ಬುಧವಾರ, ನವೆಂಬರ್ 13, 2013

ಅಸೂಯೆ ಕೆಟ್ಟದ್ದೇನಲ್ಲ!

ನಿಜ. 'ಅಸೂಯೆ' ಎನ್ನುವ ಈ ಪದ ನಮಗ್ಯಾರಿಗೂ ಇಷ್ಟವಾಗುವುದಿಲ್ಲ. ಏನಾದರೂ ಸರಿ, ಇದ್ದುದರಲ್ಲಿ ತೃಪ್ತಿ ಪಡಬೇಕೇ ಹೊರತು ಇನ್ನೊಬ್ಬರನ್ನು ನೋಡಿ ಅಸೂಯೆ ಪಡಬಾರದು ಎಂಬುದು ವಾಡಿಕೆಯಲ್ಲಿನ ಮಾತು. ಅಸೂಯೆ ಅಥವಾ ಹೊಟ್ಟೆಕಿಚ್ಚು ವ್ಯಕ್ತಿಯ ವ್ಯಕ್ತಿತ್ವಕ್ಕೆ ಕುಂದು ತರುವಂಥಾದ್ದು ಎಂದು ಕೂಡ ಹೇಳಲಾಗುತ್ತದೆ. ಏಕೆಂದರೆ ಅಸೂಯೆ ಎನ್ನುವುದು ಒಂದು ನೆಗೆಟಿವ್ ಥಿಂಕಿಂಗ್ ಆಗಿರುವುದರಿಂದ ಇದನ್ನು ಬಿಟ್ಟರೆ ಮನುಷ್ಯ ನೆಮ್ಮದಿಯಿಂದ ಬದುಕುತ್ತಾನೆಂಬುದು ಇಲ್ಲಿಯ ಸದಾಶಯ

ಆದರೆ ಇದರಿಂದ ಹೊರಬರುವುದು ಅಥವಾ ಇದರಿಂದಲೇ ದೂರವಿರಬೇಕೆಂದರೆ ಅದು ಅಷ್ಟು ಸುಲಭವಲ್ಲ. ನಮ್ಮ ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಮತ್ತೊಬ್ಬರನ್ನು ಕಂಡು ಒಂದಿಷ್ಟಾದರೂ ಅಸೂಯೆ ಪಟ್ಟುಕೊಂಡಿರುತ್ತೇವೆ. ಉದಾಹರಣೆಗೆ ಪಕ್ಕದ ಮನೆ ಅಥವಾ ಸರೀಕರ ಹುಡುಗ ಅತಿಹೆಚ್ಚು ಅಂಕಗಳೊಡನೆ ಉತ್ತೀರ್ಣನಾದರೆ, ಅಥವಾ ನಮ್ಮ ಪ್ರಯತ್ನ ವಿಫಲವಾಗಿ ಪರಿಚಿತರ ಮಗನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಸೀಟು ಸಿಕ್ಕರೆ, ಎದುರು ಮನೆಯವರು ಅತ್ಯಾಧುನಿಕ ಟಿ.ವಿ. ತಂದರೆ, ಕಚೇರಿಯಲ್ಲಿ ಬಾಸ್ ನಮ್ಮನ್ನು ಬಿಟ್ಟು ಸಹೋದ್ಯೋಗಿಯನ್ನು ಹೊಗಳಿದರೆ, ಸಂಬಂಧಿಕರೊಬ್ಬರು ಮಹಡಿಮನೆ ಕಟ್ಟುತ್ತಿದ್ದರೆ - ಹೀಗೆ ಇಂತಹ ಅನೇಕ ಸಂದರ್ಭಗಳಲ್ಲಿ ಬೇಡಬೇಡವೆಂದರೂ ಹಿತಕರವಲ್ಲದ ಅಸೂಯೆ ಭಾವನೆ ಮನದಲ್ಲಿ ಹಾದುಹೋಗುತ್ತದೆ. ಆದ್ದರಿಂದ ಎಲ್ಲರೂ ಇದರತ್ತ ತಿರಸ್ಕೃತ ಭಾವನೆಯಿಂದಲೇ ನೋಡುತ್ತೇವೆ

ಇಂತಹ ಅಸೂಯೆಯಿಂದ ಮನಸ್ಸು ಕೆಡುತ್ತದೆ, ನೆಮ್ಮದಿ ಹಾಳಾಗುತ್ತದೆ. ಈ ಸ್ವಭಾವದಿಂದ ಹೊರಬನ್ನಿ ಎಂದು ಬಲ್ಲವರೇನೋ ಹೇಳುತ್ತಾರೆ. ಆದರೆ ಈ ಅಸೂಯೆಯಿಂದ ಪಾಸಿಟಿವ್ ಥಿಂಕಿಂಗ್ ಬೆಳೆಸಿಕೊಳ್ಳುವುದಾದರೆ, ಅದರಿಂದ ಉಪಯೋಗವೂ ಸಿಗುವುದಾದರೆ ಅಸೂಯೆ ಕೆಟ್ಟದ್ದೆನಿಸುವುದಿಲ್ಲ!  ಕೆಳಗಿನ ಒಂದೆರಡು ಅಂಶಗಳನ್ನು ಗಮನಿಸಿ:-

ಪಕ್ಕದ ಮನೆಯವರು ದೊಡ್ಡ ಟಿ.ವಿ. ತಂದರೆ ಅಸೂಯೆ ಪಡುವುದಕ್ಕಿಂತ ಇದನ್ನೊಂದು ಸವಾಲಾಗಿ ಪರಿಗಣಿಸಿ ಹಣ ಉಳಿತಾಯ ಮಾಡಿ ಅಥವಾ ಬೇರೆ ಯಾವುದಾದರೂ ಆರ್ಥಿಕ ಸೌಲಭ್ಯದಿಂದ ನಾವೂ ಕೂಡ ಬೇರೆ ದೊಡ್ಡ ಟಿ.ವಿ.ಯನ್ನು ತರಬಹುದಲ್ಲ? ಇಲ್ಲಿ ಅಸೂಯೆ ಸ್ಪೂರ್ತಿದಾಯಕವಾಗಿರುತ್ತದೆ. ಇದನ್ನೇ ಪಾಸಿಟಿವ್ ಥಿಂಕಿಂಗ್ ಎನ್ನುವುದು.

ಅಸೂಯೆಯು ಒಂದು ಅದ್ಭುತವಾದ ಹಾಗೂ ಆಶ್ಚರ್ಯಕರವಾದ ಶಕ್ತಿ, ಪ್ರತಿಭೆಯನ್ನು ಹೊರಹೊಮ್ಮಿಸುವಂತೆ ಪ್ರೇರೇಪಿಸುತ್ತದೆಯೆಂದು ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಕಾರಣದಿಂದಲೇ 'ಅವನಂತೆ ನಾನೂ ಏಕೆ ಹೆಸರು ಮಾಡಲು ಸಾಧ್ಯವಿಲ್ಲ?' ಎಂಬ ಭಾವನೆ ಮೂಡಿದ್ದರಿಂದ ಸಾಧಾರಣ ಸಹನಟನಾಗಿದ್ದವನು ಕ್ರಮೇಣ ನಾಯಕನಟನಾಗುತ್ತಾನೆ, ಹೆಸರು ಕೇಳದೇ ಇರುವ ವ್ಯಕ್ತಿಯೊಬ್ಬ ಪ್ರಸಿದ್ಧನಾಗುತ್ತಾನೆ. ಅನೇಕ ಯಶಸ್ವಿ ವ್ಯಕ್ತಿಗಳ ಸಾಧನೆಯಲ್ಲಿ ಅಸೂಯೆಯೇ ಮೂಲಬಂಡವಾಳವಾಗಿರುತ್ತದೆ.

ಒಂದಂತೂ ನಿಜ. ಅಸೂಯೆ ಎನ್ನುವುದು ದ್ವೇಷ, ಸಿಟ್ಟು, ಮತ್ಸರಗಳನ್ನು ಹುಟ್ಟುಹಾಕುವ ಮಾರಕ ಅಂಶವೂ ಹೌದು, ಸದುಪಯೋಗ ಪಡಿಸಿಕೊಂಡರೆ ಮೇಲ್ಮಟ್ಟಕ್ಕೇರಿಸುವ ಸಾಧನೆಗೆ ಪೂರಕವೂ ಹೌದು. ಆದರೆ, ನೆನಪಿರಲಿ. ಸಕಾರಾತ್ಮಕ ಮನೋಭಾವನೆಯ ಕಾರಣದಿಂದ ಅಸೂಯೆಯನ್ನು ಸಾಧನೆಯ ಮಾರ್ಗವಾಗಿ ಪರಿಗಣಿಸಲು ಸಮಚಿತ್ತದ ಮನುಷ್ಯನಿಗೆ ಮಾತ್ರ ಸಾಧ್ಯ. ಮನಸ್ಸು ಮಾಡಿದರೆ ಅಸೂಯೆ ಒಂದು ಸಾಧನೆಗೆ, ಯಶಸ್ಸಿಗೆ ಪ್ರೇರಣೆಯಾಗುವುದಾದರೆ ಅದು ನಿಜಕ್ಕೂ ಅಷ್ಟೊಂದು ಕೆಟ್ಟ ಶಬ್ದವಾಗಿ ಉಳಿಯಲಾರದು ಅಲ್ಲವೇ?

ಲೇಖಕರ ಕಿರುಪರಿಚಯ
ಶ್ರೀ ಮೋಹನ್ ವೆರ್ಣೇಕರ್

ಮೂಲತಃ ಹೊನ್ನಾವರದವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಧಾನ ಪರಿಷತ್ತಿನಲ್ಲಿ ಕಾರ್ಯಕಲಾಪಗಳ ರೆಕಾರ್ಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅಂಕಣಕಾರರಾಗಿರುವ ಇವರು ಖ್ಯಾತ ಚುಕ್ಕಿಚಿತ್ರ ಕಲಾವಿದರೂ ಹೌದು. ಇವರ ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರನ್ನೊಳಗೊಂಡಂತೆ ಇನ್ನೂ ಅನೇಕ ಚುಕ್ಕಿಚಿತ್ರಗಳು ಅತ್ಯಂತ ಜನಪ್ರಿಯವಾಗಿವೆ.

Blog  |  Facebook  |  Twitter

1 ಕಾಮೆಂಟ್‌: