮ ಬೆಂಗಳೂರು ಇಂದು ಉದ್ಯೋಗ ನಗರಿಯಾಗಿ ಮಾರ್ಪಾಡಾಗಿದೆ. ಅಭಿವೃಧ್ಧಿಯ ಮಜಲಿನಲ್ಲಿ ಅನೇಕ ಉದ್ಯಾನವನಗಳು, ಕೃಷಿಭೂಮಿ, ಹಸಿರು ತಾಣಗಳು ಇಂದು ದೊಡ್ಡ-ದೊಡ್ಡ ಕಟ್ಟಡಗಳು, ಮಾಲ್‍ ಗಳು, ಫ್ಲಾಟ್‍ ಗಳಿಂದಾಗಿ ಕಾಂಕ್ರೀಟ್ ನಾಡಾಗಿ ಪರಿವರ್ತನೆ ಹೊಂದಿದೆ! ಇಂತಹ ವಾತಾವರಣದಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜನಸಾಮಾನ್ಯರು, ಸಾಫ್ಟ್-ವೇರ್ ಉದ್ಯೋಗಸ್ಥರು, ಕಾಲೇಜು ವಿದ್ಯಾರ್ಥಿಗಳು ಹೀಗೆ ವಿವಿಧ ವರ್ಗದ ಅನೇಕ ಜನರ ಸಾಮಾನ್ಯವಾದ ಫಿರ್ಯಾದು ಏನು ಗೊತ್ತಾ? "ತಮ್ಮ ಬಿಡುವಿನ ಸಮಯದಲ್ಲಿ ಕಾಲ ಕಳೆಯಲು, ಅಥವಾ ಪಿಕ್ನಿಕ್‍ ಗಾಗಿ ಬೆಂಗಳೂರಲ್ಲಿ ಕೇವಲ ಕೆಲವೊಂದು ಪ್ರಸಿದ್ಧ ಸ್ಥಳಗಳು, ಮಾಲ್‍ ಗಳನ್ನು ಹೊರತು ಪಡಿಸಿದರೆ, ಒಳ್ಳೆಯ ತಾಣಗಳು ಬಹಳ ವಿರಳ!".

ನನಗೂ ಒಂದೊಮ್ಮೆ ಹೀಗೆಯೇ ಅನಿಸುತ್ತಿತ್ತು... ಮದುವೆಯ ನಂತರ, ನನ್ನ ಪತಿಯು ಈ ಅನಿಸಿಕೆಯನ್ನು ಬದಲಾಯಿಸಿದರು. ಅವರ ಪಯಣದ ಹುಚ್ಚು, ಹೊಸ ಜಾಗಗಳ ಅನ್ವೇಷಣೆ, ಸ್ಥಳಗಳ ಪೂರ್ವ ಇತಿಹಾಸ ತಿಳಿದುಕೊಳ್ಳುವ ಆಸಕ್ತಿ, ನನ್ನ ದೃಷ್ಟಿಕೋನ ಅವರಂತೆಯೇ ಬದಲಾಯಿಸಿತು... ಹಾಗಾಗಿ ಈ ಬರವಣಿಗೆ. ಬೆಂಗಳೂರಿನ ಸುತ್ತಲಿರುವ ಪ್ರಕೃತಿ ಸೌಂದರ್ಯ, ಏಕಾಂತತೆ, ನೆಮ್ಮದಿ, ರಜಾದಿನಗಳನ್ನು ಸವಿಯಲು ಸೂಕ್ತ ತಾಣಗಳ ಹುಡುಕಾಟದಲ್ಲಿರುವವರಿಗೆ ಒಂದು ಸಣ್ಣ ಮಾಹಿತಿ. ವಿಷೇಶವಾಗಿ ನಾನು ಆರಿಸಿರುವ ವಿಷಯ ನಮ್ಮ ಬೆಂಗಳೂರಿನ ಸುತ್ತಮುತ್ತ ಇರುವ ನವ ಅಂದರೆ ಒಂಭತ್ತು ದುರ್ಗಗಳು. ಈ ಕೋಟೆಗಳ ಬಗ್ಗೆ ಕಿರುಪರಿಚಯ ಇಲ್ಲದೆ:

1. ಸಾವನ ದುರ್ಗ
ಸಾವನ ದುರ್ಗ, ಬೆಂಗಳೂರಿನಿಂದ ಸುಮಾರು 60 ಕಿ. ಮೀ. ಪಶ್ಚಿಮ ದಿಕ್ಕಿಗೆ ಮಾಗಡಿ ರಸ್ತೆಯ ಬದಿಗಿದೆ. ಸಮುದ್ರ ಮಟ್ಟದಿಂದ 1226 ಅಡಿ ಎತ್ತರವಿರುವ ಈ ದುರ್ಗವು, ಏಷಿಯಾ ಖಂಡದಲ್ಲಿ ದೊಡ್ಡ ಏಕಶಿಲಾ ಬಂಡೆಗಳಲ್ಲೊಂದಾಗಿದೆ. ಸಾವನ ದುರ್ಗವು, ಕರಿ-ಗುಡ್ಡ ಹಾಗು ಬಿಳಿ-ಗುಡ್ಡ ಎಂಬ ಎರಡು ಬೆಟ್ಟಗಳಿಂದ ರೂಪುಗೊಂಡಿದೆ.

ಹೊಯ್ಸಳರ ಅವಧಿಯಲ್ಲಿ ಸಾವಂದಿಯೆಂದು ಕರೆಯಲ್ಪದುತ್ತಿ. ಹೈದರಾಲಿ ಸಮಯದಲ್ಲಿ ಶಿಕ್ಷೆಗೊಳಗಾದವರನ್ನು ಬೆಟ್ಟದ ತುದಿಯಿಂದ ತಳ್ಳಿ ಮರಣದಂಡನೆ ನೀಡುತ್ತಿದ್ದರಿಂದ ಈ ಸ್ಥಳವು ಸಾವನ ದುರ್ಗವೆಂದು ಕರೆಯಲ್ಪಟ್ಟಿತು.

ಕೆಂಪೇಗೌಡರ ಆಳ್ವಿಕೆಯಲ್ಲಿ ಇದು ಅವರ ಉಪಸಂಸ್ಥಾನವಾಗಿದ್ದು, ಬೆಟ್ಟದ ತುದಿಯಲ್ಲಿ ಒಂದು ನಂದಿ ಮಂಟಪವನ್ನು ನಿರ್ಮಿಸಿದ್ದಾರೆ. ದುರ್ಗದ ಅಡಿಯಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿಯ ದರ್ಶನ ಪಡೆಯಲು ಆಸ್ತಿಕರು ಆಗಮಿಸುತ್ತಾರೆ. ಬೆಟ್ಟದ ಸುತ್ತ ಮುತ್ತ ಕಾಡು ಆವರಿಸಿದ್ದು, ದುರ್ಗದ ಮೇಲಿನಿಂದ ಒಮ್ಮೆ ಸುತ್ತ ನೋಡಿದರೆ ಒಂದೆಡೆ ಮಾಗಡಿ ಪಟ್ಟಣ, ಮತ್ತೊಂದೆಡೆ ಮಂಚಿನಬಲೆ ಅಣೆಕಟ್ಟು, ಇವನ್ನು ಸುತ್ತುವರಿದ ಕಾಡು... ಅದ್ಭುತ!!! ಇತ್ತೀಚಿನ ದಿನಗಳಲ್ಲಿ ಬೆಟ್ಟ-ಗುಡ್ಡ ಹತ್ತುವ ಹವ್ಯಾಸಿಗರಿಗೆ, ಸಾವನ ದುರ್ಗ ಪ್ರಿಯವಾದ ತಾಣ. ಸಮೀಪದಲ್ಲೇ ಇರುವ ಮಂಚನಬಲೆ ಅಣೆಕಟ್ಟು ಜಲಕ್ರೀಡೆಗಳಿಗೂ ಹೆಸರುವಾಸಿ.


2. ದೇವರಾಯನ ದುರ್ಗ
ಬೆಂಗಳೂರಿನಿಂದ ಸುಮಾರು 70 ಕಿ. ಮೀ., ತುಮಕೂರು ರಸ್ತೆ, ದಾಬಸ್ ಪೇಟೆಯ ಬಳಿಯಿದೆ. ಬೆಟ್ಟದ ಎತ್ತರ 3940 ಅಡಿ. ದುರ್ಗದ ಸುತ್ತಲೂ ಕಾಡು ಆವರಿಸಿಕೊಂಡಿದ್ದು, ಅನೇಕ ದೇವಾಲಯಗಳನ್ನು ಹೊಂದಿದೆ. ಬೆಟ್ಟದ ತುದಿಯಲ್ಲಿ ಶ್ರೀ ಯೋಗನರಸಿಂಹ ಹಾಗು ಆದಿಯಲ್ಲಿ ಭೋಗನರಸಿಂಹ ಸ್ವಾಮಿ ದೇವಸ್ಥಾನಗಳು ಪ್ರಮುಖವಾದವು. ಈ ದುರ್ಗದುದ್ದಕ್ಕೂ ಸಂಪೂರ್ಣ ರಸ್ತೆಯ ಸೌಲಭ್ಯವಿದ್ದು, ವಾಹನದಲ್ಲಿಯೇ ಬೆಟ್ಟದೆಲ್ಲೆಡೆ ಸಂಚರಿಸಬಹುದಾದ್ದರಿಂದ, ಮಕ್ಕಳಾದಿ ವೃದ್ಧರೂ ಇಡೀ ಸಂಸಾರ ಸಮೇತ ಪ್ರವಾಸಕ್ಕೆ ಪೂರಕವಾಗಿದೆ.

ಇಲ್ಲಿನ ಮತ್ತೊಂದು ಆಕರ್ಷಣೆ ನಾಮದ ಚಿಲುಮೆ. ಇದರ ಹಿಂದೆ ಪೌರಾಣಿಕ ಸಂಗತಿಯೊಂದು ಅಡಗಿದೆ, ತ್ರೇತಾಯುಗದಲ್ಲಿ ಶ್ರೀರಾಮ ವನವಾಸದ ಸಂಧರ್ಭದಲ್ಲಿ ಇಲ್ಲಿ ನೆಲೆಸಿದ್ದ ಸಂಕೇತ ಈ ಚಿಲುಮೆ. ತಿಲಕ ಹಚ್ಚಲು ಸಮೀಪದಲ್ಲೆಲ್ಲೂ ನೀರು ಸಿಗದ ಕಾರಣ ಶ್ರೀರಾಮ ಅಲ್ಲೇ ಕಂಡ ಬಂಡೆಯೊಂದಕ್ಕೆ ಬಾಣಬೀಸಿದ ಕೂಡಲೆ ಬಂಡೆಯಿಂದ ನೀರು ಚಿಮ್ಮತೊಡಗಿತು, ಆ ನೀರಿನಿಂದ ಕುಂಕುಮ ಮಿಶ್ರಿತಮಾಡಿ ತಿಲಕ ಹಚ್ಚಿಕೊಂಡರೆಂಬ ಕಥೆಯಿದೆ. ಬಂಡೆಯಿಂದ ಇಂದಿಗೂ ನೀರು ಹರಿಯುತ್ತಿದೆ, ಅಲ್ಲೇ ಶ್ರೀರಾಮನ ಪಾದಗಳ ಗುರುತೂ ಕಾಣಬಹುದು. ಇದು ಜಯಮಂಗಳ ನದಿಯ ಉಗಮಸ್ಥಾನವೂ ಹೌದು!

ಮೈಸೂರ ಚಿಕ್ಕದೇವರಾಯ ಒಡೆಯರ ಕಾಲದಲ್ಲಿ ದೇವರಾಯನ ದುರ್ಗವೆಂದು ನಾಮಾಂಕಿತಗೊಂಡಿತು. ಇಲ್ಲಿನ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ದ್ರಾವಿಡ ಶೈಲಿಯಲ್ಲದ್ದು ಶ್ರೀಕಂಠೀರವ ನರಸರಾಜ-1 ರಿಂದ ನಿರ್ಮಿತವಾಗಿದೆ. ದೇವಾಲಯದ ಬಳಿ ಮೂರು ಸುಂದರ ಕಲ್ಯಾಣಿಗಳಿವೆ. ಅದೇ ನರಸಿಂಹ ತೀರ್ಥ, ಪರಸರ ತೀರ್ಥ ಮತ್ತು ಪಾದ ತೀರ್ಥ. ಇಲ್ಲಿ ಕಾಣಬಹುದಾದ ಮತ್ತೊಂದು ಗುಡಿ, ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೂ ಪುರಾತನವಾದದ್ದು - ಹನುಮಂತನು ಕೈಮುಗಿದು ನಿಂತಿರುವ ಭಂಗಿ, ಅದೇ ಸಂಜೀವರಾಯನ ಗುಡಿ.

ಬೆಟ್ಟದ ಮೇಲಿನಿಂದ ಕಾಣುವ ದೃಶ್ಯ ಮನೋಹರ, ಪಕ್ಷಿಗಳ ವೀಕ್ಷಣೆ ಹಾಗು ಬೈಸೈಕಲ್ ಸವಾರರಿಗೂ ಆಹ್ಲಾದಕರ ತಾಣ. ಒಟ್ಟಾರೆ ಹೇಳುವುದಾದರೆ ಒಮ್ಮೆಯಾದರೂ ವೀಕ್ಷಿಸಲೇಬೇಕಾದಂತಹ ಸ್ಥಳ.


3. ಕಬ್ಬಾಳ ದುರ್ಗ
ಕಬ್ಬಾಳ ದುರ್ಗವಿರುವುದು ಬೆಂಗಳೂರಿನಿಂದ ಸುಮಾರು 80 ಕಿ. ಮೀ., ದೂರದಲ್ಲಿ. ಇಲ್ಲಿಗೆ 2-3 ತಾಸುಗಳ ಪ್ರಯಾಣ. ಮೊದಲಿಗೆ ಕನಕಪುರ ತಲುಪಿ ನಂತರ ಸಾತನೂರಿನೆಡೆಗೆ ಸಾಗಿ, ಅಲ್ಲಿ ಬಲಕ್ಕೆ 6 ಕಿ. ಮೀ. ಕ್ರಮಿಸಿದರೆ ಸಿಗುವುದೇ ಕಬ್ಬಾಳ ಹಳ್ಳಿ. ಬೆಟ್ಟದ ಮೇಲೆ ಕಬ್ಬಾಳಮ್ಮನ ಗುಡಿಯಿರುವ ಕಾರಣ ದುರ್ಗವು ಅದೇ ಹೆಸರಿನಿಂದ ಕರೆಯಲ್ಪಟ್ಟಿದೆ.

ದುರ್ಗದ ಕಟ್ಟಡಗಳು ಅವಶೇಷಗಳಾಗಿ ಮಾರ್ಪಾಡಾಗಿದ್ದರೂ, ಕಬ್ಬಾಳಮ್ಮನ ಗುಡಿಯಲ್ಲಿ ಮಾತ್ರ ಇಂದಿಗೂ ಪೂಜಾಕಾರ್ಯಗಳು ನಡೆಯುತ್ತಿದ್ದು, ತಾಯಿಯ ಕೃಪೆಗಾಗಿ ಬಹುತೇಕ ಹಳ್ಳಿಯ ಜನರು ಇಲ್ಲಿಗೆ ಆಗಮಿಸುತ್ತಾರೆ. ಹೊಸದಾಗಿ ಬೆಟ್ಟ-ಗುಡ್ಡಗಳನ್ನೇರುವ ಹವ್ಯಾಸ ಆರಂಭಿಸಲು ಸೂಕ್ತವಾದ ಸ್ಥಳ. ಹಸಿರು ಹಾಗು ಬಂಡೆಗಳ ಮಿಶ್ರತ ಪ್ರದೇಶವು ನೋಡಲು ಸುಂದರ!


4. ಹುತ್ರಿದುರ್ಗ
ಕುಣಿಗಲ್ ಮಾಗಡಿ ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಸುಮಾರು 60 ಕಿ. ಮೀ. ದೂರದಲ್ಲಿದೆ. ಸರಿಸುಮಾರು 500 ವರ್ಷಗಳ ಹಿಂದೆ, ಕೆಂಪೇಗೌಡರಿಂದ ನಿರ್ಮಿತವಾಗಿದ್ದು, ಅವರ ಬೇಸಿಗೆಯ ರಾಜಧಾನಿಯಾಗಿತ್ತು. ದುರ್ಗದ ಮೇಲೆ ಶಾಕಾರೇಶ್ವರ ದೇವಾಲಯ ಹಾಗು ನಂದಿ ಮಂಟಪ ಕಾಣಬಹುದು. ಬೆಟ್ಟದ ಮಧ್ಯಭಾಗದಲ್ಲಿ ಆಂಜನೇಯ ಸ್ವಾಮಿ ಗುಡಿ, ಕೆಳಭಾಗದ ಹಳ್ಳಿಯಲ್ಲಿ ಶ್ರೀ ಆದಿ ನಾರಾಯಣಸ್ವಾಮಿ ಮತ್ತು ವೀರಭದ್ರಸ್ವಾಮಿ ದೇವಾಲಯಗಳಿವೆ. ಇಲ್ಲಿ ಕೇವಲ ಸೋಮವಾರ, ಶುಕ್ರವಾರಗಳಂದು ಮಾತ್ರ ಪೂಜೆ ಸಲ್ಲಿಸಲಾಗುತ್ತದೆ.

ದುರ್ಗದಲ್ಲಿ ಕೋಟೆ, ಸೈನಿಕರ ಮನೆಗಳು, ಕಲ್ಲಿನ ಮಂಚ ಹೀಗೆ ಅನೇಕ ಅವಶೇಷಗಳು ಉಳಿದಿದೆ, ಐತಿಹಾಸಿಕ ಕಥೆಗಳನ್ನು ಸಾರುವ ಇಂತಹ ಜೀವಂತ ಪ್ರದೇಶಗಳೆಡೆಗೆ ಸರ್ಕಾರ ಸ್ವಲ್ಪ ಗಮನ ಹರಿಸಬೇಕು. ನಾಡಗೌಡ ಕೆಂಪೇಗೌಡರ ನೆನಪಿಗಾಗಿ ಸಂಗ್ರಹಾಲಯ ಸ್ಥಾಪನೆ, ಅವರು ನಿರ್ಮಿಸಿದ ಅನೇಕ ಕಟ್ಟಡಗಳ ಸಂರಕ್ಷಣಾ ಕಾರ್ಯಕ್ರಮ ಜರುಗಬೇಕಾಗಿದೆ.


5. ಮಕಳೀ ದುರ್ಗ
ಮಕಳೀ ದುರ್ಗ ದೊಡ್ಡಬಳ್ಳಾಪುರದಿಂದಾಚೆಗೆ 10 ಕಿ. ಮೀ. ವ್ಯಾಪ್ತಿಯಲ್ಲಿದೆ. ಅಂದರೆ ಬೆಂಗಳೂರಿನಿಂದ ದೂರ ಸುಮಾರು 60 ಕಿ. ಮೀ. 117 ಮಿ ಎತ್ತರವಿದ್ದು, ಇಲ್ಲಿನ ಬಂಡೆಗಳು ಬೆಣಚು ಕಲ್ಲಿನದಾಗಿವೆ. ದಿಣ್ಣೆಯ ತುತ್ತ ತುದಿಯಲ್ಲಿ ಮಕಳೀ ದುರ್ಗದ ಕೋಟೆಯಿದೆ. ಇಲ್ಲಿ ಪುರಾತನ ಶಿವನ ಮಂದಿರವಿದೆ.

ಆರ್ಯುವೇದ ಸಸ್ಯರಾಶಿ ಬೆಟ್ಟದೆಲ್ಲೆಡೆ ಹಬ್ಬಿದೆ. ಸಮೀಪದಲ್ಲೇ ರೈಲ್ವೇ ಹಳಿಯಿದ್ದು. ರೈಲ್ವೇ ಟ್ರೆಕ್ಕಿಂಗ್‍ಗಾಗಿಯೇ ಅನೇಕ ಹುಡುಗರು ಇಲ್ಲಿಗೆ ಬರುತ್ತಾರೆ. ಪರಿಸರವನ್ನು ಆನಂದಿಸಲು ಪೂರಕವಾದ ಪ್ರದೇಶ. ಬೆಟ್ಟದ ಮೇಲೆ ಕುಳಿತು, ಕೆಳಗಡೆ ರೈಲುಗಳು ಸಂಚರಿಸುವುದನ್ನು ಗಮನಿಸುವುದೇ ಒಂದು ಸಂತಸ!!


6. ಚನ್ನರಾಯನ ದುರ್ಗ
ಬೆಂಗಳೂರಿನಿಂದ ಸುಮಾರು 100 ಕಿ. ಮೀ., ತುಮಕೂರು ಜಿಲ್ಲೆಯ ಮಧುಗಿರಿಯ ಹತ್ತಿರವಿದೆ ಈ ಚನ್ನರಾಯನ ದುರ್ಗ. ಇದರ ಇತಿಹಾಸ ಕೆದಕುತ್ತಾ ಹೋದಲ್ಲಿ, ತಿಳಿಯುವ ಇತಿಹಾಸ – ಇದು ಮೊದಲಿಗೆ ಮರಾಠರ ನೇತೃತ್ವದಲ್ಲಿತ್ತು. ನಂತರ ಮೈಸೂರು ಒಡೆಯರ ಪಾಲಾಯಿತು. ತದನಂತರ ಮೂರನೇ ಮೈಸೂರು ಯುಧ್ಧದಲ್ಲಿ ಬ್ರಿಟಿಷರು ಆಕ್ರಮಿಸಿದರು.

ಚನ್ನರಾಯನ ದುರ್ಗದ ಬಂಡೆಗಳು ಕಡಿದಾಗಿದ್ದು ಹತ್ತಲು ಬಹಳ ಕಷ್ಟಕರ. ಬೇರೆಲ್ಲ ದುರ್ಗಗಳಂತೆ ಇಲ್ಲಿಯೂ ಕೋಟೆ, ಕಲ್ಲಿನ ಮಂಟಪ ಹೀಗೆ ಇನ್ನಿತೆರೆ ಅವಶೇಷಗಳಿದ್ದು, ನಶಿಸುವ ಅಂಚಿನಲ್ಲಿವೆ.

ಇಲ್ಲಿನ ಕೋಟೆ 3 ಹಂತದಲ್ಲಿದೆ:
ಅ. ಮೊದಲನೆಯ ಹಂತದಲ್ಲಿ ಒಂದು ಸಣ್ಣ ಪುಷ್ಕರಿಣಿಯಿದೆ. ಕೋಟೆಯಲ್ಲಿ ವಾಸಿಸುತ್ತಿದ್ದ ಜನರಿಗೆ ನೀರಿನ ಆಧಾರವಿರಬಹುದು. ಬದಿಗೆ ಸಣ್ಣ ಗುಡಿಯಿದ್ದು, ಆಕರ್ಷಣೀಯವಾಗಿದೆ.
ಆ. ಎರಡನೇ ಹಂತ, ತೀರ ಹದಗೆಟ್ಟ ಸ್ಥಿತಿಯಲ್ಲಿದೆ. ಕಾರಣ ನಿಧಿ ಅನ್ವೇಷಣೆಯ ಹುಡುಕಾಟದಲ್ಲಿ ಕಟ್ಟಡಗಳೆಡೆ ಗಮನ ಹರಿಸದೇ ಎಲ್ಲಂದರಲ್ಲಿ ಕೆಡವಿ ಹಾಳುಮಾಡಿದ್ದಾರೆ. ನಿಧಿಯೂ ಸಿಗಲಿಲ್ಲ, ಕೋಟೆಯೂ ಹಾಳಾಯಿತು. ಈ ಕೋಟೆಯ ನಿರ್ಮಾಣದ ವೈಶಿಷ್ಟ್ಯ ಹೇಗಿದೆಯೆಂದರೆ, ಹೊರಗಿನವರಿಗೆ ಇದೇ ಕೋಟೆಯ ಕೊನೆಯೆಂಬಂತೆ ಭಾಸವಾಗುತ್ತದೆ, ಗುಪ್ತ ದಾರಿಯ ಇರುವಿಕೆಯ ಸಂಶಯ ಸಹ ಬಾರದಂತೆ ರಚಿಸಿದ್ದಾರೆ. ಪ್ರಾಯಶಃ ಶತ್ರುಗಳನ್ನು ದಾರಿತಪ್ಪಿಸುವ ತಂತ್ರವಿರಬಹುದು.
ಇ. ಮೂರನೇ ಹಂತ, ದುರ್ಗದ ತುತ್ತ ತುದಿಯಲ್ಲಿ ಕೋಟೆಯ ಕಾವಲಿಗಾಗಿ ಮೀಸಲಾದ ಸ್ಥಳ. ಸೈನಿಕರು ಕೋಟೆ ಕಾಯುತಿದ್ದರೆನ್ನಲೂ ಅಲ್ಲಿರುವ ಪಾಳುಬಿದ್ದ ಕಟ್ಟಡಗಳೇ ಸಾಕ್ಷಿ. ಇಲ್ಲಿಂದ ಕಾಣುವ ದೃಶ್ಯ ಮನೋಹರ!


7. ನಂದೀ ದುರ್ಗ
ನಂದೀ ಬೆಟ್ಟ, ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ, ಬೆಂಗಳೂರಿನಿಂದ 60 ಕಿ. ಮೀ. ದೂರ. ನಂದೀ ಬೆಟ್ಟ ಪ್ರವಾಸಿ ತಾಣವಾಗಿ ಬಹಳ ಹಿಂದಿನಿಂದಲೇ ಪ್ರಸಿದ್ಧಿ ಹೊಂದಿದೆ. ಈ ಬೆಟ್ಟವು ಅರ್ಕಾವತಿ ನದಿಯ ಮೂಲವೂ ಹೌದು. ಚೋಳರ ಸಮಯದಲ್ಲಿ ಇದು "ಆನಂದ ದುರ್ಗ"ವಾಗಿತ್ತು. ಮತ್ತೊಂದು ಕಥೆಯ ಪ್ರಕಾರ ಇಲ್ಲಿ ಯೋಗ ನಂದೀಶ್ವರ ತಪಸ್ಸುಗೈದ ಸ್ಥಳ. ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಇಲ್ಲಿ ಕೋಟೆ ನಿರ್ಮಾಣವಾಗಿದೆ. ಬೆಟ್ಟದ ಆಕಾರವೂ ಮಲಗಿರುವ ನಂದಿಯನ್ನು ಹೋಲುತ್ತದೆ. ಟಿಪ್ಪು ಸುಲ್ತಾನ ಹಾಗು ಬ್ರಿಟಿಷರ ಬೇಸಿಗೆಯ ತಂಗುದಾಣ ಪ್ರದೇಶ.

ಟಿಪ್ಪು ಡ್ರಾಪ್ - ಬೆಟ್ಟದ ಮೇಲಿನಿಂದ, ಶಿಕ್ಷೆಗೊಳಗಾದವರನ್ನು ತಳ್ಳಿ ಮರಣದಂಡನೆ ನೀಡುತ್ತಿದ್ದ ಜಾಗ. ಇಲ್ಲಿ ಸುಮಾರು ಆತ್ಮಹತ್ಯೆ ಪ್ರಯತ್ನಗಳೂ ನಡೆದಿವೆ. 1300 ವರ್ಷ ಪೂರ್ವದ ದ್ರಾವಿಡ ಶೈಲಿಯ ಶಿವ ಪಾರ್ವತಿ ದೇವಾಲಯವಿದೆ. 9ನೇ ಶತಮಾನದ ಭೋಗ ನಂದೀಶ್ವರ ದೇವಸ್ಥಾನವುಂಟು. ಬದಿಯಲ್ಲಿ ದೊಡ್ಡದೊಂದು ಕಲ್ಯಾಣಿಯಿದೆ.

ಬೆಟ್ಟದ ಎತ್ತರ 1479 ಮೀ., ತಂಪಾದ ಆಹ್ಲಾದಕರ ಪ್ರದೇಶ. ಕಾಲೇಜು ಪ್ರವಾಸಕ್ಕಾಗಲೀ, ಪರಿವಾರ ಸಮೇತ ವಿಶ್ರಮಿಸುವುದಕ್ಕಾಗಲೀ ಹೇಳಿಮಾಡಿಸಿದ ಪ್ರವಾಸೀ ತಾಣ. ಸಮೇಪದಲ್ಲೇ ಬೆಂಗಳೂರು ಅಂತರಾಷ್ತ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದರ ಕಾರಣ ವಿದೇಶೀ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಬೆಟ್ಟದ ಕೆಳಗಡೆ ಹಳ್ಳಿಗಳಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ. ವೈನ್ ಉತ್ಪಾದನೆಗೂ ಹೆಸರುವಾಸಿಯಾಗಿದೆ. ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಇಲ್ಲಿಂದ ಕಾಣುವ ದೃಶ್ಯ ವರ್ಣಿಸಲು ಪದಗಳು ಸಾಲದು, ಅನುಭವಿಸಿಯೇ ಆನಂದಿಸಬೇಕು.


8. ಹುಲಿಯೂರ ದುರ್ಗ
ಇದು ಕುಣಿಗಲ್ ತಾಲೂಕಿನ ವ್ಯಾಪ್ತಿಯಲ್ಲಿದೆ. ಬೆಂಗಳೂರಿನಿಂದ ಸುಮಾರು 80 ಕಿ. ಮೀ. ದೂರ, ಬೆಟ್ಟವು ತಲೆಕೆಳಗಾದ ಬಟ್ಟಲಿನ ಆಕಾರದಲ್ಲಿದೆ. ಎತ್ತರ 845 ಮೀ.

ಕೆಂಪೇಗೌಡರ ನೇತೃತ್ವ ಈ ದುರ್ಗದಲ್ಲಿಯೂ ಇತ್ತು. ಅವರ ಕಾಲದ ಅನೇಕ ಅವಶೇಷಗಳನ್ನು ಕಾಣಬಹುದು. ಪಕ್ಕಕ್ಕೆ ಸೇರಿದಂತೆ ಹೇಮಗಿರಿ ಬೆಟ್ಟವಿದೆ. ಹುಲಿಯೂರ ದುರ್ಗಕ್ಕಿಂತಲೂ ಎತ್ತರವಾಗಿದೆ. ಮಲ್ಲಿಕಾರ್ಜುನ ಗುಡಿಯೂ ಹೇಮಗಿರಿ ಬೆಟ್ಟದಲ್ಲಿದೆ. ಇಲ್ಲಿ ಸಂಕ್ರಾಂತಿಯ ಮರುದಿನ ಜಾತ್ರೆ ನಡೆಯುತ್ತದೆ. ಹುಲಿಯೂರ ದುರ್ಗವು ಇನ್ನೂ ಅನೇಕರಿಗೆ ಅಪರಿಚಿತ ಸ್ಥಳ. ಟ್ರೆಕ್ಕಿಂಗ್‍ಗಳಿಗೆ ಮಾತ್ರ ಸೀಮಿತವಾಗಿದೆ.


9. ಭೈರವ ದುರ್ಗ
ಬೆಂಗಳೂರಿನಿಂದಾಚೆಗೆ 60 ಕಿ. ಮೀ. ದೂರದಲ್ಲಿ, ಕುಡೂರು ತಾಲೂಕಿನಲ್ಲಿದೆ. ಕೆಂಪೇಗೌಡರಿಂದ ಕಟ್ಟಲ್ಪಟ್ಟ ದುರ್ಗ. ಭೈರವೇಶ್ವರನ ಗುಡಿಯನ್ನು ಕಾಣಬಹುದು. ಭೈರವ ದುರ್ಗ ಇನ್ನೂ ಅನ್ವೇಷಣೆಗೊಳಗಾಗದ ಸ್ಥಳ, ಹೆಚ್ಚಾದ ಮಾಹಿತಿ ಇಲ್ಲ. ಪರಿಶೋಧಕರಿಗೆ ಕುತೂಹಲಕಾರಿಯಾದ ತಾಣ.

ಮೇಲೆ ವಿವರಿಸಿದ 9 ದುರ್ಗಗಳಲ್ಲಿ ಕೆಲವು ಮಾತ್ರ ಪ್ರವಾಸಿ ತಾಣಗಳಾಗಿ ಒಳ್ಳೆಯ ಸ್ಥಿತಿಯಲ್ಲಿವೆ, ಅನೇಕ ದುರ್ಗಗಳ ಅಸ್ತಿತ್ವವೂ ಹಲವರಿಗೆ ತಿಳಿದಿಲ್ಲ. ಬೆಂಗಳೂರಿನ ಇತಿಹಾಸದ ಸಂಕೇತವಾಗಿರುವ ಇಂತಹ ದುರ್ಗಗಳು ನಶಿಸುವ ಅಂಚಿನಲ್ಲಿವೆ, ಇವುಗಳ ಸಂರಕ್ಷಣೆಗೆ ಕರ್ನಾಟಕ ಸರ್ಕಾರ ಅದರಲ್ಲೂ ವಿಷೇಷವಾಗಿ, ಪ್ರವಾಸಿ ನಿಗಮ ಗಮನ ಹರಿಸಬೇಕು. ಹಾಗೆಯೇ ಪ್ರವಾಸಿಗರೂ ಸಹ ಇಂತಹ ಪ್ರದೇಶಗಳಿಗೆ ಭೇಟಿ ನೀಡಿದಾಗ, ಸ್ವಚ್ಛತೆ ಕಾಪಾಡಿ. ಕಟ್ಟಡಗಳನ್ನು ಕೆಡವುವುದಾಗಲೀ, ಬಂಡೆಗಳ ಮೇಲೆ ಹೆಸರು ಅಥವಾ ಇನ್ನಿತರೇ ಅವಾಚ್ಯ ಪದಗಳನ್ನು ಕೊರೆಯುವುದಾಗಲೀ ಮಾಡಬೇಡಿ... ಇದು ನನ್ನ ವಿನಯಪೂರ್ವಕ ಮನವಿ ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು!!!

ಲೇಖಕರ ಕಿರುಪರಿಚಯ
ಶ್ರೀಮತಿ ಎಂ. ಕೆ. ರೇಖಾ ವಿಜೇಂದ್ರ

ಬೆಂಗಳೂರಿನ ಸಾಫ್ಟ್-ವೇರ್ ಕಂಪನಿಯೊಂದರಲ್ಲಿ ಲೀಡ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಕನ್ನಡ ನಾಡು-ನುಡಿಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ.

ಕನ್ನಡ ಚಲನಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುವ ಇವರಿಗೆ ಪ್ರಯಾಣವೆಂದರೆ ಅಚ್ಚು-ಮೆಚ್ಚು; ದೇಶ-ವಿದೇಶಗಳನ್ನು ಸಂಚರಿಸುವ ಆಸೆ.

Blog  |  Facebook  |  Twitter

4 ಕಾಮೆಂಟ್‌ಗಳು:

  1. ಒಳ್ಳೆಯ ವಿಷಯ ಆಯ್ಕೆ ಮಾಡಿಕೊಂಡಿದ್ದೀರಿ. ವಿಷಯ ಸಂಗ್ರಹಣೆ ಕೂಡ ಅದ್ಭುತ. ಚಿತ್ರಗಳು ಲೇಖನಕ್ಕೆ ಮೆರುಗು ಕೊಟ್ಟಿವೆ.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು :)
    ಪ್ರತಿಯೊಂದು ದುರ್ಗಗಳ ವಿವರಣೆ ನೀಡಿತ್ತಾ ಅದಕ್ಕೆ ಅನುರೂಪವಾದ ಚಿತ್ರಗಳನ್ನು ನೀಡಿದ್ದೆ ! ಅವುಗಳು
    ಲೇಖನದೊಂದಿಗೆ ಪ್ರಕಟವಾಗಲಿಲ್ಲ . ಆಗಿದಲ್ಲಿ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು!!!

    ಪ್ರತ್ಯುತ್ತರಅಳಿಸಿ
  3. ರೇಖಾ ವಿಜೇಂದ್ರ ಅವರೇ,

    ನಿಮ್ಮಂತೆಯೇ ಇನ್ನೂ ಹಲವರು ಕಹಳೆಯಲ್ಲಿ ಪ್ರಕಟವಾಗುತ್ತಿರುವ ಲೇಖನಗಳಲ್ಲಿ ಚಿತ್ರಗಳು ಕಾಣುತ್ತಿಲ್ಲವೆಂದು ತಿಳಿಸಿರುತ್ತಾರೆ. ಬಹುಶಃ ನೀವು Internet Explorer ಬ್ರೌಸರ್ ಬಳಸುತ್ತಿರುವಹಾಗೆ ತೋರುತ್ತದೆ. ಹಾಗಾದಲ್ಲಿ ದಯವಿಟ್ಟು ನಿಮ್ಮ ಬ್ರೌಸರ್ ನಲ್ಲಿ 'Compatibility View' ಆಯ್ಕೆಯನ್ನು ಸಕ್ರಿಯಗೊಳಿಸಿ ನಂತರ ಈ ಪುಟ ವೀಕ್ಷಿಸಿ, ಲೇಖನದೊಂದಿಗೆ ಪ್ರಕಟವಾಗಿರುವ ಎಲ್ಲಾ ಚಿತ್ರಗಳೂ ಗೋಚರಿಸುತ್ತವೆ.

    Internet Explorer ಬ್ರೌಸರ್ ನಲ್ಲಿ Compatibility View ಸಕ್ರಿಯಗೊಳಿಸುವ ಕುರಿತು Microsoft ಅವರಿಂದ ಅಧಿಕೃತ ಮಾಹಿತಿ ಇಲ್ಲಿದೆ - http://windows.microsoft.com/en-in/internet-explorer/use-compatibility-view

    ಪ್ರತ್ಯುತ್ತರಅಳಿಸಿ
  4. ಧನ್ಯವಾದ ಪ್ರಶಾಂತ್ :)
    ಹೌದು Internet Explorer ನಲ್ಲಿ ವೀಕ್ಷಿಸುತ್ತಿದ್ದೆ!
    ಈಗ ಚಿತ್ರಗಳು ಕಾಣಿಸುತ್ತಿದೆ :)

    ಪ್ರತ್ಯುತ್ತರಅಳಿಸಿ