ಬುಧವಾರ, ನವೆಂಬರ್ 30, 2011

ರಾಜ್ಯೋತ್ಸವದ ನೆನಪಿನಂಗಳದಲ್ಲಿ ಕನ್ನಡ ನಾಡು-ನುಡಿ ನಮನ


ಸಂಪದ್ಭರಿತವಾದ ಐತಿಹಾಸಿಕ ಭವ್ಯ ಪರಂಪರೆ, ಭವ್ಯ ಹಿನ್ನಲೆಯುಳ್ಳ ಕನ್ನಡಾಂಬೆಗೆ ನಮೋನಮಃ. ಹರಿದು ಹಂಚಿ ಹಂಚಿ ಹೋಗಿದ್ದ ಕನ್ನಡ ನಾಡು, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ಮತ್ತು ಅಸಂಖ್ಯಾತ ಕನ್ನಡಿಗರಿಂದ, ಕನ್ನಡಾಭಿಮಾನಿಗಳಿಂದ ಒಂದಾಗಿ ಇಡಿಯಾಗಿದೆ. ಈ ನಾಡ ಇತಿಹಾಸ ಕ್ರಿ. ಪೂ. ಎರಡು ಸಾವಿರ ವರ್ಷಗಳಿಗಿಂತಲೂ ಹಿಂದಿನದು. ಕರ್ನಾಟಕದ ಚಿನ್ನದ ಮೃದುಹೆಜ್ಜೆಗಳು ಹರಪ್ಪ- ಮೊಹಂಜೋದಾರೋ ನಾಗರೀಕತೆಯಲ್ಲಿಯೂ ಮೂಡಿವೆ. ಕದಂಬರು, ಗಂಗರು, ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು, ಬಹಮನಿ, ವಿಜಾಪುರದ ಸುಲ್ತಾನರು, ಮೈಸೂರು ವಿಜಯನಗರ ಅರಸರು, ಸಾಮಂತರು, ಪಾಳೆಗಾರರು, ಹೀಗೆಯೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಕನ್ನಡ ನಾಡಿನ ಭವ್ಯತೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಕನ್ನಡಿಗರು ಮೆರೆದ ಪರಾಕ್ರಮ ಅದ್ವಿತೀಯ. ವಿಜಯನಗರ ಸಾಮ್ರಾಜ್ಯ ಗುರು ವಿದ್ಯಾರಣ್ಯರ ಮೂಲಕ ಸ್ಥಾಪಿಸಲ್ಪಟ್ಟು, ಬಳ್ಳಗಳಿಂದ ಮುತ್ತು ರತ್ನಗಳನ್ನು ಅಳೆದ ಸಿರಿನಗರ ಸಾಹಿತ್ಯ, ಸಂಸ್ಕೃತಿ ಮತ್ತು ವಾಸ್ತುಶಿಲ್ಪಗಳಿಗೆ, ಕಲೆಗಳಿಗೆ ಅಂದಿಗೂ ಇಂದಿಗೂ ಸುಪ್ರಸಿದ್ಧ ಕನ್ನಡಕ್ಕೆ ಎತ್ತಿದ ಕೈ, ಕಲ್ಪವೃಕ್ಷ.

ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ – ಕವಿವಾಣಿ, ಕಬ್ಬಿಗರುದಿಸಿದ ಮಂಗಳಧಾಮ – ಕವಿ ಕೋಗಿಲೆಗಳ ಪುಣ್ಯಾರಾಮ, ಕನ್ನಡ ನಾಡಿನ ಆಂತರ್ಯವೇ ಈ ಕಬ್ಬಿಗರು. 'ಕುಮಾರವ್ಯಾಸರು ಹಾಡಿದರೆಂದರೆ ಕಲಿಯುಗ ದ್ವಾಪರವಾಗುವುದು' ಕವಿರಾಜಮಾರ್ಗದ ಕರ್ತೃ ಅಮೋಘವಾಗಿ ಚಿತ್ರಿಸಿದ್ದಾನೆ. ಆದಿಕವಿ ಪಂಪ, ರನ್ನ, ಪೊನ್ನರ ಹಳೆಗನ್ನಡ; ಹರಿಹರ, ರಾಘವಾಂಕ, ಶರಣರ ನಡುಗನ್ನಡ; ನಂತರ ಹೊಸಗನ್ನಡ, ಹೀಗೆಯೇ ಭವ್ಯ ಸಾಹಿತ್ಯ ಪರಂಪರೆ ಬೆಳೆಯುತ್ತಲೇ ಇದೆ. 'ಚಲುವನರಸುವ ಜಾಣ ಬಂದು ನೋಡು' ಈ ಕನ್ನಡ ಅಕ್ಷರಗಳು ಬಳ್ಳಿಯನೇರಿರುವ ಹೂಕಾಯಿ ಹಣ್ಣುಗಳಂತೆ ಎಷ್ಟು ಸುಂದರ! ಕೇಶಿರಾಜನ 'ಶಬ್ದಮಣಿದರ್ಪಣ'ಕ್ಕೆ ಸರಿಸಾಟಿ ಬೇರೆ ದರ್ಪಣವಿಲ್ಲ. ನವ್ಯ, ನವೋದಯ, ಬಂಡಾಯ ಹೀಗೆ ಹೊಸ ಹೊಸ ಪ್ರಯೋಗಗಳಾಗಿವೆ. ರೂಪಕ, ಉಪಮಾ, ಅಲಂಕಾರ ಸಾಮ್ರಾಜ್ಯ ಚಕ್ರವರ್ತಿಗಳು ಕನ್ನಡ ನೆಲದಲ್ಲಿ ರಾರಾಜಿಸಿದ್ದಾರೆ. ಭಾಷಾಭಂಡಾರ ಚಿನ್ನದ ರೇಖೆಯಲ್ಲಿ ಕುಂದಣವಿದ್ದಂತಿದೆ. ಕನ್ನಡ ಮುತ್ತಿನ ಅಕ್ಷರಗಳ ಪ್ರಪಂಚಕ್ಕೆ ಯಥೇಚ್ಛವಾದ ಮಳೆ ಬೆಳೆ ಕೊಟ್ಟು ಸುಭಿಕ್ಷವನ್ನುಂಟುಮಾಡಿ; ಸತ್ಯ, ಧರ್ಮ, ಭಕ್ತಿ, ಜ್ಞಾನ, ಸುಖ, ಸಂತಸದ ಸೌಭಾಗ್ಯ ನೆಲೆಸುವಂತೆಯೂ ಅನುಗ್ರಹಿಸು ಎಂದು ಬಳ್ಳಾರಿ ಜಿಲ್ಲೆಯ ಹರಿಹರ ಶ್ರೀ ಪಂಪಾಪುರಾಧೀಶ್ವರ ವಿರೂಪಾಕ್ಷನನ್ನು ಪ್ರಾರ್ಥಿಸಿದ್ದಾನೆ. ಕನ್ನಡ ನಾಡಿನ ಇತಿಹಾಸ ಸಂಸ್ಕೃತಿಗಳು ಈ ಮಂಗಳ ಪ್ರಾರ್ಥನೆಯ ನಿಲುವಿನಲ್ಲೆಯೇ ವಿಜೃಂಭಿಸುತ್ತವೆ. ಪ್ರಕೃತಿದತ್ತ ಸಂಪನ್ಮೂಲಗಳಿಂದ, ಶಿಲ್ಪಕಲೆಗಳಿಂದ ಕೂಡಿದ ಬಳ್ಳಾರಿ ನಕ್ಷೆಯು ನಂದಿಯ ಆಕಾರದಲ್ಲಿದ್ದು, ಪರಮಪಾವನೆ ತುಂಗೆಯು ನಂದಿಯ ಬಲದಿಂದ ಹಾಯ್ದು, ಬೆನ್ನಿನ ಮೇಲೆ ಹರಿದು, ಕೊಂಬುಗಳ ಮಧ್ಯ ಸಾಗಿ ಹಾಗೆಯೇ ಕನ್ನಡ ನೆಲವನ್ನು ಪಾವನಗೊಳಿಸಿದೆ.

ತನ್ನದೇ ಆದ ಸಂಸ್ಕೃತಿ ಹೊಂದಿದ ಬಳ್ಳಾರಿ ಆದಿಮಾನವನ ಮೂಲ ಸ್ಥಾನವಾಗಿದೆ. ಪ್ರಾಚೀನ ಮಾನವನು ಈ ಜಿಲ್ಲೆಯಲ್ಲಿ ಎಲ್ಲಾ ಯುಗಗಳಲ್ಲಿಯೂ ನಡೆಯುತ್ತಾ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾನೆ. ರಾಮಾಯಣದ ಮೂಲ ಸುಗ್ರೀವ, ಹನುಮಂತ ಮೊದಲಾದವರು ಸಂಸ್ಕೃತಿಯ ಪ್ರತಿನಿಧಿಗಳು. ಹಂಪೆಯು ದಕ್ಷಿಣಕಾಶಿ ಮತ್ತು ಪಂಪಾಕ್ಷೇತ್ರವೆಂದು ಪ್ರಸಿದ್ಧಿಯಾಗಿದೆ. ಬ್ರಹ್ಮನ ಮಗಳು ಪಂಪಾದೇವಿ ಇಲ್ಲಿಯ ಪಂಪಾ ಸರೋವರದ ದಡದಲ್ಲಿ ತಪಸ್ಸುಮಾಡಿ ವಿರೂಪಾಕ್ಷನನ್ನು ಒಲಿಸಿ ಮದುವೆಯಾದ ರೋಚಕ ಪುರಾಣ ಕಥೆಯಿದೆ. ಬೆಟ್ಟವೊಂದರ ಮೇಲೆ ಮಾತಂಗ ಋಷಿ ತಪಸ್ಸು ಮಾಡಿದ ಮಾತಂಗ ಪರ್ವತವಿದೆ. ನದಿಯ ಮಧ್ಯದ ಮಂಟಪದಲ್ಲಿ ವಶಿಷ್ಠ ಋಷಿ ತಪಸ್ಸು ಮಾಡಿದ್ದಾಗಿದೆ. ರಾಮ ಸೀತಾ ಲಕ್ಷ್ಮಣರು ಬೀಡುಬಿಟ್ಟ ಕೋದಂಡರಾಮನ ದೇವಸ್ಥಾನ, ಶಬರಿ ಆಶ್ರಮ, ಅಂಜನಾದ್ರಿ ಬೆಟ್ಟ, ಆಂಜನೇಯನ ಜನ್ಮಸ್ಥಳ, ವಾಲಿಯ ರಾಜಧಾನಿ ಕಿಷ್ಕಿಂಧೆ - ಇವೆಲ್ಲ ಕನ್ನಡ ಹರಿಶ್ಚಂದ್ರ ಕಾವ್ಯದಲ್ಲಿದೆ. 'ಕೌಮುದಿ ಮಹೋತ್ಸವ' ಪಂಪಾಕ್ಷೇತ್ರದ ವರ್ಣನೆಯಿಂದ ಕೂಡಿದೆ.

ಕ್ರಿ. ಪೂ. ನಾಲ್ಕನೆಯ ಶತಮಾನದಲ್ಲಿ ನಂದರು, ಮೌರ್ಯರು, ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ರಾಜ್ಯವಾಳಿದ್ದಾರೆ. ಶ್ರೀ ವಿದ್ಯಾರಣ್ಯರ ಅನುಗ್ರಹದಿಂದ ಹಕ್ಕ-ಬುಕ್ಕರು ಶ್ರೀ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ್ದರೆ, ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಹಂಪೆಯ ವಿಜಯನಗರ ಸಾಮ್ರಾಜ್ಯದ ವೈಭವವು ದಶ-ದಿಕ್ಕುಗಳಿಗೂ ಹಬ್ಬಿತ್ತು. 'ರಮಾರಮಣ' ಬಿರುದು ಹೊಂದಿದ ಶ್ರೀ ಕೃಷ್ಣದೇವರಾಯನು ಮಹಾಶೂರನು, ಆಡಳಿತಗಾರನು, ಕಲೆ ಸಾಹಿತ್ಯಗಳ ಆಶ್ರಯದಾತನೂ, ಕವಿಶ್ರೇಷ್ಠನೂ ಆಗಿದ್ದನು. ಅಚ್ಚಳಿಯದ ಐತಿಹಾಸಿಕ ಪರಂಪರೆ ಹುಟ್ಟುಹಾಕಿದ ವಿಜಯನಗರದ ಸಂಸ್ಥಾಪಕನೂ ಆಗಿರುವನು. ಬಳ್ಳಾರಿ ಜಿಲ್ಲೆಯ ಎಲ್ಲ ತಾಲ್ಲೂಕು, ಹಳ್ಳಿಗಳು ತಮ್ಮವೇ ಆದ ಧಾರ್ಮಿಕ ಐತಿಹಾಸಿಕ ಭವ್ಯ ಮಹತ್ವ ಪಡೆದಿವೆ. ಅನೇಕ ಸಾಧುಸಂತರುಗಳಿಂದ, ತೀರ್ಥಕ್ಷೇತ್ರಗಳಿಂದ ಚಾರಿತ್ರಿಕ, ಪೌರಾಣಿಕ, ಐತಿಹಾಸಿಕ ಮಹತ್ವ ಪಡೆದುಕೊಂಡಿದ್ದೇ ಅಲ್ಲದೆ ಇಂದಿಗೂ ಉಳಿಸಿಕೊಂಡು ಬಂದಿದೆ.

ಇಂದು ನಮ್ಮ ಜೀವನದ ವಿಧಾನ ಬದಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಮಾನವನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಈ ಕ್ಷೇತ್ರವನ್ನು ನಮ್ಮ ಕನ್ನಡ ನಾಡು, ನುಡಿ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳಬೇಕಾಗಿದೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ವಿಶ್ವಕೋಶದ ಗಣಕೀಕರಣ ಮಾಡುತ್ತಿದೆ. ಸಹಸ್ರಾರು ಕನ್ನಡಿಗರು 'ಫೇಸ್ ಬುಕ್ ತಾಣ' ಬಳಸುತ್ತಿದ್ದಾರೆ. ಈಗ ಅಂತರ್ಜಾಲದಲ್ಲಿ ಕರ್ನಾಟಕ ಸರ್ಕಾರ 'ಈ-ಆಡಳಿತ' ಜಾರಿಗೆ ತಂದಿದೆ. ಇದು ಕನ್ನಡಿಗರಿಗೆ ಕೊಡುಗೆ. ಬೇರೆ ಭಾಷೆಯೊಂದಿಗೆ ಕನ್ನಡಿಗರೂ ಮತ್ತು ಕನ್ನಡ ಭಾಷೆ ತಲೆಯೆತ್ತಿ ನಿಲ್ಲಬೇಕಾದರೆ 'ತಂತ್ರಜ್ಞ ಕನ್ನಡಿಗರು' ಶ್ರಮಿಸಬೇಕು. ಶ್ರೀಗಂಧದ ಕನ್ನಡ, ಚೆನ್ನುಡಿ; ಅದು ಅರಳುವಂತೆ ಕನ್ನಡೇತರರು ಸಹಕರಿಸಬೇಕು.

'ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ' - ವಿಶ್ವಪರಂಪರೆಯ ತಾಣಗಳಲ್ಲಿ ಒಂದಾದ ಹಂಪೆಯು, ವಿಜಯನಗರದ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಶಿಲ್ಪಕಲೆ, ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಬಿರುಬಿಸಿಲಿನ ಮಧ್ಯೆ ಕಲ್ಲುಗುಡ್ಡಗಳಲ್ಲಿ ಕಲೆ ಅರಳಿಸಿದ ಇತಿಹಾಸದ ಕುರುಹು ಭವ್ಯಪರಂಪರೆಗೆ ಸಾಕ್ಷಿ. ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲ ಈ ಕನ್ನಡಾಂಬೆಯ ಗುಡಿಯು!

ಜೈ ಭುವನೇಶ್ವರಿ – ಜೈ ಕರ್ನಾಟಕ.

ಲೇಖಕರ ಕಿರುಪರಿಚಯ
ಶ್ರೀಮತಿ ರೇಣುಕಾ ಪ್ರಕಾಶ್ ರಾವ್

ಬಳ್ಳಾರಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಎಂ. ಎ., ಬಿ. ಎಡ್., ಎಲ್. ಎಲ್. ಬಿ. ಪದವೀಧರರಾಗಿದ್ದು, ಶ್ರೀ ಗಿರೀಶ್ ಕಾರ್ನಾಡ್ ಮತ್ತು ವರಕವಿ ಬೇಂದ್ರೆಯವರಲ್ಲಿ ಶಿಷ್ಯತ್ವವನ್ನು ಪಡೆದಿದ್ದಾರೆ.

ಇವರು ಸುಧೀರ್ಘ ಮೂವತ್ತೊಂದು ವರ್ಷಗಳ ಭೋಧನಾನುಸಾರವನ್ನು ಹೊಂದಿದ್ದು, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಸಹಸ್ರಾರು ವಿದ್ಯಾರ್ಥಿಗಳನ್ನು ಶಿಷ್ಯರನ್ನಾಗಿ ಪಡೆದಿದ್ದರೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಶ್ರೀಮತಿ ರೇಣುಕಾ ಪ್ರಕಾಶ್ ರಾವ್ ರವರ ಮೂವತ್ತೊಂದು ವರ್ಷಗಳ ಭೋಧನಾನುಸಾರದ ಅನುಭವದೊಂದಿಗೆ ಸಂಪದ್ಭರಿತವಾದ ಐತಿಹಾಸಿಕ ಕನ್ನಡದ ಹಿನ್ನಲೆಯನ್ನು ಆದಿಕವಿಗಳು ಕನ್ನಡನಾಡನ್ನು ಆಳಿದ ಅರಸರು ,ಹಾಗೆಯೇ ಬಳ್ಳಾರಿಯೂ ಯುಗ ಯುಗಾಂತರದ ಹಿಂದೆ ದೈವೀಪುರುಷರ ನೆಳೆವೀಡಾಗಿತ್ತು ಎಂಬುದನ್ನು ನೆನಪಿಸುತ್ತಾ ವಿಜಯನಗರದ ಹಂಪೆಯ ಶಿಲ್ಪಿ ಕಲೆಯ ಸೌಂದರ್ಯವನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿ ಮೆಲಕು ಹಾಕುವಂತೆ ಮಾಡಿದ್ದಾರೆ.ಕನ್ನಡ ನಾದ ವರ್ಣನೆಯ ಇವರ 'ಕಹಳೆ'ಯ ಈ ಕೊನೆಯ ಲೇಖನಕ್ಕೆ ಒಂದು ಕಿರೀಟವಿಟ್ಟಂತೆ ಶೋಬಿತವಾಗಿದೆ .

    ಪ್ರತ್ಯುತ್ತರಅಳಿಸಿ
  2. ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ನಿಮ್ಮ ಲೇಖನವು ಅತ್ಯಂತ ಪ್ರಭಾವಶಾಲಿಯಾಗಿ ಬಿಂಬಿಸಿದೆ. ಈ ಲೇಖನವು ಕಹಳೆಯ ಪ್ರಸ್ತುತ ಸರಣಿಗೆ ಕಲಶವಿಟ್ಟಂತಿದೆ.

    ಪ್ರತ್ಯುತ್ತರಅಳಿಸಿ