ಭಾನುವಾರ, ನವೆಂಬರ್ 13, 2011

ಜೋಕಾಲಿ

ಇದು 6 ವರ್ಷಗಳ ಹಿಂದೆ ನಡ್ದಿದ್ ಘಟನೆ... ನಂಗೆ ಆಗ ಒಂಚೂರು ಬೇಗ ಏಳೋ ಅಭ್ಯಾಸ ಇತ್ತು, ಬೇಗ ಅಂದ್ರೆ 8:30 ಅಂತ.. ನನ್ನ ಗೆಳತಿಯೊಂದಿಗೆ ಬೆಳ್ಳಂ ಬೆಳಗ್ಗೆ (8:45ಕ್ಕೆ) ಸುತ್ತು ಹೊಡ್ಕೊಂಡು ಬರೋಣ, ಆರೋಗ್ಯಕ್ಕೆ ಒಳ್ಳೇದು ಅನ್ನೋ ಖಯಾಲಿಯಿಂದ ಹೊರಟ್ ಬಿಡ್ತಿದ್ದೆ. ಹುಟ್ಟಿದ್ ಬೆಳ್ದಿದ್ ಎಲ್ಲಾ ನಮ್ಮ ಮಲ್ಲೇಶ್ವರದಲ್ಲಿ, ಇಲ್ಲೇ ಕುಮಾರಪಾರ್ಕ್ ಕಡೆಗೆ ನಮ್ಮ ಬೆಳಗ್ಗಿನ ಪಯಣ. ನಮ್ಮ ವ್ಯಾಯಾಮ ಹೇಗಂದ್ರೆ, ಚನ್ನಾಗಿ ಒಂದು 4 ಸುತ್ತು ಹೊಡುದ್ಬಿಡದು, ಆಮೇಲೆ ಅಚ್ಕಟ್ಟಾಗಿ ಒಂದೆರಡು ಕುಲ್ಫಿ ತಿಂದುಬಿಡದು. ಇಲ್ಲಿ ಉದ್ಯಾನವನದ ಜೊತೆಗೆ ಒಂದು ಆಟದ ಮೈದಾನನೂ ಇದೆ. ಅಲ್ಲಿ ಮಕ್ಕಳಿಗೆ ಅಂತ ಜಾರೋ-ಬಂಡೆ, ಜೋಕಾಲಿ, ಸೀ-ಸಾ ಪ್ರತ್ಯೊಂದೂ ಇದೆ.

ಹೀಗೇ ಒಂದು ಭಾನುವಾರ ಸುತ್ತು ಹೊಡ್ದು ಬಂದು ಕಲ್ಲು ಬೆಂಚ್ ಮೇಲೆ ಕೂತು ಕುಲ್ಫಿ ತಿನ್ತಿರ್ವಾಗ ಸುಮಾರು 27ರ ವಯಸ್ಸಿನ ಒಬ್ಬ ಮನುಷ್ಯ ಅಲ್ಲೇ ಸುತ್ತುತ್ತಿರೋದು ಗಮನಿಸಿದೆ. ಖಾಲಿ ಹೊಡೆಯುತ್ತಿರುವ ರಸ್ತೆಯಲ್ಲಿ ಪದೇ ಪದೇ ಮಕ್ಕಳ ಉದ್ಯಾನವನದ ಹತ್ತಿರಾನೇ ಸುಳೀತಿದ್ದ. ಯಾಕೋ ಅನುಮಾನ ಬಂದು, ಅಷ್ಟು ತದೇಕಚಿತ್ತವಾಗಿ ಏನ್ ನೋಡ್ತಿದ್ದಾನೆ ಮನುಷ್ಯ ಅಂತ ಅವನ ನೋಟದ ಹಾದಿಯನ್ನೇ ನಾನೂ ಹಿಂಬಾಲಿಸಿ ನೋಡಿದ್ರೆ, ನನ್ನ ಕಣ್ಣಿಗೆ ಆಟವಾಡ್ತಿರುವ 2 ಪುಟ್ಟ ಮಕ್ಕಳು ಕಾಣ್ಸಿದ್ವು. ಒಂದು ಹೆಣ್ಣು, ಮತ್ತೊಂದು ಗಂಡು, ಎರಡೂ 3-4 ವರ್ಷದ ಒಳಗಿನ ಚಿಣ್ಣರು. ಜೋಕಾಲಿ ಆಡ್ತಾ ಅದರ ಜೊತೆ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಹೋಗ್ತಾ ಆ ಹೆಣ್ಣು ಮಗು, ಸಂತೋಷದಿಂದ ಚೀರ್ತಿತ್ತು. ಆ ಮನುಷ್ಯನ ಕಣ್ಣು, ಆ ಪುಟ್ಟ ಹುಡುಗಿ ಮೇಲಿಂದ ಸರೀತಾನೇ ಇರಲಿಲ್ಲ. ಅವನ ನೋಟದಲ್ಲಿ ಇದ್ದಿದ್ದ ಭಾವ ವಿಕೃತವಾಗಿ ಕಂಡ ನನಗೆ, ಅವನ ಸಂಶಯಾಸ್ಪದ ನಡುವಳಿಕೆಯ ಉದ್ದೇಶ ಏನಿರಬಹುದು ಅನ್ನುವ ಚಿಂತೆ! ಯಾಕೊ ಅಲ್ಲಿಂದ ಹೋಗೋ ಮನಸ್ಸೇ ಆಗದೆ ಅಲ್ಲೇ ಉಳಿದೆ. ಇಷ್ಟು ಪುಟ್ಟ ಮಕ್ಕಳನ್ನು ನಿಗಾವಹಿಸದೆ ಒಬ್ಬೊಬ್ಬರಾಗೇ ಆಟಕ್ಕೆ ಕಳುಹಿಸಿರುವ ತಂದೆ ತಾಯಿಯರ ಮೇಲೆ ತುಂಬಾ ಅಸಮಾಧಾನ ಉಂಟಾಗಿ, ನಾನೇ ಆ ಮಕ್ಕಳ ಹತ್ತಿರ ಹೋಗಿ ನಿಂತೆ. ನನ್ನ ಕಂಡ ಆ ಮನುಷ್ಯ ತಕ್ಷಣ ಕಾಲಿಗೆ ಬುದ್ಧಿ ಹೇಳಿದ. ಸ್ವಲ್ಪ ಸಮಯ ಅಲ್ಲೇ ಕಳೆದು, ಅವನು ಮರಳಿಬರುವ ಯಾವ ಸೂಕ್ಶ್ಮಗಳೂ ಕಾಣದೇ ಮತ್ತೊಂದು ಸುತ್ತು ಹೊಡೆಯಲು ನಾ ಹೊರಟೆ.

ಛಾಯಾಚಿತ್ರ ಕೃಪೆ : ಟ್ರೇಸಿ ಚಾಪ್ಲಿನ್
ಸುತ್ತು ಮುಗಿಸಿ ಬಂದು ನೋಡಿದ್ರೆ ಮತ್ತೆ ಅದೇ ಮನುಷ್ಯ ಆ ಜೋಕಾಲಿ ಮೇಲಿರುವ ಮಗುವನ್ನು ಏಕಾಗ್ರಚಿತ್ತನಾಗಿ ನೋಡುತಿದ್ದ, ಮತ್ತು ಈ ಬಾರಿ ಉದ್ಯಾನವನದ ಗೇಟಿನ ಹತ್ತಿರ ಬರುವಷ್ಟು ಧೈರ್ಯ ತೋರಿಸಿದ್ದ. ನನ್ನ ಅನುಮಾನ ನೂರುಪಟ್ಟು ಖಚಿತವಾಗಿ, ನಾನೂ ಕೂಡ ಈ ಬಾರಿ ಇವನನ್ನು ಸುಮ್ಮನೆ ಬಿಡಬಾರದೆಂದು ಎಣಿಕೆ ಹಾಕಿ ಅವನಿಗೆ ಕಾಣಿಸದ ಒಂದು ಮೂಲೆಯಿಂದ ಅವನ ಚಟುವಟಿಕೆಗಳನ್ನು, ಹಾಗೂ ಸುತ್ತ ಮುತ್ತ ಯಾರಾದರು ಜನ ಕಾಣುತ್ತಾರ ಎಂಬುದನ್ನೂ ಗಮನಿಸತೊಡಗಿದೆ. ಆಗ ಇಬ್ಬರೂ ಮಕ್ಕಳು ಆಟ ಮುಗಿಸಿ ಉದ್ಯಾನವನದ ಗೇಟಿನ ಕಡೆಗೆ ಅವನ ಹತ್ತಿರವೇ ಹೆಜ್ಜೆ ಹಾಕತೊಡಗಿದರು. ಅವನು ಇದ್ದಕಿದ್ದ ಹಾಗೇ ಆ ಮಕ್ಕಳ ಕಡೆಗೆ ಧಾವಿಸಿದ್ದನ್ನು ಕಂಡು, ನನಗೆ ಭಯ ಮೂಡಿ, ಬಚ್ಚಿಟ್ಟುಕೊಂಡ ಮೂಲೆಯಿಂದ ಹೊರಗೆ ಬಂದು ಆ ಮಕ್ಕಳ ಕಡೆಗೇ ಹೊರಟೆ. ಇನ್ನೇನು ಆ ಹುಡುಗಿಯ ಸಮೀಪ ಅವನು ಹೋಗುವುದನ್ನು ನೋಡಿ ಭಯ ಹೆಚ್ಚಾಗಿ, ಜನರನ್ನು ಒಟ್ಟು ಹಾಕಲು ಕೂಗಬೇಕು ಅನ್ನುವಾಗ ಅವನು ಆ ಹುಡುಗಿಯನ್ನು ದಾಟಿಕೊಂಡು ಉದ್ಯಾನವನದ ಕಡೆಗೆ ವೀರಾವೇಷದಿಂದ ಬರುವುದನ್ನು ಕಂಡು ಒಂದು ಕ್ಷಣ ಏನೂ ಹೊಳೆಯದೆ ಕಂಭವಾಗಿ ನಿಂತಲ್ಲೇ ಬೇರೂರಿದೆ. ಆ ಮಕ್ಕಳು ಅಲ್ಲಿಂದ ಹೊರಗೆ, ಮನೆಯ ಕಡೆಗೆ ಕ್ಷೇಮವಾಗಿ ಹೊರಟಿದ್ದನ್ನು ಕಂಡು ನಿರಾಳಳಾಗಿ, ಅವನ ಉದ್ದೇಶದ ಬಗ್ಗೆ ಒಂದು ನಿಮಿಷದ ಹಿಂದೆ ಇದ್ದ ಸ್ಪಷ್ಟತೆ ಕುಂದು ಹೋಗಿ ಅವನನ್ನೇ ನೋಡಿದಾಗ, ಆ ಮನುಷ್ಯನ ಜೋಕಾಲಿಯ ಕಡೆಗಿನ ಓಟ ಕಂಡು ದಿಗ್ಭ್ರಾಂತಳಾದೆ. ಮುಂದಿನ ಕ್ಷಣವೇ ಅವನು ಉದ್ಯಾನವನದಲ್ಲಿ ಇದ್ದ ಒಂದೇ ಜೋಕಾಲಿಯನ್ನು ಏರಿ ಸಂತೋಷದಿಂದ ಅದರಲ್ಲಿ ತೂಗಲು ಶುರು ಮಾಡಿದ್ದ.

ಆಗ ನನಗೆ ಆ ಹುಡುಗಿಯನ್ನು ನೋಡುತಿದ್ದ ಅವನ ನಿಜವಾದ ಉದ್ದೇಶ ತಿಳಿಯಿತು, ಅವನಿಗೂ ಜೋಕಾಲಿ ಆಡುವ ಬಯಕೆ ಮೂಡಿತ್ತು. ಅವನ ನೋಟದ ಭಾವ ವಿಕೃತವಲ್ಲ, ಅಸೂಯೆಯದಾಗಿತ್ತು. ನನ್ನ ತಪ್ಪಿನ ಅರಿವಾಗಿ ನಿಂತಲ್ಲೇ ಬಿದ್ದುಹೋಗುವಷ್ಟು ನಗು ಬಂತು. ಮಕ್ಕಳು ಆಟ ಆಡಿ ಆನಂದಿಸುತ್ತಿದ್ದದ್ದನ್ನು ಕಂಡು, ಅವನಲ್ಲಿದ್ದ ಮಗುವು ಜಾಗೃಗೊಂಡಿತ್ತು. ಆ ಹುಡುಗಿ ಜೋಕಾಲಿಯನ್ನು ಬಿಡುವುದನ್ನೇ ಕಾದುಕೊಂಡು ಅವನು ಉದ್ಯಾನವನದ ಸುತ್ತ ಸುತ್ತು ಹೊಡಿಯುತ್ತಿದ್ದನೆಂಬ ಸತ್ಯ ನನಗೆ ಮನದಟ್ಟಾಗಿ, ಎಲ್ಲೋ ಓದಿದ್ದ ಒಂದು ವಾಕ್ಯ ನೆನಪಾಯಿತು:

"Every grownup is a child with many layers on"

ಎಷ್ಟೇ ದೊಡ್ಡವರಾದರೂ ನಮ್ಮೆಲ್ಲರೊಳಗೆ ಒಂದು ಮಗುವು ಅಡಗಿರುತ್ತದೆ. ಪದೇ ಪದೇ ಅದು ಹೊರಗೆ ಬರುವ ಪ್ರಯತ್ನ ಮಾಡಿದರೂ, ನಾವು ನಮ್ಮಲ್ಲೇ ಅದನ್ನು ಕೂಡಿ ಹಾಕಿಕೊಳ್ಳುತ್ತೇವೆ. ಸೋಪಿನ ನೊರೆಯ ಗುಳ್ಳೆ ಕಂಡ್ರೆ ಒಡೆಯಣ, ಕೊಚ್ಚೆಯನ್ನು ಕಂಡ್ರೆ ಅದರ ಮೇಲೆ ಹಾರಣ, ಮಳೆ ಕಂಡ್ರೆ ನೆನೆಯಣ ಅಂತ ನಮ್ಮೊಳಗಿನ ಮಗು ಎಷ್ಟೇ ಹಂಬಲಿಸಿದ್ರೂ, ಒತ್ತಡದ ಜೀವನದಲ್ಲಿ ಆ ಮಗುವಿನ ಧ್ವನಿಯು ಕೇಳುವ ಕಿವಿಸಿಗದೆ ಮೌನಧರಿಸಿಬಿಡುತ್ತದೆ. ಈ ಯಾಂತ್ರಿಕ ಜೀವನದಲ್ಲಿ ಆ ಧ್ವನಿಗೆ ಸ್ವಲ್ಪ ಕಿವಿ ಕೊಡೋಣ ಅನ್ನುವ ಸಂಕಲ್ಪ ತೊಟ್ಟು, ಮಕ್ಕಳ ದಿನಾಚರಣೆ ಪ್ರಯುಕ್ತ ನಮ್ಮೆಲರೊಳಗೆ ಅಡಗಿರುವ ಆ ಪುಟ್ಟ ಮಗುವಿಗೆ ನನ್ನ ಈ ಬರಹ, ಸಮರ್ಪಿತ.

ಲೇಖಕರ ಕಿರುಪರಿಚಯ
ಕುಮಾರಿ ಮೀರಾ ಚಂದ್ರಮೌಳಿ.

ಹುಟ್ಟಿ, ಬೆಳೆದದ್ದು ಬೆಂಗಳೂರು ನಗರಿಯ ಮಲ್ಲೇಶ್ವರಂನಲ್ಲಿ. ಕಾಲೇಜಿನ ವ್ಯಾಸಂಗ ಮುಗಿಸಿ, ವೃತ್ತಿ ಜೀವನ ಪ್ರರಂಭಿಸಿರಿರುವ ಇವರಿಗೆ ಬದುಕಿನಲ್ಲಿ ಉನ್ನತಿಯನ್ನು ಸಾಧಿಸುವ ಬಯಕೆ.

ಬಾಲ್ಯದಲ್ಲಿ, ಪತ್ರಿಕೋದ್ಯಮಿ ಅಥವಾ ಪಶುವೈದ್ಯೆ ಆಗಬೇಕೆಂಬ ಹಂಬಲ ಹೊಂದಿದ್ದ ಇವರು ಕನ್ನಡ ಸಾಹಿತ್ಯ ರಚನೆಗೆ ಹೆಚ್ಚಿನ ಗಮನ ಹರಿಸಿದವರಲ್ಲ. ಪ್ರಸ್ತುತ ಲೇಖನವು ಇವರ ಮೊಟ್ಟಮೊದಲ ಕನ್ನಡ ಬರವಣಿಗೆ.

Blog  |  Facebook  |  Twitter

8 ಕಾಮೆಂಟ್‌ಗಳು:

  1. ಇದು ನಿಮ್ಮ ಮೊದಲ ಬರವಣಿಗೆಯೇ?? ತುಂಬಾ ಚೆನ್ನಾಗಿ ಮಾತನಾಡುವ ಕನ್ನಡದಲ್ಲಿ ಲೇಖನ ಬರೆದಿದ್ದೀರಿ. ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ.
    ಆರಿಸಿಕೊಂಡಿರುವ ವಿಷಯವು ಬಹಳ ಸಂದರ್ಭೋಚಿತವಾಗಿದೆ.. ಅಂತಹುದೇ ಒಂದು ಲೇಖನ ಈ ಕೊಂಡಿಯಲ್ಲಿದೆ: http://pacchiee.blogspot.com/2011/10/vision.html ಇದನ್ನೂ ಓದಿ.

    ಪ್ರತ್ಯುತ್ತರಅಳಿಸಿ
  2. ನಮ್ಮಲ್ಲಿರುವ ಮನಸೆಂಬ ಮರ್ಕಟವು ಒಬ್ಬ ಸಂಶಯಾಸ್ಪದ ವ್ಯಕ್ತಿ ಕಂಡಾಗ ಏನೆಲ್ಲಾ ಯೋಚನೆ ಹಾಗೂ ತರ್ಕಗಳನ್ನು ಮಾಡಿ ನಮ್ಮ ಮನಸನ್ನು ಎಷ್ಟು ಕುಲಿಷಿತಗೊಳಿಸುತ್ತದೆ ಎಂಬುದ್ದಕ್ಕೆ ಇದು ಒಂದು ಒಳ್ಳೆಯ ನಿದರ್ಶನ.

    ಆ ವ್ಯಕ್ತಿಯು ಪುಟ್ಟ ಹುಡುಗಿಯು ಆಡುತ್ತಿದ್ದ ಜೋಕಾಲಿಯನ್ನು ತಾನೂ ಆಡಬೇಕೆಂಬ ಬಯಕೆಯೊಂದಿಗೆ ಆ ರೀತಿಯಾಗಿ ದಿಟ್ಟಿಸಿ ನೋಡುತ್ತಾ ಕಾಯುತ್ತಿದ್ದ ಎಂಬ ನಿಜವು ಅರಿವಾದೊಡನೆ ನಮ್ಮ ತಪ್ಪು ಸಂಶಯಾಸ್ಪದ ಕಲ್ಪನೆಗೆ ಪಶ್ಚಾತಾಪ ಪಡುತ್ತೇವೆ. ಇದನ್ನು ಎರಡು ಪುಟ್ಟ ಮಕ್ಕಳು ಜೋಕಾಲಿ ಆಡುವ ನಿದರ್ಶನದೊಂದಿಗೆ ಚೆನ್ನಾಗಿ ನಿರೂಪಿಸಿದ್ದೀರಿ. ಇದು ನೀವು ಒಬ್ಬ ಒಳ್ಳೆಯ ಲೇಖಕಿಯಾಗುವ ಲಕ್ಷಣಗಳನ್ನು ತೋರಿಸುವ ಪ್ರತಿಭೆಯಾಗಿದೆ ಎಂಬುದು ನನ್ನ ಅಭಿಪ್ರಾಯ.

    ಪ್ರತ್ಯುತ್ತರಅಳಿಸಿ
  3. ಗುರುರಾಜ, ನಟೇಶ್ ಮತ್ತು ಮೂರ್ತಿಗಳೇ, ಧನ್ಯವಾದಗಳು :)

    ಪ್ರತ್ಯುತ್ತರಅಳಿಸಿ
  4. meeru adbhutavagide :):) tumba tumba khushi aagide ninna baravanige nodi :) :) heege munduvareyali :) :)

    ಪ್ರತ್ಯುತ್ತರಅಳಿಸಿ
  5. ನಿಮ್ಮ ಸಾಮಾಜಿಕ ಕಾಳಜಿ ಮೆಚ್ಚುವಂತಹುದು. ಇನ್ನೊಬ್ಬರಲ್ಲಿ ಅಡಗಿರುವ ಮಗುವಿನ ಮನಸ್ಸನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಬರವಣಿಗೆ ಶೈಲಿಯಲ್ಲಿರುವ ಆಲೋಚನೆಗಳ ನಿರರ್ಗಳ ಪ್ರಸ್ತುತಿ ವಿಶೇಷವೆನಿಸುತ್ತದೆ.

    ಪ್ರತ್ಯುತ್ತರಅಳಿಸಿ