ಭಾನುವಾರ, ನವೆಂಬರ್ 13, 2016

ಹುಚ್ಚುಮನಸ್ಸಿನ ಹತ್ತುಮುಖಗಳು - ಶಿವರಾಮ ಕಾರಂತ

ಹುಚ್ಚುಮನಸ್ಸಿನ ಹತ್ತುಮುಖಗಳು - ಶಿವರಾಮ ಕಾರಂತ

ಶೀರ್ಷಿಕೆ: ಹುಚ್ಚುಮನಸ್ಸಿನ ಹತ್ತುಮುಖಗಳು - ಅಳಿದುಳಿದ ನೆನಪುಗಳೊಂದಿಗೆ
ಲೇಖಕರು: ಶಿವರಾಮ ಕಾರಂತ
ಪ್ರಕಾಶಕರು: ಎಸ್.ಬಿ.ಎಸ್. ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು.
ಪ್ರಧಮ ಮುದ್ರಣ: 1983

ಪುಸ್ತಕ ಕುರಿತು: ಬದುಕಿನ ದೀರ್ಘ ಅವಧಿಯನ್ನು ಕುರಿತು ಎಷ್ಟೋ ಬಾರಿ ನಾನು ಯೋಚಿಸಲೇ ಬೇಕಾಗುತ್ತದೆ. ಅದನ್ನು ಯೋಚಿಸದೇ ಹೋಗಿದ್ದರೆ ನನ್ನ ಲೇಖನಿಗೆ ಯಾವ ಕೆಲಸವೂ ಇರುತ್ತಿರಲಿಲ್ಲ. ಬದುಕಿನ ಬಗ್ಗೆ ಆಳವಾಗಿ ಯೋಚಿಸಲು ಕಲಿತವನು ನಾನು. ನನ್ನ ಬಗ್ಗೆಯೂ, ನಾನು ಬದುಕಿನ ಕ್ಷಮೆ ಯಾಚಿಸಲು ಇಷ್ಟಪಡುವುದಿಲ್ಲ. ಆದರೆ ನನ್ನ ಎಳೆತನದಿಂದ ಇಂದಿನ ತನಕ, ನನ್ನ ಕಣ್ಮುಂದೆಯೇ ಹಾದುಹೋಗುತ್ತಿದ್ದ ಭಾರತೀಯ ಜನಜೀವನದ ಚಿತ್ರಪಟವನ್ನು ನಿರೀಕ್ಷಿಸಿದಾಗ ದೊರೆತ ಒಂದು ಸಂತೋಷಕ್ಕೆ ಪ್ರತಿಯಾಗಿ ಹತ್ತು ದುಃಖಗಳು ಕಾಣಿಸಿವೆ. ನಮ್ಮ ಪುರಾತನ ಶ್ರದ್ಧೆ ಮತ್ತು ಸೃಷ್ಟಿಗಳನ್ನು ಕುರಿತು ಅತೀವ ಆದರ ನನಗಿದೆ. ಆದರೆ, ಆ ಆದರ, ಕೃತಜ್ಞತೆ, ಹೆಮ್ಮೆ, ವರ್ತಮಾನ ಕಾಲದ ಜನರ ಸ್ವಾರ್ಥಕ್ಕೆ, ಅಪಮೌಲ್ಯಗಳಿಗೆ, ಕುತ್ಸಿತ ಜೀವನಕ್ಕೆ ಏನೇನೂ ಸಮಾಧಾನ ಕೊಡಲಾರದು. ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದ ಸೂತ್ರ. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ, ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ? ಆ ಪ್ರಶ್ನೆಗೆ ಉತ್ತರವಾಗಿ ಅವರವರ ಕರ್ಮ ಅವರವರಿಗೆ ಎಂದರೆ ಸಾಕೇನು? ಜೀವನ ಪ್ರವಾಹದ ಕರ್ಮಕಾಂಡ ವ್ಯಕ್ತಿಗೆ ಬದ್ಧವಾದ, ವ್ಯಕ್ತಿಯಿಂದ ಪ್ರಭಾವಿತವಾಗುವ ಸಾಮೂಹಿಕ ಕರ್ಮಕಾಂಡ. ಆ ಸಮೂಹದ ಒಳಿತು ಕೆಡಕುಗಳ ಪಾಲು ಮತ್ತು ಹೊಣೆ ಪ್ರತಿ ವ್ಯಕ್ತಿಯ ಪಾಲಿಗೆ ಇದ್ದೇ ಇದೆ. - ಶಿವರಾಮ ಕಾರಂತ.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ