ಮಂಗಳವಾರ, ನವೆಂಬರ್ 29, 2011

ರಾಹುಲ್ ದ್ರಾವಿಡ್

ರಾಹುಲ್ ಶರದ್ ದ್ರಾವಿಡ್

ರಾಹುಲ್ ದ್ರಾವಿಡ್ ಎಂಬ ಹೆಸರು ಭಾರತೀಯ ಕ್ರಿಕೆಟ್ ನಲ್ಲಿ ನಂಬಿಕೆಯ ಸಂಕೇತ. ಭಾರತ ಕ್ರಿಕೆಟ್ ನ ಗೋಡೆ ಎಂದೇ ಹೆಸರಾಗಿರುವ ದ್ರಾವಿಡ್ ಬೆಂಗಳೂರಿನವರು ಎನ್ನುವುದು ಹೆಮ್ಮೆಯ ವಿಷಯ. ಅದರಲ್ಲೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ ಈ ಸ್ಫುರದ್ರೂಪಿ ಕ್ರಿಕೆಟ್ ತಾರೆ ಕನ್ನಡದ ಹೆಮ್ಮೆಯ ನಕ್ಷತ್ರ ಎಂದರೆ ತಪ್ಪಾಗಲಾರದು.

ರಾಹುಲ್ ಶರದ್ ದ್ರಾವಿಡ್ ಅವರು ಜನವರಿ 11, 1973 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದರು. ತಂದೆ ಶರದ್ ದ್ರಾವಿಡ್ ಮತ್ತು ತಾಯಿ ಪುಷ್ಪ. ಡಿಗ್ರಿ ಓದಿದ್ದು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ. ಅವರಿಗೆ ವಿಜಯ ಎಂಬ ಹೆಸರಿನ ಸಹೋದರನಿದ್ದಾನೆ. ದ್ರಾವಿಡ್ ತನ್ನ 12ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಮಾಜಿ ಕ್ರಿಕೆಟ್ ಆಟಗಾರರಾದ ಕೆಕಿ ತಾರಪೂರ್. ತಮ್ಮ ಶಾಲೆಗೆ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ದ್ರಾವಿಡ್ ಅದ್ಭುತವಾದ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಆದರೆ ಮಾಜಿ ಆಟಗಾರರಾದ ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್ ಮತ್ತು ತಾರಪೂರ ಅವರ ಸಲಹೆಯಂತೆ ವಿಕೆಟ್ ಕೀಪಿಂಗ್ ಅನ್ನು ನಿಲ್ಲಿಸಿದರು.

1996 ರಿಂದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ದ್ರಾವಿಡ್ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲಂಡ್ ನ ಲಾರ್ಡ್ಸ್ ಮೈದಾನದಲ್ಲಿ ಆಡಿದರು. ಮೊದಲ ಏಕ ದಿನ ಪಂದ್ಯವನ್ನು ಶ್ರೀಲಂಕಾದ ವಿರುದ್ದ ಸಿಂಗಪುರದಲ್ಲಿ ಆಡಿದರು. ಇವರು ಏಕದಿನ ಪಂದ್ಯಗಳಲ್ಲಿ 344 ಪಂದ್ಯಗಳನ್ನು ಆಡಿ 10889 ರನ್ ಗಳನ್ನು 39.16 ಸರಾಸರಿಯಲ್ಲಿ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳನ್ನು ಹಾಗೂ 83 ಅರ್ಧ ಶತಕಗಳನ್ನು ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 160 ಪಂದ್ಯಗಳನ್ನು ಆಡಿ 13094 ರನ್ ಗಳಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 62 ಅರ್ಧ ಶತಕಗಳು ಕೂಡಿವೆ. ಟೆಸ್ಟ್ ನಲ್ಲಿ 13000 ರನ್ನುಗಳನ್ನು ಪೂರೈಸಿದ ವಿಶ್ವದ ದ್ವಿತೀಯ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 10000 ರನ್ ಗಳಿಗೂ ಅಧಿಕ ರನ್ ಗಳನ್ನು ಗಳಿಸಿದ ಭಾರತದ ಮೂರನೆ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಔಟಾಗದೆ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ “ ದ ವಾಲ್ ” (ಗೋಡೆ) ಎಂಬ ಅಡ್ಡಹೆಸರೂ ಪ್ರಾಪ್ತಿಯಾಗಿದೆ. ಪ್ರತಿಷ್ಠಿತ ವಿಸ್ಡನ್ ಸಂಸ್ಥೆಯು ಇವರನ್ನು 2000 ನೇ ಇಸವಿಯಲ್ಲಿ 'ವರ್ಷದ ಕ್ರಿಕೆಟಿಗ' ನೆಂದು ಪುರಸ್ಕರಿಸಿದೆ. 2004ರಲ್ಲಿ ಭಾರತ ಸರ್ಕಾರವು 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ಇದೇ ವರ್ಷ ಐಸಿಸಿ ಯು 'ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರ' ನೆಂದು ಗೌರವಿಸಿದೆ ಹಾಗೂ ಭಾರತ ತಂಡದ ಉಪ ನಾಯಕನಾಗಿ ಆಯ್ಕೆಯಾಗಿದ್ದರು. 2004 ನೇ ವರ್ಷದಲ್ಲಿ ಭಾರತ ತಂಡದ ನಾಯಕನಾಗಿ ಆಡಿದ ದ್ರಾವಿಡ್ ಶ್ರೀಲಂಕಾ ವಿರುದ್ದ ಸರಣಿ ಜಯವನ್ನೂ ಸಾಧಿಸಿದ್ದರು.

ಇವರು ಪ್ರತಿನಿಧಿಸಿದ ತಂಡಗಳು:
  1. ಭಾರತ
  2. ಸ್ಕಾಟ್ ಲ್ಯಾಂಡ್
  3. ಏಷ್ಯ 11
  4. ಐಸಿಸಿ ವರ್ಲ್ಡ್ 11
  5. ಕರ್ನಾಟಕ
  6. ಕೆಂಟ್
  7. ಎಂಸಿಸಿ
  8. ರಾಜಸ್ತಾನ್ ರಾಯಲ್ಸ್
  9. ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇವರಿಗೆ ಒಲಿದು ಬಂದ ಪ್ರಶಸ್ತಿಗಳು:
  1. 1999: ಸಿಯೆಟ್ ಕ್ರಿಕೆಟರ್ ಆಫ್ 1999 ವರ್ಲ್ಡ್ ಕಪ್
  2. 2000: 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ
  3. 2004: 'ಸರ್ ಗಾರ್ಫೀಲ್ಡ್ ಸೋಬರ್ಸ್' ಪ್ರಶಸ್ತಿ (ವರ್ಷದ ಐಸಿಸಿ ಕ್ರಿಕೆಟಿಗನಿಗೆ ಕೊಡಲಾಗುತ್ತದೆ)
  4. 2004: ಭಾರತ ಸರ್ಕಾರದ 'ಪದ್ಮಶ್ರಿ' ಪ್ರಶಸ್ತಿ
  5. 2004: ವರ್ಷದ ಐಸಿಸಿ ಟೆಸ್ಟ್ ಆಟಗಾರ
  6. 2006: ಐಸಿಸಿ ಟೆಸ್ಟ್ ತಂಡದ ನಾಯಕ

ಲೇಖಕರ ಕಿರುಪರಿಚಯ
ಶ್ರೀ ಆರ್ತೇಶ

ಇವರು ಹುಟ್ಟಿದ್ದು ಉಡುಪಿಯಲ್ಲಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಐಟಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಇವರ ಹವ್ಯಾಸಗಳಲ್ಲಿ ಅಂತರ್ಜಾಲ ಜಾಲಾಡುವುದು, ಸಂಗೀತ ಕೇಳುವುದು, ತಾಂತ್ರಿಕ ವಿಷಯಗಳ ಕುರಿತಾದ ಲೇಖನಗಳನ್ನು ಓದುವುದೂ ಸೇರಿದೆ. ಕ್ರಿಕೆಟ್ ನ ಕಟ್ಟಾ ಅಭಿಮಾನಿಯಾದ ಇವರು ತಮ್ಮ ಈ ಮೊದಲ ಲೇಖನವನ್ನು ಕಹಳೆಗಾಗಿ ನೀಡಿದ್ದಾರೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಬೇರೆ ಎಲ್ಲೇ ಹುಟ್ಟಿದರೂ ನಮ್ಮ ಕನ್ನಡ ನಾಡಿಗೆ ಕೀರ್ತಿ ತರುತ್ತಿರುವ ಒಬ್ಬ ಜಗತ್ ಪ್ರಸಿದ್ದ ದಾಂಡಿಗನನ್ನು ಅವರು ಸಾದಿಸಿರುವ ಯಶಿಸ್ಸಿನ ಸರಮಾಲೆಯನ್ನು ನಾವೆಲ್ಲರೂ ಅಭಿನಂದಿಸಲೇಬೇಕು .

    ಪ್ರತ್ಯುತ್ತರಅಳಿಸಿ
  2. ಕರ್ನಾಟಕದ ಹೆಮ್ಮೆ - ಭಾರತ ಕ್ರಿಕೆಟ್ ಜಗತ್ತಿನ ದಿಗ್ಗಜರುಗಳಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ರವರ ಬಗ್ಗೆ ಇದೊಂದು ಉತ್ತಮೆ ಲೇಖನ.

    ಪ್ರತ್ಯುತ್ತರಅಳಿಸಿ