ಶುಕ್ರವಾರ, ನವೆಂಬರ್ 2, 2012

ಭ್ರಷ್ಟಾಚಾರ ಹಾಗೂ ಯುವಕರು

ಭಾರತವು ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯಲ್ಲಿ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ನಮ್ಮ ದೇಶವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿರುವ ಒಂದು ರಾಷ್ಟ್ರ. ಇಲ್ಲಿ ಎಲ್ಲಾ ಸಂಪತ್ತುಗಳೂ ಹೇರಳವಾಗಿವೆ. ಅದರಲ್ಲೂ ನಮ್ಮ ದೇಶವು ಅಪಾರ ಮಾನವಸಂಪನ್ಮೂಲವನ್ನು ಹೊಂದಿದೆ. ನಮ್ಮ ದೇಶದಲ್ಲಿ ಆಗಿಹೋದ ಅನೇಕ ಮಹಾತ್ಮರು ನಮ್ಮಲ್ಲಿನ ಯುವಶಕ್ತಿಯ ಅಪರಿಮಿತ ಸಾಮರ್ಥ್ಯವನ್ನು ಗಮನಿಸಿ ಅದಕ್ಕೆ ಎಣೆ ಇರುವ ಅಥವಾ ಸಮನಾದ ಶಕ್ತಿ ಇನ್ನೊಂದಿಲ್ಲ ಎಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರಂತೂ, ಯುವಶಕ್ತಿಯಲ್ಲಿ ಅತಿಯಾದ ವಿಶ್ವಾಸವನ್ನಿಟ್ಟಿದ್ದರು. ಹೌದು, ಇದೆಲ್ಲಾ ಸರಿ. ಹಾಗಾದರೆ, ಭಾರತದ ಅನೇಕ ಸಮಸ್ಯೆಗಳಿಗೆ ಈ ಯುವಶಕ್ತಿಗೂ ಏಕೆ ಇನ್ನೂ ಪರಿಹಾರ ಕೊಡಿಸಲು ಸಾಧ್ಯವಾಗಿಲ್ಲ? ಈ ಮಹಾಶಕ್ತಿಯು ಈಗ ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೇ? ಈ ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿದೆಯೇ? ಅಥವಾ ದೇಶದ ಕೆಲ ಸಮಸ್ಯೆಗಳ ಪರಿಹಾರ ಈ ಶಕ್ತಿಗೂ ಸಾಧ್ಯವಿಲ್ಲವೇ? ಹೀಗೆ ಕೆಲವು ಪ್ರಶ್ನೆಗಳನ್ನು ನನಗೆ ನಾನೇ ಹಾಕಿಕೊಂಡಾಗ ಕೆಲ ವಿಚಾರಗಳು ನನ್ನ ಮನಸ್ಸಿಗೆ ತೋಚಿದವು; ಅವುಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.

ಯೋಚಿಸಲು ಹಾಗೂ ಪರಿಹಾರ ಕಂಡುಹಿಡಿಯಲು ನಮ್ಮ ದೇಶದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಉದಾಹರಣೆಗೆ, ಬಡತನ, ಜನಸಂಖ್ಯಾ ಸ್ಫೋಟ, ಹಸಿವು, ನಿರುದ್ಯೋಗ, ಕೋಮು ಸಂಘರ್ಷ, ಭ್ರಷ್ಟಾಚಾರ, ಇತ್ಯಾದಿ. ಬಹುಶಃ ಜನಸಂಖ್ಯಾ ಸ್ಫೋಟ ಹಾಗೂ ಭ್ರಷ್ಟಾಚಾರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಸಮಸ್ಯೆಗಳೂ ಸ್ವತಂತ್ರಪೂರ್ವದಿಂದಲೇ ನಮ್ಮ ದೇಶದಲ್ಲಿ ಬೇರು ಬಿಟ್ಟುಕೊಂಡು ನಿಂತಿವೆ. ಜನಸಂಖ್ಯಾ ಸ್ಫೋಟಕ್ಕೆ ಹಲವು ಕಾರಣಗಳಿವೆ, ಅದರಲ್ಲಿ ಒಂದು ಬಹುಶಃ ನಮ್ಮ ಹವಾಗುಣವು ಇರಬಹುದು. ಹಾಗಾಗಿ ಮೇಲೆ ಹೇಳಿದ ಸಮಸ್ಯೆಗಳಲ್ಲಿ ನಮ್ಮ ಚರ್ಚೆಗೆ ಉಳಿದಿರುವುದು ಭ್ರಷ್ಟಾಚಾರ ಎಂಬ ತೀರ್ಮಾನಕ್ಕೆ ನಾನು ಬಂದೆ. ಅಂದ ಮೇಲೆ, ಭಾರತದಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರದ ಬಗೆಗೆ ನನ್ನ ಕೆಲ ಅನಿಸಿಕೆಗಳು, ಜೊತೆಗೆ 'ನಾವು' ಅಂದರೆ 'ಯುವಶಕ್ತಿ' ಏನು ಮಾಡಬಹುದೆಂಬ ನನ್ನ ಅಭಿಪ್ರಾಯವು ನಿಮ್ಮ ಮುಂದೆ..

ಭ್ರಷ್ಟಾಚಾರ ಎಂದರೆ ಪ್ರಾಮಾಣಿಕತೆ ಇಲ್ಲದಿರುವುದು - ಅಂದರೆ, ಲಂಚಕೋರತನ, ಸ್ವಜನ ಪಕ್ಷಪಾತ, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಒಬ್ಬ ಮನುಷ್ಯನ (ಸರಕಾರಿ ಅಧಿಕಾರಿ ಅಥವ ಮಂತ್ರಿಯ) ಈ ಅಪ್ರಾಮಾಣಿಕತೆಯು ಇನ್ನೊಬ್ಬನಿಗೆ ವಿನಾಕಾರಣ ತೊಂದರೆಯನ್ನುಂಟು ಮಾಡುತ್ತದೆ. ಇದಕ್ಕೆ ಕಾರಣ ಮನುಷ್ಯನ ಸ್ವಾರ್ಥ ಹಾಗೂ ದುರಾಸೆ ಅಂದರೆ ಅತಿಶಯೋಕ್ತಿಯಾಗಲಾರದು ಅಲ್ಲವೇ? ಹಾಗೆಂದು ಮನುಷ್ಯನು ಆಸೆ ಮತ್ತು ಸ್ವಾರ್ಥವನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದಲ್ಲ. ಆದರೆ, ಅವನ ಸ್ವಾರ್ಥ ಮತ್ತು ಆಸೆಗಳು ಇತರ ಜನರಿಗೆ ತೊಂದರೆ ಮಾಡದಷ್ಟು ಇದ್ದರೆ ಸಾಕು. ಆಗ ಬಹುಶಃ ನಾವೆಲ್ಲರೂ ಭ್ರಷ್ಟಾಚಾರ ಮುಕ್ತ ದೇಶವನ್ನು ಕಾಣಬಹುದೋ ಏನೊ! ಅದೇನೇ ಇರಲಿ, ಈಗಂತೂ ಭ್ರಷ್ಟಾಚಾರ ನಮ್ಮ-ನಿಮ್ಮ ಮಧ್ಯೆ ಹಾಸುಹೊಕ್ಕಾಗಿರುವುದಂತೂ ಪರಮ ಸತ್ಯ. ಭ್ರಷ್ಟಾಚಾರದಲ್ಲಿನ ಪಾತ್ರ ಲಂಚ ತೆಗೆದುಕೊಳ್ಳುವವನಷ್ಟೇ ಕೊಡುವವನದೂ ಇರುತ್ತದೆ ಎಂಬುದು ನಿತ್ಯ ಸತ್ಯ. ನನ್ನ ಅಭಿಪ್ರಾಯದಲ್ಲಿ ಈ ಲಂಚಕೋರತನ ನಮ್ಮೆಲ್ಲರ ಎಳೆಯ ವಯಸ್ಸಿನಲ್ಲಿಯೇ ಹುಟ್ಟಿರುತ್ತದೆ. ಕೆಲವರಲ್ಲಿ ಅದು ಹೆಮ್ಮರವಾಗಿ ಬೆಳೆದರೆ, ಕೆಲವರಲ್ಲಿ ಕಾಲಕ್ರಮದಲ್ಲಿ ನಶಿಸಿಹೋಗುತ್ತದೆ. ನನ್ನ ಈ ಹೇಳಿಕೆಗೆ ಒಂದೆರಡು ಉದಾಹರಣೆಗಳನ್ನು ಕೊಡದಿದ್ದರೆ, ನನ್ನ ಈ ಮಾತಿಗೆ ಏನು ಅರ್ಥ?

ಮೊದಲನೆ ಉದಾಹರಣೆ ಗಮನಿಸಿ: ಒಂದು ಮಗು ತುಂಬಾ ಅಳುತ್ತಿರುತ್ತದೆ, ಅದರ ಅಪ್ಪನೋ ಅಥವಾ ಅಮ್ಮನೋ ರಮಿಸಿ ರಮಿಸಿ ಸುಸ್ತಾದ ಮೇಲೆ 'ಅಳಬೇಡ ಪುಟ್ಟಾ ನಿಂಗೊಂದ್ ಚಾಕ್ಲೇಟ್ ಕೊಡ್ತೀನಿ' ಎಂದಾಗ ಹೆಚ್ಚಿನ ಮಕ್ಕಳು ಅಳು ನಿಲ್ಲಿಸುತ್ತವೆ. ಈ ಅನುಭವ ನಮ್ಮಲ್ಲಿ ಹಲವರಿಗೆ ಆಗಿಯೇ ಇರುತ್ತದೆ (ಮಗುವಾಗಿಯಾದರೂ ಅಥವಾ ಅಪ್ಪ-ಅಮ್ಮನಾಗಿಯಾದರೂ!)

ಇನ್ನೊಂದು ಉದಾಹರಣೆ ನೋಡಿ: ಒಬ್ಬ ಪಿ.ಯು.ಸಿ. ವಿದ್ಯಾರ್ಥಿಯು ಹೆಚ್ಚು ಅಂಕ ಪಡೆಯಲಿ ಎಂಬ ಆಸೆಯಿಂದ ತಂದೆ-ತಾಯಂದಿರು ಕೆಲವೊಮ್ಮೆ ಮಕ್ಕಳಿಗೆ ಆಮಿಶವೊಡ್ಡುತ್ತಾರೆ. 'ಈ ಬಾರಿ ನೀನು 98% ಮಾರ್ಕ್ಸ್ ತಗೊಂಡ್ರೆ ನಿಂಗೊಂದ್ ಬೈಕ್ ಕೊಡ್ಸ್ತೀನಿ' (ಅವರು ಕೊಂಚ ಅನುಕೂಲಸ್ಥರಾದರೆ 'ಒಂದ್ ಕಾರ್'!). ಹೇಗೋ ಮಾಡಿ ವಿದ್ಯಾರ್ಥಿ ಕಷ್ಟಪಟ್ಟು 98% ಅಂಕ ಪಡೆದರೆ ಆ ವಿದ್ಯಾರ್ಥಿಗೆ ಆ ಆಮಿಶ ಈಡೇರುತ್ತದೆ! ಇಷ್ಟು ಹೊತ್ತಿಗಾಗಲೇ ಪ್ರಪಂಚದ ಆಳ ಅಗಲಗಳನ್ನು ಅಳೆಯಲು ಶುರು ಮಾಡಿದ ವಿದ್ಯಾರ್ಥಿಯು, ಬೇರೆಯವರ ಮನದಿಂಗಿತವನ್ನು ಪೂರ್ತಿಗೊಳಿಸಿದರೆ ಅವರಿಂದ ತಾನು ತನಗೆ ಬೇಕಾದ್ದನ್ನು ಪಡೆಯಬಹುದು ಎಂಬ ತೀರ್ಮಾನಕ್ಕೆ ಸುಪ್ತ ಮನಸ್ಸಿನಲ್ಲಿ ಬಂದಿರುತ್ತಾನೆ. ನನ್ನ ದೃಷ್ಟಿಯಲ್ಲಿ ಇದೇ ಭ್ರಷ್ಟಾಚಾರದ ಮೊದಲ ಮೆಟ್ಟಿಲು! ಇಂತಹವರು ಮುಂದೆ ಅಧಿಕಾರಿಯಾದರೆ, ಜನರ ಕೆಲಸವನ್ನು ಮಾಡಿಕೊಟ್ಟಿದ್ದಕ್ಕೆ ಪ್ರತಿಯಾಗಿ ಏನನ್ನಾದರು (ಲಂಚ?) ಬಯಸುವುದು ಸಹಜ; ಏಕೆಂದರೆ, ವಿದ್ಯಾರ್ಥಿ ದಿಸೆಯಲ್ಲಿಯೇ ಅವನಿಗೆ ಜನರ ನಾಡಿಮಿಡಿತ ಅರ್ಥವಾಗಿರುತ್ತದೆ.

ಮೇಲೆ ಹೇಳಿದ ಕಾರಣಗಳಿಂದಲೇ ಭ್ರಷ್ಟಾಚಾರ ಹುಟ್ಟುತ್ತದೆ ಅಥವ ಹುಟ್ಟಿದೆ ಎಂಬುದು ನನ್ನ ಅಭಿಪ್ರಾಯವಲ್ಲ; ಆದರೆ, ಮೇಲೆ ಹೇಳಿದ ಉದಾಹರಣೆಗಳು ಭ್ರಷ್ಟಾಚಾರಕ್ಕೆ ಹುಟ್ಟನ್ನು ನೀಡಬಲ್ಲವು. ಕೆಲವೊಮ್ಮೆ ಹೀಗೂ ಆಗಬಹುದು: ಒಬ್ಬನಿಗೆ ಯಾವುದೋ ಒಂದು ಸಣ್ಣ ಸರಕಾರಿ ಕೆಲಸ ಕಾನೂನಿಗೆ ವಿರುದ್ಧವಾಗಿ ಆಗಬೇಕಾಗಿರುತ್ತದೆ, ಅವನು ಆ ಕೆಲಸವನ್ನು ಮಾಡಿಸಿಕೊಳ್ಳಲು ಅಧಿಕಾರಿಗೆ ಲಂಚ ನೀಡುತ್ತಾನೆ, ಆಗ ಅಧಿಕಾರಿಗೆ ಒಂದು ಕಾನೂನು ಒಪ್ಪದ ಕೆಲಸವನ್ನು ಮಾಡಿದರೆ ಲಂಚ ಸಿಗುತ್ತದೆ ಎಂದು ಅರಿವಾಗುತ್ತದೆ; ಅವನು ಅದನ್ನೇ ಮುಂದುವರಿಸುತ್ತಾನೆ. ಅಥವ ಯಾರೋ ಒಬ್ಬನಿಗೆ ಒಂದು ನಿರ್ದಿಷ್ಟ ಸರಕಾರಿ ಕೆಲಸ ನಿಗದಿತ ದಿನದೊಳಗೆ ಆಗಬೇಕಾಗಿರುತ್ತದೆ, ಆಗ ಆತ ಸಂಬಂಧಪಟ್ಟ ಅಧಿಕಾರಿಗೆ ಹಣ ಅಥವ ಉಡುಗೊರೆಯನ್ನು ಕೊಟ್ಟು ತುರ್ತಾಗಿ ಕೆಲಸ ಮಾಡಿಸಿಕೊಳ್ಳುತ್ತಾನೆ. ಇದರಿಂದ ಉತ್ತೇಜಿತನಾದ ಅಧಿಕಾರಿಯು ಬೇರೆಯವರ ಕೆಲಸವನ್ನೂ ವಿನಾಕಾರಣ ಮುಂದೂಡಿ ಅವರಿಂದಲೂ ಲಂಚವನ್ನು ಪಡೆಯುವ ತೀರ್ಮಾನಕ್ಕೆ ಅದಾಗಲೇ ಬಂದುಬಿಟ್ಟಿರುತ್ತಾನೆ.

ಭ್ರಷ್ಟಾಚಾರಕ್ಕೆ ಏನೇ ಕಾರಣಗಳಿರಲಿ, ಆದರೆ ಇದು ನಮ್ಮ ಸಮಾಜದ ಒಂದು ದೊಡ್ಡ ಪಿಡುಗು. ಇದರ ನಿವಾರಣೆಯಾಗದ ಹೊರತು ದೇಶದ ಅಭಿವೃದ್ಧಿ ಕಷ್ಟ. ಹಾಗಾದರೆ ಇದನ್ನು ಬೇರು ಸಮೇತ ಕಿತ್ತೊಗೆಯುವುದು ಹೇಗೆ? ಭ್ರಷ್ಟಾಚಾರದ ನಿವಾರಣೆಗೆ ಸರಕಾರಗಳು ಏನು ಕ್ರಮ ಕೈಗೊಂಡಿವೆ?

ಭ್ರಷ್ಟಾಚಾರ ಮನೆಯಿಂದಲೇ ನಿವಾರಣೆಯಾಗಬಹುದು! ಹೌದು, ಇದನ್ನು ಸಾಧಿಸಲು ನಾವೆಲ್ಲರು ಮಕ್ಕಳಿಗೆ ಸರಿಯಾದ ನೈತಿಕ ಶಿಕ್ಷಣ ಹಾಗೂ ಮಾರ್ಗದರ್ಶನ ಸಿಗುವಂತೆ ನೋಡಿಕೊಳ್ಳಬೇಕು. ಅಲ್ಲದೇ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು, ಭಾರತವನ್ನು ಕಟ್ಟುವಲ್ಲಿ ಅನೇಕರು ಮಾಡಿದ ತ್ಯಾಗ ಬಲಿದಾನಗಳನ್ನು ಮತ್ತು ಅವರ ನಿಸ್ವಾರ್ಥ ಸೇವೆಯನ್ನು ಮಕ್ಕಳಿಗೆ ಎಳೆವೆಯಲ್ಲಿಯೇ ಮನಮುಟ್ಟುವಂತೆ ತಿಳಿಸಿಕೊಡಬೇಕು. ಭ್ರಷ್ಟಾಚಾರವನ್ನು ತಡೆಗಟ್ಟಲು ಸರಕಾರಗಳೂ ಅನೇಕ ಕಾನೂನುಗಳನ್ನೂ ರೂಪಿಸಿವೆ. ಉದಾಹರಣೆಗೆ ಕೇಂದ್ರ ತನಿಖಾ ದಳ (ಸಿ.ಬಿ.ಐ) ಭ್ರಷ್ಟ ಅಧಿಕಾರಿಗಳನ್ನು ಹಿಡಿದು ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕನೂನು ಕ್ರಮ ಜರುಗಿಸುವುದು, ಭ್ರಷ್ಟ ಅಧಿಕಾರಿಗಳ ಬಗೆಗೆ ಸಾರ್ವಜನಿಕರಿಂದ ಮಾಹಿತಿ ಪಡೆಯಲು 'ಎಸ್.ಎಂ.ಎಸ್.' ದೂರು ದಾಖಲೆ ಸೇವೆ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದೆ. ಬಹುತೇಕ ಎಲ್ಲಾ ರಾಜ್ಯಗಳು ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿವೆ. ಕೆಲ ಸಮೂಹ ಮಾಧ್ಯಮಗಳೂ ಭ್ರಷ್ಟಾಚಾರ ತಡೆಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಯೋಗ ಗುರು ಬಾಬಾ ರಾಮ್‌ದೇವ್, ಅರವಿಂದ ಕೇಜ್ರೀವಾಲ್, ಹೀಗೆ ಅನೇಕ ಹೋರಾಟಗಾರರು ಭ್ರಷ್ಟಾಚಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತಿದ್ದಾರೆ. ಅಣ್ಣಾ ಹಜಾರೆಯವರ ದೇಶವ್ಯಾಪಿ ಆಂದೋಲನಕ್ಕೆ ನಮ್ಮಲ್ಲಿ ಅನೇಕರು ಬೆಂಬಲ ನೀಡಿಯೇ ಇರುತ್ತೇವೆ. ಆದರೆ ದುರಾದೃಷ್ಟವಶಾತ್ ಆಂದೋಲನಕ್ಕೆ ಆರಂಭದಲ್ಲಿ ಸಿಕ್ಕ ಬೆಂಬಲ ಕೊನೆಯವರೆಗೂ ದೊರೆಯದಿದ್ದುದು ವಿಪರ್ಯಾಸ. ಇದು ನಮ್ಮಲ್ಲಿನ ಜಡತ್ವವನ್ನು ತೋರಿಸುತ್ತದೆ. ಸರಕಾರಗಳ ಕ್ರಮಗಳು ಏನೇ ಇರಲಿ, ಏನೇ ಹೋರಾಟ ನಡೆಯುತ್ತಿರಲಿ, ಭ್ರಷ್ಟಾಚಾರ ತಡೆಗೆ ನಾವೆಲ್ಲರೂ - ಅಂದರೆ ದೇಶದ ಪ್ರಜೆಗಳು, ಅದರಲ್ಲಿಯೂ ಯುವಶಕ್ತಿ ಟೊಂಕ ಕಟ್ಟಿ ನಿಲ್ಲಬೇಕಾಗಿದೆ. ಲಂಚ ಕೊಡುವ ಅಥವಾ ತೆಗೆದುಕೊಳ್ಳುವ ನಿಟ್ಟಿನಲ್ಲಿ ನಿಷ್ಠೂರರಾಗಿ ಅದರಿಂದ ದೂರ ಉಳಿಯಬೇಕಾಗಿದೆ. ಸ್ವಾರ್ಥವನ್ನು ದೂರವಿಟ್ಟು ದೇಶಕ್ಕಾಗಿ ದುಡಿಯಬೇಕಾಗಿದೆ. ತನ್ಮೂಲಕ ನಮ್ಮ ದೇಶವನ್ನು ಒಂದು ಮಾದರಿ ದೇಶವನ್ನಾಗಿ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಬಿಟ್ಟುಹೋಗೋಣ. ಇದೇ ದೇಶಕ್ಕಾಗಿ ನಮ್ಮ ಆದ್ಯ ಕರ್ತವ್ಯ.

ಲೇಖಕರ ಕಿರುಪರಿಚಯ
ಶ್ರೀ ಶ್ರೀಧರ್ ಟಿ. ಎಸ್.

ಅಂಗ ವಿಕಲರಾದರೂ ಇವರ ವ್ಯಕ್ತಿತ್ವ ಹಾಗೂ ಆತ್ಮಸ್ಥೈರ್ಯ ಎಂಥವರಲ್ಲಿಯೂ ಅಚ್ಚರಿ ಮೂಡಿಸಿ, ಸ್ಪೂರ್ತಿಯ ಚಿಲುಮೆ ಉಕ್ಕಿಸದೆ ಇರಲಾರವು. ಇವರ ಪರಿಚಯ ಅವರ ಮಾತುಗಳಲ್ಲಿಯೇ..

"ನಾನು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಅಬಸಿ ಗ್ರಾಮದವನು. ಹುಟ್ಟಿನಿಂದಲೇ ನಾನು ಅಂಧ. ನನ್ನ ವಿದ್ಯಾಭ್ಯಾಸವು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ, ಚಿಕ್ಕಮಗಳೂರು, ಹಾಗೂ ಮೈಸೂರಿನ ಜೆ.ಎಸ್.ಎಸ್. ಅಂಗವಿಕಲರ ಪಾಲಿಟೆಕ್ನಿಕ್‌ನಲ್ಲಿ ನಡೆಯಿತು. ನಾನು 'Computer Applications for the Visually Impaired' ಎಂಬ ಡಿಪ್ಲೊಮಾ ಪಡೆದಿದ್ದೇನೆ. ಕಂಪ್ಯೂಟರಿನ ಪರದೆಯ ಮೇಲೆ ಬರೆದಿರುವ ಪಠ್ಯವನ್ನು ಧ್ವನಿ ರೂಪಕ್ಕೆ ಪರಿವರ್ತಿಸಿ ಓದಿ ಹೇಳುವ ತಂತ್ರಾಂಶವೊಂದನ್ನು ಕನ್ನಡ ಭಾಷೆಗೂ ತರುವಲ್ಲಿ ಕೆಲಸ ಮಾಡಿದ್ದೇನೆ. ಇದರ ನೆರವಿನಿಂದ ಅಂಧರು, ಅನಕ್ಷರಸ್ಥರು, ಹಾಗೂ ಕನ್ನಡ ಭಾಷೆ ಮಾತನಾಡಲು ಬಂದರೂ, ಓದಲು ಬಾರದವರೂ ಸಹಾ ಪ್ರಯೋಜನ ಪಡೆಯಬಹುದು. ಭಾರತದಲ್ಲಿರುವ ಬೆರಳೆಣಿಕೆಯಷ್ಟು ಅಂಧ Software Engineer ಗಳಲ್ಲಿ ನಾನೂ ಒಬ್ಬ. ಪ್ರಸ್ತುತ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ಓದುವುದು, ಆಗೊಮ್ಮೆ-ಈಗೊಮ್ಮೆ ಬರೆಯುವುದು, ಹರಟುವುದು, ಕ್ರೀಡೆಗಳನ್ನು (ಕ್ರಿಕೆಟ್, ಕೆಲವೊಮ್ಮೆ ಟೆನ್ನಿಸ್) ನೋಡುವುದು ನನ್ನ ಹವ್ಯಾಸ. http://shreeword.blogspot.com/ ಇದು ನನ್ನ ಬ್ಲಾಗು."

Blog  |  Facebook  |  Twitter

1 ಕಾಮೆಂಟ್‌:

  1. ಶ್ರೀ ಶ್ರೀಧರ್ ಟಿ. ಎಸ್,
    ನಿಮ್ಮ ಜೀವನ ಪ್ರೀತಿಗೆ ನಮನಗಳು. ನಿಮಗೆ ಇನ್ನೂ ಸಾಧಿಸುವ ಶಕ್ತಿ ,ಅವಕಾಶ ದೊರೆಯಲಿ.
    ಲೇಖನ ನಮ್ಮ ದೇಶದ ವಾಸ್ತವದ ಪ್ರತಿಬಿಂಬದಂತೆ ಇದೆ. ನಿಜ ನಿಮ್ಮ ಮಾತುಗಳು. ಇದೀಗ ನಾವು ಇನ್ನೊಂದು ಸ್ವಾತಂತ್ರ ಹೋರಾಟಕ್ಕೆ ಭಾರತ ಸಜ್ಜುಗೊಳ್ಳುವ ಅವಶ್ಯಕತೆ ಇದೆ.ನಿಮ್ಮ ಲೇಖನಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ