ಸೋಮವಾರ, ನವೆಂಬರ್ 14, 2016

ದಿನಕ್ಕೊಂದು ಕಥೆ - ಅನುಪಮಾ ನಿರಂಜನ

ದಿನಕ್ಕೊಂದು ಕಥೆ - ಅನುಪಮಾ ನಿರಂಜನ

ಶೀರ್ಷಿಕೆ: ದಿನಕ್ಕೊಂದು ಕಥೆ - ಮಾಘ ಸಂಪುಟ
ಲೇಖಕರು: ಅನುಪಮಾ ನಿರಂಜನ
ಪ್ರಕಾಶಕರು: ಡಿ.ವಿ.ಕೆ. ಮೂರ್ತಿ, ಕೃಷ್ಣಮೂರ್ತಿಪುರಂ, ಮೈಸೂರು.
ಪ್ರಧಮ ಮುದ್ರಣ: 1972

ಪುಸ್ತಕ ಕುರಿತು: ನನ್ನ ಮಕ್ಕಳು "ಅಮ್ಮ, ಕಥೆ ಹೇಳು" ಎಂದು ದಿನವೂ ದುಂಬಾಲು ಬೀಳುತ್ತಿದ್ದರು. ಅವರಿಗಾಗಿ ಭಾರತದ ಪುರಾಣ-ಇತಿಹಾಸಗಳನ್ನು ಆಧರಿಸಿ ಕಥೆಗಳನ್ನು ಹೆಣೆದು ಹೇಳಿದೆ. ಇವು ಮುಗಿದ ಬಳಿಕ, ಜಗತ್ತಿನ ಇತರ ದೇಶಗಳ ಮಕ್ಕಳ ಕಥೆಗಳಿಗೂ ಕೈಚಾಚಿದೆ. ಹೀಗೆ, ಭಾರತದ ಪಂಚತಂತ್ರ-ಹಿತೋಪದೇಶ-ಪುರಾಣೇತಿಹಾಸ ಮೂಲದ ಕಥೆಗಳು, ಪ್ರಾಚೀನ ಗ್ರೀಸಿನ ಈಸೋಪನ ನೀತಿಕಥೆಗಳು ಹಾಗೂ ಪುರಾಣಕಥೆಗಳು, ಯೂರೋಪಿನ ಗ್ರಿಮ್ ಸೋದರರು ಮತ್ತು ಹ್ಯಾನ್ಸ್ ಕ್ರಿಶ್ಚಿಯನ್ ಆ್ಯಂಡರ್ ಸನ್ ಮತ್ತಿತರರ ಕಥೆಗಳು, ಪೂರ್ವ ಪಶ್ಚಿಮಗಳ ಇನ್ನಿತರ ದೇಶಗಳ ಕಥೆಗಳು - ಇವೆಲ್ಲವುಗಳನ್ನು ನಾನು ಆಧರಿಸಿದೆ. ಈ ಕಥೆಗಳನ್ನು ಹೇಳುವಾಗ ನನ್ನ ಮಕ್ಕಳು ಊಟ, ನಿದ್ದೆ ಮರೆತು ತನ್ಮಯರಾಗುತ್ತಿದ್ದರು. ಅದನ್ನು ಕಂಡು, 'ಕನ್ನಡ ನಾಡಿನ ಇತರೆ ಮಕ್ಕಳೂ ಇವುಗಳಿಂದ ಸಂತೋಷಪಡುವಂತಾಗಬೇಕು' ಎಂಬ ಹೆಬ್ಬಯಕೆ ನನ್ನಲ್ಲಿ ಮೂಡಿತು. ನಾನು ಹೇಳಿದ ಕಥೆಗಳಲ್ಲಿ ಮಕ್ಕಳು ಆರಿಸಿದುದನ್ನು ಬರೆಯತೊಡಗಿದೆ. "ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಶ್ರೀ ನಿರಂಜನ. ಈ ರೀತಿ 'ದಿನಕ್ಕೊಂದು ಕಥೆ'ಯ ಉಯದವಾಯಿತು. ಕಥೆಗಳಿಂದ ಮಕ್ಕಳಿಗಾಗುವ ಉಪಯೋಗ ಬ್ರಹ್ಮಾಂಡದಷ್ಟು. ಕಥೆಗಳಿಂದ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತದೆ, ಕುತೂಹಲ ತಣಿಯುತ್ತದೆ, ಬುದ್ಧಿ ಚಿಗುರುತ್ತದೆ, ಸಾಹಸಪ್ರವೃತ್ತಿ ಹೆಚ್ಚುತ್ತದೆ, ಅನುಕಂಪ ಬೆಳೆಯುತ್ತದೆ. ದುಷ್ಟರಿಗೆ ಸೋಲು, ಸತ್ಯವಂತರಿಗೆ ಜಯ ಎಂಬ ನೀತಿ ಮನದಟ್ಟಾಗುತ್ತದೆ. ಹೀಗೆ ಕಥೆಗಳು ಮಗುವಿನ ಬೌದ್ಧಿಕ ಬೆಳವಣಿಗೆಗೆ ನೆರವಾಗುತ್ತವೆ. ಈ ಹೊತ್ತಿಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ; ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. ಆ ದಿಸೆಯಲ್ಲಿ ಈ ಕಥೆಗಳು ಒಂದಿಷ್ಟಾದರೂ ನೆರವಾದರೆ ನನ್ನ ಶ್ರಮ ಸಾರ್ಥಕ ಆಯಿತೆಂದು ಭಾವಿಸುವೆ. - ಅನುಪಮಾ ನಿರಂಜನ.



ಮಕ್ಕಳ ದಿನಾಚರಣೆ ಅಂಗವಾಗಿ, ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಅನುಪಮಾ ನಿರಂಜನರ ಪ್ರಸಿದ್ಧ 'ದಿನಕ್ಕೊಂದು ಕಥೆ' ಗಳಿಂದ ಮಾಘ ಸಂಪುಟದ ಪುಸ್ತಕ ಮಣಿರತ್ನವನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ