ಬುಧವಾರ, ನವೆಂಬರ್ 20, 2013

ಕನ್ನಡ ಮತ್ತು ಉಪಭಾಷೆಗಳು

ಕನ್ನಡ ನಾಡು ಬಹಳ ವಿಶಾಲವಾಗಿದ್ದು, ಕನ್ನಡ ಭಾಷೆಯು ಸಾಕಷ್ಟು ವಿಸ್ತಾರವಾದ ಭೂಪ್ರದೇಶದಲ್ಲಿ ಬಳಕೆಯಲ್ಲಿದೆ. ವಿವಿಧ ಸಾಮಾಜಿಕ ವರ್ಗದ ಜನರು ಇದನ್ನು ಬಳಸುತ್ತಾ ಬಂದಿದ್ದಾರೆ. ಅನ್ಯಭಾಷಾ ಸಂಸರ್ಗವಿದ್ದರೂ, ಅನ್ಯ ನಾಗರೀಕತೆಗಳು ಮತ್ತು ಸಂಸ್ಕೃತಿಗಳ ಪ್ರಭಾವವಿದ್ದರೂ ಸಹ ಕಾಲಕಾಲಕ್ಕೆ ಕನ್ನಡ ಉತ್ಕೃಷ್ಟ ಭಾಷೆಯಾಗಿ ಬೆಳೆಯುತ್ತಾ ಬಂದಿದೆ.

ಕನ್ನಡ ಭಾಷೆಯಲ್ಲಿ ಉಪಭಾಷೆಗಳು ಅಥವಾ ಒಳಭೇದಗಳು ಇಂದು ಹುಟ್ಟಿಕೊಂಡಿಲ್ಲ. ಕನ್ನಡ ಗ್ರಾಂಥಿಕ ರೂಪವನ್ನು ಪಡೆದಾಗಿನಿಂದ ಕನ್ನಡಿಗರ ಮನಸ್ಸಿನಲ್ಲಿ ಅದು ಬೇರುಬಿಟ್ಟಿದೆ. ಕವಿರಾಜಮಾರ್ಗದ ಕೇಶಿರಾಜ ಕನ್ನಡದ ಉಪಭಾಷೆಗಳ ಅಸ್ತಿತ್ವವನ್ನು ಗುರುತಿಸಿದ್ದಾನೆ. ಕಾವೇರಿಯಿಂದ ಗೋದಾವರಿಯವರೆಗೆ ಹರಡಿದ್ದ ಅಂದಿನ ಕನ್ನಡ ನಾಡಿನಲ್ಲಿ ಹಲವಾರು ಉಪಭಾಷೆಗಳಿದ್ದರೆ ಆಶ್ಚರ್ಯವಿಲ್ಲ.

ಒಂದು ಭಾಷೆ ಮತ್ತು ಅದರ ಉಪಭಾಷೆಗಳಿಗಿರುವ ವ್ಯತ್ಯಾಸವನ್ನು ತಿಳಿಸುವುದು ಕಷ್ಟ ಹಾಗೂ ಅದು ಅತಿ ಸೂಕ್ಷ್ಮವಾದದ್ದು. ಉಪಭಾಷೆ ಅಥವಾ ಒಳಭೇದ ಎನ್ನುವುದು ಭಾಷಾಶಾಸ್ತ್ರಜ್ಞರಿಂದ ಉಪಯೋಗಿಸಲಟ್ಟ ಪಾರಿಭಾಷಿಕ ಶಬ್ದವಷ್ಟೆ. ಸಾಮಾನ್ಯ ಅರ್ಥದಲ್ಲಿ ಒಳಭೇದಗಳನ್ನೆಲ್ಲಾ ಭಾಷೆಗಳೆಂದೇ ಕರೆಯಲಾಗುತ್ತದೆ.

ಯಾವುದೇ ಭಾಷೆಯಲ್ಲಿ ನಾವು ಏಕರೂಪತೆ ಹಾಗೂ ಕೆಲವು ಸಾಮಾನ್ಯ ಲಕ್ಷಣಗಳನ್ನು ಗುರುತಿಸಬಹುದು. ಜನ ಸಂಪರ್ಕ ಎಷ್ಟೆಷ್ಟು ಹೆಚ್ಚಾಗಿರುತ್ತದೋ ಅಷ್ಟು ಏಕರೂಪತೆ ಇರುತ್ತದೆ. ಸಂಪರ್ಕ ಕಡಿಮೆಯಾದಂತೆ ವ್ಯತ್ಯಾಸಗಳು ಜಾಸ್ತಿಯಾಗುತ್ತಾ ಹೋಗುತ್ತವೆ. ಮನುಷ್ಯ ಅನುಕರಣಾಶೀಲ, ಕ್ರಮೇಣ ವ್ಯತ್ಯಾಸಗಳೇ ಹೆಚ್ಚಾಗಿ, ಸಾಮ್ಯತೆ ಏಕರೂಪತೆ ಕಡಿಮೆಯಾಗಿ ಅದೇ ಪ್ರತ್ಯೇಕ ಭಾಷೆ ಎನ್ನುವಂತೆ ಕಾಣತೊಡಗುತ್ತದೆ. ಅದನ್ನೇ ನಾವು 'ಉಪಭಾಷೆ' ಎಂದು ಕರೆಯುತ್ತೇವೆ.

ಉಪಭಾಷೆಗಳಲ್ಲಿ ಎರಡು ವಿಧ - ಪ್ರಾದೇಶಿಕ ಉಪಭಾಷೆ ಹಾಗೂ ಸಾಮಾಜಿಕ ಉಪಭಾಷೆ.

ಪ್ರಾದೇಶೀಕ ಉಪಭಾಷೆ: ಈ ಉಪಭಾಷೆ ರೂಪುಗೊಳ್ಳಲು ಭೌಗೋಳಿಕ ಕಾರಣಗಳು, ರಾಜಕೀಯ ಕಾರಣಗಳು ಹಾಗೂ ಅನ್ಯಭಾಷಾ ಸಂಸರ್ಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಿಂದಿನಿಂದಲೂ ಕನ್ನಡ ನಾಡು ಒಂದೇ ಅಧಿಪತ್ಯಕ್ಕೆ ಒಳಪಟ್ಟಿರಲಿಲ್ಲ. ಹಲವು ಭಾಗಗಳಾಗಿ ಹಂಚಿಹೋಗಿತ್ತು. ಮೈಸೂರು ಅಧಿಪತ್ಯದ ಕನ್ನಡಿಗರು, ಮದ್ರಾಸು ಅಧಿಪತ್ಯದ ಕನ್ನಡಿಗರು, ಬೊಂಬಾಯಿ ಅಧಿಪತ್ಯದ ಕನ್ನಡಿಗರು, ಹೈದರಾಬಾದು ಅಧಿಪತ್ಯದ ಕನ್ನಡಿಗರು.. ಹೀಗೆ ರಾಜಕೀಯ ಕಾರಣಗಳಿಂದ ತುಂಡಾಗಿದ್ದ ಆಯಾ ಗಡಿಭಾಷೆಯ ಪ್ರಭಾವದಿಂದ ಒಂದೇ ಭಾಷೆಯು ಉಪಭಾಷೆಗಳಾಗಿ ಕಾಣಿಸಿಕೊಂಡವು.

ಸಾಮಾಜಿಕ ಉಪಭಾಷೆ: ಒಂದೊಂದು ಸಮುದಾಯಕ್ಕೆ ಸೇರಿದ ಜನರು ಪ್ರತ್ಯೇಕ ಗುಂಪುಗಳಾಗಿ, ಅವರಲ್ಲಿನ ಒಡನಾಟದಿಂದ ಅವರ ಭಾಷೆಯಲ್ಲಿ ಕಾಣುವ ವಿಶಿಷ್ಟತೆಯು ಕ್ರಮೇಣ ಉಪಭಾಷೆಯಾಗಿ ಬಳಕೆಯಾಗಬಹುದು. ಕನ್ನಡದಲ್ಲಿ ಸಾಮಾಜಿಕ ಉಪಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ನಡೆಯುತ್ತಿದೆ.

ಕನ್ನಡದಲ್ಲಿ ಮುಖ್ಯವಾಗಿ ನಾಲ್ಕು ಉಪಭಾಷೆಗಳನ್ನು ಗುರುತಿಸಬಹುದು: ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು / ಕರಾವಳಿ ಕನ್ನಡ ಮತ್ತು ಹೈದರಾಬಾದ್ / ಗುಲ್ಬರ್ಗಾ / ಕಲ್ಯಾಣ ಕನ್ನಡ.

1. ಮೈಸೂರು ಕನ್ನಡ: ಮೈಸೂರು, ಚಾಮರಾಜನಗರ, ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ 'ಮೈಸೂರು ಕನ್ನಡ' ಪ್ರಾದೇಶಿಕ ಉಪಭಾಷೆಯನ್ನು ಗುರ್ತಿಸಬಹುದು. ಮೈಸೂರು ಕನ್ನಡ ಗ್ರಾಂಥಿಕ ಭಾಷೆಗೆ ಸ್ವಲ್ಪ ಹತ್ತಿರವಾಗಿದೆ.

2. ಧಾರವಾಡ ಕನ್ನಡ: ಉತ್ತರ ಕರ್ನಾಟಕವು ಕ್ರಿ. ಪೂ. ಮೂರನೇ ಶತಮಾನದಿಂದ ದಕ್ಷಿಣ ಕರ್ನಾಟಕಕ್ಕಿಂತ ಬೇರೊಂದು ರಾಜಕೀಯ ಆಡಳಿತಕ್ಕೊಳಪಟ್ಟಿತ್ತು. ಧಾರವಾಡ ಕನ್ನಡದಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿದೆ ಹಾಗೂ ಇದು ಗ್ರಂಥಸ್ತ ಕನ್ನಡ ಭಾಷೆಗೆ ದೂರವಿರುವುದನ್ನು ಗಮನಿಸಬಹುದು.

ಕನ್ನಡ ಭಾಷೆಯ ಪ್ರಾಂತ್ಯ ಭೇದಗಳ ಸ್ವರೂಪವನ್ನು ತಿಳಿಯಲು ಮೈಸೂರು ಮತ್ತು ಧಾರವಾಡ ಉಪಭಾಷೆಗಳನ್ನು ತೌಲನಿಕವಾಗಿ ನೋಡಬಹುದು. ಮೈಸೂರು ಪ್ರಾಂತ್ಯದಲ್ಲಿ 'ಎ'ಕಾರಾಂತವಾಗಿ ಉಚ್ಛರಿಸಲ್ಪಡುವ ಶಬ್ಧಗಳು ಧಾರವಾಡ ಪ್ರಾಂತ್ಯದ ಉಚ್ಛಾರಣೆಯಲ್ಲಿ 'ಇ'ಕಾರಾಂತವಾಗುತ್ತದೆ. ಉದಾ: ಮನೆ – ಮನಿ; ಆನೆ – ಆನಿ. ಮೈಸೂರು ಕನ್ನಡದ ವ್ಯಂಜನಾಂತ ಪದಗಳಿಗೆ 'ಉ' ಎಂದಾದರೆ, ಧಾರವಾಡ ಕನ್ನಡದಲ್ಲಿ 'ಅ' ಎಂದಾಗುತ್ತದೆ. ಉದಾ: ಬಟ್ಟಲು - ಬಟ್ಟಲ; ಇಂಗ್ಲೆಂಡು – ಇಂಗ್ಲೆಂಡ; ಕಾಲೇಜು – ಕಾಲೇಜ. ಮೈಸೂರು ಹಾಗೂ ಧಾರವಾಡ ಕನ್ನಡಗಳಲ್ಲಿ ಅರ್ಥ ವ್ಯತ್ಯಾಸಗಳನ್ನೂ ಕಾಣಬಹುದು. ಮೈಸೂರು ಕನ್ನಡದಲ್ಲಿ 'ತಿಂಡಿ' ಎಂದರೆ 'ಆಹಾರ' ಎಂದರ್ಥ, ಧಾರವಾಡ ಕನ್ನಡದಲ್ಲಿ 'ನವೆ', 'ಕಡಿತ' ಎಂಬರ್ಥಗಳಿವೆ. ಧಾರವಾಡ ಕನ್ನಡದಲ್ಲಿ ಪದಮಧ್ಯದ 'ಎ' ಕಾರ 'ಯ' ಕಾರವಾಗುತ್ತದೆ. ಉದಾ: ಮೇಲೆ – ಮ್ಯಾಲೆ; ಪೇಟೆ - ಪ್ಯಾಟೆ.

ಚಿತ್ರ : ಸಾಮ್ರಾಟ್; ಕೃಪೆ : YouTube

3. ಮಂಗಳೂರು ಕನ್ನಡ: ಕರ್ನಾಟಕ ಏಕೀಕರಣಕ್ಕೆ ಮೊದಲು ದಕ್ಷಿಣ ಕನ್ನಡ ಮದ್ರಾಸು ಪ್ರಾಂತ್ಯಕ್ಕೆ ಒಳಪಟ್ಟಿದ್ದರಿಂದ, ಮಲೆಯಾಳಂ, ತುಳು ಹಾಗೂ ಕೊಂಕಣಿ ಭಾಷೆಗಳ ಪ್ರಭಾವವಿದೆ. ಮಂಗಳೂರು ಪ್ರಾಂತ್ಯದ ಜನ ಗ್ರಾಂಥಿಕ ಕನ್ನಡವನ್ನೇ ಸಾಮಾನ್ಯವಾಗಿ ಬಳಸುತ್ತಾರೆ. ಇದು ಗ್ರಂಥಸ್ತ ಕನ್ನಡ ಭಾಷೆಗೆ ಬಹಳ ಹತ್ತಿರವಾಗಿದ್ದರೂ ಕೆಲವು ವಿಶಿಷ್ಟ ಪದಬಳಕೆಯನ್ನು ಕಾಣುತ್ತೇವೆ. ಉದಾ: ಸಪೂರು – ಗುಟ್ಟು; ಬೈಸಾರೆ - ಸಂಜೆ; ಹಸಿರುವಾಣಿ – ತರಕಾರಿ; ತೋರ – ದಪ್ಪ. ತುಳುವಿನ ಪ್ರಭಾವದಿಂದ 'ಮಾರಾಯರೆ' ಎಂಬ ಪದದ ಬಳಕೆ ಹೆಚ್ಚಾಗಿ ಬಳಕೆಯಾಗುತ್ತದೆ. 'ಎಂಥದ್ದು', 'ಉಂಟು', 'ಅಲ್ಲವೋ' ಎಂಬ ಪದಗಳೂ ಹೆಚ್ಚು ಬಳಕೆಯಲ್ಲಿವೆ.

4. ಹೈದರಾಬಾದ್ ಕನ್ನಡ: ಬೀದರ್, ಗುಲ್ಬರ್ಗಾ, ವಿಜಾಪುರ ಜಿಲ್ಲೆಯ ಪೂರ್ವಭಾಗ, ರಾಯಚೂರು ಇಲ್ಲಿ ಹೈದರಾಬಾದ್ ಕನ್ನಡ ಬಳಕೆಯಲ್ಲಿದೆ. ಇದು ಆದಿಲ್-ಷಾಹಿ ಆಡಳಿತಕ್ಕೆ ಒಳಪಟ್ಟಿದ್ದರಿಂದ, ಉರ್ದು ಭಾಷೆಯಿಂದ ಹೆಚ್ಚಾಗಿ ಪ್ರಭಾವಿತಗೊಂಡಂತೆ ತೋರುತ್ತದೆ. ಉದಾ: ಉದ್ರಿ - ಸಾಲ; ದೌಡ್ - ಬೇಗ; ಜರಾ - ಸ್ವಲ್ಪ; ಬಿಲ್-ಕುಲ್ – ಖಂಡಿತ. ಇದಲ್ಲದೇ, ಮೂರು ಅಕ್ಷರಗಳುಳ್ಳ ಗುಲ್ಬರ್ಗಾ ಕನ್ನಡದ ಶಬ್ಧಗಳಲ್ಲಿ ಸಾಮಾನ್ಯವಾಗಿ ಎರಡನೇ ಅಕ್ಷರ ಲೋಪವಾಗುತ್ತದೆ. ಉದಾ: ಹೆಂಡತಿ - ಹೆಂಣ್ತಿ; ಅಡಿಕೆ – ಅಡ್ಕಿ; ಬಾಗಿಲು - ಬಾಗ್ಲ.

ಶ್ರೀ ಡಿ. ಎನ್. ಶಂಕರಭಟ್ಟರು ಉಪಭಾಷೆಯ ಬಗ್ಗೆ ಆಳವಾದ ಅಧ್ಯಯನ ಮಾಡಿ ಕನ್ನಡದಲ್ಲಿ ಇನ್ನೂ ಕೆಲವು ಉಪಭಾಷೆಗಳಾದ ಹವ್ಯಕ ಕನ್ನಡ, ಬೆಳ್ಳಾರಿ ಕನ್ನಡ, ನಂಜನಗೂಡು ಕನ್ನಡ ಇತ್ಯಾದಿಗಳ ಅಸ್ತಿತ್ವದ ಸಾಧ್ಯತೆಯನ್ನು ಗುರುತಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ.

ಅದೇನೇ ಇದ್ದರೂ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಅನ್ಯಭಾಷೆಗಳ ಪ್ರಭಾವಕ್ಕೊಳಗಾಗಿದ್ದರೂ, ಅನೇಕಾನೇಕ ಉಪಭಾಷೆಗಳಿದ್ದರೂ, ಕಾಲಕಾಲಕ್ಕೆ ಶ್ರೀಮಂತವಾಗಿ ಬೆಳೆಯುತ್ತಾ ಬಂದಿದೆ. ಹೀಗೆ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಬನ್ನಿ, ನಾವೆಲ್ಲರೂ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗೋಣ. ಜೈ ಕನ್ನಡ, ಜೈ ಕರ್ನಾಟಕ!

ಲೇಖಕರ ಕಿರುಪರಿಚಯ
ಡಾ. ಪ್ರೇಮ್ ಕುಮಾರ್ ಆರ್.

ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿರುವ ಇವರು, ಪ್ರಸ್ತುತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಲಿತದ್ದು ವಿಜ್ಞಾನದ ವಿಷಯವಾದರೂ ಕನ್ನಡ ನಾಡು ಹಾಗೂ ಕನ್ನಡ ಸಾಹಿತ್ಯದ ಕುರಿತಾಗಿ ಸ್ವಇಚ್ಛೆಯಿಂದ ಓದಿ ತಿಳಿದುಕೊಂಡಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ