ಮಂಗಳವಾರ, ನವೆಂಬರ್ 22, 2016

ತುಘಲಕ್ - ಗಿರೀಶ ಕಾರ್ನಾಡ

ತುಘಲಕ್ - ಗಿರೀಶ ಕಾರ್ನಾಡ

ಶೀರ್ಷಿಕೆ: ತುಘಲಕ್
ಲೇಖಕರು: ಗಿರೀಶ ಕಾರ್ನಾಡ
ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಲಕ್ಷ್ಮೀ ಭವನ, ಸುಭಾಸ ರಸ್ತೆ, ಧಾರವಾಡ. 
ಪ್ರಧಮ ಮುದ್ರಣ: 1964
ಐ.ಎಸ್.ಬಿ.ಎನ್.: 81-85728-90-9


ಅರ್ಪಣೆ: ಪ್ರಿಯ ಕೃಷ್ಣ, ಎರಡು ವರ್ಷಗಳ ಹಿಂದೆ ಪ್ಯಾರಿಸಿನಲ್ಲಿ ನಾವು ನಡೆಸಿದ ಚರ್ಚೆಯ ಫಲ ಈ ನಾಟಕ. ಇದರಲ್ಲಿಯ ಒಳ್ಳೆಯ ಅಂಶಗಳಿಗೆಲ್ಲ ನಾನು ನಿನಗೆ ಋಣಿಯಾಗಿದ್ದೇನೆ. ಹಾಗೆ ನೋಡಿದರೆ ನಿನ್ನ ಹೆಸರೂ ಸಹ ಲೇಖಕನೆಂದು ಮುಖಪೃಷ್ಠದ ಮೇಲೆ ಮೂಡಬೇಕಿತ್ತು. ಆದರೆ ನೀನು ಜಾಣತನದಿಂದ ಆ ಹೊಣೆ ಒಪ್ಪಿಕೊಳ್ಳಲಿಕ್ಕೆ ಸಿದ್ಧನಾಗಲಿಲ್ಲ. ಈಗ ಈ ಅರ್ಪಣೆಯನ್ನು ಸ್ವೀಕರಿಸುವ ಹೊಣೆಯನ್ನಾದರೂ ಒಪ್ಪಿಕೊಳ್ಳಬೇಕು - ನಿನ್ನ, ಗಿರೀಶ.


ಪುಸ್ತಕ ಕುರಿತು: ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಾಗಿದ್ದರೂ ಇದು ವಿವೇಕ-ಅವಿವೇಕಗಳ ದ್ವಂದ್ವವನ್ನು ನಾಟಕೀಯವಾಗಿ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವುದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ. ಹೊಸ ಕಾಯಿದೆಗಳಿಗನುಸಾರವಾಗಿ ವೇಷ ಬದಲಿಸುವ ಬೀದಿಗಳ್ಳರು, ಪ್ರಾರ್ಥನೆಯ ಹೊತ್ತಿನಲ್ಲಿ ಕೊಲೆ ಮಾಡುವ ಸರದಾರರು, ರಾಜಕಾರಣವನ್ನು ದೇವರ ಕಾರ್ಯವೆಂದು ಭ್ರಮಿಸಿದ ಧರ್ಮಗುರುಗಳು, ಇಂಥ ವ್ಯಕ್ತಿಗಳ ದುರ್ದೈವಕ್ಕೆ ಸೂತ್ರಧಾರನಾದ ಮುಹಮ್ಮದ-ಹೀಗೆ ನಾಟಕದ ಮಾನುಷ ಪ್ರಪಂಚ ಜಟಿಲವಾಗಿದೆ. ವೇಷಾಂತರ, ಸ್ಥಳಾಂತರ, ಮತಾಂತರ-ಏನಾದರೂ ಕೊನೆಗೆ ಮುಹಮ್ಮದನಿಗೆ ಆಗುವದು-ಮಾಂಸ ಭಕ್ಷವಾಗಿರುವ ತನ್ನ ಆತ್ಮದ ದರ್ಶನ. ಕಾವ್ಯ, ಧರ್ಮ, ರಾಜಕಾರಣ ಮೊದಲಾದ ತನ್ನ ಸಂಸ್ಕಾರಗಳಿಗೆ ತಾನೇ ಪರಕೀಯವಾಗಿ, ದಿಲ್ಲಿಯಿಂದ ದೌಲತ್ತಾಬಾದಿನವರೆಗೆ ತನ್ನ ರಾಜ್ಯವನ್ನೂ, ಪ್ರಜೆಗಳನ್ನೂ ನಡೆಸಿಕೊಂಡು ಹೋದ ಈ ಅರಸ, 'ಆತ್ಮ-ಹತ್ಯೆ'ಯನ್ನು ಮಾಡಿಕೊಂಡೂ ಜೀವಂತವಾಗಿ ಉಳಿಯುತ್ತಾನೆ. ಇದೇ ಇಲ್ಲಿಯ ದುರಂತ. ಹತ್ತು ರೀತಿಯ ವೇಷವನ್ನು ತೊಟ್ಟರೂ ತಮ್ಮ ವ್ಯಕ್ತಿತ್ವವನ್ನು ತೆರೆದು ಬಿಸಿಲಿಗೆ ಒಣಗಹಾಕುವ ಪಾತ್ರಗಳು. ಅರಮನೆ, ರಾಜಬೀದಿ, ಮಸೀದೆ, ಕೋಟೆಯ ಬುರುಜು, ಹೀಗೆ ಬೇಕಾದಲ್ಲಿ ಪ್ರತ್ಯಕ್ಷವಾಗುವ ಸನ್ನಿವೇಶಗಳು, ಇವೆರಡನ್ನೂ ಬೆಸೆದಂತಿರುವ ನಾಟ್ಯಧ್ವನಿ, ದೃಶ್ಯಕಾವ್ಯದ ಭಾಷೆ-ಹೀಗೆ ನಾಟಕದ ರಚನಾಕೌಶಲ ಅದ್ಭುತವಾಗಿದೆ.. - ಸಂಪಾದಕರು.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ